ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಳಿಗ್ಗೆ ಆತ ನನ್ನೆದುರು ಕಾಫಿ ಹಿಡಿದು ನಿಂತಿದ್ದ…

ಓಲೆ ಪ್ರೀತಿ

ಚಿತ್ರಾ ಸಂತೋಷ್

ವಿಜಯ ಕರ್ನಾಟಕದಲ್ಲಿ ಪ್ರಕಟಿತ

ಕೆ.ಆರ್. ಮಾರ್ಕೆಟ್ ನಿಂದ ಬಸ್ ಹತ್ತಿದೆ. ಹುಡುಗಿಯೊಬ್ಬಳು ಪಕ್ಕದಲ್ಲೇ ಬಂದು ಕುಳಿತಳು. ಒಂದೇ ಸಮನೆ ನನ್ನ ಕಿವಿಗಳನ್ನು ನೋಡುತ್ತಾ ಕುಳಿತಿದ್ದಳು.

ಅವಳು ಇಳಿಯುವ ಮೊದಲು “ಮೇಡಂ ನಿಮ್ಮ ಕಿವಿಯೋಲೆ ತುಂಬಾ ಚೆಂದ ಇದೆ” ಅಂದಳು. “ಥ್ಯಾಂಕ್ಸ್” ಅಂದೆ.

“ಏನು ಓದುತ್ತಿದ್ದೀಯಾ?” ಕೇಳಿದೆ.

“ಪ್ರಥಮ ಪಿಯುಸಿ”

“ಯಾವ ಸ್ಕೂಲ್”

“ಇಲ್ಲೆ ಹತ್ತಿರದ ಕಾಲೇಜು”

“ನಿನ್ನ ಹೆಸರು?”

“ಆಯೆಷಾ” ಎಂದು ನಕ್ಕಳು.

ಮತ್ತೆ ಅವಳಿಂದಲೇ ಪ್ರಶ್ನೆ “ನೀವು ಎಲ್ಲಿ ತಕ್ಕೊಂಡೀರಿ ಓಲೆನಾ?”

”ಮಲ್ಲೇಶ್ವರಂ ಫುಟ್ ಪಾತ್”

“ಎಷ್ಟು ರೂಪಾಯಿ?”

“ನಲವತ್ತು”

“”ವಾಹ್, ಕಡಿಮೆ ರೇಟು. ಬಹಳ ಚೆನ್ನಾಗಿದೆ. ತುಂಬಾ ಚೆಂದ ಕಾಣಿಸುತ್ತೆ” ಎಂದು ನಗುತ್ತಾ ಇಳಿದುಹೋದಳು. ನನಗೂ ಅವಳ ಕಿವಿಯೋಲೆ ಹೇಗಿದೆ ಎನ್ನುವ ತವಕ…ಆದರೆ, ಅದು ಕಾಣಿಸಲೇ ಇಲ್ಲ. ಏಕೆಂದರೆ,ಅವಳು ಬುರ್ಖಾ ಧರಿಸಿದ್ದಳು!.

***************

ಅವನ ಬೈಟು ಕಾಫಿ

ರಾತ್ರಿ ಎಂಟರ ಹೊತ್ತು. ಅಂದು ನಮಗಿಬ್ಬರಿಗೆ ಜಗಳವಾಗಿತ್ತು. ಇಬ್ಬರೂ ಬಿಡಲಿಲ್ಲ. ಮಾತಿಗೆ-ಮಾತು. ಒಂದು ರೀತಿಯಲ್ಲಿ ಕುರುಕ್ಷೇತ್ರ. ಕೆನ್ನೆ ಮೇಲೆ ಬಿತ್ತು ಅವನ ಕೈ. “ನಮ್ಮಮ್ಮನೂ ನಂಗೆ ಹೊಡೆದಿಲ್ಲ. ನೀನ್ಯಾಕೆ ಕೆನ್ನೆಗೆ ಹೊಡೆದೆ?’ ಎಂದು ಅಳುತ್ತಾ ಕೇಳಿದೆ, “ಕೆನ್ನೆಗಲ್ಲದೆ ಇನ್ನೆಲ್ಲಿ ಹೊಡೀಬೇಕು?’ ಎಂದ ಆತ. ನನ್ನ ಸಿಟ್ಟು ಇನ್ನಷ್ಟು ಹೆಚ್ಚಿತು. “ನೋಡು ನಿಂಗೆ ಡಿವೋರ್ಸ್ ಕೊಟ್ಟುಬಿಡ್ತೀನಿ…ಬೇಡ ನೀನು ನಂಗೆ” ಎಂದೆ.

ಒಂದರ್ಧ ಗಂಟೆಯಲ್ಲಿ ಹತ್ತು-ಹದಿನೈದು ಸಲ ಡಿವೋರ್ಸ್ ರಿಪೀಟ್ ಆಯ್ತು. ಅದಕ್ಕೆ ಆತ ಹೇಳಿದ. “ಅರೆರೆ, ಈಗ ರಾತ್ರಿ. ಲಾಯರ್ ಗಳು ಇರಲ್ಲಮ್ಮ. ನಾಳೆ ಬೆಳಿಗ್ಗೆ ಡಿವೋರ್ಸ್ ಕೊಡುವಿಯಂತೆ. ಈಗ ನಿದ್ದೆ ಮಾಡು” ಎಂದ. ಅವನ ಮಾತು ಕೇಳಿ ನಗು ಬಂದರೂ ತೋರಿಸಿಕೊಳ್ಳದೆ, ಹೊದಿಕೆ ಹೊದ್ದು ನಿದ್ದೆಗೆ ಜಾರಿದೆ.

ಬೆಳಿಗ್ಗೆ ನಾನು ಎದ್ದಾಗ ಆತ ನನ್ನೆದುರು ಕಾಫಿ ಹಿಡಿದು ನಿಂತಿದ್ದ. “ಡಿವೋರ್ಸ್ ಕೊಡ್ತಿಯಲ್ಲ…ಈವರೆಗೆ ನಿಂಗೆ ಕಾಫಿನೂ ಮಾಡಿಕೊಟ್ಟಿಲ್ಲ. ಅದ್ಕೆ ಇವತ್ತು ಕಾಫಿ ಮಾಡಿದ್ದೀನಿ…ಪ್ಲೀಸ್ ಬೈ ಟು ಕಾಫಿ” ಎಂದಾಗ ನಗುತ್ತಲೇ ಅಡುಗೆಮನೆಗೆ ಓಡಿದೆ!

***************

ಗಾಳಿಮರದ ವಿಳಾಸ ನಾಪತ್ತೆ

ಆ ಗಾಳಿಮರ ನನಗೆ ಭಾಳ ಇಷ್ಟ. ಏಕಾಂತ ಕಲಿಸಿದ್ದು ಅದೇ ಗಾಳಿಮರ, ಬರೆಯಲು ಕಲಿಸಿದ್ದು ಅದೇ ಗಾಳಿಮರ, ಖುಷಿ-ದುಃಖಗಳಿಗೆ ಸಾಥ್ ನೀಡಿದ್ದು ಅದೇ ಗಾಳಿಮರ. ಬರೋಬ್ಬರಿ ಐದು ವರ್ಷಗಳ ಕಾಲ ಗಾಳಿಮರದೊಂದಿಗೆ ನಂಟು. ಮುಂಜಾವಿನ ಹೊತ್ತು ಬೇಗ ಎದ್ದು ಓದಲು ಕುಳಿತುಕೊಳ್ಳುವುದು ಅದೇ ಗಾಳಿಮರದಡಿ, ಸಂಜೆ ಕಾಲೇಜಿನಿಂದ ಬಂದ ತಕ್ಷಣ ಮತ್ತೆ ಪೆನ್ನು, ಪುಸ್ತಕಗಳ ಜೊತೆ ಕೂರುವುದು ಅದೇ ಗಾಳಿಮರದಡಿ.

ಅದೆಷ್ಟೋ ಕವನಗಳು, ಕತೆಗಳು, ಪ್ರೇಮಪತ್ರಗಳು ,..ಎಲ್ಲವನ್ನೂ ಗೀಚಿದ್ದು ಅದೇ ಗಾಳಿಮರದಡಿ. ಮನೆಗೆ, ಸ್ನೇಹಿತರಿಗೆ ಎಲ್ಲರಿಗೂ ಪತ್ರ ಬರೆದಿದ್ದು ಅದೇ ಗಾಳಿಮರದಡಿ. ಅದಿರಲಿ, ಐದು ವರ್ಷಗಳ ಕಾಲ ವರ್ಷಕ್ಕೆರಡು ಬಾರಿ ನಡೆದ ಮಹಾ ಪರೀಕ್ಷೆಗಳಿಗೆ ಓದಿ ಓದಿ ಕಲಿತಿದ್ದು ಅದೇ ಗಾಳಿಮರದಡಿಯಲ್ಲಿ. ಮೊದಲ ಬಾರಿ ಆ ಮರದಡಿಯಲ್ಲಿ ಕುಳಿತು ನಿಟ್ಟುಸಿರುಬಿಟ್ಟಾಗ ಅದಿನ್ನೂ ಸಣ್ಣ ಗಿಡವಾಗಿದ್ದು, ಐದು ವರ್ಷಗಳ ಬಳಿಕ ಅದು ಬಲಿತು ಮರವಾಗಿತ್ತು, ವಿಶಾಲವಾಗಿ ಹರಡಿತ್ತು.

ನನ್ನೊಬ್ಬಳಿಗೆ ಮಾತ್ರ ಹಲವಾರು ಮಂದಿಗೆ ನೆರಳು ನೀಡುತ್ತಿತ್ತು. ಮೊನ್ನೆ ಮೊನ್ನೆ ಮತ್ತೆ ಗಾಳಿಮರ ನೋಡಲು ಹೋಗಿದ್ದೆ…ಬರೋಬ್ಬರಿ ಏಳು ವರ್ಷಗಳ ಬಳಿಕ. ಆ ನನ್ನ ಪ್ರೀತಿಯ ಗಾಳಿಮರದ ವಿಳಾಸವೇ ಇರಲಿಲ್ಲ. ಅಲ್ಲೊಂದು ಅಂಗಡಿ ಇತ್ತು. ಅಲ್ಲಿ ಬಂದು ಬೀಡಿ-ಸಿಗರೇಟು ಸೇದುವ, ತರಕಾರಿ, ಅಕ್ಕಿ, ಸಾಮಾನು ಕೊಳ್ಳುವ ಮಂದಿ…ಯಾರಿಗೂ ಗೊತ್ತಿಲ್ಲ ಆ ಗಾಳಿಮರದ ವಿಳಾಸ!

 

‍ಲೇಖಕರು avadhi

30 March, 2013

6 Comments

  1. Santhoshkumar LM

    ಚಿಕ್ಕದಾಗಿ ಚೊಕ್ಕವಾಗಿವೆ. ಇಷ್ಟವಾಯಿತು!!

  2. sathish babu

    ಸರಳವಾದ `ಚಿತ್ರ`ಗಳನ್ನು ಪೋಣಿಸಿದ್ದೀರಿ..
    ಭಾಳಾ `ಸಂತೋಷ’ ಕೊಟ್ವು ಸಾಲುಗಳು…

  3. chitra santhosh

    Santhoshkumar mathu sathish babu avrige thumba thanksu:)
    -CHITRA SANTHOSH

  4. Indrakumar HB

    ಬರೆವಣಿಗೆಯಲ್ಲಿ ತಾಜಾತನ ಇದೆ. ಸೂಕ್ಷ್ಮವಾದ ಸಂವೇದನೆಗಳಿವೆ. ಶುಭಾಷಯಗಳು.
    – ಇಂದ್ರಕುಮಾರ್ ಎಚ್.ಬಿ.

  5. Vinay Bharadwaj

    ನಂಗೂ ಸಹ ಆ ನಿಮ್ಮ ಓಲೆ ಹಾಗು ಬರಹ ಎರಡೂ ಇಷ್ಟ ಆಯ್ತು…

  6. Anonymous

    tumba chennagede

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading