ಬ್ಲಾಗ್ ಲೋಕದಲ್ಲಿ ಈಗ ‘ಹಳ್ಳಿ ಕನ್ನಡ’ ಕೇಳಿಸುತ್ತಿದೆ. ‘ಕನ್ನಡಪ್ರಭ’ದಲ್ಲಿ ಕಲಾವಿದರಾಗಿರುವ ಮಂಜುನಾಥಸ್ವಾಮಿ ಬ್ಲಾಗ್ ಲೋಕದಲ್ಲಿ ದೇಸಿ ದನಿಗೆ ಕಾರಣವಾಗಿದ್ದಾರೆ. ಒಳ್ಳೆಯ ಛಾಯಾಗ್ರಾಹಕರೂ, ಅಡುಗೆ ಭಟ್ಟರೂ ಆಗಿರುವ ಸ್ವಾಮಿ ತಮ್ಮ ಬ್ಲಾಗ್ನಲ್ಲಿ ಛಾಯಾಚಿತ್ರ, ಅಡುಗೆ ಎಲ್ಲವನ್ನೂ ರಸವತ್ತಾಗಿ ಕೊಟ್ಟಿದ್ದಾರೆ. ಅವರ ಸರಳ ಸುಂದರ ಶೈಲಿಗೆ ಇಲ್ಲಿದೆ ಈ ಬರಹ ..
ಬಭ್ರುವಾಹನ : ಏನು ಪಾರ್ಥ. ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನನ್ನನ್ನು ಗೆಲ್ಲಲಾರೆ. ಈಗ ಆ ಶಕ್ತಿ ನಿನ್ನಲ್ಲಿಲ್ಲ. ಪರಮ ಪತಿವ್ರತೆಯನ್ನು ನಿಂದಿಸಿದ ಮರು ಕ್ಷಣವೇ ನಿನ್ನ ಪುಣ್ಯವೆಲ್ಲಾ ಉರಿದು ಹೋಗಿ, ಪಾಪದ ಮೂಟೆ ನಿನ್ನ ಹೆಗಲ ಹತ್ತಿದೆ. ಎತ್ತು ನಿನ್ನ ಗಾಂಢೀವ. ಹೂಡು ಪರಮೇಶ್ವರನು ಕೊಟ್ಟ ಆ ನಿನ್ನ ಪಾಶುಪತಾಸ್ತ್ರ. ಶಿವನನ್ನು ಗೆದ್ದ ನಿನ್ನ ಶೌರ್ಯ ನನಗೂ ಸ್ವಲ್ಪ ತಿಳಿಯಲಿ. ಅಥವಾ ಶಿವನನ್ನು ಗೆದ್ದೇ ಎಂಬ ನಿನ್ನ ಅಹಂಕಾರ ನನ್ನಿಂದಲೇ ಮಣ್ಣಾಗಲಿ.
ಅರ್ಜುನ : ಮದಾಂಧ. ಅವರಿವರನ್ನು ಗೆದ್ದೇ ಎಂಬ ಅಹಂಕಾರದಿಂದ ಕೊಬ್ಬಿದ ಮೂರ್ಖ. ಸುರಲೋಕಕ್ಕೆ ಸೋಪಾನ ಕಟ್ಟಿ, ಮತ್ಸ್ಯ ಯಂತ್ರವನು ಭೇದಿಸಿ, ರಣಾಂಗಣದಲ್ಲಿ ವೀರವಿಹಾರ ಮಾಡಿದ ಅರ್ಜುನನ ಭುಜಬಲದ ಪರಾಕ್ರಮ ನಿನಗೇನು ತಿಳಿದಿದೆಯೋ.
ಬಭ್ರುವಾಹನ : ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ
ಸಮರದೋಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮ
ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮ
ಹಗಲಿರುಳು ನೆರಳಂತೆ ತಲೆ ಕಾಯ್ದು ಕಾಪಾಡಿ ಜಯವ ತಂದಿತ್ತ ಆ ಯದುನಂದನ
ಅವನಿಲ್ಲದೆ ಬಂದ ನೀನು ತೃಣಕ್ಕೆ ಸಮಾನ
ಅರ್ಜುನ : ಅಸಾಹಾಯ ಶೂರ ನಾ ಅಕ್ಷೀಣ ಬಲನೋ
ಹರನೊಡನೆ ಹೋರಾಡಿ ಪಾಶುಪತವಂ ಪಡೆದವನೋ
ಆಗ್ರಹದೊಳೆದುರಾಗೊ ಅರಿಗಳಂ ನಿಗ್ರಹಿಸೋ ವ್ಯಾಘ್ರನಿವನೋ
ಉಗ್ರಪ್ರತಾಪೀ
ಬಭ್ರುವಾಹನ : ಓ ಹೊ ಒ ಹೋ ಉಗ್ರಪ್ರತಾಪಿ ಆ!
ಸಭೆಯೊಳಗೆ ದ್ರೌಪತಿಯ ಸೀರೆಯನು ಸೆಳೆವಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ
ನೂಪುರಂಗಳ ಕಟ್ಟಿ ನಟಿಸಿ ತಕಥೈಯಂದು ನಾಟ್ಯ ಕಲಿಸಿದ ನಪುಂಸಕ ನೀನು
ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ ಮಗನನ್ನು ಬಲಿ ಕೊಟ್ಟ ಭ್ರಷ್ಟಾ ನೀನು
ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೋ
ಖಂಡಿಸಿದೇ ಉಳಿಸುವೆ ಹೋಗೊ ಹೋಗೆಲೋ ಶಿಖಂಡಿ
ಅರ್ಜುನ : ಫಡ ಫಡ ಶಿಖಂಡಿಯಂದಡಿಗಡಿಗೆ ನುಡಿಯ ಬೇಡೆಲೋ ಮೂಢ
ಭಂಡರೆದೆ ಗುಂಡಿಗೆಯ ಖಂಡಿಸುತಾ ರಣಚಂಡಿಗೌತಣವೀವ ಈ ಗಾಂಢೀವಿ
ಗಂಡುಗಲಿಗಳ ಗಂಡ ಉದ್ಧಂಡ ಭೂಮಂಡಲದೊಳಖಂಡ ಕೀರ್ತಿ ಪ್ರಚಂಡ
ಬಭ್ರುವಾಹನ : ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ
ಹೂಡು ಬಾಣಗಳ ಮಾಡುವೆ ಮಾನಭಂಗ
ಅರ್ಜುನ : ಕದನದೋಳ್ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ
ಬಭ್ರುವಾಹನ : ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಭಯವಿಲ್ಲ
ಅರ್ಜುನ : ಆರ್ಭಟಿಸಿ ಬರುತಿದೆ ನೋಡು ಹಂತಕನಾಹ್ವಾನ
ಬಭ್ರುವಾಹನ : ಹಂತಕನಿಗೆ ಹಂತಕನು ಈ ಬಭ್ರುವಾಹನ
ಅರ್ಜುನ : ಮುಚ್ಚು ಬಾಯಿ ಜಾರಿಣಿಯ ಮಗನೆ
ಬಭ್ರುವಾಹನ : ಏ ಪಾರ್ಥ. ನನ್ನ ತಾಯಿ ಜಾರಿಣಿಯೋ ಪತಿವ್ರತೆಯೋ ಎಂದು ನಿರ್ಧರಿಸಲೇ ಈ ಯುದ್ದ.





ಚಿಕ್ಕಂದಿನ ನೆನಪಾಯಿತು. ಕೆಲವು ತಿದ್ದುಪಡಿಗಳಿವೆ-
ಅಸಾಹಾಯ ಇರಲಿಕ್ಕಿಲ್ಲ – ಅಸಹಾಯ
ಕದನದೋಳ್ ಬದಲಿಗೆ ಕದನದೊಳ್
ನನಗೆ ಈ ಹಾಡು, ಅಲ್ಲ ಮಾತುಗಳು, ಅಲ್ಲ ಅಲ್ಲ ಈ ಇಡೀ ಚಿತ್ರದ ಸಮಗ್ರ ಸಂಭಾಷಣೆ ತುಂಬಾ ಎಂದೆರೆ ತುಂಬಾ ಇಷ್ಟ. Thank you very much sir, ….
ರಾಜ್ ಕುಮಾರ್ ಅವರ ಅದ್ಬುತ ಅಭಿನಯ.. ಬಬ್ರುವಾಹನ ಪಾತ್ರದಲ್ಲಿ…
…ಅಂಥ ನಟರು ಕನ್ನಡ ಚಿತ್ರರಂಗದಲ್ಲಿ ಮತ್ತೆ ಉದಯಿಸಬೇಕು.