ಶ್ರೀದೇವಿ ಕಳಸದ
ಕುಕ್ಕರ್ ಬಿಸಿ ಆರಿರಲಿಲ್ಲ….
ಓಣಿಯಲ್ಲಿ ಆಟವಾಡಿ ದಣಿದ ಮಕ್ಕಳು…. ಗೇಟ್ ಆಚೆಯಿಂದಾನೇ ಅಮ್ಮಾ… ಅಂತ ಕೂಗಿಕೊಂಡು ಬರ್ತಾವಲ್ಲಾ.. ಹಾಗೆನೇ ಈ ಪರಮನೂ. ತಾಸಿನ ಹಿಂದೆಯೂ ಹಾಗೇ ಬಂದ. ಅವನ ಕೂಗಿಗೆ, ಹಸಿವಿಗೆ ನಾ ದಡಬಡಿಸಿ ಊಟಕ್ಕೊಡೋದು ರೂಢಿ. ಕುಕ್ಕರ್ ಬಿಸಿ ಆರಿದ ನಂತರ ಊಟಕ್ಕೆ ಕೊಟ್ಟರಾಯಿತು ಅಂತ ಹಾಲಷ್ಟೇ ಹಾಕಿದೆ. ನಾಳೆಯ ಹಾಲಿಗೆಂದು ಹಾಲಿನ ಚೀಲಕ್ಕೆ ಕೂಪನ್ ಇಡಲೆಂದು ಕೆಳಗಿಳಿದೆ.
***
ಮೇಲೆ ಬರುವಷ್ಟರ ಹೊತ್ತಿಗೆ ರೂಮಿನಿಂದ ಹೊರಬಂದ ಅವನ ಬಾಯಲ್ಲಿ ಹತ್ತಿಯಂಥದ್ದೇನೊ. ಇದೇನಿದು ಅಂತ ನೋಡುವ ಹೊತ್ತಿಗೆ ಅವನ ಬಾಯಲ್ಲಿ ನಮ್ಮ ವೈಟಿ! ಶ್…………. ಎಂದು ಪರಮನನ್ನು ಓಡಿಸುವ ಹೊತ್ತಿಗೆ ಒಮ್ಮೆ ವೈಟಿ ತಪ್ಪಿಸಿಕೊಂಡಳು. ಆದರೂ ಪರಮ ಬಿಡಲೇ ಇಲ್ಲ. ಮತ್ತೆ ಹಿಡಿದು ಹೊರಗೋಡಿದ.
***
ಬೆಳಗ್ಗೆ ಪಕ್ಷಿಗಳಿಗೆ ನವಣೆ ಹಾಕಿ, ಗೂಡಿನ ಬಾಗಿಲಿನ ಪುಟ್ಟ ಚಿಲಕಕ್ಕೆ ತಂತಿ ತುಂಡು ಸಿಕ್ಕಿಸುವುದನ್ನು ಮರೆತಿದ್ದೆ. ಅದೇ ಇಷ್ಟೆಲ್ಲ ಅನಾಹುತಕ್ಕೆ ಕಾರಣ. ನನ್ನವ ಬೈದು ಬೈದು ಈಗಷ್ಟೇ ನಿಲ್ಲಿಸಿದ್ದಾನೆ. ಉಳಿದ ಮೂರು ಪಕ್ಷಿಗಳು ಕಂಗಾಲಾಗಿ ಕುಳಿತಿವೆ.
***
ಆದರೆ ಪರಮ ಮತ್ತೆ ಬಂದೇಬಿಟ್ಟ! ನಾವಿಬ್ಬರೂ ಅವನ ನಡೆಯನ್ನೇ ಗಮನಿಸುತ್ತಿದ್ದೆವು. ಹೊರಹೋದ ಅವ ಮತ್ತೆ ವಾಪಸ್ ಬಂದಾಗ ಕೋಪ ನೆತ್ತಿಗೇರಿದ್ದರೂ ಸುಮ್ಮನೇ ಇದ್ದೆವು. ಅದು ಹಾಗೇ ಅಲ್ವಾ ಕೋಪ ಮತ್ತು ಬೇಜಾರು ಒಟ್ಟಿಗೂಡಿದಾಗ ಸುಮ್ಮನಾಗಿಬಿಡುತ್ತೇವೆ. ಎಗ್ಗುಸಿಗ್ಗಿಲ್ಲದೇ ನೇರ ರೂಮಿಗೆ ಹೋದ ಪರಮ ಪಕ್ಷಿಯ ಗೂಡಿಗೆ ಮತ್ತೆ ದಾಳಿಯಿಟ್ಟೇಬಿಟ್ಟ. ಹೊಡೆದೋಡಿಸು ಎಂದೆ ಇವನಿಗೆ. ಇಲ್ಲ ಈಗ ಗೂಡಿನ ಚಿಲಕಕ್ಕೆ ತಂತಿ ಸಿಕ್ಕಿಸಿದೆಯಲ್ಲ ಏನಾಗಲ್ಲ ಬಿಡು ಅಂದ. ಪರಮನ ಪ್ರಯತ್ನ ಈ ಸಲ ವಿಫಲವಾಯಿತು. ಆದರೂ ಎರಡೇಟು ತಿಂದ ಅವ ಹೊರಗೋಡಿದ.
***
ಪರಮ ತಾನಾಗೇ ಬಂದು ಮನೆಯ ಬೆಕ್ಕಾಯಿತು; ಹಾಗೇ ವೈಟಿ, ಝಿಬಿ, ಫಿಂಚಿ, ಗೋಲ್ಡಿ ಸಾಕಿದ ಪಕ್ಷಿಗಳೇ. ಪರಮನಿಗೆ ಇನ್ನು ನಮ್ಮ ಮನೆಯಲ್ಲಿರಬೇಡ ಎಂದು ಹೇಳಲಾದೀತೆ? ಜೊತೆಯಲಿದ್ದವಳು ಎಲ್ಲಿ ಹೋದಳು? ಎಂದು ಕಂಗಾಲಾಗಿ ಮೂಲೆಹಿಡಿದು ಕುಳಿತಿರುವ ಮೂರು ಪಕ್ಷಿಗಳಿಗೆ ಏನು ಹೇಳಲಿ?
***
ಬಿಟ್ಟುಬಿಡೋಣ ಪಕ್ಷಿ… ಹಾರಿಕೊಂಡಿರಲಿ ಇನ್ನು ಸಾಕುವುದು ಬೇಡ ಎಂದು ಇವನಿಗಾತುಕೊಂಡು ಅತ್ತೆ. ಇವನು ಉತ್ತರಿಸಲಿಲ್ಲ. ಪ್ರಾಣಿ-ಪಕ್ಷಿಗಳು ಜೊತೆಗಿಲ್ಲದೇ ಬೆಳೆದ ಜೀವವೇ ಅಲ್ಲ ನಮ್ಮದು. ಆದರೆ ಹಾರುವ ಹಕ್ಕಿಯ ಬಂಧಿಸಬೇಡಿ ಎಂದು ಆಗಾಗ ಆಪ್ತರೊಬ್ಬರು ಹೇಳುತ್ತಿದ್ದ ಮಾತು ಈಗ ತುಂಬಾ ಕಾಡುತ್ತಿದೆ.
‘ನಾನು ಪಂಜರ ಪಕ್ಷಿ, ಇನ್ನು ನನಗಾರು ಗತಿ
ಕೇಳಬಲ್ಲೆಯೇನು ನನ್ನ ಕಥೆಯ
ಅಲ್ಲಿ ಬನ-ಬನದಲ್ಲಿ, ಕಾಡ-ಗಿಡಗಿಡದಲ್ಲಿ
ಕೊಂಬೆ ಕೊಂಬೆಗೆ ಹೂ ಸಾವಿರಾರು.
ಬನದ ಹಣ್ಣಿನ ರುಚಿನ ಬರಿ ನೆನೆದರೇನುಂಟು
ಮರಳಿ ದೊರೆಯಬಹುದೇ ತವರಿನವರು..’
ಬಾಲ್ಯದಲ್ಲಿ ಕಾಡಿದ ಈ ಸಾಲುಗಳನ್ನು ಹಿಂದೊಮ್ಮೆ ಕುಂವೀ ಕಳೆದ ವರ್ಷ ಫೋನಿನಲ್ಲಿ ನೆನಪಿಸಿಕೊಂಡಿದ್ದು ಈಗ ನೆನಪಾಗಿ ಕಣ್ಣು ಒದ್ದೆಯಾಗುತ್ತಿವೆ.
***
ಆದರೆ ಈಗ ಹೊರಗೋಡಿದ ಪರಮ ಹೇಳಿಕೇಳಿ ಬೆಕ್ಕು, ನಾಳೆಗೆ ಮತ್ತೆ ಅವ ಕಾಲಬಳಿಯೇ.








“ಅಕ್ಕಾ ನಾನಿಲ್ಲದ ವೇಳೆ ಬೆಕ್ಕು ಕೊಂಡು ಹೋಯಿತಯ್ಯೋ….”
ಬೆಕ್ಕು ಸಾಕಿದವರಿಗೆ ಮಾತ್ರ ಅರ್ಥ ಆಗುವಂತದ್ದು ಅದರ ರೀತಿ ಮತ್ತು ಪ್ರೀತಿ… ಒಳ್ಳೆಯ ಲೇಖನ 🙂
madam kushiyayitu e baraha odi. houdalla anta anisitu.mudiraja raichur