ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಂಟಮಲೆಯ ತಪ್ಪಲಲ್ಲಿ..

ಸಂಗನಗೌಡ

ಇಂಗ್ಲೀಷ್ ವಿಭಾಗದಲ್ಲಿ ಸಂಶೋಧನೆ ಕೈಗೊಂಡಿರುವ ಕೇರಳದ ಆತ್ಮೀಯ ಸ್ನೇಹಿತ ನಿರ್ಮಲ್ ಜೋಸೆಫ್ ಕರಾವಳಿಗೆ ಬಸ್ ಟಿಕೆಟ್ ಮಾಡಿಕೊಟ್ಟ. ಏಳನೇ ತಾರೀಖು ಸಾಯಂಕಾಲ ಮೂರುವರೆಗೆ Morning star ಬಸ್ಸು ಹತ್ತಿದ ನಾನು ಕರಾವಳಿಯ ಕಡೆ ಹೊರಟೆ..

ರಾತ್ರಿ ನರಗುಂದದ ಹತ್ತಿರ ನಾವಿದ್ದ ಬಸ್ಸು ಒಮ್ಮಿಲೇ ದಡ್ ದಡಲ್ ಎನ್ನುವ ಶಬ್ಧವಾಗಿ ಕೆಲವರ ಬ್ಯಾಗುಗಳು ಕೆಳಗೆ ಬಿದ್ದವು. ಕೆಳಗಿಳಿದು ನೋಡಿದಾಕ್ಷಣ ನಮ್ಮದೇ ಕಲ್ಬುರ್ಗಿ ಪಾಸಿಂಗ್ ಹೊಂದಿದ್ದ ಲಾರಿಯು ನಾವಿದ್ದ ಬಸ್ಸಿಗೆ ಗುದ್ದಿ ತನ್ನ ಎಡಮೈ ತೋರಿಸುತ್ತಾ ನಿಂತಿತು..

ಬಸ್ಸೊಳಗಿದ್ದ ಕೆಲ ಸೊಪೆಸ್ಟಿಕೆಟೆಡ್ ಜನರು ಲಾರಿ ಚಾಲಕನಿಗೆ ಹೊಡಿಯಲು ಮುಂದಾದರು, ಇನ್ನೇನು ಏಟು ಬಿತ್ತು ಅನ್ನುವಷ್ಟರಲ್ಲಿ ನಾನು ಹೋಗಿ ತಡೆದು; ಅಲ್ಲಾ ಸರ್ ಇಲ್ಲಿ ಲಾರಿ ಡ್ರೈವರ್ ಮತ್ತು ಬಸ್ಸಿನ ಡ್ರೈವರ್ ಇಬ್ಬರದೂ ತಪ್ಪಿಲ್ಲ, ಯಾಕಂದ್ರೆ ಮೊನ್ನೆ ಈ ಭಾಗ ಅತಿವೃಷ್ಟಿಗೆ ಸಿಕ್ಕು ರೋಡ್ ಬ್ರೆಕ್ ಗೆ ಹಾಕಿದ್ದ ರೇಡಿಯಮ್ ಎಲ್ಲಾ ಕಿತ್ತೋಗಿದ್ದರಿಂದ ಬಸ್ಸಿನ ಡ್ರೈವರ್ ಗೆ ಕಾಣದೇ ಒಮ್ಮಿಂದೊಮ್ಮೆಲೇ ಬ್ರೆಕ್ ಹಾಕಿದ್ದಕ್ಕಾಗಿ ಈ ಸಮಸ್ಯೆ ಆಗಿದ್ದು, ಇದೊಂದು Collective responsibility ಎಲ್ಲರೂ ಹೊಣೆಗಾರರು.. ಅಂತ ಹೇಳಿ ನರಗುಂದದ ಪೋಲಿಸರಿಗೆ ಕರೆಸಿ ಕನ್ವಿನ್ಸ್ ಮಾಡಿ ಹೊರಟೆವು…

ಬೆಳಗ್ಗೆ ಏಳು ಗಂಟೆಗೆ ಉಡುಪಿಗಿಳಿದು ತಂಗಿ ಮನೆಯಲ್ಲಿ ಸ್ನಾನ, ತಿಂಡಿ ಆದ ನಂತರ ಪ್ರೈವೆಟ್ ಬಸ್ಸು ಹಿಡಿದು ಧರ್ಮಸ್ಥಳಕ್ಕೆ ಬಂದೆ.. ಅಲ್ಲಿ ಸ್ವಲ್ಪ ಸುತ್ತಾಡಿ ನೇರವಾಗಿ ಕುಕ್ಕೆ ಸುಬ್ರಹ್ಮಣ್ಯ ತಲುಪುವಷ್ಟೊತ್ತಿಗೆ ಸಾಯಂಕಾಲ ಆರು ಗಂಟೆಯಾಗಿತ್ತು. ಅಲ್ಲಿ ನಮಗಾಗಲೇ ಆದಿಶೇಷ Guest house ಒಳಗೆ ರೂಮು ತಯಾರಿಯಿತ್ತು.

ನನ್ನನ್ನು ಪ್ರೀತಿಯಿಂದ ಬರಮಾಡಿಕೊಂಡು ಹದಿನಾರು ನಂಬರ್ ಕೋಣೆಯ ಬೀಗ ಕೊಟ್ಟರು. ನನ್ನ ಬ್ಯಾಗನ್ನು ರೂಮೊಳಗಿಟ್ಟು ಕೈಕಾಲು ಮುಖ ತೊಳೆದುಕೊಂಡು ದೇವಸ್ಥಾನದ ಕಡೆ ಬರುವಾಗ ಅಮೀನ್ ಮಟ್ಟು ಸರ್ ಸಿಕ್ಕರು ಅವರ ಜೋಡಿ ಸ್ವಲ್ಪ ಹೊತ್ತು ಮಾತಾಡಿ, ಬಸವರಾಜ ತೂಲಹಳ್ಳಿ ಸರ್ ಗೆ ಪೋನ್ ಹಾಯಿಸಿದೆ. ಅವರು ಎಂಟು ವರೆಗೆ ರೀಚಾಗ್ತೇನೆ ಎನ್ನುವ ಭರವಸೆ ನೀಡಿದರು. ತಾಸಾದ ನಂತರ ಅವರೂ ಜೊತೆಯಾದರು… ಊಟ ಮಾಡಿದ ನಂತರ ವರ್ತಮಾನದ ಬಿಕ್ಕಟ್ಟುಗಳ ಕುರಿತು ಅರ್ಥಪೂರ್ಣವಾದ ಮಾತುಗಳು ಆಡಿದರು.

ಬೆಳಗ್ಗೆ ನಮ್ಮ ಬೇಸಿಕ್ ಥಿಂಗ್ಸ್ ಗಳನ್ನು ಮುಗಿಸಿಕೊಂಡು ಅಮೀನ್ ಮಟ್ಟು ಸರ್ ಜೋಡಿ ಮಾತಾಡಿ,  ಪಂಜ ಬಸ್ ಹಿಡಿದು ಹೊರಟೆವು.

ಪಂಜ ತಲುಪಿದ ನಂತರ ಬಸ್ಟ್ಯಾಂಡಿನಲ್ಲಿ ಬಿಳಿಮಲೆಯ ಬೋರ್ಡ್ ಹಾಕಿಕೊಂಡ ಜೀಪುಗಳು ನಮ್ಮ ದಾರಿನೇ ಕಾಯುತ್ತಿದ್ದವು. .ಡ್ರೈವರುಗಳು ನಮ್ಮನ್ನು ತಾವಾಗಿಯೇ ಕರೆದು ಕೂಡಿಸಿ ಪ್ರೀತಿಯ ಅರೆಗನ್ನಡ ಮಾತಾಡುತ್ತ ನಮ್ಮನ್ನು ಬಂಟಮಲೆಯ ಬುಡದಲ್ಲಿಯ ಬಿಳಿಮಲೆಯ ಹೃನ್ಮನಗಳ ಗೂಡಿಗೆ ತಂದು ಬಿಟ್ಟರು.

ನಾವುಗಳು ಬಂದದ್ದು ಕಂಡ ಪುರುಷೋತ್ತಮ ಸರ್ ನಮ್ಮನ್ನ ಎದೆಗಪ್ಪಿಕೊಂಡು ಅಂತೂ ಬಂದ್ರಲ್ಲಾ ಮಾರ್ರೆ ಎಂದು ಕೈ ಹಿಡ್ಕೊಂಡು ಉಪಹಾರದ ಕಡೆ ಕರೆದುಕೊಂಡು ಹೋದರು.. ಸ್ವತಃ ತಾವೇ ನಮ್ಮಗಳ ಕೈಗೆ ಪ್ಲೇಟ್ ಕೊಟ್ಟು ಬಡಿಸಲು ಹೇಳಿದರು. ಆಗ ನಾನು ಸರ್ ನಿಮ್ದಾಯ್ತಾ..? ಅಂದಾಗ ನೀವು ಬರುತ್ತೀರಿ ಎನ್ನುವ ಗ್ಯಾರೆಂಟಿ ನನಗಾದ ಮೇಲೆ ತಿಂಡಿ ಉಳಿಯುದಿಲ್ಲವೆಂದು ಮೊದಲೇ ಮಾಡಿದೆ ಮಾರ್ರೆ ಎಂದು ತಮಾಷೆಯ ಚಟಾಕಿ ಹಾರಿಸಿದರು. ತಿಂಡಿ ಮುಗಿದ ನಂತರ ಬೀಡಾ ಅಗೆಯುತ್ತಾ ಕುಳಿತೇವು. ದೇಶ ಮತ್ತು ನಾಡಿನಾದ್ಯಂತ ಆತ್ಮೀಯರು ಒಬ್ಬಬ್ಬರಾಗಿ ಬರುತಿದ್ದರು.

ಸೂರ್ಯ ಇನ್ನೇನು ನೆತ್ತಿಯ ಮೇಲಾಯುವ ಹೊತ್ತಾಗುವ ಸಂದರ್ಭಕ್ಕೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಪ್ರಾರಂಭವಾಯಿತು. ಪದ್ಮನಾಭ ಸರ್ (ಪುರುಷೋತ್ತಮ ಸರ್ ಅಣ್ಣ) ವೇದಿಕೆಯ ಮುಂಭಾಗದಲ್ಲಿ ಕುಳಿತ ನಮ್ಮೆಲ್ಲರನ್ನೂ ನೋಡಿ ತುಂಬಾ ಭಾವುಕರಾಗಿ ಸ್ವಾಗತಿಸಿದರು. ನನ್ನ ತಮ್ಮನ(ಪುರುಷೋತ್ತಮ ಸರ್) ಜಾತಕದಲ್ಲಿ ಶಿಕ್ಷಣ ಕಲಿಯುವ ಭಾಗ್ಯವಿರಲಿಲ್ಲ ಅಂತ ಅಪ್ಪ ಯಾವಾಗಲೂ ಹೇಳೋರು ಎಂದು ತಿಳಿಹಾಸ್ಯ ಮಾಡಿದರು.

ನಂತರ ಪುರುಷೋತ್ತಮ ಸರ್ ಪ್ರಾಸ್ತಾವಿಕವಾಗಿ ಮಾತಾಡ್ತಾ, ಕಾರ್ಯಕ್ರಮಕ್ಕೆ ಬಂದ ಪ್ರತಿಯೊಬ್ಬರಿಗೂ ಕೃತಜ್ಞತೆಗಳು ಹೇಳಿದರು.. ತಮ್ಮ ಬಾಲ್ಯದಿಂದ ಇಲ್ಲಿವರೆಗೂ ಕಷ್ಟಸುಖಗಳಿಗೆ ಜೊತೆಯಾಗಿದ್ದ ಎಲ್ಲರನ್ನೂ ನೆನೆಸಿಕೊಂಡರು.. ಇಂಥ ಸಂದರ್ಭದಲ್ಲಿ ಅಪ್ಪ ಅಮ್ಮ ಇಲ್ಲವಾಗಿರುವ ದುಃಖ, ಅವರಿಗಾಗಿದ್ದರೂ ಅದನ್ನು ತೋರಿಸಿಕೊಳ್ಳದೇ ಹಾಸ್ಯದ ಮುಖಾಂತರ ಅವರನ್ನು ನೆನೆಸಿಕೊಂಡದ್ದನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ.

ಪ್ರೊ. ವಿವೇಕ ರೈ ಸರ್ ಮಾತು ಪ್ರಾರಂಭಿಸಿ ತಮ್ಮ ಶಿಷ್ಯನು ನಡೆದು ಬಂದ ದಾರಿಯ ಬಗ್ಗೆ ಮಾತಾಡಿದರು. ನಾನು ಗಮನಿಸಿದಂತೆ, ಒಟ್ಟು ಅವರ ಮಾತಿನ ತಿರುಳು ಏನಾಗಿತ್ತೆಂದರೆ, ನನ್ನ ಶಿಷ್ಯ ಇಷ್ಟೊಂದು ಎತ್ತರಕ್ಕೆ ಬೆಳೆದಾಗಲೂ ನನ್ನ ಕರೆದು ಗೌರವಿಸುತ್ತಿರುವುದು ಒಬ್ಬ ಗುರುವಿಗೆ ಇದಕ್ಕಿಂತ ಖುಷಿ ಇನ್ನೇನಿದೆ ಎನ್ನುವುದೇ ದ್ವನಿಸುತ್ತಿತ್ತು…..

ನಂತರ ತಮ್ಮ ಸ್ನೇಹಿತರಾದ ಪ್ರೊ.ಚಿನ್ನಪ್ಪಗೌಡ್ರು ಮಾತಾಡ್ತಾ ಪ್ರಾರಂಭ ಹಂತದಲ್ಲಿ ಸಂಶೋಧನೆಗೆ ತೊಡುಗುವ ಯುವಕರನ್ನಿಟ್ಟುಕೊಂಡು ಮಾತಾಡಿದರು. ಜೊತೆಗೆ ತಾವು ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದಾಗ ಮಾಡಲೇಬೇಕಾದ ಕೆಲಸ ಅನಿವಾರ್ಯವಾಗಿ ಮಾಡಲಾಗದೆ ವಿಶ್ವವಿದ್ಯಾಲಯವನ್ನು ಬಿಟ್ಟು ಬಂದದ್ದನ್ನು ನೆನಪಿಸಿಕೊಂಡರು.

ತಮ್ಮ ಬಾಲ್ಯದ ಗುರುಗಳು ೯೪ ವಯಸ್ಸಾದರೂ ಕಾರ್ಯಕ್ರಮಕ್ಕೆ ಭಾಗವಹಿಸಿ.. ನಮ್ಮ ಪುರುಷೋತ್ತಮ ಹಾಗೇನಾದರು ಈ ಕಾರ್ಯಕ್ರಮ ದೆಹಲಿಯಲ್ಲಿ ಇಟ್ಕೊಂಡಿದ್ರೆ ಮುಸುಕಾಗಿರುತಿತ್ತು; ಇಷ್ಟೊಂದು ಬಾಲ್ಯದ ನೆನಪುಗಳು ಮರುಕಳಿಸುತ್ತಿರಲಿಲ್ಲ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಊರಿನ ಮುಖಂಡರಾದ ಮಾದೇಗೌಡರು ಅಧ್ಯಕ್ಷತೆಯ ನುಡಿಗಳಲ್ಲಿ ನಮ್ಮ ಬಿಳಿಮಲೆ ದೆಹಲಿ ಆಚೆಗೂ ಪ್ರಚಾರವಾಗಲು ಮುಖ್ಯವಾದದ್ದು ನಮ್ಮ ಪರಿಸರದ ಮೇಲೆ ನಿಮ್ಮ ಅಭಿಮಾನ ಪ್ರೀತಿಯೇ ಕಾರಣ ನಿಮ್ಮೆಲ್ಲರಿಗೂ ನಮ್ಮ ಕೃತಜ್ಞತೆಗಳು ಎಂದು ಹೇಳಿದರು.

ಆಹಾ! ಆ ಮನೆಯಲ್ಲಿ ಅದೆಂಥಾ Collective responsibility ಪ್ರತಿಯೊಬ್ಬರೂ ಇರುವೆಗಳಂತೆ ಓಡಾಡಿಕೊಂಡಿದ್ದರು. ಹೇಮಾವತಿ ಮೇಡಮ್, ಗುಲಾಬಿ ಮೇಡಮ್ , ಶೋಭನಾ ಮೇಡಮ್, ಪರಮೇಶ್ವರ್ ಗೌಡ್ರು, ಗೆಳೆಯ ಅನನ್ಯ. (ಇನ್ನೂ ಕೆಲವರ ಹೆಸರು ನನಗೆ ಪರಿಚಯವಿಲ್ಲ) ಊಟದ ಸಮಯದಲ್ಲಿ ನಮಗೆ ಬೇಕು ಬೇಡಗಳನ್ನು ಪ್ರೀತಿಯಿಂದ ಕೇಳುತ್ತಿದ್ದರು. ಇವರುಗಳಲ್ಲಿ ನನಗೆ ತುಂಬಾ ಇಷ್ಟವಾದ ವ್ಯಕ್ತಿ ಹರೀಶ್ ಬಿಳಿಮಲೆ ಎಂದು ಪುರುಷೋತ್ತಮ ಸರ್ ಗೆ ಹೇಳಿದೆ. ಆಗವರು ಈತ ತೇಜಸ್ವಿಯವರ ಮಂದಣ್ಣ ಇದ್ದಹಾಗೆ ಎಂದು ಆತನ ಭುಜತಟ್ಟಿ ಹೇಳಿದರು.

ಹಾಡು, ಕುಣಿತ, ಪ್ರಭಾಕರ ಜೋಶಿಯವರು ಮಹಾಭಾರತವನ್ನು ವರ್ಥಮಾನದ ಜೊತೆಗೆ ಅನುಸಂಧಾನ ಗೊಳಿಸಿದ್ದು ನನಗಂತೂ ಬೆರಗುಗೊಳಿಸಿತು, ನಂತರ ಚರ್ಚೆ,  ಅನೇಕ ಬಗೆಯ ಐಟಮ್ಸ್ ಹೊಂದಿದೆ ಊಟ, ವೈನ್ ಎಲ್ಲವೂ ಮುಗಿದಾದ ನಂತರ ಬಂಟಮಲೆಯ ಬೆಳದಿಂಗಳಲಿ ಹಾಡು, ವರ್ತಮಾನದ ಕುರಿತು ಗಂಭೀರ ಮಾತು, ಆಗಾಗ ತಮಾಷೆ, ರೇಣುಕಾ ನಿಡಗುಂದಿ, ಸತ್ಯಾ.ಎಸ್, ಸುಕನ್ಯಾ ಹೇಮಾವತಿ ಈ ಎಲ್ಲಾ ಮೇಡಮ್ಮರು ತುಂಬಾ ಗಂಭೀರವಾಗಿ ಚಿಂತಿಸುವವರು ಅಷ್ಟೇ ಹಾಸ್ಯಗಾರರು ಕೂಡ!

ಪಲ್ಲವ ವೆಂಕಟೇಶ್ ಸರ್, ಕುಮಾರ ಆರ್.ಬಿ ಸರ್, ಬಸವರಾಜ ತೂಲಹಳ್ಳಿ ಸರ್ ನಾವೆಲ್ಲರೂ ರಾತ್ರಿ ಒಟ್ಟಿಗಿದ್ದದ್ದು ವಿಶೇಷವಾಗಿತ್ತು. ಆ ಕ್ಷಣದ ಖುಷಿ ನನ್ನ ಹಿಂದಿನ ಯಾವ ಖುಷಿಗೂ ಕಡಿಮೆ ಇರಲಿಲ್ಲ!

ಪುರುಷೋತ್ತಮ ಬಿಳಿಮಲೆ ಸರ್ ಅವರ ಸಂಶೋಧನಾ ಕೃತಿಯಾದ ವಲಸೆ, ಸಂಘರ್ಷ, ಸಮನ್ವಯ ಲೋಕಾರ್ಪಣೆಗೆ ದೂರದಿಂದ ವಲಸೆ ರೂಪದಲ್ಲಿ ಬಂದ ನಾವುಗಳು,  ಸರ್ ಜೊತೆ ತಾತ್ವಿಕ ಸಂಘರ್ಷ ಮಾಡಿ, ಅಂತಿಮವಾಗಿ ಸಮನ್ವಯಗೊಂಡೆವು! ನಂತರ ಕಾರಿನೊಳಗೆ ಕೂಡಿಸಿದ ನಮ್ಮನ್ನು ಪ್ರೀತಿಯಿಂದ ಬೀಳ್ಕೊಟ್ಟರು. ಕಾರು ಕಾಡಿನಲ್ಲಿ ಮರೆಯಾಗುವವರೆಗೂ ನಮ್ಮನ್ನೇ ನೋಡುತ್ತಿದ್ದರು.

ಬಂಟಮಲೆಯ ಬುಡದಲ್ಲಿರುವ ಬಿಳಿಮಲೆಯ ಹೃನ್ಮನಗಳಿಗೆ ಧನ್ಯವಾದಗಳು.

‍ಲೇಖಕರು avadhi

15 November, 2019

7 Comments

  1. ಸಂಗನಗೌಡ

    Thanks

  2. Sharanappa Sanganal

    ಸಂಗನಗೌಡರವರೆ ನಿಮ್ಮ ಲೇಖನ ಓದಿ ತಂಬಾ ಸಂತೋಷವಾಯಿತು. ಹೀಗೆ ಲೇಖನ ಓದುತ್ತಾ ಮುಂದೆ ಹೋದಾಗಲೆಲ್ಲ ನಾನು ಬಂಟಮಲೆಯ ತಪ್ಪಲಿಗೆ ಬಂದು ಪುರುಷೋತ್ತಮ ಸರ್ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಪಾಲ್ಲೊಂಡು, ಆ ಅನುಭವ ಪಡೆದಂತಾಯಿತು. ಧನ್ಯವಾದಗಳು….

    • ಸಂಗನಗೌಡ

      Thank you sir

  3. Vasundhara k m

    ಸಂಗನ ಗೌಡ್ರೇ… ಚೆಂದ ಬರೆದಿದ್ದೀರಿ.. ಶುಭಾಶಯಗಳು..

    • ಸಂಗನಗೌಡ

      ಧನ್ಯವಾದಗಳು ಮೇಡಂ

  4. sangeetha raviraj

    sangana gowdre sooper agi bardiddiri, alli nimma mathadisi mane hinde photos tegdaga nivu nammodinge edri

  5. ಸಂಗನಗೌಡ

    Oh!! Thank you madam

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading