-ಅಲೆಮಾರಿ
ಸಾಹಿರ್ ಲುಧಿಯಾನ್ವಿ ಹೆಸರೆತ್ತಿದ್ದರೆ ಸಾಕು, ಒಬ್ಬ ಪಲ್ದೋ ಪಲ್ ಕಾ ಶಾಯರ್ ನೆನಪಾಗುತ್ತಾನೆ. ವಿರಹ, ವೇದನೆಯ ಭಾವಸಾಗರವನ್ನೇ ಉಕ್ಕಿಸುತ್ತಾನೆ. ಮತ್ತೊಮ್ಮೆ ಕಿಡಿ ಕಿಡಿಯಾಗಿ ಸಿಡಿಯುತ್ತಾನೆ; ಸ್ಫೋಟಿಸುತ್ತಾನೆ. ಸಾಹಿರ್ ಇದ್ದದ್ದೇ ಹಾಗೆ. ಆತನ ಕಾವ್ಯದ ಪ್ರತಿ ಸಾಲಿನಲ್ಲಿ ಒಲವಿದ್ದರೆ, ಅದರ ಜೊತೆಗಿದ್ದ ನೋವಿನಿಂದಾಗಿಯೇನೋ ಎಂಬಂತೆ ಒಬ್ಬ ಹೋರಾಟಗಾರ ಸಿಡಿಯುತ್ತಿದ್ದ.
ಸಮಕಾಲೀನರ ಕಾವ್ಯದೇವರು, ಸೌಂದರ್ಯ, ಮದ್ಯದ ಮತ್ತಿನಲ್ಲಿದ್ದರೆ, ಸಾಹಿರ್ ತನ್ನ ಕಾವ್ಯದ ತೆಕ್ಕೆಗೆ ಏನೆನ್ನೆಲ್ಲಾ ಎಳೆದು ತಂದಿದ್ದ. ಬೇಜವಾಬ್ದಾರಿ ರಾಜಕಾರಣವನ್ನು ಬೂಟಾಟಿಕೆಯ ಹೆಮ್ಮೆಯನ್ನು(ಜಿನ್ಹೆ ನಾಝ್ ಹೈ ಹಿಂದ್ ಪರ್ ವೋ ಕಹಾ ಹೈ ) ಹೀಯಾಳಿಸಿದ್ದ. ಅರಾಜಕತೆ, ಅಸಮಾನತೆ, ಸಂವೇದನೆಯನ್ನೇ ಕಳೆದುಕೊಂಡ ಸಮಾಜದ ಬಗ್ಗೆ ಸೂಕ್ಷ್ಮ ಸಂವೇದನೆಯಿಂದ ಸ್ಪಂದಿಸಿದ್ದ.ನಫ್ರತೋ ಕಿ ಜಹಾನ್ ಮೆ ಪ್ಯಾರ್ ಕಿ ಬಸ್ತಿಯಾ ಬಸಾನಿ ಹೈ ಅಂತಾನೆ..
ಸಾಹಿರನ ಬೇಗುದಿಗಳೆಲ್ಲಾ ಹೋರಾಟವಾಗಿತ್ತು. ಅವನ ಹೋರಾಟಕ್ಕೆ ಪ್ರೀತಿಯೇ ಶಕ್ತಿಯಾಗಿತ್ತು. ಹಾಗಂತ ಸಾಹಿರನೇ ಸಾರಿದ, ‘ನನ್ನ ಕ್ರಾಂತಿಯ ಮಾತುಗಳು ಜಗತ್ತನ್ನು ಚಿಂತನೆಗೆ ಹಚ್ಚಿಸುವುದಕ್ಕೆ, ಆದರೆ ಎದೆಯ ತುಂಬ ಪ್ರೇಮ ಕಾವ್ಯವೇ ತುಂಬಿದೆ’. ಅವನ ಕಾವ್ಯ ಒಬ್ಬ ಕ್ರಾಂತಿಕಾರಿಯ ನೇರ ಮಾತಿನಂತೆ. ಆಡಂಬರ ಇಲ್ಲದ್ದು, ಪ್ರೀತಿ ತುಂಬಿದ್ದು.
ಪ್ರೀತಿಯಷ್ಟೇ ಅಲ್ಲ…
- ಜಿಂದಗಿ ಸಿರ್ಫ್ ಮೊಹಬ್ಬತ್ ನಹೀ ಕುಚ್ ಔರ್ ಭಿ ಹೈ
ಜುಲ್ಫ್ -ಓ- ರುಕ್ಷಾರ್ ಕಿ ಜನ್ನತ್ ನಹೀ ಕುಚ್ ಔರ್ ಭಿ ಹೈ
ಭೂಖ್ ಔರ್ ಪ್ಯಾಸ್ ಕಿ ಮಾರಿ ಹುಯಿ ಇಸ್ ದುನಿಯಾ ಮೆ
ಇಷ್ಕ್ ಹಿ ಏಕ್ ಹಕೀಕತ್ ನಹೀ ಕುಚ್ ಔರ್ ಭಿ ಹೈ - ನಿಮ್ಮಿಂದ ಬಲ ಪಡೆದು ನಿಮಗೆ ದಾರಿ ತೋರುವೆ
ಬಾವುಟ ಹಾರಿಸಿ ಗೆಳೆಯರೆ, ಬೆಟ್ಟದ ಮೇಲೆ ನಿಮಗಾಗಿ ಹಾಡುವೆ
ನನ್ನ ಬದುಕಿಗೊಂದೇ ಗುರಿ ಇನ್ನು, ಬಂಧನದ ಬೇಡಿ ಕರಗಿಸುವುದು,
ಇಬ್ಬನಿಯ ಹನಿಯಲ್ಲ, ನನ್ನ ಕಾವ್ಯ ಕೆಂಡದ ಮಳೆ ಸುರಿಸುವುದು
ಪ್ರೀತಿ ಇಲ್ಲದೇ ಇಲ್ಲ…
ಸಾಹಿರ್ ಕನವರಿಸುತ್ತಾನೆ. ಕನಿಕರಿಸುತ್ತಾನೆ. ಪ್ರತಿಭಟಿಸುವ, ಪ್ರತಿರೋಧಿಸುವ ದನಿಯಲ್ಲಿ ಪ್ರೀತಿ ಒಳಸುಳಿಯನ್ನು ತೇಲಿ ಬಿಡುತ್ತಾನೆ.
- ಪ್ರೀತಿಯನ್ನೇನು ಹಿಡಿದಿಡಲಾರೆ ಆದರೂ ಹೇಳು,
ನಿನ್ನ ನಾ ಪ್ರೀತಿಸಲೇ… ಬೇಡವೇ.. ಎಂದು ಕೇಳುತ್ತಾನೆ. - ನನ್ನ ಕನಸ ಕಂಗಳನು ಸಿಂಗರಿಸುವವಳೇ
ನಿನ್ನ ಕನಸ ಕಂಗಳಲಿ ನಾನು ಸಾಗುವೆನೇನೆ?
ನಿನ್ನ ಕಂಗಳ ಕೇಳಿ ಹೇಳುವೆಯೇನು
ನಾ ಕಳೆವ ರಾತ್ರಿಗಳು ಬೆಳಗು ಕಾಣುವವೇನು?
ನಾಲ್ಕು ದಿನದ ಈ ಸಖ್ಯ ಸಖ್ಯವೂ ಅಲ್ಲ
ಜೀವನವಿಡೀ ಅನುಭವಿಸುವ ಸಂಕಟವಾಯ್ತಲ್ಲ
ಬದುಕು ಹೇಗೋ ದುಸ್ತರವಾಗಿತ್ತು,
ಈಗ ಉಸಿರಾಡುವುದು ಬೇಸರವಾಗಿದೆಯಲ್ಲ. ಎಂದು ಪರಿತಪಿಸುತ್ತಾನೆ






0 Comments