ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಚಾರಿ ವಿಜಯ್‌ ನೆನಪು…

ಪಚ್ಚೆ ನಂಜುಂಡಸ್ವಾಮಿ

‘ನಾತಿಚರಾಮಿ’ಯ ಎಡಿಟಿಂಗ್ ನಡೆಯುತ್ತಿದ್ದ ಸಂದರ್ಭ ಅನ್ಸುತ್ತೆ. ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿಯವರ ಒಂದು ವಿಡಿಯೋ ಗೆ ನಿರ್ದೇಶಕ ಮನ್ಸೋರೆ ರವರು ‘ಫೋಫೆಸರ್ ಬಯೋ ಪಿಕ್’ ಮಾಡುವ ಆಸೆಯಿದೆ ಎಂದು ಕಾಮೆಂಟ್ ಮಾಡಿದ್ದರು. ಸ್ವಲ್ಪ ದಿನಗಳ ನಂತರ ಅವರನ್ನು ಮನೆಗೆ ಆಹ್ವಾನಿಸಿದೆ. ಅಪ್ಪನಿಗೆ ಸಂಬಂಧಪಟ್ಟ ಪುಸ್ತಕಗಳನ್ನು ಅವರಿಗೆ ಕೊಟ್ಟೆ. ಪ್ರೊಫೆಸರ್ ಬದುಕು ಬಹಳ ದೊಡ್ಡ ಕ್ಯಾನ್ವಾಸ್. 60,70,80,90 ರ ದಶಕವನ್ನು ಕಟ್ಟಿಕೊಡಬೇಕು ಎಂದರೆ ದುಬಾರಿ ವೆಚ್ಚ ತಗಲುತ್ತದೆ. ಆದರೆ ಖಂಡಿತವಾಗಿಯೂ ಪ್ರೊಫೆಸರ್ ಬಯೋ ಪಿಕ್ ಆಗೇ ಆಗುತ್ತದೆ ಎಂದರು ಮನ್ಸೋರೆ.

ಪ್ರೊಫೆಸರ್ ಪಾತ್ರ ಯಾರು ಮಾಡಬಲ್ಲರು? ಎಂಬ ಪ್ರಶ್ನೆ ಬಂತು. ಕಿಂಚಿತ್ತೂ ಯೋಚಿಸದೆ ಸಂಚಾರಿ ವಿಜಯ್ ರವರ ಹೆಸರು ಹೇಳಿದರು ಮನ್ಸೋರೆರವರು. ಅಯ್ಯೋ ‘ಅದ್ಭುತವಾದ ಕಲಾವಿದ ಸರ್’ ನಾನೇ ನಿರ್ದೇಶನ ಮಾಡಿರುವ ‘ಹರಿವು’ ಎಂಬ ಚಿತ್ರ ಇದೆ ನೋಡಿ ಎಂದರು.ಆ ಚಿತ್ರದ ಕೆಲವು ಸೀನ್ ಗಳಲ್ಲಿ ವಿಜಯ್ ರವರು ಜೀವ ತುಂಬಿದ್ದನ್ನು ನಾನು ನೋಡಿದೆ. ಕಾಕತಾಳಿಯವೋ ಏನೋ, ವಿಜಯ್ ಅಮೋಘವಾಗಿ ನಟಿಸಿರುವ ‘ತಲೆದಂಡ’ ಚಿತ್ರ ಪ್ರೊಫೆಸರ್ ಸ್ಮಾರಕದ ಬಳಿಯೇ ಚಿತ್ರೀಕರಣ ವಾಯ್ತು.

ಪ್ರೊಫೆಸರ್ ಸ್ಮಾರಕದ ಎದುರು ಇರುವ ಗೆಸ್ಟ್ ಹೌಸ್ ನಲ್ಲೇ ವಿಜಯ್ ರವರು, ಖ್ಯಾತ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಸರ್ ದಂಪತಿಗಳು, ಮಂಗಳಾ ರವರು, ಪಂಡಿತ್ ರವರು, ಹಾಗೂ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಪ್ರವೀಣ್ ಕೃಪಾಕರ್ ರವರು ಹಾಗೂ ಇತರೆ ಕಲಾವಿದರುಗಳು ಸುಮಾರು ದಿನಗಳು ಅಲ್ಲೇ ನೆಲೆಸಿದ್ದರು. ಪರಿಸರ ಸಂರಕ್ಷಣೆಗೆ ಸಂಬಂಧಪಟ್ಟ ಆ ಸಿನಿಮಾದಲ್ಲಿ ವಿಜಯ್ ರವರದ್ದು, ಮರವನ್ನು ಕಡಿಯುವಾಗ ಅದನ್ನು ರಕ್ಷಿಸುವ ಮುಗ್ಧ ಹುಡುಗನ ಪಾತ್ರ. ಅಬ್ಬಾ ಅದೆಷ್ಟು ಚೆನ್ನಾಗಿ ಅಭಿನಯಿಸುತ್ತಿದ್ದರು ಗೊತ್ತಾ.. ಹಿರಿಯ ನಟರಾದ ಪಂಡಿತ್ ರವರು ವಿಜಯ್ ತಂದೆಯ ಪಾತ್ರಧಾರಿ.

ಪಂಡಿತ್ ರವರ ಮಡದಿ ಪಾತ್ರಧಾರಿ ಮಂಗಳಾವರು ಹಾಗೂ ಮಗನ ಉಪಸ್ಥಿತಿಯಲ್ಲಿ ಪಂಡಿತ್ ರವರು ಪ್ರಾಣ ಬಿಡುವ ಒಂದು ದೃಶ್ಯ. ರಿಹರ್ಸಲ್ ಸಂದರ್ಭದಲ್ಲಿ, ‘ಅಪ್ಪೋ,ಅದೆಷ್ಟು ಸರ್ತಿ ಕೆಮ್ತೀಯ? ರಜನೀಕಾಂತ್ ಥರಾ ಒಂದೇ ಸರ್ತಿ ಕೆಂಬಿಡಪ್ಪೋ’ ಎಂದು ಸ್ಕ್ರಿಪ್ಟ್ ನಿಂದಾಚೆ ಹೇಳಿ, ವಿಜಯ್ ಇಡೀ ಸೆಟ್ಟನ್ನು ನಗೆಗಡಲಲ್ಲಿ ತೇಲಿಸಿದ್ದರು. ಒಟ್ಟಿಗೆ ಊಟ ಮಾಡಿದೆವು. ನಕ್ಕಿದೆವು, ನಲಿದೆವು.

ನಂತರ Act 1978 ಸಿನೆಮಾದ ಪ್ರೀಮಿಯರ್ ನಲ್ಲಿ ವಿಜಯ್ ಸಿಕ್ಕರು.ನನ್ನನ್ನು ತಬ್ಬಿ ಬಹಳ ಪ್ರೀತಿಯಿಂದ ಮಾತನ್ನಾಡಿಸಿದ್ದರು.ಇತ್ತೀಚೆಗೆ ಮೇ 3 ರಂದು ಪ್ರೊಫೆಸರ್ ಬಯೋ ಪಿಕ್ ಬಗ್ಗೆ ಮತ್ತೆ ವಿಜಯ್ ಮತ್ತು ಮನ್ಸೋರೆ ರವರಿಬ್ಬರ ಬಳಿ ಚರ್ಚಿಸಿದ್ದೆ. ವಿಜಯ್ ತುಂಬಾ ಖುಷಿಪಟ್ಟರು. ಮನ್ಸೋರೆ ಸರ್ ಬಳಿ ಮತ್ತೆ ಮಾತನಾಡಿ ಎಂದಿದ್ದರು. ನಾನು ಮಾತನ್ನಾಡಿದ್ದೆ ಕೂಡ. ನೀವು ಮತ್ತು ಮನ್ಸೋರೆ ರವರು ಕೂಡಿದರೆ, ಇತಿಹಾಸ ನಿರ್ಮಾಣವಾಗುತ್ತದೆ ಎಂದಿದ್ದೆ. ಅದಕ್ಕವರು ಹೌದು ಸರ್ ಎಂದು ತುಂಬಾ ಖುಷಿಯಾಗಿದ್ದರು. ಆದರೆ, ಛೆ I am Disappointed !!.. ವಿಜಯ್ ರನ್ನು ಪ್ರೊಫೆಸರ್ ಪಾತ್ರದಲ್ಲಿ ನೋಡುವ ಆಸೆ ಈಡೇರಲೇ ಇಲ್ಲ.ವಿಜಯ್ ಉತ್ತಮ ನಟರಷ್ಟೇ ಆಗಿರಲಿಲ್ಲ, ನಿಷ್ಕಲ್ಮಷ ಮನಸ್ಸಿನ ವ್ಯಕ್ತಿಯೂ ಆಗಿದ್ದರು. ವಿಜಯ್ ರವರ ಆತ್ಮಕ್ಕೆ ಶಾಂತಿಸಿಗಲೆಂದು ಪ್ರಾರ್ಥಿಸುತ್ತೇನೆ.

‍ಲೇಖಕರು Avadhi

15 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading