ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿಗ್ ಬಾಸ್ ಪ್ರಿವ್ಯೂ ಮುಗಿಸಿಕೊಂಡು..

ಸುಘೋಷ್ ಎಸ್ ನಿಗಳೆ

black dogಬಿಗ್ ಬಾಸ್ ಪ್ರಿವ್ಯೂ ಮುಗಿಸಿಕೊಂಡು ನಾನು ಹಾಗೂ ಡ್ರೈವರ್ ಪ್ರೇಮ್ ಹಿಂದಿರುಗುತ್ತಿದ್ದೆವು. ಕೋಡಿಪಾಳ್ಯ ಕ್ರಾಸ್ ಬಳಿ ಕಪ್ಪು ನಾಯಿಯೊಂದು ಗಾಯಗೊಂಡು ಬಿದ್ದುಕೊಂಡಿತ್ತು. ಯಾವುದೋ ವಾಹನ ಅದಕ್ಕೆ ಡಿಕ್ಕಿ ಹೊಡೆದು ಹೋಗಿತ್ತು.

ಸರಿ, ಕಾರ್ ನಿಲ್ಲಿಸಿ ಅದರ ಪರಿಸ್ಥಿತಿ ನೋಡಿದೆ. ನಾಯಿಯ ದೇಹದ ಹಿಂಭಾಗ, ಕಾಲುಗಳು ಸಂಪೂರ್ಣವಾಗಿ ಘಾಸಿಗೊಂಡಿದ್ದವು. ಒಂದು ಕಣ್ಣಿಗೂ ಗಾಯವಾಗಿತ್ತು. ನಾಯಿ ಎದ್ದು ಓಡಾಡುವ ಸ್ಥಿತಿಯಲ್ಲಿರಲಿಲ್ಲ. ಆ ಕಡೆ ಈ ಕಡೆ ನೋಡಿ ನೋವಿನಿಂದ  ನರಳಿ ಮತ್ತೆ ಸುಮ್ಮನೆ ಮಲಗಿಬಿಡುತ್ತಿತ್ತು. ನನಗೆ ಹತ್ತಿರ ಎಲ್ಲಿ ಪ್ರಾಣಿದಯಾ ಸಂಘದ ಸೆಂಟರ್ ಗಳಿವೆ ಗೊತ್ತಿರಲಿಲ್ಲ.

ತಕ್ಷಣ ವಲ್ಲೀಶ್ ಗೆ ಫೋನ್ ಮಾಡಿದೆ. ಅವರು ಪೂರ್ಣಿಮಾ ಎಂಬುವವರ ನಂಬರ್ ನೀಡಿದರು. ಪೂರ್ಣಿಮಾರಿಗೆ ಕಾಲ್ ಮಾಡಿದರೆ, ಕೆಂಗೇರಿ ಉಪನಗರದಲ್ಲಿರುವ ಕೃಪಾ ಕೇಂದ್ರದ ಮಾಹಿತಿ ನೀಡಿದರು. ಸರಿ, ನಾನು ಮನೆಗೆ ಬಂದು ನನ್ನ ಕಾರ್ ತೆಗೆದುಕೊಂಡು ಖಾಲಿ ಸಿಮೆಂಟ್ ಚೀಲ, ನೀರು ತೆಗೆದುಕೊಂಡು ಮತ್ತೆ ನಾಯಿ ಇದ್ದ ಸ್ಥಳಕ್ಕೆ ಬಂದೆ. ಜನರೆಲ್ಲ ನೋಡುತ್ತಿದ್ದರೂ, ಯಾರಿಗೂ ನಾಯಿ ಬಗ್ಗೆ ಕರುಣೆ ತೋರಿಸಬೇಕು ಎನ್ನಿಸಲಿಲ್ಲ.

ನೀರು ಕುಡಿಸುವ ಪ್ರಯತ್ನ ಮಾಡಿದೆ. ಸ್ವಲ್ಪ ನೀರು ಕುಡಿಯಿತು. ನಾನು ಮತ್ತು ಪ್ರೇಮ್ ಅದನ್ನು ಸಿಮೆಂಟ್ ಚೀಲದ ಮೇಲೆ ಮಲಗಿಸಿ, ನನ್ನ ಕಾರಿನ ಡಿಕ್ಕಿಯಲ್ಲಿಟ್ಟೆವು. ಕೋಡಿಪಾಳ್ಯದಿಂದ ಸೀದಾ ಕೃಪಾ ಸಂಸ್ಥೆಗೆ ಬಂದೆ. ಅಲ್ಲಿ ಟೇಕನಾಥ್ ಎಂಬುವವರು ನಾಯಿಯನ್ನು ತೆಗೆದುಕೊಂಡು ಹೋದರು.

ಈ ಎಲ್ಲ ಪ್ರಕ್ರಿಯೆಯಲ್ಲಿ ನನ್ನ ಮಗ ಉದಾತ್ತ ಕೂಡ ಜೊತೆಗಿದ್ದ. ನಾಯಿಗೆ ಏನಾಯಿತು, ಆಕ್ಸಿಡೆಂಟ್ ಹೇಗೆ ಆಯಿತು, ಯಾವ ವಾಹನ ಬಂದು ಹೊಡೆದಿದ್ದು ಎಂದೆಲ್ಲ ಪ್ರಶ್ನೆ ಕೇಳುತ್ತ ನನಗೆ ಸಹಾಯ ಮಾಡುತ್ತಿದ್ದ.

ಕೊನೆಗೆ ವಾಪಸ್ ಬರುವಾಗ ಕೇಳಿದ, “ಅಪ್ಪಾ,ಯಾವುದೋ ಗಾಡಿ ಬಂದು ಅದಕ್ಕೆ ಆಕ್ಸಿಡೆಂಟ್ ಮಾಡಿ ಹೋಗಿದ್ದರೆ, ಪೋಲಿಸ್ ಕೇಸ್ ಯಾಕೆ ಆಗಿಲ್ಲ?” ಅಂತ. ಈ ಪ್ರಶ್ನೆಗೆ ನನ್ನ ಬಳಿ ಉತ್ತರವಿರಲಿಲ್ಲ….

ಅಂದ ಹಾಗೆ ಇಂದು ಬೆಳಿಗ್ಗೆ ಟೇಕನಾಥ್ ಫೋನ್ ಮಾಡಿದ್ದರು. ಆ ಕಪ್ಪು ನಾಯಿ ಚಿಕಿತ್ಸೆಗೆ ಸ್ಪಂದಿಸದೆ ಸತ್ತುಹೋಯಿತಂತೆ…

ರೆಸ್ಟ್ ಇನ್ ಪೀಸ್….

‍ಲೇಖಕರು admin

11 December, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading