ಕರ್ನಾಟಕ : ಇಬ್ಭಾಗದ ಮಾತು

ಕರ್ನಾಟಕದ ವಿಭಜನೆಯ ಬಗ್ಗೆ ಕೆಲವರು ಮಾತನಾಡುತ್ತಿರುವುದು ವಿಷಾದನೀಯ. ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರು ಹಲವು ದಶಕಗಳ ಹೋರಾಟದಿಂದ ಒಂದಾಗಿರುವುದು ಚಾರಿತ್ರಿಕ ಸತ್ಯ. ಆಳುವವರು ಎಲ್ಲಾ ಪ್ರದೇಶಗಳನ್ನು ಸಮಾನವಾಗಿ ಅಭಿವೃದ್ಧಿಪಡಿಸದೆ ಇರುವುದು ಈ ಒಡಕಿನ ಅಪಸ್ವರಕ್ಕೆ ಕಾರಣ. ಆದರೆ ಇದಕ್ಕೆ ಪ್ರತ್ಯೇಕತೆಯ ಕೂಗು ಪರಿಹಾರವಲ್ಲ. ಅರ್ಥಶಾಸ್ತ್ರಜ್ಞ ಡಾ. ಡಿ.ಎಂ. ನಂಜುಂಡಪ್ಪ ಅವರ ನೇತೃತ್ವದಲ್ಲಿ ಕರ್ನಾಟಕ ಸರ್ಕಾರ ಒಂದು ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ನೀಡಿದ ಶಿಫಾರಸ್ಸುಗಳನ್ನು ಸರ್ಕಾರ ಪ್ರಾಮಾಣಿಕವಾಗಿ ಕಾಲಮಿತಿಯಲ್ಲಿ ಅನುಷ್ಠಾನಕ್ಕೆ ತರಬೇಕಾಗಿದೆ. ಭೌಗೋಳಿಕವಾಗಿ ಒಂದಾಗಿರುವ ಕನ್ನಡಿಗರು ಭಾವನಾತ್ಮಕವಾಗಿಯೂ ಒಂದಾಗಬೇಕು. ರಾಜ್ಯ ಇಬ್ಭಾಗವಾದರೆ ನಾವು ಇನ್ನಷ್ಟು ದುರ್ಬಲರಾಗುತ್ತೇವೆ. ಇದು ಕನ್ನಡದ ಅಭಿವೃದ್ಧಿಗೆ ಇನ್ನಷ್ಟು ಸಂಚಕಾರ ತರುತ್ತದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಹೈದ್ರಾಬಾದ್ ಕರ್ನಾಟಕದ ಆರು ಜಿಲ್ಲೆಗಳಿಗೆ ಅನ್ವಯವಾಗುವಂತೆ ಸಂವಿಧಾನದ ಕಲಂ 371ಜೆ ಮಾನ್ಯತೆಯನ್ನೂ ನೀಡಿದೆ. ಇದರಿಂದ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಅನುಕೂಲವಾಗುವುದೆಂಬ ವಿಶ್ವಾಸ ನನಗಿದೆ.





0 Comments