ಕೆ ಎಸ್ ನಿಸಾರ್ ಅಹ್ಮದ್ ಗೆ ಪದ್ಮಶ್ರೀ ಸಿಕ್ಕಿದೆ. ನಿಸಾರ್ ಬಗ್ಗೆ ಖುಷಿಪಡಲು ಅವರ ಕಾವ್ಯವೇ ಸಾಕು. ಆದರೆ ನಿಸಾರ್ ಖುಶಿಪಡಲು ಈ ಪದ್ಮಶ್ರೀಯೂ ಬೇಕಿತ್ತು.
ಮನೋರಮಾ ಮನೋರಮಾ
ಸಾಲದೇನೆ ನಿನ್ನ ಹೆಸರೇ
ಮಲಗೋಬದ ಗಮ ಗಮ
ಎಂದ ಕವಿ ತಮ್ಮ ಸುತ್ತೆಲ್ಲಾ ಕಾವ್ಯದ ಗಮ ಗಮ ಹರಡಿದ್ದಾರೆ.
ಅವರು ಕೊಟ್ಟ ಕಾಡುವ ಕವಿತೆಗಳಲ್ಲಿ ಒಂದನ್ನು ನೀಡುತ್ತಿದ್ದೇವೆ.
ನಿಸಾರ್, ಸಂಜೆ ಐದರ ಮಳೆಯಲ್ಲಿ…ಮನಸು ಗಾಂಧಿಬಜಾರು ಆಗಿರುವಾಗ ಭೇಟಿಯಾಗೋಣ. ರಾಮನ್ ಸತ್ತ ಸುದ್ದಿಯನ್ನು ಮತ್ತೆ ಹಂಚಿಕೊಳ್ಳೋಣ.
ಎಲ್ಲ ಮರೆತಿರುವಾಗ
ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನೆನಪೇ;
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆ ಏಕೆ, ಮಧುರ ನೆನಪೇ?
ಕಪ್ಪು ಕಣ್ಣಿನ ನೆಟ್ಟ ನೋಟದರೆಚಣವನ್ನೇ
ತೊಟ್ಟು ಬಾಣದ ಹಾಗೆ ಬಾರದಿರು ನೆನಪೇ;
ಬಿರಿದ ತುಟಿಗಳ ತುಂಬು ನಗೆಯ ಕಾರಣವನ್ನೇ
ಹಿರಿದು ಕೊಲ್ಲಲು ಬಳಿಗೆ ಸಾರದಿರು ನೆನಪೇ
ಸತ್ತ ಭೂತವನೆತ್ತಿ ಹದ್ದಿನಂದದಿ ತಂದು
ನನ್ನ ಮನದಂಗಳಕೆ ಹಾಕದಿರು ನೆನಪೇ;
ಭವ್ಯ ಭವಿತವ್ಯಕ್ಕೆ ಮೊಗ ಮಾಡಿ ನಿಂತಿರುವೆ,
ಬೆನ್ನಲ್ಲೆ ಇರಿಯದಿರು, ಓ! ಚೆನ್ನ ನೆನಪೇ






0 Comments