ಮೂಕಪ್ರಾಣಿಗಳ ಒಂದು ಮೂಕ ಸಭೆ
– ಈಶ್ವರ ಶಾಸ್ತ್ರಿ
ದಿನವೂ ಗೋಧೂಳಿ ಮುಹೂರ್ತದ ಹೊತ್ತಿಗೆ ನಾನು ನನ್ನ ಮನೆಯ ಟೆರೇಸಿನಮೇಲೆ ವಾಕಿಂಗ್ ಮಾಡುತ್ತಿರುತ್ತೇನೆ. ಆ ಸಮಯದಲ್ಲಿ ನಮ್ಮ ಮನೆಯ ಹಿಂದೆ ಅಥವಾ ಮುಂದೆ ಕೆಲ ಗೋವುಗಳು ಧೂಳು ಹಾರಿಸುತ್ತಾ ತಮ್ಮ ತಮ್ಮ ಮನೆಯಕಡೆಗೆ ಹೋಗುತ್ತಿರುತ್ತವೆ. ಕೆಲವು ಓಡಿದರೆ ಕೆಲವು ಸಾವಧಾನದಿಂದ. ಕೆಲವು ಜಗಳ ಆಡುತ್ತ, ಕೆಲವು ನೂಕಿಕೊಳ್ಳುತ್ತ ಹೋಗುತ್ತಿರುತ್ತವೆ. ಎಂದಾದರೊಂದು ದಿನ ಯಾವುದಾದರೂಂದು ಆಕಳು ಅಂಬಾssssssss ಎಂದು ಒಂದನ್ನೊಂದು ಕರೆಯುತ್ತ ಓಡುತ್ತಿರುತ್ತದೆ.,
ನಾನು ಹೇಳ ಹೊರಟ ಸಂಧರ್ಭವು ಇದೇ ಸಂಧರ್ಭದ್ದಾಗಿದ್ದರೂ, ಅದು ಭಿನ್ನವಾಗಿದೆ. ಬಾಣಭಟ್ಟನ ಕಾದಂಬರಿ ಎಂಬ ಬೃಹತ್ ಕಾದಂಬರಿಯಲ್ಲಿ ಒಂದು ಸನ್ನಿವೇಶ ಬರುತ್ತದೆ. ಮಾತನಾಡುವ ಗಿಳಿಯನ್ನು ಕಂಡು ರಾಜನಿಗೆ ಆಶ್ಚರ್ಯ ವಾಗುತ್ತದೆ. ’ಪ್ರಾಣಿಗಳು ಅಂದರೆ ಕೇವಲ ಆಹಾರ ನಿದ್ರೆ ಭಯ ಮೈಥುನಗಳಿಗೆ ಸೀಮಿತವಾದ ಪ್ರಪಂಚದಲ್ಲಿ ಜೀವಿಸುತ್ತವೆ ಎಂದು ತಿಳಿದುಕೊಂಡಿದ್ದೆ. ನೀನು ವಿಚಿತ್ರ’ ಎಂಬ ಅರ್ಥದಲ್ಲಿ ಮಾತನಾಡುತ್ತಾನೆ. ಬಹುಷಃ ನಾವೆಲ್ಲರೂ ಇಂದಿಗೂ ಇದೇ ಅರ್ಥವನ್ನೇ ಘಟ್ಟಿಯಾಗಿ ನಂಬಿದ್ದೇವೆ.
ಅಂದು ಎಂದಿನಂತೆಯೇ ಸಾಯಂಕಾಲ ಸಮೀಪಿಸುತ್ತಿತ್ತು. ಎಂದಿನಂತೆಯೇ ನಾನು ಟೆರೇಸ್ ಏರುತ್ತಿದ್ದೆ. ಎಲ್ಲಿಂದಲೋ ಒಂದು ಹಸುವಿನ ಅಂಬಾsssssssssss ಎಂಬ ಕೂಗು ಕೇಳಿಸಿತು. ಆ ಕೂಗು ಎಂದಿನಂತಿರಲಿಲ್ಲ. ಅದು ಆರ್ಥನಾದವಾಗಿತ್ತು. ನೋವಿನಿಂದ ಕೂಡಿತ್ತು. ಇನ್ನೆರಡು ಮೆಟ್ಟಿಲು ಏರುತ್ತಿರುವಂತೆ ಅಂಬಾssssssಗಳ ಸಂಖ್ಯೆ ಹೆಚ್ಚಾಯಿತು. ಟೇರೇಸ್ ಏರುತ್ತಿದ್ದಂತೇ ಆರ್ಥನಾದ ಮಾಡುತ್ತ ಓಡಿ ಓಡಿ ಬರುವ ಹಸುಗಳ ಸಂಖ್ಯೆ ಹೆಚ್ಚಾಯಿತು. ನೋವಿನಿಂದ ಕೂಗುತ್ತ ಅವು ಒಂದು ಸ್ಥಳದಲ್ಲಿ ಗುಂಪುಗೂಡತೊಡಗಿದವು..
ಹೀಗೆ ಗುಂಪುಗೂಡಲು ಅಲ್ಲಿ ಹಲಸಿನ ಹಣ್ಣು ಇರಲಿಲ್ಲ ( ನಮ್ಮೂರ ಆಕಳುಗಳುಗಳಿಗೆ ಹಲಸಿನ ಹಣ್ಣೀನ ವಾಸನೆ ಬಡಿದರೆ ಸಾಕು. ಎಂತಹ ಅಡೆತಡೆ ಇದ್ದರೂ ಲೆಕ್ಕಿಸದೇ, ಅದನ್ನು ತಿನ್ನಲು ಧಾವಿಸುತ್ತವೆ- ರಾಜನಮನೆ ಭೋಜನ ಎಂದರೆ ಯೋಜನವಾದರು ಹೋಗುವೆವು), ಅಲ್ಲಿ ಇದ್ದುದ್ದು ಒಂದು ಕರುವಿನ ಮೃತದೇಹ!!! ಅದು ಯಾವ ತಾಯಿಯ ಮಗಳೋ ಮಗನೋ ಏನೋ? ಮೊದಲು ಗುರುತಿಸಿದ ಆಕಳು ಅದರ ತಾಯಿಯೇ ಆಗಿತ್ತೇ ಅಥವಾ ಬೇರೆಯದೇ ಆಗಿತ್ತೇ ಗೊತ್ತಿಲ್ಲ. ಮಧ್ಯಾಹ್ನದಿಂದಲೂ ಆ ಮೃತದೇಹವು ಅಲ್ಲಿದ್ದುದ್ದು ನನಗೆ ಗೊತ್ತಿತ್ತು. ಬಹುಷ ಆ ಮೂಕ ಪ್ರಪಂಚಕ್ಕೆ ಗೊತ್ತಿರಲಿಲ್ಲ. ಮೇಯುವುದು ಮುಗಿದು ಹೊಟ್ಟೆತುಂಬಿದ ಸಂತಸದಲ್ಲಿ ( ಮುನ್ನ ಹಾಲನು ಕೊಡುವೆನೆನುತ ಚೆಂದದಿ ತಾ ಬರುತಿರೆ) ಮನೆಕೆಡೆಗೆ ಹೊರಟಾಗ, ಆಗಲೇ ನಾಯಿಗಳು ಕಿತ್ತಾಡಿ ಗುರುತು ಸಿಗದಂತೆ ಮುಕ್ಕಾಲು ಭಾಗ ಭಕ್ಷಿಸಿದ ರೂಪ ಇಲ್ಲದ ಆ ಶರೀರವನ್ನು ಅದು ತಮ್ಮದೇ ಕುಡಿ ಎಂದು ಅವು ಹೇಗೆ ಗುರುತಿಸಿದವೋ ಆ ದೇವರಿಗೇ ಗೊತ್ತು.
ಆ ಮೇಲೆ ಎಲ್ಲವೂ ಮೌನ. ಒಬ್ಬೊಬ್ಬರಾಗಿ ಆ ಮೃತದೇಹವನ್ನು ಮೂಸಿದವು. ಮತ್ತೆ ಮೌನ. ಕೆಲವು ನಿಮಿಷಗಳ ನಂತರದಲ್ಲಿ, ಕನಿಷ್ಟ ಮೂರುನೂರು ಮೀಟರ್ ದೂರದಲ್ಲಿ ಒಂಟಿ ಆರ್ಥನಾದ ಕೇಳಿ ಬಂದಿತು. ಅದರ ಕೂಗು ಕೇಳುತ್ತಿದ್ದರೆ ಅದು ಈ ಗುಂಪಿನ ಕಡೆಗೆ ಬರುತ್ತಿದೆ ಎಂದು ಊಹಿಸಬಹುದಾಗಿತ್ತು. ಅಂದು ಹೇಗೋ ಆ ಒಂದೇ ಹಸು ಉಳಿದವುಗಳನ್ನು ಬಿಟ್ಟು ಮುಂದೆ ಹೋಗಿರಬೇಕು. ಈ ಘಟನೆಯಬಗ್ಗೆ ಅದಕ್ಕೆ ತಿಳುವಳಿಕೆ ಇರಲಿಲ್ಲ. ಆದರೆ ಯಾರು ಎಸ್ ಎಂ ಎಸ್ ಕೊಟ್ಟರೋ ಗೊತ್ತಿಲ್ಲ, ಗೋಳಾಡುತ್ತಾ ಹಿಂದಿರುಗುತ್ತಿತ್ತು. ದನದ ಈ ಸಭೆ ಎಲ್ಲಿ ಸೇರಿದೆ ಎಂಬುದು ಅದಕ್ಕೆ ಕಾಣುತ್ತಿರಲಿಲ್ಲ. ಆದರೂ ಆಡ್ಡಾತಿಡ್ಡಿ ಇರುವ ರಸ್ತೆಯಲ್ಲಿ ತಾನು ಇಲ್ಲಿಗೇ ಹೋಗಬೇಕೆಂದು ಅದಕ್ಕೆ ಹೇಗೆ ತಿಳಿಯಿತೋ ಏನೋ? ಕೆಲ ನಿಮಿಷಗಳಲ್ಲಿ ಆ ಆಕಳೂ ಇವರ ಮೌನ ಸಭೆಯಲ್ಲಿ ಮೌನವಾಗಿ ಬಂದು ನಿಂತಿತು.
ಮನುಷ್ಯನು ಮಾತ್ರ ಅಪ್ಪ ಅಮ್ಮ ಮಗ ಮಗಳು ಹೀಗೆ ಸಂಬಂಧವನ್ನು ಗುರುತಿಸಿಕೊಂಡಿರುತ್ತಾನೆ. ಆದರೆ ಪ್ರಾಣಿಗಳಲ್ಲಿ ಈ ಸಂಬಂಧಗಳು ಇಲ್ಲ ಎಂದು ನಾವೆಲರೂ ಭಾವಿಸುತ್ತೇವೆ.. ಅದು ನಿಜವಿರಬಹುದು. ಆದರೆ ಆ ಪ್ರಾಣಿ ಪ್ರಪಂಚದಲ್ಲಿ, ’ತಾವೆಲ್ಲಾ ಒಂದೇ ಸಮೂಹ. ಇಲ್ಲಿ ವ್ಯಷ್ಠಿಯ ನೋವು ಸಮಷ್ಠಿಯ ನೋವು ಎಂದು ಬೇರೆ ಇರುವುದಿಲ್ಲ’ ಎಂಬುದಕ್ಕೆ ಈ ಘಟನೆ ಸಾಕ್ಷಿ ಅಲ್ಲವೇ?
ಪ್ರಾಣಿಗಳ ಬಗ್ಗೆ ನಮ್ಮ ಅಭಿಪ್ರಾಯ ಬದಲಾಗಲೇ ಬೇಕು.
]]>
ಮೂಕಪ್ರಾಣಿಗಳ ಒಂದು ಮೂಕ ಸಭೆ
ನಿಮಗೆ ಇವೂ ಇಷ್ಟವಾಗಬಹುದು…


what u r saying is true, thanks..
ಓದಿ ಕಣ್ಣೀರು ಬಂತು..ಮೂಕ ಪ್ರಾಣಿಗಳು ಅಂತ ನಾವು ಅವುಗಳನ್ನ ತಪ್ಪಾಗಿ ಸಂಬೋಧಿಸುತ್ತೇವೆ..ಅನಿಸುತ್ತೆ. ವಾಸ್ತವದಲ್ಲಿ ನಮಗೆ ಪ್ರಾಣಿಗಳ ಭಾಷೆ ಸರಿಯಾಗಿ ಗೊತ್ತಿಲ್ಲ ಅಷ್ಟೇ.ಅವೂ ನಮ್ಮಂತೇ ಪರಸ್ಪರ ಮಾತಾಡಿಕೊಳ್ಳುತ್ತವೆ,ಅಳುತ್ತವೆ,ಖುಷಿ ಪಡುತ್ತವೆ ..ದುಃಖಿಸುತ್ತವೆ…ಪ್ರತಿಕ್ರಿಯಿಸುತ್ತವೆ..
ಅವೂ ನಮ್ಮಂತೇ… ಬಹುಶಃ ಕೆಲವೊಮ್ಮೆ ನಮಗಿಂತಲೂ ಸಂವೇದನಾ ಶೀಲತೆ ಉಳ್ಳವೇನೋ .ಅವುಗಳಿಗೂ ಭಾವನೆಗಳಿವೆ..ಅಲ್ಲವೇ…
ನಿಮ್ಮ ಹೃದಯಸ್ಪರ್ಶಿ ಬರಹಕ್ಕೆ …ಧನ್ಯವಾದಗಳು.
—