ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಪಯಣ’ ಕೊನೆಗೆ ಮುಟ್ಟಿದ್ದು ಅಜ್ಜನ ಮನೆಗೆ…

ಫೇಸ್ ಬುಕ್ ನಿಂದ

ವಿಷ್ಣು ಯರಬಾಳು

10 ಗಂಟೆಗೆ ಏರುಬಿಸಿಲು. ಗುಲಾಬಿ ಬಣ್ಣದ ಅಂಗಿಯೊಳಗಿದ್ದ ಬನಿಯನ್, ಕರ್ಚಿಫ್ ತೇವವಾಗಿ ಬಿಸಿಲಿನ ತಾಪವನ್ನು ಆಗಾಗ ತಿಳಿಸುತ್ತಿತ್ತು… ಕಾರ್‌ನೊಳಗಿದ್ದ ಏಸಿ ಗೆಳೆಯನಿಗೆ ತಲೆನೋವು ತರುತ್ತಿತ್ತು, ಇದರಿಂದಲೇ ಏಸಿ ಆನ್ ಆಗಲಿಲ್ಲ. ಕಾರು ನಿಂತಾಗೆಲ್ಲ ಬಿಸಿಲಿನ ಝಳಕ್ಕೆ ಯದುಸಿರು ಜೋರಾಗುತ್ತಿತ್ತು. ಕಾರಿನ ಕಿಟಕಿಯಿಂದ ಬರುತ್ತಿದ್ದ ಗಾಳಿಯನ್ನೇ ಆಸ್ವಾಧಿಸುತ್ತಾ ಕಾಯಕ ಯೋಗಿ ಬಸವಣ್ಣನ ಹಾಡುಗಳಿಗೆ ತಾಳ ಹಾಕುತ್ತಿದ್ದೇವೆ.

30ರಿಂದ 40 ಕಿಲೋ ಮೀಟರ್‌ಗೊಮ್ಮೆ ಕಾರಿಗೆ ಸ್ಟಾಪ್ ಸಿಗುತ್ತಿತ್ತು. ಏಕೆಂದರೆ ಗೆಳೆಯನಿಗೆ (ರಾಜು) ಟೀ ಸ್ಟಾಲ್ ಕಂಡರೆ ಸಾಕು ಜೇಬಿನಲ್ಲಿರುತ್ತಿದ್ದ ಸಿ… ಪ್ಯಾಕ್ ನೆನಪಾಗುತ್ತಿತ್ತು. ಸೇದಿದಾಗಲೇ ಕಾರಿನ ಗಾಲಿಗಳಿಗೆ ಓಟ ಶುರು. ಹೀಗೆ ಕಾರಿನಲ್ಲಿ ‘ಹೊರಟ ಪಯಣ’ಕ್ಕೆ ಮೂರು ದಿನದಿಂದಲೂ ಪ್ಲ್ಯಾನ್ ರೆಡಿ ಆಗುತ್ತಲೇ ಇತ್ತು. ಕಾರ್ ಏರಿದಾಗಲೂ ಪ್ಲ್ಯಾನ್ ರೆಡಿ ಆಗಿರಲಿಲ್ಲ.

ಪ್ಲ್ಯಾನ್ ಹಾಕುತ್ತಲೇ ಶಿವಮೊಗ್ಗದ ದಾರಿ ಹಿಡಿದಿತ್ತು ಕಾರು. ದೊಡ್ಡ ಮರಕಂಡರೆ ಸಾಕು ಫೋಟೋ ಶೂಟ್. ‘ನಮ್ಮನ್ನು ಮೊದಲು ನಾವು ಮೆಚ್ಚಿಕೊಳ್ಳಬೇಕು, ಅಂದಾಗಲೇ ನೆಮ್ಮದಿ ಜೀವನ ಕಾಣಲು ಸಾಧ್ಯ’ ಎಂಬ ವಾಕ್ಯಗಳು ಹೊರಬರುತ್ತಿದ್ದವು. ಒಮ್ಮಿಂದೊಂದಿಗೆ ಬ್ರೇಕಿಂಗ್ ಬರುವಂತೆ ‘ನಾವು ಕಳೆದ ಬಾಲ್ಯದ ದಿನಗಳು’ ನೆನಪಾಗಿ ಗೆಳೆಯನ ಕಾಲೆಳೆಯುತ್ತಿದ್ದೆ. ಜಗವು ಮೆಚ್ಚುವಂತೆ ಸುತ್ತಬೇಕಂತೆ, ಕಂಡದ್ದು, ಕಾಣದ್ದು, ನೋಡಿದ್ದು, ನೋಡದೇ ಇದ್ದದ್ದು ನೆನಪಾದಾಗ ಅಚ್ಚೊತ್ತಬೇಕಂತೆ ಹೀಗೆ ನನ್ನ ‘ಟ್ರಾವೆಲ್ ಪ್ರೀತಿ’ಗೆ ಒಂದು ಕತೆಯೇ ಇದೆ. ಒತ್ತಡಕ್ಕೆ ಔಷಧವಂತು ಸಿಗುತ್ತದೆ. ಸುತ್ತೋಣ ಸುತ್ತಿ ತಿಳಿಸೋಣ.

ಪಯಣ ಹೊರಟಿದ್ದು ಎಲ್ಲಿಗೆಂದು ಅರ್ಧ ದಾರಿ ಸವಿದಾಗಲೂ ತಿಳಿದಿರಲಿಲ್ಲ. ಮಧ್ಯಾಹ್ನ 1.30ಕ್ಕೆ ಬಂದದ್ದು ತೀರ್ಥಹಳ್ಳಿಗೆ ಊಟ ಮಾಡಿ ಮುಂದಿನ ಪಯಣದ ಬಗ್ಗೆ ಯೋಚಿಸೋಣ ಎಂದು ಅಲ್ಲಿದ್ದ ಹೋಟೇಲ್‌ಗೆ ಎಂಟ್ರಿ ಕೊಟ್ವಿ. ಹೊಳೆ ಮೀನೂಟ ಚೆನ್ನಾಗಿದೆ ಅಂದ್ರು ಊಟ ಮಾಡುತ್ತಾ ಎದುರಿನ ಟೇಬಲ್‌ನಲ್ಲಿ ಕುಳಿತಿದ್ದ ವ್ಯಕ್ತಿಯನ್ನು ಮಾತಾಡಿಸಿದ್ವಿ.

ಮಾತು ಮುಂದುವರೆಯಿತು. ಅವರು ಬೆಸ್ಟ್ ಮೂರು ಸ್ಥಳ ಹೇಳಿದ್ರು ಅವರು ಹೇಳಿದ ಎರಡೂ ಸ್ಥಳ ನೋಡಿದ್ದಾಗಿತ್ತು. ಮೂರನೇಯದ್ದನ್ನು ನೋಡಿಲ್ಲವೆಂದು ಹೊರಟ್ವಿ… 2.15ಕ್ಕೆ ಪಯಣ ಸ್ಟಾರ್ಟ್ ಆಯಿತು. ತೀರ್ಥಹಳ್ಳಿಯಿಂದ 16ಕಿ.ಮೀ ಹೋಗಬೇಕಿತ್ತು. ಸಿಡಿಲಿನ ಆರ್ಭಟ ಜೋರಾಗಿ ಆಗೊಮ್ಮೆ ಈಗೊಮ್ಮೆ ಕಾರಿನ ಮೇಲೆ ದುಂಡುಮಲ್ಲಿಗೆ ಚೆಲ್ಲಿದಂತ ಮಳೆ ಅನುಭವ ಆಗುತ್ತಿತ್ತು. ಬಿಸಿಲಿನ ಝಳಕ್ಕೆ ಬೇಸತ್ತಿದ್ದ ಮನಸ್ಸು ಮಲೆನಾಡಿನ ಸೇರಗಿನಲ್ಲಿ ಮಳೆಹನಿ ಕಂಡು ಹೂವಂತೆ ಅರಳಿ ಕೇಕಿ ಹಾಕಿತು.

ಬಹಳ ದಿನಗಳಿಂದ ಹೋಗಬೇಕು ಅಂದುಕೊಂಡಿದ್ದ ಮನೆಗೆ ತಲುಪಿದೇವು, ಅದು ಎಲ್ಲಿಗೆ ಅಂತೀರಾ ರಾಷ್ಟ್ರ ಕವಿ, ವಿಶ್ವ ಮಾನವ ಸಂದೇಶ ನೀಡಿದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪರ ಮನೆಗೆ… ನಿಜಕ್ಕೂ ಅದೊಂದು ಸ್ವರ್ಗ. ‘ಪ್ರಕೃತಿ’ ತಾಯಿ ಇದ್ದಂತೆ ಆಕೆಯ ಪ್ರೀತಿಯಲ್ಲಿ ನಿಸ್ವಾರ್ಥತೆ ಇರುತ್ತೆ ಹಾಗೆಯೇ ಪ್ರಕೃತಿಯಲ್ಲಿಯೂ ನಿಸ್ವಾರ್ಥ ಪ್ರೀತಿ ಸಿಗುತ್ತೆ. ಅದನ್ನು ಪ್ರೀತಿಸಿದರೆ ನೆಮ್ಮದಿ ಸಿಗುತ್ತದೆ, ದ್ವೇಷಿಸಿದರೆ ಮುನಿದುಬಿಡುತ್ತದೆ. ಹಸಿರು ಸೀರೆಯುಟ್ಟ ತಾಯಿಯನ್ನು ಕಣ್ಣಾರೆ ಕಂಡು ನಮಿಸಿದ ಅನುಭವವಾಯಿತು.

ಅಜ್ಜನ ನಡೆದಾಟ, ಧ್ಯಾನ ಮಂದಿರ, ಓದಿನ ಕೋಣೆ, ಗೆಳೆಯರೊಟ್ಟಿಗೆ ಕಳೆದ ಸ್ಥಳ, ಊರಿಗೊಂದು ಮನೆ, ಪುಸ್ತಕ, ನಿಸರ್ಗದೊಡನಾಟ, ಕವಿಶೈಲದಲ್ಲಿ ಕವಿ ಪರಿಚಯಿಸುವ 8ನೇ ತರಗತಿ ಓದಿದ ವಾಮದೇವಪ್ಪರ ಭಾಷಶೈಲಿ ಹೀಗೆ ತಿಳಿದುಕೊಂಡಿದ್ದು ಸ್ವಲ್ಪವೇ, ತಿಳಿದುಕೊಳ್ಳಬೇಕಿರುವುದು ಬಹಳವಿದೆ. ‘ಫ್ಯಾಕ್ಟ್ ಲೈಪ್’ನಲ್ಲಿ ಇನ್ನೂ ತಿಳಿಯೋಣ ಬನ್ನಿ…

‍ಲೇಖಕರು Avadhi

22 April, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading