
ಮುರಳೀಧರ ಉಪಾಧ್ಯ ಹಿರಿಯಡಕ
ಚಪ್ಪಲಿ ಚಿತ್ತ
-ವಿಕಾಸ್ ವಿಷ್ಣು
ಬೆಲೆ-ರೂ -120
ಪ್ರಕಾಶಕರು – ವಿಕಾಸ್ ಪಬ್ಲಿಕೇಶನ್ಸ್, ಪಡು ಅಲೆವೂರು, ದುರ್ಗಾ ನಗರ, ಗುಡ್ಡೆ ಅಂಗಡಿ -574118 ಉಡುಪಿ ತಾಲೂಕು
vikasvishnu94@gmail.com
ಕಥಾ ನಾಯಕ ಮತ್ತು ಕೃಷ್ಣ ‘ಚಪ್ಪಲಿ ಚಿತ್ತ’ದ ಮುಖ್ಯ ಪಾತ್ರಗಳು. ಇವರು ಉಡುಪಿಯ ಕೃಷ್ಣ ಮಠದಲ್ಲಿ ಭೋಜನ ಶಾಲೆಗೆ ಊಟಕ್ಕೆ ಹೋಗುವ ಕಾಲೇಜು ಹುಡುಗರು. ಊಟಕ್ಕೆ ಮಠದ ಭೋಜನ ಶಾಲೆಗೆ ಹೋದಾಗ ಹೊರಗಿಟ್ತ ಚಪ್ಪಲಿಗಳು ಕಳುವಾಗುವುದು ಈ ಕೆಳ ಮಧ್ಯಮ ವರ್ಗದ ಹುಡುಗರ ಸಮಸ್ಯೆ. ಚಪ್ಪಲಿ ಕಾಯುವವನಿಗೆ ಒಂದು ರುಪಾಯಿ ಕೊಡಲಿಕ್ಕೂ ಇವರು ಕಷ್ಟಪಡುತ್ತಾರೆ. ಚಪ್ಪಲಿ ಕಳಕೊಂಡಾಗ ನಿರೂಪಕನ ಹಾಗೂ ಕೃಷ್ಣರ ದು:ಖ, ಸಿಟ್ಟು, ಮುಂದಾಲೋಚನೆಗಳ ಚಿತ್ರಣದಲ್ಲಿ ತಿಳಿ ಹಾಸ್ಯದ ಸ್ಪರ್ಶವಿದೆ .
ಕಾಲೇಜು ಹುಡುಗರ ಚಪ್ಪಲಿ ಚಿಂತೆ , ಹುಟ್ಟು ಹಬ್ಬದ ಹೊಡೆತಗಳು, ಏಕ ಮುಖ ಪ್ರಣಯ, ಚಪ್ಪಲಿ ಚಿತ್ತ ಇವುಗಳ ಚಿತ್ರಣ ಖುಷಿ ಕೊಡುತ್ತದೆ.
‘ಅಜ್ಜಿಯ ಚಿನ್ನ ಮತ್ತು ಚಪ್ಲಿ ಕತೆಗಳು’ ಅಧ್ಯಾಯದಲ್ಲಿರುವ ಅಜ್ಜಿ ಮತ್ತು ಚಪ್ಲಿ ಅಂಗಡಿಯ ರಫೀಕ್ ಇಲ್ಲಿನ ಮುಖ್ಯ ಪಾತ್ರಗಳು. ಕಥಾ ನಾಯಕ ಮೂಢ ನಂಬಿಕೆಗಳನ್ನು ಪ್ರಶ್ನಿಸುತ್ತಾನೆ. {ಬರಿ ನೆಲದಲ್ಲಿ ಊಟ ಮಾಡುವ ಆಧುನಿಕ ಮೂಡನಂಬಿಕೆ ಉಡುಪಿಯಲ್ಲಿದೆ}. ‘ಚಪ್ಲಿ ಭವಿಷ್ಯತ್ತು’ ‘ಚಪ್ಲಿ ಕನಸುಗಳು’ ಅಧ್ಯಾಯಗಳಲ್ಲಿ ಈ ಕೃತಿ ಆಧುನಿಕ ಚಪ್ಪಲಿ ಪುರಾಣದತ್ತ ಸಾಗುತ್ತದೆ.
ಇಲ್ಲಿ ಚಪ್ಲಿ ಫೋಬಿಯಾವೂ ಇದೆ, ಕೆರಹಿನ ಧ್ಯಾನವೂ ಇದೆ. ‘ಚಪ್ಪಲಿ ಚಿತ್ತ’ದಲ್ಲಿ ಮಠದೊಳಗಿನ ಕೃಷ್ಣನಾಗಲೀ, ರಥಬೀದಿಯಲ್ಲಿರುವ ಕನಕನಾಗಲೀ ಮುಖ್ಯವಾಗುವುದಿಲ್ಲ. ಲೇಖಕ ವಿಕಾಸ್ ರಥಬೀದಿಯನ್ನು ಅಲಕ್ಷಿಸಿ ಓಣಿಗಳಲ್ಲಿ ಸಾಗುತ್ತಾರೆ. ‘ಚಪ್ಪಲಿ ಚಿತ್ತದ’ ಹುಡುಗರಿಗೆ ಅವರ ಸಹಪಾಠಿ ಹುಡುಗಿಯರು ಆತ್ಮೀಯ ಗೆಳತಿಯರಾಗಿಲ್ಲ. ಆದ್ದರಿಂದ ಇಪ್ಪತ್ತೊಂದನೆಯ ಶತಮಾನದ ಮುದ್ದಣ ಮನೋರಮೆಯರ ಸಲ್ಲಾಪ ಇಲ್ಲಿ ಕಾಣಿಸುವುದಿಲ್ಲ .
ಕೆಲವು ಕಡೆ ವಾಚಾಳಿತನ ಇದೆ. ಆದರೆ, ಉದಯೋನ್ಮುಖ ಲೇಖಕ ವಿಕಾಸ್ ತನ್ನ ಚೊಚ್ಚಲ ಕೃತಿಯಲ್ಲಿ ಪಡೆದಿರುವ ಯಶಸ್ಸು ನನಗೆ ಖುಷಿ ಕೊಟ್ಟಿದೆ. ವಿಕಾಸ ಮತ್ತು ಅವನ ಗೆಳೆಯ ಕೃಷ್ಣ ನಾನು ಆಹ್ವಾನಿಸಿದ ನಾಟಕ, ವಿಚಾರಗೋಷ್ಟಿಗಳಿಗೆ ತಮ್ಮ ಸೈಕಲ್ ಗಳೊಂದಿಗೆ ಹಾಜರಾಗುತ್ತಿದ್ದರು. ಆದ್ದರಿಂದ ‘ಸೈಕಲ್ ಸಾನ್ನಿಧ್ಯ’ ಎಂಬ ಮುಂದಿನ ಕೃತಿ ರಚನೆಯಾಗುವುದು ತಡವಾಗಲಿಕ್ಕಿಲ್ಲ .
‘ಕೆರಹಿನ ಧ್ಯಾನ’ವನ್ನು ಕುರಿತ ‘ಚಪ್ಪಲಿ ಚಿತ್ತ’ವನ್ನು ಕನ್ನಡ ಹಾಸ್ಯ ಸಾಹಿತ್ಯಕ್ಕೆ ನೀಡಿದ ಉಡುಪಿಯ ಹೊಸ ತಲೆಮಾರಿನ ಲೇಖಕ ವಿಕಾಸ್ ರಿಗೆ ಅಭಿನಂದನೆಗಳು – ” ಹನುಮದ್ವಿಕಾಸಕ್ಕೆ ಇಲ್ಲ ಎಲ್ಲೆ ”
ವಿಕಾಸ್ ವಿಷ್ಣು ಅವರ ‘ಚಪ್ಪಲಿ ಚಿತ್ತ’ ಕೃತಿಗೆ ಬರೆದ ಮುನ್ನುಡಿ

ವಿಕಾಸನ 'ಚಪ್ಪಲಿ ಚಿತ್ತ'
ನಿಮಗೆ ಇವೂ ಇಷ್ಟವಾಗಬಹುದು…




ಚಪ್ಪಲಿ ಚಿತ್ತ ” ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕತೆಗಾರ ಪಿ. ಬಿ. ಪ್ರಸನ್ನ –https://www.youtube.com/watch?v=F54HFAOn31I