ರಾಜೀವ ನಾರಾಯಣ ನಾಯಕ
ಪತನಗೊಂಡ ಕೋಟೆಕೊತ್ತಲಗಳಲ್ಲಿ ಅಡ್ಡಾಡುವಾಗ ವಿಶಾದ ಭಾವವೊಂದು ಸಾಮಾನ್ಯವಾಗಿ ನಮ್ಮನ್ನು ಆವರಿಸಿಕೊಳ್ಳುತ್ತದೆ.
ಅಲ್ಲಿಯ ಗೋಡೆಗಳು, ಕಂಬಗಳು, ಬಾಗಿಲುಗಳಿಂದ ಹಾಯುವ ನಿಟ್ಟುಸಿರ ಸುಯ್ಲು ನಮ್ಮನ್ನು ತಟ್ಟುತ್ತದೆ. ಇತಿಹಾಸ ಚರಿತ್ರೆಗಳು ಭಗ್ನ ಅವಶೇಷಗಳ ಅಡಿಯಲ್ಲಿ ಸಿಲುಕಿ ಸಣ್ಣಗೆ ನರಳುತ್ತಿರುವಂತೆಯೂ ಕೇಳಿಸುತ್ತದೆ. ರಾಜ ಮಹಾರಾಜರ ರಾಜಕುಮಾರಿಯರ ಪಾದಸ್ಪರ್ಷದಿಂದ ಪುಲಕಗೊಳ್ಳುತ್ತಿದ್ದ ಕೋಟೆ ಮೆಟ್ಟಿಲುಗಳು ಕಾಲಚಕ್ರದಡಿ ಸಿಲುಕಿ ಅಸ್ತವ್ಯಸ್ತವಾಗಿರುವುದು ಕೋಟೆಗಳಲ್ಲಿ ಕಾಣುವ ಸಾಮಾನ್ಯ ದೃಶ್ಯ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ಸಮೀಪವಿರುವ ಮಿರ್ಜಾನ್ ಕೋಟೆಯೂ ಇಂಥ ಅನುಭವಕ್ಕೆ ಭಿನ್ನವಲ್ಲ. ಆದರೆ ಹದಿನಾರನೇ ಶತಮಾನದಲ್ಲಿ ಕಾಳುಮೆಣಸಿನ ರಾಣಿ ಎಂದು ಪ್ರಸಿದ್ಧಿ ಪಡೆದ ಚನ್ನಭೈರಾದೇವಿ ಆಳಿದ ಈ ಕೋಟೆಯನ್ನು ಮಳೆಗಾಲದಲ್ಲಿ ನೋಡಿದಾಗ ಮಾತ್ರ ವಿಭಿನ್ನವಾಗಿ ಕಾಣುತ್ತದೆ. ಮುಂಗಾರು ಮಳೆ ಶುರುವಾದರೆ ಸಾಕು, ಬೇಸಿಗೆಯಲ್ಲಿ ನಿರ್ಜೀವಗೊಂಡಿದ್ದ ಕೋಟೆಯಲ್ಲಿ ಜೀವ ಮೊಳಕೆಯೊಡೆಯುತ್ತದೆ.
ಚೀರಿಕಲ್ಲುಗಳ ನಡುವಿಂದ ಗರಿಕೆಗಳು ಚಿಗುರಿ ಇಡೀ ಕೋಟೆ ಹಸಿರಿನಿಂದ ಸಿಂಗಾರಗೊಳ್ಳುತ್ತದೆ. ಅಘನಾಶಿನಿ ತೀರದಿಂದ ಬೀಸುವ ತಂಗಾಳಿ ಗರಿಕೆಗಳಲ್ಲಿ ಹಾದು ಹೋಗುವಾಗ ಇಡೀ ಕೋಟೆಯೇ ರೋಮಾಂಚನದಿಂದ ಕಂಪಿಸುತ್ತಿರುವಂತೆ ಭಾಸವಾಗುತ್ತದೆ. ಮಳೆಗಾಲದಲ್ಲೂ ಜಡಿಮಳೆಯಲ್ಲಿ ಒಂದು ರೂಪ, ಹನಿ ಮಳೆಯಲ್ಲಿ ಮತ್ತೊಂದು ರೂಪ, ಮಳೆ ನಿಂತರೆ ಮೋಡಗಳಿಂದ ಇಣುಕುವ ಸೂರ್ಯಕಿರಣಗಳ ಸ್ಪರ್ಶದಲ್ಲಿ ಮಗದೊಂದು ಮೋಹಕ ರೂಪ!
ಈ ಕೋಟೆಯನ್ನು ಈಗಾಗಲೇ ನೋಡಿದ್ದರೂ ಮಳೆಗಾಲದಲ್ಲಿ ಕಾಣುವ ಅನುಭವವೇ ಬೇರೆ!







0 Comments