ಮೊನ್ನೆ. ಇದ್ದಕ್ಕಿದ್ಧಂಗೇ ಇಂಟರ್ನೆಟ್ ಸಂಪರ್ಕ ಕಡಿತಗೊಂಡ ದಿನ. ಸರಿಹೋದೀತೆಂದು ಕಾದೂ ಕಾದೂ ಸುಸ್ತಾಗಿ, ಬಳಿಕ ಅವಧಿಯ ಅಂಗಳಕ್ಕಾಗಿ ಹೊಸ ಅಕ್ಷರಗಳನ್ನು ಹೆಣೆಯುವ ಕೆಲಸಕ್ಕೆ ರಜೆ ಘೋಷಿಸಿದೆವು. ಸಂಜೆ ಎಲ್ಲಾದ್ರೂ ಒಂದು ಸುತ್ತು ಹೋಗಿಬರೋದು ಅಂತಾ ಠರಾವಾಯಿತು. ಕಲಾಕ್ಷೇತ್ರದ ಕಡೆಗೆ ಹೋಗಬೇಕೆನ್ನಿಸಿದರೂ ಯಾರಲ್ಲೂ ಅಂಥ ಹುರುಪು ಇರಲಿಲ್ಲ. ಕಡೆಗೆ ಮಲ್ಲೇಶ್ವರಂನಲ್ಲೇ ಒಂದು ಸುತ್ತು ಹಾಕೋಣ ಎಂದುಕೊಂಡೆವು. ಮಲ್ಲೇಶ್ವರಂ ಎಂದದ್ದೇ ತಡ. ಅವಧಿಯ ಮುಕ್ಕಾಲು ಪಾಲು ಕೆಲಸವನ್ನು ಮ್ಯಾನೇಜ್ ಮಾಡುವ ಮಾಧವಿ ಮತ್ತು ಆಕೆಯ ಗೆಳತಿ ಲಲಿತೆ ಇಬ್ಬರೂ ಖುಷ್ ಆದರು. ಐದೂ ಮಂದಿಯ ಸವಾರಿ ಮಲ್ಲೇಶ್ವರಂ ಕಡೆ ಹೊರಟಿತು, ಕಾಲ್ನಡಿಗೆಯಲ್ಲೇ. ನವರಂಗಿಂದ ಮಲ್ಲೇಶ್ವರಂ ಕಡೆ ನಡೆಯೋದೇ ಒಂದು ಮಜ.
ಮಲ್ಲೇಶ್ವರಂ ಮಾರುಕಟ್ಟೆ ಬೆಂಗಳೂರಿನ ಯಾವುದೇ ಮಾರುಕಟ್ಟೆಗಿಂತ ಒಂದು ಕೈ ಮೇಲೇ ಎಂಬಂತಿದೆ ಇವತ್ತಿಗೂ. ಅದಕ್ಕೊಂದು ಸಾಂಸ್ಕೃತಿಕ ಘಮ ಇದೆ. ಅಲ್ಲೊಂದು ಪುಸ್ತಕ ಪ್ರೀತಿಯ ಅಂತರಗಂಗೆ ಸದಾ ಜುಳುಜುಳು ಅಂತಿರುತ್ತೆ. ಅಕ್ಷರ ಲೋಕದ ಕನಸುಗಳು ನಳನಳಿಸೋಕ್ಕೆ ಅಲ್ಲೊಂದು ನೆಲದ ನುಡಿ ಸದಾ ಬೆಂಬಲಿಸುತ್ತಿರೋ ಹಾಗಿದೆ. ಅಲ್ಲಿನ ಗ್ರಂಥಿಕೆ, ಗಂಧ, ಹೂ ಅಂಗಡಿಗಳೆಲ್ಲಾ ಒಟ್ಟಾಗಿ ಯಾವುದೋ ಹಂಬಲವನ್ನು ನೆರವೇರಿಸಲೆಂದೇ ಸದಾ ತವಕಿಸುತ್ತಿರುವಂತಿದೆ.
ನಾವು ಕಾಡುಮಲ್ಲೇಶ್ವರ ದೇವಸ್ಥಾನದ ಹಿಂಬದಿಯ ನೆಳಲಲ್ಲಿ ಹೋಗಿ ಕೂತೆವು. ರಾಜು ಮೇಷ್ಟ್ರ(ಪ್ರೊ.ಚಿ.ಶ್ರೀನಿವಾಸರಾಜು) ಬಗ್ಗೆ, ಕ್ರೈಸ್ಟ್ ಕಾಲೇಜ್ ಬಗ್ಗೆ ಮಾತು ಬಂತು. ಗೆಳೆಯರ ಬಳಗದ ಕವಿಗೋಷ್ಠಿಗಳು ನೆನಪಾದವು. ಮಾತಿನ ಮಧ್ಯೆಯೇ ಹಂಗಾಮ ಪಾಕ್ಷಿಕದ ಪ್ರಸ್ತಾಪವಾಯಿತು. ಹಾಗೆ ಹಂಗಾಮದ ನೆನಪು ಹಚ್ಚಿದವಳು ಮಾಧವಿ. ಹಂಗಾಮ ಯಾಕೆ ನಮ್ಮನ್ನೆಲ್ಲ ಇಷ್ಟೊಂದು ಕಾಡುತ್ತಿದೆ ಎಂಬ ಕಾರಣ ಹುಡುಕುತ್ತ ಮಾತು ಬೆಳೆಸಿದೆವು. ಮಾತಾಡುತ್ತಾ ಮಾತಾಡುತ್ತಾ, ಹಂಗಾಮದ ಹಾಡು ಸಿಗತೊಡಗಿತು.
ಹಂಗಾಮ ಮಲ್ಲೇಶ್ವರಂನ ಹೂ ಘಮದ ಮಾರುಕಟ್ಟೆಯಂಥ ಲವಲವಿಕೆಯ ದಂಡೆಯಲ್ಲೇ ತನ್ನ ಬೇರುಗಳನ್ನಿಳಿಸಿ, ಕನಸುಗಳ ಕಡೆಗೆ ಹೊರಟ ಉತ್ಸಾಹವಾಗಿತ್ತು. ಈ ಹೂ ಘಮ, ಜನಸಂದಣಿಯ ಸರಬರ, ಸಡಗರ ಅದರಲ್ಲೂ ಇತ್ತು. ಈ ಕಾಡುಮಲ್ಲೇಶ್ವರ ದೇವಸ್ಥಾನದ ಪಕ್ಕ ಹಾಸಿರುವ ನೆರಳಿನಂಥದೇ ಚಾವಡಿಯನ್ನು ಅದು ಓದುಗರ ಮನಸ್ಸಿಗೆಂದು ಮಾತಿಗೆಂದು ತೆರೆದು ಕೂತಿತ್ತು. ಎಲ್ಲರಿಗೂ ಬೇಕೆನ್ನಿಸುವ ಬೈಠಕ್ ಕಟ್ಟಲು ಅದರೊಳಗೊಂದು ಉಮೇದು ಇತ್ತು. ಎಲ್ಲಕ್ಕಿಂತಲೂ ಮಿಗಿಲೆನ್ನಿಸುವುದು, ಅದು ಬರವಣಿಗೆಯ ತೀರದಲ್ಲಿ ಕಾಣಿಸಿದ ಹೊಸಬರ ಸೈನ್ಯ.
ಇದೆಲ್ಲವನ್ನೂ ಯೋಚಿಸುತ್ತಲೇ ವಾಪಸ್ ಬರುವಾಗ, ನೋಡೋಣಾಂತ ಕನ್ನಡ ಪತ್ರಿಕೆಗಳು ಸಿಗುವ ಅಂಗಡಿಯಲ್ಲಿ “ಹಂಗಾಮ ಸಿಗುತ್ತಾ?” ಕೇಳಿದೆವು. “ಅದು ನಿಂತು ವರ್ಷಗಳೇ ಆಗಿ ಹೋದ್ವಲ್ರಿ. ಕಾಪಿ ಸಿಗುತ್ತಾ ಅಂತಾ ಅವ್ರಿವ್ರು ಬಂದು ಕೇಳ್ತಾನೇ ಇರ್ತಾರೆ. ಏನಿತ್ತೂರೀ ಅದರಲ್ಲಿ ಅಂತಾದ್ದು?” ಅಂದ, ಅಂಗಡಿಯವನು. ಆ ಕ್ಷಣ ಎಂಥದೋ ಧನ್ಯತೆ ನಮ್ಮನ್ನು ಆವರಿಸಿತು.
ಇದೆಲ್ಲವನ್ನೂ ಪ್ರಸ್ತಾಪಿಸಬೇಕೆನ್ನಿಸಿದ್ದು ವಿಜಯ ಕರ್ನಾಟಕದ ಕಾರ್ಯನಿರ್ವಾಹಕ ವ್ಯವಸ್ಥಾಪಕ ಸಂಪಾದಕ ವಿಶ್ವೇಶ್ವರ ಭಟ್ ಅವರ “ಜನಗಳ ಮನ” ಅನ್ನೋ ಪುಸ್ತಕ ನೋಡಿದ ಮೇಲೆ. ಹಂಗಾಮದ ಮೊದಲ ಸಂಚಿಕೆ ಪ್ರಕಟವಾದಾಗ ವಿಶ್ವೇಶ್ವರ ಭಟ್ ಅವರು ವಿಜಯ ಕರ್ನಾಟಕದ ಜನಗಳ ಮನ ಅಂಕಣದಲ್ಲಿ ಪ್ರೀತಿಯಿಂದ ಬರೆದಿದ್ದರು. ಹಂಗಾಮ ಯಾಕೆ ಹೆಚ್ಚಿನದೆನ್ನಿಸುತ್ತದೆ ಎಂದು ವಿವರಿಸಿದ್ದರು. ಈಗ ಆ ಅಂಕಣ ಬರಹಗಳ ಸಂಕಲನದಲ್ಲಿ ಹಂಗಾಮ ಕುರಿತ ಬರಹವನ್ನೂ ಸೇರಿಸಿದ್ದಾರೆ. ಹಂಗಾಮದ ಕುರಿತ ನೆನಪನ್ನು ಮತ್ತಷ್ಟು ಓದುಗರಿಗೆ ದಾಟಿಸುವ ಮನಸ್ಸು ಮಾಡಿದ ಅವರಿಗೆ ಕೃತಜ್ಞತೆ ಹೇಳುತ್ತಾ, ಅವರ ಆ ಬರಹವನ್ನು ಇಲ್ಲಿ ಕೊಡುತ್ತಿದ್ದೇವೆ.





ಪ್ರಿಯ ಅವಧಿ,
ಥ್ಯಾಂಕ್ಸ್. ಹಂಗಾಮ ಶುರು ಮಾಡಬೇಕು ಅಂದುಕೊಂಡಾಗ ನೆರವಿಗೆ ನಿಂತ ಗೆಳೆಯರು ಮತ್ತು ಹಿರಿಯರ ಬಳಗ ದೊಡ್ಡದು. ಆಗ ವಿಶ್ವೇಶ್ವರ ಭಟ್ ಅವರೂ ವಿ ಕ ದಲ್ಲಿ ಕೆಲವು ಮಾತುಗಳನ್ನು ಬರೆದರು. ಅದಕ್ಕೂ ಮೊದಲು ನಾವು ಪರಸ್ಪರ ಭೇಟಿ ಕೂಡ ಆದದ್ದಿರಲಿಲ್ಲ. ಅವರ ಪ್ರೀತಿಗೆ, ಪ್ರೋತ್ಸಾಹದ ಮಾತುಗಳಿಗೆ ಬೆಲೆ ಕಟ್ಟುವಂತಿಲ್ಲ, ಅವತ್ತಿಗೂ ಇವತ್ತಿಗೂ. ಅವತ್ತಿಂದ ಹಂಗಾಮದ ಹಾದಿಯಲ್ಲಿ ಸಾಗಿದಷ್ಟೂ ದಿನ ಬೆಂಬಲಿಸಿದವರು, ಬೆನ್ನು ತಟ್ಟಿದವರ ಸಂಖ್ಯೆ ದೊಡ್ಡದು.
ಹಂಗಾಮದ ಹಾದಿಯಲ್ಲಿ ನಾನೇ ಮಾತು ಉಳಿಸಿಕೊಳ್ಳಲಾಗಲಿಲ್ಲ. ಶಕ್ತಿ ಸಾಲದೆ ನಡು ದಾರಿಯಲ್ಲೇ ಸೋತು ಹೋದೆ ಎಂಬ ನೋವು ಬಿಟ್ಟರೆ, ಹಂಗಾಮ ಇಂದಿಗೂ ನನ್ನೊಳಗೆ ಖುಷಿಯ ಭೋರ್ಗರೆತವನ್ನು ಉಳಿಸಿದೆ.
ಹಂಗಾಮದ ಬಗ್ಗೆ ಪ್ರೀತಿಯಿಂದ ಬರೆದುದಕ್ಕೆ, ನನಗೆ ಮೊದಲ ಹೆಜ್ಜೆಯಲ್ಲೇ ಬಲ ಕೊಟ್ಟ ವಿಶ್ವೇಶ್ವರ್ ಭಟ್ ಅವರ ಬರಹವನ್ನು ಮತ್ತೊಮ್ಮೆ ಓದುತ್ತ ಸಂಭ್ರಮಿಸುವಂತೆ ಮಾಡಿರುವುದಕ್ಕೆ ತುಂಬಾ ತುಂಬಾ ಕೃತಜ್ಞನಾಗಿದ್ದೇನೆ.
ವಂದನೆಗಳು
ವಿಶ್ವಾಸದ,
ವೆಂಕಟ್ರಮಣ ಗೌಡ