-ಮಂಜುನಾಥ್ ಚಾಂದ್
ಇವರು ಮೂರ್ತಿ 2
ವಾಯಲಿನ್ ಮೋಹ…
ನಂತರ ಇವನ್ನೆಲ್ಲ ಬಿಟ್ಟು ಮ್ಯೂಸಿಷಿಯನ್ ಆಗಬೇಕು ಅಂತ ವಾಯಲಿನ್ ಪ್ರಾಕ್ಟಿಸ್ ಮಾಡೋಣಾ ಅಂತ ಶುರು ಮಾಡಿದೆ. ಆವಾಗ ನಂಗೆ ಕೇಶವಮೂರ್ತಿ ಅಂತ ದೊಡ್ಡ ವಿಧ್ವಾನ್ ಸಿಕ್ಕಿದ್ರು. ಆವಾಗ ಅವರು ಸೆವೆನ್ ಸ್ಟ್ರಿಂಗ್ ವಾಯಲಿನ್ ನುಡಿಸ್ತಾ ಇದ್ರು. ಚೌಡಯ್ಯ ಬಿಟ್ಟರೆ ಇವರೇ ಸೆವೆನ್ ಸ್ಟ್ರಿಂಗ್ ನುಡಿಸ್ತಾ ಇದ್ದಿದ್ದು. ಅವರು ನನಗೆ ಮಾಡೆಲ್ ಅನಿಸಿತು. ಮೊದಲ ದಿನ ಹೋದಾಗ, ಅವರ ವಾಯಲಿನ್ನ್ನೇ ಕೊಟ್ಟರು ನುಡಿಸಿ ಅಂತ. ನುಡಿಸಿದೆ, ಪರವಾಗಿಲ್ಲ ನುಡಿಸಬಹುದು ಅಂದರು.
ಮುಂದೆ ಅವರು ಮೈಸೂರಿಂದ ಹೊರಗಡೆ ಕಛೇರಿ ನಡೆಸಲು ಹೋದ್ರು, ನಾನು ಬರೋವರ್ಗೂ ಭೈರವಿ ವರ್ಣ ಪ್ರಾಕ್ಟೀಸ್ ಮಾಡು ಅಂತ ಹೇಳಿದ್ರು. ಫಿಲ್ಮ್ ಆಗಲಿಲ್ಲ, ವಾಯಲಿನ್ನಲ್ಲಾದರೂ ಸಾಧನೆ ಮಾಡೋಣ, ನಾನಾದರೂ ಚೌಡಯ್ಯ ಅವರಂತೆ ಆಗೋಣ ಅಂದುಕೊಂಡೆ. ಪ್ರತಿದಿನ ಎಂಟರಿಂದ ಹತ್ತು ಗಂಟೆ ಪ್ರಾಕ್ಟೀಸ್ ಮಾಡ್ತಾ ಇದ್ದೆ. ಮನೆಯಲ್ಲಿದ್ದುದು ನಾನು ಮತ್ತು ನನ್ನ ಅಪ್ಪ ಇಬ್ಬರೇ. ನನ್ನ ತಾಯಿ ಬಹಳ ಹಿಂದೆ ತೀರಿಕೊಂಡಿದ್ದರು. ನನ್ನ ಬ್ರದರ್ ಮದ್ರಾಸ್ನಲ್ಲಿ ಕೆಲ್ಸ ಮಾಡ್ತಾ ಇದ್ರು. ಹೀಗೆ ಎರಡು ಮೂರು ತಿಂಗಳು ವಾಯಲಿನ್ ನುಡಿಸ್ತಾ ಇದ್ದೆ.
ಆರವತ್ತು ರೂಪಾಯಿಗೂ ಪರದಾಟ...
ಆ ಹಂತದಲ್ಲಿ ಬೆಂಗಳೂರಿನಲ್ಲಿ ಆಕ್ಯುಪೇಶನ್ ಇನ್ಸ್ಟಿಟ್ಯೂಟ್ (ಜಯಚಾಮರಾಜೇಂದ್ರ ಪಾಲಿಟೆಕ್ನಿಕ್)ಓಪನ್ ಆಯ್ತು. ಬೆಂಗಳೂರಲ್ಲಿರುವ ನನ್ನ ಕಸಿನ್ಗೆ ಅರ್ಜಿ ಕಳಿಸಿದೆ. ಆ ಹೊತ್ತಿಗೆ ನಮ್ಮ ಅಪ್ಪ ರಿಟೈರ್ ಆಗಿದ್ರು. ನಮ್ಮ ಹತ್ರ ಹಣವೇ ಇರಲಿಲ್ಲ. ಶಿಫಾರಸು ಪತ್ರದ ಮೇಲೆ ನನಗೆ ಸೀಟೇನೋ ಸಿಕ್ತು. ಆದ್ರೆ ಅಡ್ಮಿಷನ್ ಆಗೋಕೆ 50-60 ರೂ. ಕೊಡಬೇಕಿತ್ತು. ಎಲ್ಲಿಂದ ತರೋದು? ನನಗೆ ತುಂಬಾ ಬೇಜಾರಾಗಿತ್ತು. ಆಗ ನನಗೆ 16-17 ವರ್ಷ. ಅಲ್ಲಿವರೆಗೆ ನಾನು ಅತ್ತಿದ್ದೇ ಇಲ್ಲ.
ಮನೆಯಲ್ಲಿ ಅಮ್ಮ ಇರಲಿಲ್ಲ, ಆದ್ರೂ ನನಗೆ ಅಳು ಅನ್ನೋದು ಗೊತ್ತೇ ಇರಲಿಲ್ಲ. ಬೆಂಗಳೂರಿನಲ್ಲಿ ನನ್ನ ಫ್ರೆಂಡ್ ಒಬ್ಬ ಅಂಗಡಿನಲ್ಲಿ ಅಕೌಂಟೆಂಟ್ ಆಗಿ ಕೆಲ್ಸ ಮಾಡ್ತಾ ಇದ್ದ. ನನ್ನ ಕಷ್ಟ ಸುಖ ಏನಿದ್ರೂ ಅವನ ಹತ್ರ ಹೇಳಿಕೊಳ್ತಾ ಇದ್ದೆ. ಆವತ್ತೂ ಅವನ ಹತ್ರ ಹೋಗಿದ್ದೆ. ಸೀಟು ಸಿಗಲಿಲ್ಲ ಅಂತ ಹೇಳುತ್ತಾ ದುಃಖ ತಡೆಯಲಾರದೆ ಅತ್ತೇ ಬಿಟ್ಟಿದ್ದೆ.
ಅವ ನನ್ನ ಅಲ್ಲಿಯೇ ಕೂರಿಸಿ “ಯೇ, ಯಾಕ್ ಆಳ್ತಿಯಾ? ನಾನೇನು ನಿನ್ನ ಪಾಲಿಗೆ ಸತ್ತೋಗಿದ್ದೀನಾ? ನಿನಗೆ ಓದ್ಬೇಕು ತಾನೆ, ನಾಳೆ ಬಾ ಆರವತ್ತು ರೂಪಾಯಿ ಕೊಡ್ತೇನೆ. ಫೀಸ್ ಕಟ್ಟು, ಹೋಗಿ ಸೇರ್ಕೊ. ನೀನು ಈ ಸ್ಟಡಿ ಪೂರ್ತಿ ಮಾಡೋದು ನನ್ನ ಜವಾಬ್ದಾರಿ” ಅಂದ. ಈ ಫ್ರೆಂಡ್ನಿಂದ ನನಗೆ ಸ್ಟಡಿ ಮುಂದುವರಿಸಲು ಸಾಧ್ಯವಾಯ್ತು. ಹೀಗೆ ನನ್ನ ಸ್ಟಡಿ ಆರಂಭವಾಯ್ತು.
ರಾಮಕೃಷ್ಣ ಸ್ಟುಡೆಂಟ್ ಹೋಮ್ನಲ್ಲಿ (ಈಗಲೂ ಇದು ವಿ.ವಿ.ಪುರಂನಲ್ಲಿದೆ) ನನ್ನ ಸ್ನೇಹಿತನೊಬ್ಬ ಇದ್ದ. ಆಗಿನ ಕಾಲದಲ್ಲಿ ಫ್ರೀ ಅಕಾಮಡೇಶನ್ ಸಿಗ್ತಾ ಇತ್ತು ಅಲ್ಲಿ. ನಾನು ಪ್ರಯತ್ನ ಮಾಡಿದರೂ ಲೇಟ್ ಆದ ಕಾರಣ ಸೀಟ್ ಸಿಗಲಿಲ್ಲ. ಆದರೆ, ಅದರ ಸೆಕ್ರೆಟರಿ ನನ್ನನ್ನು ಕರೆದು “ಲುಕ್ ಯಂಗ್ ಬಾಯ್, ಯು ಆರ್ ಲೇಟ್. ಬಟ್ ಯು ಕ್ಯಾನ್ ಹ್ಯಾವ್ ದಿ ಫುಡ್ ಹಿಯರ್ ಫಾರ್ ಫ್ರೀ, ಬೋತ್ ದಿ ಟೈಮ್” ಅಂತಂದ್ರು.
ನಂಗೆ ಎಷ್ಟು ಖುಷಿ ಆಯ್ತು ಅಂದ್ರೆ ಅದನ್ನ ಎಕ್ಸಪ್ರೆಸ್ ಮಾಡಲಿಕ್ಕೇ ಸಾಧ್ಯವಿಲ್ಲ ಬಿಡಿ. ಮುಂದೆ ನನ್ನ ಇನ್ನೊಬ್ಬ ಫ್ರೆಂಡ್ ಬೆಂಗಳೂರಲ್ಲಿ ಬಿಎಸ್ಸಿ ಮಾಡ್ತಾ ಇದ್ದ. ಆತ ಒಬ್ಬನೇ ರೂಮ್ ಮಾಡ್ಕೊಂಡಿದ್ದ, ನೀನು ಬಾ ನಂಜೊತೆ ಇರು ಅಂದ. ಆಗ ಆತ ಕೊಡುತ್ತಿದ್ದ ಬಾಡಿಗೆ ನಾಲ್ಕೂವರೆ ರೂಪಾಯಿ. ಇದರಿಂದಾಗಿ ನನ್ನ ಲಾಡ್ಜಿಂಗ್ ಮತ್ತು ಊಟದ ಸಮಸ್ಯೆ ಪರಿಹಾರವಾಯಿತು.






ಚಾಂದ್, ಚೆನ್ನಾಗಿದೆ… ಈ ಥರದ್ದು ಇನ್ನಷ್ಟು ಬರಲಿ, ನಿಮ್ಮಿಂದ…
ಧನ್ಯವಾದಗಳು ಸರ್ ನಿಮ್ಮ ಮೆಚ್ಚುಗೆಗೆ!!