ಇವರು ಮೂರ್ತಿ -1
ವಿ.ಕೆ.ಮೂರ್ತಿ ಅಂದ ಕೂಡಲೇ ಕಾಗಜ್ ಕೆ ಫೂಲ್, ಪ್ಯಾಸಾ, ಪಾಕೀಜಾ… ಇವರ ಕಟ್ಟಾ ದೋಸ್ತ್ ಗುರುದತ್… ಎಲ್ಲವೂ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಇಡೀ ಇಂಡಿಯಾಕ್ಕೆ ಮೊಟ್ಟಮೊದಲ ಸಿನೆಮಾಸ್ಕೋಪ್ ಸಿನೆಮಾ (ಕಾಗಜ್ ಕೆ ಫೂಲ್) ಕೊಟ್ಟವರು, ಕಪ್ಪು-ಬಿಳುಪು ಫೋಟೋಗ್ರಫಿಗೆ ಹೊಸ ಭಾಷ್ಯ ಬರೆದವರು, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಭಾಜನರಾದವರು… ವೆಂಕಟರಾಮ ಕೃಷ್ಣಮೂರ್ತಿ ಅವರೊಂದಿಗೆ ಕೆಲ ಕಾಲ ಕಳೆದರೆ ಹೇಗೆ?
ತುಂಬ ಭಯದಿಂದಲೇ ನಮ್ ಟೀಮ್ ಅವರ ಮನೆಗೆ ಭೇಟಿ ಕೊಟ್ಟಿತು. ನಮಗೆ ನಿಜಕ್ಕೂ ಅಚ್ಚರಿ. ಯಾವ ಗತ್ತು-ಗೈರತ್ತೂ ಇಲ್ಲದೇ ಚಿಕ್ಕ ಮಗುವಿನಂತೆ ನಮ್ಮ ಅವರು ಮಾತನಾಡಿದ್ದು ಬರೋಬ್ಬರಿ ಒಂದೂವರೆ ತಾಸು…! ವಾಯಲಿನ್ ಕಲಿತದ್ದು, ನಟನಾಗಬೇಕು ಅಂದುಕೊಂಡಿದ್ದು, ಫೋಟೋಗ್ರಫಿ ಶುರು ಮಾಡಿದ್ದು, ಮುಂಬೈ ಸಿನೆಮಾ ಜಗತ್ತಿನ ಬಾಗಿಲು ತಟ್ಟಿದ್ದು, ಗುರುದತ್ ಜೊತೆ ಸೇರ್ಕೊಂಡು ಮಾಸ್ಟರ್ ಪೀಸ್ ಗಳನ್ನು ಕೊಟ್ಟಿದ್ದು… ಎಲ್ಲವನ್ನೂ ಅವರು ಮಾತನಾಡಿದರು.
ಇಷ್ಷಾದರೂ ಅವರ ಜೊತೆ ಇನ್ನೂ ಮಾತನಾಡಬೇಕು ಎಂಬ ಆಸೆ ನಮಗೆ. ಕೊನೆಗೆ ಅವರೇ ನಮ್ಮನ್ನೆಲ್ಲ ನಿಲ್ಲಿಸಿ ಫೋಟೋ ತೆಗಿದಿದ್ದು… ಹೀಗೆ ಕಳೆದ ಕೆಲ ಆಪ್ತ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನಿಸಿತು. ಈ ಅಂತರಂಗದ ಮಾತುಕತೆಯ ಮೊದಲ ಭಾಗ ಇದು..
-ಮಂಜುನಾಥ್ ಚಾಂದ್
ಆಕ್ಟರ್ ಆಗಲು ಹೊರಟು…
ನನಗೆ ನಾಟಕವೆಂದರೆ ಬಹಳ ಇಷ್ಟ. ಆಗಿನ ಕಾಲಕ್ಕೆ ನಾನು ವೃತ್ತಿಪರ ನಾಟಕ ಕಂಪೆನಿಗೆ ಹೊರಟು ಹೋಗಿದ್ದೆ. ಆಗಿನ್ನೂ ಹದಿನಾಲ್ಕು ಹದಿನೈದು ವರ್ಷ ನನಗೆ. ಆಕ್ಟರ್ ಆಗಬೇಕು ಅಂತ ಆಸೆ ಇತ್ತು ನನಗೆ. ಮನೆಯಲ್ಲಿ ಎಜುಕೇಶನ್ ಬಿಟ್ಟು ಅಲ್ಲಿಗೇಕೆ ಹೋಗ್ತಿ ಅಂತ ಬೈತಾ ಇದ್ರು. ಕೊನೆಗೆ ಇದು ಸರಿಯಲ್ಲ ಅಂತ ನನಗೇ ಅನಿಸಿತು. ಕೊಂಚ ಬ್ರೈನ್ ಡೆವಲಪ್ ಆದ ಮೇಲೆ ಎಲ್ಲದಕ್ಕೂ ಬೇಸಿಕ್ ಎಜುಕೇಶನ್ ಇರಬೇಕು ಅನಿಸಿತು.
ಆದರೂ ನನಗೆ ಆಕ್ಟರ್ ಆಗಬೇಕು ಅಂತಲೇ ಇತ್ತು. ಯಾಕೆಂದರೆ ಫಿಲ್ಮ್ ನನ್ನ ಬ್ಲಡ್ನಲ್ಲೇ ಹೊರಟು ಹೋಗಿತ್ತು. ಏನಾದ್ರೂ ಮಾಡಿ ಫಿಲ್ಮನಲ್ಲಿ ಕೆಲ್ಸ ಮಾಡಬೇಕು, ಏನಾದರೂ ಕಲ್ತುಕೋಬೇಕು ಎಂಬ ತುಡಿತ ಇತ್ತು. ನಾನು ಹೈಸ್ಕೂಲ್ ಎಜುಕೇಶನ್ ಮುಗಿಸೋದಕ್ಕೆ ಮೊದಲು, ಪೇಪರನಲ್ಲಿ ಯಾವುದೋ ಒಂದು ಜಾಹೀರಾತು ನೋಡಿದೆ. ಒಂದು ರೂಪಾಯಿ ಕಳಿಸಿದ್ರೆ, ಆಕ್ಟರ್ ಆಗಿಲ್ಲಿಕ್ಕೆ ಬೇಕಾದ ಡೀಟೇಲ್ ಎಲ್ಲ ಕಳಿಸ್ತೇವೆ ಅಂತ ಏನೇನೋ ಇತ್ತು. ಇದು ಸುಮಾರು 55 ವರ್ಷಗಳ ಹಿಂದೆ. ನಾನು ಒಂದು ರೂಪಾಯಿ ಸ್ಟಾಂಪು ಅಂಟಿಸಿ ಕಳಿಸಿದೆ. ಅದಕ್ಕೆ ಅವರು ಆಕ್ಟರ್ ಆಗಬೇಕಾದ ವಿವರ ಎಲ್ಲ ಕಳಿಸಿದ್ದರು. ಆಕ್ಟರ್ ಆಗೋಕೆ ಟ್ರೈನಿಂಗ್ ಕೊಡ್ತೀವಿ, 250 ರೂ. ಕಳಿಸಿ ಅಂತ ಇತ್ತು. ಇನ್ನೂರ ಐವತ್ತು ರೂಪಾಯಿ! ಆಗಿನ ಕಾಲದಲ್ಲಿ ಅದನ್ನು ಇಮ್ಯಾಜಿನ್ ಮಾಡಿಕೊಳ್ಳುವುದೇ ಕಷ್ಟ. ನನ್ನ ತಂದೆ ಮೈಸೂರಲ್ಲಿ ಸರಕಾರಿ ಆಯುರ್ವೇದಿಕ್ ಆಸ್ಪತ್ರೆ ಚೀಫ್ ಡಾಕ್ಟರ್ ಆಗಿದ್ದರು. ಆಗ ಅವರಿಗೆ ಬರುತ್ತಿದ್ದ ಸಂಬಳ ಆರವತ್ತು ರೂ.! ನನಗೆ ಅವರು ಇನ್ನೂರೈವತ್ತು ರೂ. ಕೊಟ್ಟು ಬಾಂಬೆಗೆ ಆಕ್ಟರ್ ಆಗಿಲ್ಲಕ್ಕೆ ಕಳಿಸ್ತಾರಾ? ಅದೆಲ್ಲ ಆಗೋ ಕೆಲ್ಸ ಅಂತ ನಾನೂ ಅದನ್ನ ಮರೆತು ಬಿಟ್ಟೆ. ಎಸ್ಎಸ್ಎಲ್ಸಿಯಲ್ಲಿ ಇರೋವಾಗಲೂ ಇನ್ನೊಂದು ಪ್ರಯತ್ನ ಮಾಡಿದ್ದೆ. ಆಗಲೂ ಆಗಲಿಲ್ಲ.]]>
ಮಂಜುನಾಥ್ ಚಾಂದ್ ಬರೆವ 'ಇವರು ಮೂರ್ತಿ'
ನಿಮಗೆ ಇವೂ ಇಷ್ಟವಾಗಬಹುದು…




Arambhika vivarane chennagide, munduvareyali murthy katha paaraayana.