ಫಿಡೆಲ್ ಕ್ಯಾಸ್ಟ್ರೋ ಕುರಿತ ಗುಜ್ಜಾರ್ ರೇಖಾ ಚಿತ್ರವನ್ನು ಮೆಚ್ಚಿ ಹಲವರು ಪತ್ರ ಬರೆದಿದ್ದಾರೆ. ಆಷ್ಟೇ ಅಲ್ಲದೆ ಕ್ಯಾಸ್ಟ್ರೋ ಕುರಿತು ಇನ್ನಷ್ಟು ಮಾಹಿತಿಯನ್ನೂ ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಜಿ ಎನ್ ಮೋಹನ್ ಅವರ ‘ನನ್ನೊಳಗಿನ ಹಾಡು ಕ್ಯೂಬಾ’ದಿಂದ ಫಿಡೆಲ್ ಅವರ ಮನ ಮುಟ್ಟುವ ಮಾತುಗಳನ್ನು ನೀಡುತ್ತಿದ್ದೇವೆ. ಪುಸ್ತಕದ ಮುನ್ನುಡಿಯಲ್ಲಿ ಮೋಹನ್ ಬರೆದ ಸಾಲುಗಳೂ ಇಲ್ಲಿವೆ.
ಮೋಡ ಇದೆ ಎಂದ ಮಾತ್ರಕ್ಕೆ ಆಕಾಶದಲ್ಲಿ ಸೂರ್ಯನಿಲ್ಲ ಎಂದು ಅರ್ಥವೇನು? ಮೋಡ ಹನಿಯೊಡೆದು ನೆಲಕ್ಕುದುರಿದರೆ ಅಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಸೂರ್ಯನಿದ್ದಾನೆ.
***
ಹಸಿದು ಸಾಯುವಂತೆ ಮಾಡಿದರು, ಹಂಚಿ ತಿನ್ನುವುದನ್ನು ಕಲಿತೆವು. ರೋಗಗಳಿಂದ ನರಳಿ ಸಾಯುವಂತೆ ಮಾಡಿದರು. ಹಸಿರು ಎಲೆಗಳಿಂದ ಜೀವ ಉಳಿಸಿಕೊಂಡೆವು. ನಮ್ಮ ದನಿಗಳನ್ನು ಕುಗ್ಗಿಸಲು ಯತ್ನಿಸಿದರು, ಅವು ಮರುಧ್ವನಿಗಳಾದವು ನಿಮ್ಮ ಎದೆಗಳಲ್ಲಿ.
***
ಪ್ರತಿಯೊಂದು ಗ್ರಾಮ್ ಹಾಲಿಗಾಗಿ, ಪ್ರತಿಯೊಂದು ಔಷಧಿಯ ಬಾಟಲಿಗಾಗಿ, ಶಾಲೆಯಲ್ಲಿ ಮಕ್ಕಳ ಕೈಯಲ್ಲಿ ಇಲ್ಲವಾಗುತ್ತಿರುವ ಕಾಪಿ ಪುಸ್ತಕಕ್ಕಾಗಿ, ದಿಗ್ಭಂಧನದ ವಿರುದ್ಧ ಘೋಷಣೆ ಮೊಳಗಿಸಿದ ಪ್ರತಿಯೊಂದು ದನಿಗಾಗಿ, ದೇಶದ ವಿರುದ್ಧ ನಡೆಯುತ್ತಿರುವ ಪ್ರತೀ ಅಪಪ್ರಚಾರಕ್ಕಾಗಿ, ನೀವು ಎತ್ತಿಹಿಡಿದಿರುವ ಈ ಕ್ಯೂಬಾ ಬಾವುಟಕ್ಕಾಗಿ ನಾವು ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡುತ್ತೇವೆ.
***
ಇದು ಆರ್ಥಿಕ ದಿಗ್ಭಂಧನವಲ್ಲ. ಇದು ಯುದ್ಧ. ಇಡೀ ವಿಶ್ವದಲ್ಲಿ ನಮ್ಮೊಂದಿಗೆ ಮಾತ್ರ ನಡೆಯುತ್ತಿರುವ ಯುದ್ಧ. ಪ್ರತಿಯೊಬ್ಬರೂ ಈ ಯುದ್ಧದಲ್ಲಿ ಸೆಣಸುತ್ತಿದ್ದಾರೆ. ಪ್ರತಿ ಬಾರಿ ಮಕ್ಕಳನ್ನು ನೋಡಿದಾಗ ಅವರು ಮಹಾಯುದ್ಧದ ಮಧ್ಯದಲ್ಲಿ ನಿಂತಿದ್ದಾರೆ ಎನಿಸುತ್ತದೆ. ಹಾಲುಗಲ್ಲದ ಮಕ್ಕಳು ಯುದ್ಧದ ಮಧ್ಯೆ ಇರುವ ಯೋಧರಾಗಿ ಕಾಣುತ್ತಿದ್ದಾರೆ.
***
ಬಹುಮತವಿರುವ ಒಂದು ಅಭಿಪ್ರಾಯಕ್ಕೆ ರಾಜನ ಶಕ್ತಿಗಿಂತಲೂ ಹೆಚ್ಚಾದ ಬಲವಿದೆ. ಅನೇಕ ನೂಲುಗಳಿಂದ ಹೆಣೆಯಲಾದ ಹಗ್ಗವು ಒಂದು ಸಿಂಹವನ್ನು ಬೇಕಾದರೂ ಕಟ್ಟಿಹಾಕುತ್ತದೆ.
ಮಾವಿನ ವಾಟೆ
————————–
ಫಿಡೆಲ್ ಹಣ್ಣಾಗಿದ್ದಾರೆ.
ಹಾಡಿಗೂ ಮುಪ್ಪುಂಟೇ? ಜಗತ್ತಿಗೆ ಒಂದು ದೀಪ ಕೊಟ್ಟ, ಪ್ರತಿಯೊಬ್ಬರಿಗೂ ತಮಗೆ ಬೇಕಾಗಿದ್ದು ಗುನುಗಿಕೊಳ್ಳುವ ತಾಖತ್ತು ಕೊಟ್ಟ ಫಿಡೆಲ್ ಮತ್ತೆ ಚಿಗುರೊಡೆದು ಬರಲೆಂದೇ ಇರುವ ಮಾವಿನ ವಾಟೆ. ಸೂರ್ಯನ ಕಿರಣ ಎಲ್ಲಿದ್ದು ಏನು ಮಾಡಿತು ಎಂಬುದು ವಿಜ್ಞಾನದ ತೆಕ್ಕೆಗೂ ಹೇಗೆ ಸಿಗುವುದಿಲ್ಲವೋ ಹಾಗೆ ಫಿಡೆಲ್.
ಜಿ ಎನ್ ಮೋಹನ್
(“ನನ್ನೊಳಗಿನ ಹಾಡು ಕ್ಯೂಬಾ” ಪುಸ್ತಕದ ಮುನ್ನುಡಿಯಿಂದ)





ಅಮೆರಿಕಾ ಎಂಬ ದೈತ್ಯನ ಪಕ್ಕದಲ್ಲೇ ಇದ್ದುಕೊಂಡು ತಾನೇ ತಾನಾಗಿ ಉಳಿದಿರುವ ಕ್ಯೂಬಾ ನಮಗೆ ಮಾದರಿ ಯಾಕಾಗಬಾರದು?
ಕ್ಯಾಸ್ಟ್ರೋ ರಂಥವರು ಇದ್ದಾಗ ಮಾತ್ರ ಅದು ಸಾಧ್ಯವಾಗೋದು.
ಇವತ್ತಿಗೂ ನಮ್ಮತನವನ್ನ ಉಳಿಸಿಕೊಡುವ ನಾಯಕ ಸಿಗೋದಾದರೆ ನಾನು ಒಂದೇ ಬನ್ನು ತಿಂದುಕೊಂಡು ಇದ್ದುಬಿಡಲಿಕ್ಕೆ ರೆಡಿ!
– ಚೇತನಾ
“ಸತ್ತಂತಿಹರನು ಬಡಿದೆಚ್ಚರಿಸು”
ಈ ಸಾಲು ನೆನಪಾಯಿತು.
ಚಂದಿನ
http://www.koogu.blogspot.com
ಎಲ್ಲಿದ್ದಾರೆ ಫಿಡೆಲ್, ಎಲ್ಲಿದ್ದಾರೆ ಕುವೆಂಪು, ಅಂಥ ಮನಸ್ಸುಗಳೇ ಸತ್ತು ಹೋಗಿವೆ.
ವ್ಯವಸ್ಥೆ ಹಾಗೂ ಪ್ರಭುತ್ವದ ವಿರುದ್ಧ ದನಿ ಎತ್ತಿದವರ ಹುಟ್ಟಡಗಿಸಲಾಗಿದೆ.ಬಂಡವಾಳಶಾಹಿ ವ್ಯವಸ್ಥೆಯ ಕ್ರೌರ್ಯಕ್ಕೆ ಬಲಿಯಾದವರೇ ಹೆಚ್ಚು.ಹೀಗೆನಿದ್ದರೂ ಬರೀ ಅವಕಾಶವಾದಿಗಳು,ಹೊಗಳುಭಟ್ಟರು, ಕುತಂತ್ರಿಗಳೇ ತುಂಬಿ ಹೋಗಿದ್ದಾರೆ. ಇಂತಹ ಹೊತ್ತಿನಲ್ಲಿ ದೈವೋತ್ಥಾನ ಸಿದ್ಧಾಂತಗಳು
ಮೌಢ್ಯದ ತೀವ್ರತೆ ಮತ್ತು ಕೋಮುವಾದದ ಜ್ವಾಲೆ ಹೆಚ್ಚುತ್ತಲೇ ಇದೆ. ಇದಕ್ಕೆ ಪರ್ಯಾಯವಾಗಿ
ಆಲೋಚಿಸುವ, ಚಿಂತಿಸುವ, ಕನಸುವ ಮನಸ್ಗುಗಳನ್ನು ಬೆಸೆಯಬೇಕಾದ ಅಗತ್ಯವಿದೆ.
– ಸಿದ್ದಮುಖಿ