ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಿಯ ಉಪೇಂದ್ರರಿಗೆ..

ಉಪೇಂದ್ರರಿಗೊಂದು ಪತ್ರ !

‘ಲಂಕೇಶ್ ಪತ್ರಿಕೆ’ಯ ದಕ್ಷಿಣ ಕನ್ನಡ ಜಿಲ್ಲೆಯ ವರದಿಗಾರರಾಗಿದ್ದವರು ಬಿ ಎಂ ರಶೀದ್. ಖ್ಯಾತ ಸಾಹಿತಿ, ರಾಜಕಾರಣಿ ಬಿ ಎಂ ಇದಿನಬ್ಬ ಅವರ ಗರಡಿಯಲ್ಲಿ ಪಳಗಿದವರು. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಇಲ್ಲವಾದರು.

ಅವರ ಸಮಗ್ರ ಬರಹಗಳ ಸಂಗ್ರಹ ‘ಪರುಷಮಣಿ’

ಉಪೇಂದ್ರ ಅವರು ರಾಜಕೀಯ ಜೀವನಕ್ಕೆ ಕಾಲಿಡುತ್ತಿರುವ ಹೊತ್ತಿನಲ್ಲಿ ಅವರ ಸಿನೆಮಾ ಹಾಗೂ ಆಲೋಚನೆಯ ಬಗ್ಗೆ ಒಂದು ನೋಟ.

 

ಪ್ರಿಯ ಉಪೇಂದ್ರರಿಗೆ, 

ನಿಮ್ಮದೇ ಹೆಸರಿನ ನಿಮ್ಮ ಸಿನಿಮಾ ಮಂಗಳೂರಿಗೆ ಬಂದಿದೆ. ಮಂಗಳೂರಿನ ಗೋಡೆಗಳ ತುಂಬಾ ನಿಮ್ಮದೇ ಚಿತ್ರಗಳು. ದೀಪಾ ಮೇಹ್ತಾರ 1947-ಅರ್ತ್, ಸ್ಟೀಲ್ ಬರ್ಗ್‌ನ ‘ಸೇವಿಂಗ್ ಪ್ರೈವೇಟ್ ರ್ಯಾನ್‌’ನಂತಹ ಚಿತ್ರಗಳು ಬಂದು ಹೋದ ಕುರುಹನ್ನೂ ಉಳಿಸದ ಮಂಗಳೂರಿನ ಥಿಯೇಟರ್ ಅಂಗಳದಲ್ಲಿ ನಿಮ್ಮ ಚಿತ್ರಕ್ಕೆ ಜನರ ಜಾತ್ರೆ! ನಿಮಗೆ ಅಭಿನಂದನೆಗಳು.

ಅಭಿನಂದನೆ ಯಾಕೆಂದರೆ ಉಪೇಂದ್ರ ಬಾಬು, ಆ ಥಿಯೇಟರ್ ಅಂಗಳದಲ್ಲಿ ಸಿಡಿಲುಬಡಿದ ಕೊರಡುಗಳಂತೆ ನಿಂತು ನಿಮ್ಮ ಚಿತ್ರದ ಟಿಕೆಟ್‌ಗಾಗಿ ಕಾದಿರುವ ಆ ಜನಗಳಲ್ಲಿ ಏನನ್ನು ನೋಡಲು ಬಂದಿರೆಂದು ಒಮ್ಮೆ ಕೇಳಿ ನೋಡಿ. ಅವರಲ್ಲಿ ಉತ್ತರಗಳಿಲ್ಲ! ಆಮೇಲೆ ಏನನ್ನು ನೋಡಿದಿರೆಂದು ಕೇಳಿ ನೋಡಿ. ಇಲ್ಲ, ಅದಕ್ಕೂ ಉತ್ತರಗಳಿಲ್ಲ!! ನಾನು ನಿಮ್ಮನ್ನು ಅಭಿನಂದಿಸದೇ ಇರುವುದಕ್ಕಾಗುತ್ತದೆಯೇ ಉಪೇಂದ್ರಜೀ?

ತಮ್ಮ ತಮ್ಮ ಆತ್ಮ ಮರುಕವನ್ನೂ, ಸ್ವಯಂ ಪ್ರೇಮವನ್ನೂ ಕಲೆಯ ಹೆಸರಿನಲ್ಲಿ ಮಾರಿದವರನ್ನು ನಾನಿಲ್ಲಿ ತನಕ ಕಂಡಿದ್ದೆ. ಈಗ ತನ್ನ ವಿಕೃತಿಯನ್ನು ಹೀಗೆ ಕಾಸು ಪಡೆದು ಜನರಿಗೆ ಧಾಟಿಸುವ ಈ ದಂಧೆ ನಿಮಗೆ ಲಾಭವನ್ನು ತರಬಹುದು. ಒಳ್ಳೆಯದು, ಮುಂದುವರಿಸಿ. ತನ್ನ ಕೃತ್ಯಗಳಿಗಾಗಿ ಸ್ವಯಂ ನಾಚಿಕೊಳ್ಳದವನನ್ನು ಯಾವ ಬಗೆಯಲ್ಲೂ ಶಿಕ್ಷಿಸಲು ಸಾಧ್ಯವಿಲ್ಲ ಎನ್ನುವುದು ನನ್ನ ನಂಬಿಕೆ.

ಆದರೆ ಒಂದು ವಿಕೃತಿಯನ್ನು ಕಾಣಲು ಕಾಸು ಕೊಟ್ಟು ಸರತಿಯಲ್ಲಿ ನಿಂತವರನ್ನು ಕಂಡು ನನ್ನಂಥವರಲ್ಲಾಗುತ್ತಿರುವ ದುಗುಡ ನಿಮಗೆ ಅರ್ಥವಾಗಲಾರದು ಉಪೇಂದ್ರಜೀ. ಈ ನಾಡಿನ ಕಲೆ, ಸಿನಿಮಾ, ಜನ, ಜನರ ಅಭಿರುಚಿ ಏನಾದರೆ ನಿಮಗೇನಂತೆ? ಇದು ಉಪೇಂದ್ರನಿಂದ ಅಲ್ಲದೆ ಇನ್ಯಾರಿಂದ ಎಂಬ ಧಿಮಾಕಷ್ಟೆ ನಿಮಗೆ ಮುಖ್ಯ. ಇಂತಹ ಅಗ್ಗದ ಸಾಧನೆಗಳಿಗೆ ನಿಮ್ಮೆಳಗಿನ ವಿಕೃತಿಯ ವಿನಃ ಇನ್ಯಾವುದರ ನೆರವು ದೊರೆಯಬಲ್ಲುದು ಹೇಳಿ?

ನಿಮ್ಮ ಸಿನಿಮಾವನ್ನು ನಾನು ಕೂಡ ನೋಡಿದೆ. ರೋಗಕ್ಕೆ ಚಿಕಿತ್ಸೆ ನೀಡಬೇಕಾದ ವೈದ್ಯ ರೋಗವನ್ನೊಮ್ಮೆ ಕಣ್ಣಿಂದಲಾದರೂ ನೋಡುವುದು ಒಳ್ಳೆಯದಲ್ಲವೇ?

ಥಿಯೇಟರ್‌ನಲ್ಲಿ ನಾನು ಸಿಡಿಮಿಡಿಗೊಂಡು ಎದ್ದಾಗಲೆಲ್ಲಾ ಪಕ್ಕದಲ್ಲಿ ಕೂತಿದ್ದ ಗೆಳೆಯ, ನನ್ನನ್ನು ಮತ್ತೆ ಆಸನಕ್ಕೆ ಒತ್ತಿ ಉಪಕರಿಸುತ್ತಿದ್ದ. ಚಿತ್ರ ಮುಗಿದು ಹೊರಬಂದಾಗ ಬೃಹತ್ ಗಾತ್ರದ ಕೆಲಿಡೋಸ್ಕೋಪ್‌ನಿಂದ ಹೊರಬಿದ್ದ ಅನುಭವವಾಯಿತು! ಥಿಯೇಟರ್ ಬಾಗಿಲಿನಲ್ಲಿ ನಿಂತು ಇಷ್ಟು ಹೊತ್ತು ಕಣ್ಣ ಮುಂದೆ ನಡೆದದ್ದೇನು ಎಂದು ನೆನಪಿಸಿಕೊಳ್ಳಲು ಹೋದರೆ ಹುಚ್ಚೇ ಹಿಡಿವ ಸ್ಥಿತಿ.

ನೂರು ಥರದ ಬಣ್ಣಗಳು, ಚೀರಾಟಗಳು, ನಾಲ್ಕು ತುಣುಕು ಒಣಕಲು ಫಿಲಾಸಫಿ, ಪ್ರೇಮ -ಕಾಮದ ಬೊಗಳೆಗಳು ಎಲ್ಲವನ್ನೂ ಒಂದು ಮಿಕ್ಸರ್ ಗ್ರೈಂಡರ್‌ನಲ್ಲಿ ತಿರಿವಿ ಕಣ್ಣ ಮುಂದೆ ಇಟ್ಟಂತಿತ್ತು ! ಇರಲಿ ಎಲ್ಲವನ್ನು ಸಹಿಸಿದ್ದಾಯಿತು. ಆದರೆ ಉಪೇಂದ್ರರೇ, ನಟಿ ಪ್ರೇಮಾ ಜೊತೆ ನೀವು ಕುಚು ಕುಚು ಕುಚು ಎಂಬ ಸದ್ದು ಹೊರಡಿಸುತ್ತಿದ್ದಿರಲ್ಲಾ. ಅದು ಯಾವ ಮೃಗದ ಭಾಷೆ? ಅದೇನಿದ್ದರೂ ಕಾಡು ಮೃಗದಂತೆ ಕಾಣುವ ನಿಮಗೆ ಆ ಭಾಷೆ ಚೆನ್ನಾಗಿಯೇ ಒಪ್ಪುತ್ತದೆ ಬಿಡಿ. ಚಿತ್ರದಲ್ಲಿ ನೀವು ನ್ಯಾಖ್ಯಾನಿಸುವ ಪ್ರಕಾರ ಈ ಕೋಡಂಗಿತನಗಳನ್ನ್ನೆಲ್ಲಾ ಮಾಡುವ ಧೈರ್ಯ ಉಪೇಂದ್ರನಿಗೆ ಮಾತ್ರ ಇದೆ. ಉಳಿದವರಿಗೆ ಆಸೆ ಇದೆ, ಆದರೆ ಧೈರ್ಯವಿಲ್ಲ! ನೀವು ಹೇಗೂ ಧೈರ್ಯವಂತರಲ್ಲವೇ ಉಪೇಂದ್ರ, ಈ ಚಿತ್ರವನ್ನು ಒಮ್ಮೆ ನಿಮ್ಮ ಖಾಸಾ ತಾಯಿ, ತಂಗಿ, ಪ್ರೇಯಸಿಯರ ಜೊತೆ ಕೂತು ನೋಡಿ ಬಿಡಿ. ನಿಮಗೊಂದು ಆತ್ಮಸಾಕ್ಷಿ ಇದ್ದೂ ಕೂಡ ಆಗ ಅದು ವಿಲಿವಿಲಿ ಒದ್ದಾಡಲಿಲ್ಲ ಎಂದಾದರೆ, ಇಗೋ ಈ ಚರ್ಚೆಯನ್ನು ಇಲ್ಲಿಗೇ ಕೈ ಬಿಟ್ಟೆ.

ಚಿತ್ರದಲ್ಲಿ ನಿಮ್ಮ ಹೆಸರು ‘ನಾನು’! ಚಿತ್ರದುದ್ದಕ್ಕೂ ನಾನು ನಾನು ಎಂದು ಒರಲುತ್ತಿದ್ದ ಉಪೇಂದ್ರ ನೀನು ನಿಜಕ್ಕೂ ಬಫೂನು! ತನ್ನ ಹಾವಭಾವಗಳ ಬಗ್ಗೆ ಇನ್ನೊಬ್ಬನಿಗೆ ಏನನ್ನಿಸುತ್ತದೆ ಎನ್ನುವುದನ್ನೂ ಲೆಕ್ಕಿಸದೆ ಕುಣಿಯುವವನು ಬಫೂನು ಅಲ್ದೆ ಇನ್ನೇನು? ನಿನ್ನ ಚಿತ್ರದಲ್ಲಿ ರತಿ , ಕೀರ್ತಿ ಸ್ವಾತಿ ಎಂಬ ಮೂರು ಸ್ರ್ತೀಪಾತ್ರಗಳು ಬೇರೆ! ಚಿತ್ರ ಮುಗಿಯುವ ಹೊತ್ತಿಗೆ ಆ ಮೂರು ಪಾತ್ರಗಳು ಮನುಷ್ಯರೇ ಅಲ್ಲವಂತೆ! ಮನುಷ್ಯನ ಬದುಕಿನಲ್ಲಿ ಬರುವ ಮೂರು ಋತುಕಾಲಗಳು ಅವು?! ತಾವ್ಯಾರು ಸಿನಿಮಾ ರಂಗದ ಜಿಡ್ಡು ಕೃಷ್ಣ ಮೂರ್ತಿ ಎಂದು ತಿಳಿದುಕೊಂಡಿರಾ ಉಪೇಂದ್ರ ಸಾಬ್? ಫಿಲಾಸಫಿ ಸಿನಿಮಾದ ಭಾಷೆಗೆ ಒಗ್ಗುವಂತಹದಲ್ಲ ಮಾರಾಯ್ರೇ. ಅಂತಹದರಲ್ಲಿ ನಿಮಗೆ ಫಿಲಾಸಫಿಯೂ ಗೊತ್ತಿಲ್ಲ, ಸಿನಿಮಾ ತೆಗೆಯಲು ಕೂಡಾ ಗೊತ್ತಿಲ್ಲ. ಗೊತ್ತಿರುವುದು ಬರೇ ಕುಚೇಷ್ಟೆಗಳು ಮಾತ್ರ. ನಿಮ್ಮ ಕುಚೇಷ್ಟೆಗಳಿಗಾಗಿ ಒಂದು ಸಮೂಹದ ಅಭಿರುಚಿಯೇ ಭ್ರಷ್ಟಗೊಳ್ಳಬೇಕೇ? ಹೇಳಿ ಮಿ.ಉಪೇಂದ್ರ.

ವರ್ಷದ ಹಿಂದೆ ನಿಮ್ಮ ‘ಎ’ ಎಂಬ ಚಿತ್ರ ಬಂದಿತ್ತು. ಅದಕ್ಕೆ ಬುದ್ಧಿವಂತರಿಗೆ ಮಾತ್ರ ಎಂಬ ಲೇಬಲ್ಲು ಬೇರೆ! ಅಂದ ಮೇಲೆ ಹುಟ್ಟಿನಿಂದಲೇ ಬುದ್ಧಿವಂತಿಕೆಯನ್ನು ಗುತ್ತಿಗೆ ಪಡೆದ ನಾವದನ್ನು ನೋಡದಿರಲು ಹೇಗೆ ಸಾಧ್ಯ? ಚಿತ್ರವನ್ನು ನೋಡಿದಾಗಲಷ್ಟೇ ನಾವೆಷ್ಟು ದಡ್ಡರು ಎಂದು ಸಾಬೀತಾಯಿತು. ಮುಂದೆ ನಮ್ಮಂತಹ ದಡ್ಡರಿಗೋಸ್ಕರವಾದರೂ ಒಂದು ಸಿನಿಮಾ ತೆಗೆಯಿರಿ ಸ್ವಾಮಿ ಎಂದು ವಿನಂತಿಸಿಕೊಂಡಿದ್ದೆವು. ನಮ್ಮ ಆ ವಿನಂತಿಗೆ ಕಿವಿಗೊಟ್ಟು ನೀವು ಈ ಬಾರಿ ತೆಗೆದ ಚಿತ್ರವೇ ಇದು ಉಪೇಂದ್ರ? ಜಾಹೀರಾತುಗಳಲ್ಲಿ ನಿಮ್ಮ ಉಪೇಂದ್ರ ಕ್ಕೆ 2ಡಿ ಚಿತ್ರ ಎಂಬ ಘೋಷಣೆಯೂ ಬೇರೆ ಇದೆಯಲ್ಲ! ನಾವು ನುಗ್ಗಿದ್ದು ಚಿತ್ರಮಂದಿರಕ್ಕೆ. ಹೊರಬಿದ್ದದ್ದು ಹುಚ್ಚಾಸ್ಪತ್ರೆಯಿಂದ!! 2ಡಿ ಎಂದರೆ ಅರ್ಥ ಅದೇನಾ?

ಕಲೆಯ ಸ್ಪಂದನಗಳನ್ನೂ ಸಂವೇದಿಸಲಾರದ ನಿಮ್ಮಂತಹ ಸೋಗಲಾಡಿಗಳಿಗೆ ಘೋಷಣೆಗಳು ಒಂದು ಬೇರೆ ಕೇಡು. ಘೋಷಣೆಗಳ ಮರೆಯಲ್ಲಿ ನಿಮ್ಮ ನಾಚಿಕೆಗೆಟ್ಟ ಮುಖಗಳನ್ನು ಅವಿತಿರಿಸಬಹುದು ಎನ್ನುವುದಲ್ಲವೇ ನಿಮ್ಮ ಉಪಾಯ? ಬಂಡವಾಳವಿಲ್ಲದವನಿಗೆ ಕೊನೆಗೆ ಘೋಷಣೆಗಳೆ ಗತಿ. ತಿಳಿಯಿರಿ.

ಸಿನಿಮಾ ಭ್ರಮೆಯ ಮಾಧ್ಯಮ ನಿಜ. ಆದರೆ ಅದು ಪ್ರತಿ ಸೃಷ್ಟಿಯ ಮಟ್ಟವನ್ನು ಮುಟ್ಟಿದರೆ ಮಾತ್ರ ಕಲೆ ಎಂದೆನಿಸಿಕೊಳ್ಳುತ್ತದೆ. ವಾಸ್ತವದ ನಖಗಳು ಪ್ರೇಕ್ಷಕನ ಮನಸ್ಸನ್ನು ಪರಚದೇ ಹೋದರೆ ಸಿನಿಮಾ ಕಲೆಯ ಅಸ್ತಿತ್ವವೇ ಅರ್ಥ ಶೂನ್ಯ! ನಮ್ಮ ಪಕ್ಕದಲ್ಲೇ ಒಂದು ಪುಟ್ಟ ರಾಜ್ಯವಿದೆ. ಹೆಸರು ಕೇರಳ. ಅಲ್ಲೂ ಕೂಡ ಸಿನಿಮಾಗಳನ್ನೂ ತೆಗೆಯುತ್ತಾರೆ.ಅಲ್ಲಿನ ಭರತನ್ ಎಂಬ ನಿರ್ದೇಶಕನ ‘ವೈಶಾಲಿ’ ಎಂಬ ಚಿತ್ರವನ್ನು ನೋಡಿದ ನಾನು ಇಡೀ ಒಂದು ರಾತ್ರಿ ನಿದ್ರಿಸಲಿಲ್ಲ. ಪುರೋಹಿತ ಶಾಹಿಯ ಕುತಂತ್ರಗಳಿಗೆ ಬಲಿಯಾದ ಒಬ್ಬ ದಲಿತ ಹೆಣ್ಣು ಮಗಳ ಕತೆಯದು. ಆ ಚಿತ್ರದಲ್ಲೂ ಫ್ಯಾಂಟಸಿಗಳಿದ್ದವು. ಋಷ್ಯಶೃಂಗ ಮುನಿಯ ಹೋಮಕ್ಕೆ ಆಕಾಶದಿಂದ ಮಳೆಯೇ ಸುರಿದು ಬಿಡುತ್ತದೆ. ಆತನ ಮಂತ್ರದ ಶಕ್ತಿಗೆ ಬೃಹತ್ ಬಂಡೆಗಳೆ ಉರುಳುರುಳಿ ಬೀಳುತ್ತವೆ. ಆದರೆ ಆ ಚಿತ್ರ ಅಂತಿಮವಾಗಿ ಸೂಚಿಸಿದ ಸೂಚನೆ ಮಾತ್ರ ಕಲೆಯ ಕರ್ತವ್ಯದ ಭಾಗವಾಗಿತ್ತು.

ಭ್ರಮೆ ಮತ್ತು ವಾಸ್ತವದ ನಡುವಿನ ಗೆರೆಯನ್ನು ಕಳೆದುಕೊಂಡ ನಿಮಗೆ ಇದನ್ನೆಲ್ಲಾ ಹೇಳುವುದರಿಂದ ಯಾವ ಪ್ರಯೋಜನವೂ ಇಲ್ಲವೆಂಬುದು ನಮಗೆ ಗೊತ್ತು. ಆದರೆ ಸಿನಿಮಾದ ಹೆಸರಿನಲ್ಲಿ ನೀವು ಎಸಗುವ ವಿಕೃತಿಗಳು ಏನನ್ನೆಲ್ಲಾ ಕಳೆದುಹಾಕುತ್ತವೆ ನೋಡಿ. ನಿಮ್ಮ ಚಿತ್ರಗಳು ಜನರ ಅಭಿರುಚಿಯನ್ನು, ಕಲೆಯ ಆತ್ಮಗೌರವವನ್ನೂ ಕಳೆದು ಹಾಕಲಿದೆ.

ಜನರನ್ನು ಕೊಡಂಗಿಗಳಂತೆ ವರ್ತಿಸಲು ಪ್ರೇರೇಪಿಸುವುದೇ ಒಂದು ಸಾಧನೆ ಎಂದು ನೀವು ತಿಳಿದುಕೊಂಡಂತಿದೆ. ನಾಗರಿಕ ಸಮಾಜದ ಕಳಂಕಗಳಂತಿರುವ ನಿಮ್ಮ ಆ ವಿಕೃತ ವೇಷಗಳನ್ನು ಚಿತ್ರದಲ್ಲಿ ಕಾಣಿಸುತ್ತಾ ಧೈರ್ಯವಿದ್ದರೆ ನೀನೂ ಮಾಡು ಎಂದು ಪ್ರೇಕ್ಷಕನಿಗೆ ಸವಾಲೆಸೆಯುವ ನೀವು ನಾಡಿನ ಅಭಿರುಚಿಯನ್ನು ಎತ್ತ ಕಡೆಗೆ ಒಯ್ಯಲಿದ್ದೀರಿ?

ಒಬ್ಬ ಮತಿವಿಕಲನ ಮನೋಭಿತ್ತಿಯಂತಿರುವ ನಿಮ್ಮ ಚಿತ್ರಗಳಿಗೆ ಜನ ಮುಗಿಬಿದ್ದು ಆನಂದಿಸುವುದನ್ನು ಕಂಡು ಇದನ್ನೆಲ್ಲಾ ನಿಮಗೆ ಬರೆಯದಿರಲು ಸಾಧ್ಯವೇ ಆಗಲಿಲ್ಲ. ಉಪೇಂದ್ರಜೀ ನಿಮಗೆ ಶಕ್ತಿಯಿದ್ದರೆ ಜನರಲ್ಲಿ ಒಳ್ಳೆಯ ಅಭಿರುಚಿಯನ್ನು ರೂಪಿಸಿ. ಒಳ್ಳೆಯ ಅಭಿರುಚಿಯಿಂದ ಮಾತ್ರ ಒಳ್ಳೆಯ ವ್ಯಕ್ತಿಗಳು ರೂಪುಗೊಳ್ಳುವುದು; ಒಳ್ಳೆಯ ವ್ಯಕ್ತಿಗಳಿಂದ ಒಳ್ಳೆಯ ಸಮಾಜ.
ನೀವೂ ಕೂಡಾ ದಕ್ಷಿಣ ಕನ್ನಡ ಜಿಲ್ಲೆಯವರೇ ಆದ ಕಾರಣ ನನಗೆ ನೀವು ಅನ್ಯರಲ್ಲ. ಅದಕ್ಕಾಗಿಯೇ ಈ ಪತ್ರ. ನಿಮಗಿದೆಲ್ಲಾ ಇನ್ನಾದರೂ ಅರ್ಥವಾಗುತ್ತದೆಯೆಂದು ನಂಬಲೇ ಉಪೇಂದ್ರ ?

‍ಲೇಖಕರು avadhi

16 August, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading