ಬಂದೇಸಾಬ ಮೇಗೇರಿ
ರಾಮಾಪುರ
ಅದೇ ಕ್ಲಾಸ್ ಅದೇ ಟೀಚರ್. ಆ ದಿನ ತುಂಬಾ ಬೇಜಾರಾಗಿತ್ತು. ಅದು ಗುರುವಾರ. ಬೇಸರ ತರಿಸುವ ಕ್ಲಾಸ್ ಮುಗಿದಾಗ ಏನೋ ಸ್ವಲ್ಪ ಮನಸ್ಸು ಪ್ರೆಶ್ ಆಯ್ತು. ಮತ್ತೆ ಮೇಷ್ಟ್ರ ಕರೆ ಬಂತು. ಎಲ್ಲ ಬನ್ನಿ ಕಾನ್ಫೆರೆನ್ಸ್ ಹಾಲ್ಗೆ ಅಂತ. ವಿಧಿ ಇಲ್ಲದೆ ಹೋಗಬೇಕಾಯಿತು. ಕುಳಿತಿದ್ದೆ ತಡ. ನಿದ್ರಾ ದೇವತೆಯ ಆಹ್ವಾನ ಬರುವ ಎಲ್ಲ ಲಕ್ಷಣಗಳು ಗೋಚರಿಸತೊಡಗಿದವು. ಅರ ಘಳಿಗೆಯೆಲ್ಲಿಯೇ ನಮ್ಮ ಸಿನೀಯರ್ಸ್ ಕೂಡಾ ಒಳಗೆ ಬರಲು ಪ್ರಾರಂಭಿಸಿದರು. ಇವರೇಕೆ ಬರ್ತಾ ಇರಬಹುದೆಂಬ ಶಂಕೆ ಉಂಟಾಯಿತು. ಓ.. ಹೋ..! ಏನೋ ಸಮ್ಥಿಂಗ್ ಇದೆ ಅಂತ ಅನಿಸಿತು. ಸಿನೀಯರ್ ಮತ್ತು ಜ್ಯುನಿಯರ್ ಕೂಡುವಿಕೆಯಿಂದ ಗದ್ದಲದ ಶಬ್ಧ ಮುಗಿಲು ಮುಟ್ಟಿತ್ತು.

ತಮ್ಮ ತಮ್ಮಲ್ಲೇ ಫ್ರೆಂಡ್ಸ್ ಗ್ರೂಪ್ನಲ್ಲಿ ಸುಖ ದುಃಖ ಹಂಚಿಕೊಳ್ಳುವ ದೃಶ್ಯವು ತಲೆನೋವು ಬರಿಸುವ ಹಾಗಿತ್ತು. ಪ್ರೊಫೆಸರ್ ಜೊತೆ ಅಪರಿಚಿತ ವ್ಯಕ್ತಿಯ ಆಹ್ವಾನವಾಯಿತು. ಆಗ ಕ್ಲಾಸೇ ಸ್ಥಬ್ಧ. ನೆಲಕ್ಕೆ ಸೂಜಿ ಬಿದ್ದರೂ ಸಪ್ಪಳ ಬರುವಷ್ಟು ಸೈಲೆಂಟ್ ಆಗಿತ್ತು. ಚೇರಮನ್ನರು ಪರಿಚಯಿಸಿದ ನಂತರ ತಿಳಿಯಿತು ಆ ಮನುಷ್ಯ ಒಬ್ಬ ಜಾದುಗಾರನಂತ. ಆ ಮೋಡಿ ಮಾಡುವ ಜಾದುಗಾರ ಮುಂಬೈವಾಲಾನಾಗಿದ್ದ. ಬೇಸತ್ತ ಗೆಳೆಯರ ಮನಸ್ಸು ಈಗ ನಿರಾಳ. ಮ್ಯಾಜಿಶೀಯನ್ಗೆ ಅಷ್ಟಾಗಿ ಕನ್ನಡ ಬರುತ್ತಿರಲಿಲ್ಲ. ಆದರೆ ರಾಷ್ಟ್ರೀಯ ಭಾಷೆ ಹಿಂದಿ ಬಲ್ಲವನಾಗಿದ್ದ. ಕಾನ್ಫೆರೆನ್ಸ್ ಹಾಲ್ನಲ್ಲಿ ಆಸೀನರಾದ ಎಲ್ಲರಿಗೂ ತಮ್ಮನ್ನು ಪರಿಚಯ ಮಾಡಿಕೊಂಡ ಗಾರುಡಿಗ, ತನ್ನ ಸಲಕರಣೆಗಳನ್ನು ಒಂದೊಂದಾಗಿ ಹೊರತೆಗೆದ. ಸರ್ವರ ದೃಷ್ಟಿ ಮ್ಯಾಜಿಶೀಯನ್ನ ಮೇಲೆ ಬೀಳತೊಡಗಿತು. ಹಾಳೆಯನ್ನು ಹರಿದು ಚೂರು ಚೂರು ಮಾಡಿ, ತನ್ನ ಪಾಂಡಿತ್ಯದಿಂದಾಗಿ ಅದನ್ನು 100 ರೂ. ನೋಟನ್ನಾಗಿ ಪರಿವರ್ತಿಸಿದ. 3 ತುಂಡಾದ ದಾರಗಳಿಂದ ಒಂದು ಸಂಪೂರ್ಣ ದಾರಕ್ಕೆ ತಂದ, ನಂತರ ನನ್ನ ಗೆಳೆಯನನ್ನು ಮೇಲಕ್ಕೆ ಕರೆದು ಜಾದು ಪ್ರಯೋಗಿಸಿದ. ಅವನ ಮೂಗಿನಿಂದ 10 ಮೀಟರ್ಗೂ ಅಧಿಕ ದಾರವನ್ನು ಹೊರಹಾಕಿದ.
ವಿದ್ಯಾರ್ಥಿಗಳ ಚಪ್ಪಾಳೆ, ಹರ್ಷೋದ್ಗಾರ ತುಂಬಿ ತುಳುಕುತಿತ್ತು. ತದನಂತರ ಮ್ಯಾಜಿಶೀಯನ್ನ ಮೂಲ ಆಶಯ ಹೊರಬಂತು. ಪ್ರತಿಯೊಬ್ಬರು 10 ರಿಂದ 50 ರೂಪಾಯಿಗಳನ್ನು ಅವನಿಗೆ ನೀಡಿದರು. ನಮ್ಮೆಲ್ಲರ ಪರ್ಸ್ ಪಾಕೇಟ್ ಮನಿಗೆ ಕನ್ನ ಹಾಕಲಾಯಿತು. ಬೇಜಾರಾಗಿದ್ದ ಸ್ನೇಹಿತರ ಮನಸ್ಸು ಆಹ್ಲಾದಕರವಾಯಿತು. ಇದೇ ಖುಷಿಯಲ್ಲಿಯೇ ಮುಂದಿನ ಕ್ಲಾಸ್ ಬಂಕ್ ಮಾಡಿ ಕ್ಯಾಂಪಸ್ಸಿಗೆ ಧಾವಿಸಿದೆವು. ಪ್ರೊಫೆಸ್ಸರ್ ಮಾತ್ರ ನಮ್ಮ ಬರುವಿಕೆಯ ಹಾದಿಯನ್ನೇ ಕಾಯುತ್ತಿದ್ದರು.






0 Comments