ಶ್ರೀದೇವಿ ಕಳಸದ ಸುವರ್ಣ ಚಾನಲ್ ನಲ್ಲಿ ಪತ್ರಕರ್ತೆ. ಅದಕ್ಕೂ ಮಿಗಿಲಾಗಿ ಸಂಗೀತದ ಮೂಲಕ ಸಮಾಜವನ್ನು ಅರಿಯುವ ಪ್ರಯತ್ನದಲ್ಲಿರುವವರು. ಇತ್ತೀಚಿಗೆ ನೀನಾಸಂ ನಲ್ಲಿ ನಡೆದ ಸಂಸ್ಕೃತಿ ಶಿಬಿರದ ಬಗ್ಗೆ ಒಂದು ಪುಟ್ಟ ಟಿಪ್ಪಣಿಯನ್ನು ಬರೆದಿದ್ದಾರೆ. ಅದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಚರ್ಚೆಗೆ ಸ್ವಾಗತ-

ಸುಮಾರು ಐದಾರು ವರ್ಷದ ಹಿಂದೆ ವೈದೇಹಿಯವರು ಬರೆದ ಪುಸ್ತಕ ನನ್ನನ್ನು ಅಲ್ಲಿಗೆ ಹೋಗುವಂತೆ ಮಾಡಿತ್ತು. ಸಂಗೀತ ನಿರ್ದೇಶಕ ಭಾಸ್ಕರ್ ಚಂದಾವರ್ಕರ್ ಅವರು ನಡೆಸಿದ ರಸಗ್ರಹಣ ಶಿಬಿರದ ಸಂವಾದವನ್ನು ವೈದೇಹಿಯವರು ಸರಳವಾಗಿ, ಮನಮುಟ್ಟುವಂತೆ ಆ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದೇ ನಾನು ಹೆಗ್ಗೋಡಿಗೆ ಹೋಗಲು ಕಾರಣ.
ಈ ಬಾರಿಯ ನೀನಾಸಂ ಸಂಸ್ಕೃತಿ ಶಿಬಿರದ ವಿಷಯ ‘ಹಿಂದ್ ಸ್ವರಾಜ್’ ನೆನಪಿನಲ್ಲಿ ಮನೋಭೂಮಿಕೆಯಲ್ಲಿ ಸ್ವರಾಜ್ಯ . ಇದರ ಸುತ್ತವೇ ಏಳುದಿನಗಳ ಕಾರ್ಯಕ್ರಮವನ್ನು ಹೆಣೆಯಲಾಗಿತ್ತು. ಸುಮಾರು ಇನ್ನೂರು ಜನ ಶಿಬಿರಾರ್ಥಿಗಳು. ಹೆಚ್ಚಿನ ಪಾಲು ವಿದ್ಯಾರ್ಥಿ-ವಿದ್ಯಾರ್ಥಿನಿಯರೇ. ಉತ್ಸುಕತೆಯಿಂದಲೇ ಎಲ್ಲರೂ ಪಾಲ್ಗೊಳ್ಳುತ್ತಿದ್ದರು. ಸಂಪನ್ಮೂಲ ವ್ಯಕ್ತಿಗಳೂ ಅದ್ಭುತವಾಗಿಯೇ ಮಾತನಾಡುತ್ತಿದ್ದರು. ಸಂವಾದಿಸುತ್ತಿದ್ದರು. ಸಂಜೆ ನಡೆವ ನಾಟಕಗಳಂತೂ ಇನ್ನೂ ಚೆಂದ.
ಆದರೆ ಶಿಬಿರ ಯಾಕೋ ಏಕಮುಖವಾಗಿ ಚಲಿಸುತ್ತಿದೆ ಎಂದೆನಿಸಿದಾಗ ನಾನು ಬೆಂಗಳೂರಿಗೆ ವಾಪಸಾಗಿಬಿಟ್ಟೆ. ಶಿಬಿರದಲ್ಲಿ motivation ಮತ್ತು interaction ಅಷ್ಟೊಂದು ಸಮರ್ಪಕವಾಗಿ ಕಾಣಿಸದಿದ್ದುದು ಇದಕ್ಕೆ ಕಾರಣ. ಹೊಸ ಪೀಳಿಗೆಯ ಗ್ರಹಿಕೆ, ಆಶೋತ್ತರಗಳಿಗೆ ಅಲ್ಲಿ ಜಾಗವಿಲ್ಲವೇನೋ ಎನಿಸಿತು. ಇದ್ದರೂ ಅದು ನನಗೆ ನಿಲುಕಲಿಲ್ಲವೇನೋ.. ಅಥವಾ ಶಿಬಿರದ ಉದ್ದೇಶದ ಬಗ್ಗೆ ಸ್ಪಷ್ಟ ಕಲ್ಪನೆ ನನಗಿರಲಿಲ್ಲವೇನೋ…. ನನ್ನ ನಿರೀಕ್ಷೆಯೇ ಬೇರೆಯದಾಗಿತ್ತೇನೋ…
ಆದರೆ ಮನಸಿನಲ್ಲುಳಿದದ್ದು, ಕೊಟ್ಟ ಕಾಲುಗಂಟೆಯಲ್ಲಿಯೇ ದೇಸಿ ಮಾತು-ನಗೆಯೊಂದಿಗೆ ಕಾಣಿಸಿಕೊಂಡ ವೈದೇಹಿ ಮತ್ತವರ ಕವನಗಳು. ಕೆಲ ನಾಟಕಗಳು. ಹೆಗ್ಗೋಡಿನ ಪ್ರಕೃತಿ.
ಅಷ್ಟೊಂದು ಹಿರಿಕಿರಿಯ ಜೀವಗಳಿದ್ದರೂ ‘ಆಪ್ತತೆ’ ಯಾಕೋ ಕೈಕಟ್ಟಿ ದೂರವೇ ನಿಂತಿತ್ತು.
'ನೀನಾಸಂ' ನಿಂದ ವಾಪಾಸ್ ಬಂದುಬಿಟ್ಟೆ…!
ನಿಮಗೆ ಇವೂ ಇಷ್ಟವಾಗಬಹುದು…





this layout is much much readable and there is still lot of scope for improvement,ofcourse!