-ಉದಯಕುಮಾರ ಹಬ್ಬು
ಬೆಳಿಗ್ಗೆ ಎದ್ದು ವಾಕಿಂಗ್ ಮಾಡುವಾಗ
ನಮ್ಮ ಮನೆ ಪುಟ್ಟ ಕಾಡಿನ ನಡುವೆ ಇದೆ
ಆದ್ದರಿಂದ ನಾನಾ ಬಗೆಯ ಹಕ್ಕಿಗಳು
ಅರ್ಥವಾಗದ ಆದರೆ ಸಂತೋಷ ಕೊಡುವ
ವಿವಿಧ ಸಂಗೀತ ಸಂಯೋಜನೆಗಳ ಹಲವು
ರಾಗಗಳನ್ನು ಸಂಗೀತದ ಹಿಮ್ಮೇಳನವನ್ನೂ
ಒಟ್ಟಾಗಿಸಿ ಕೋರಸ್ ನಲ್ಲಿ ಹಾಡಿದರೂ
ಹಾಡದಂತೆ, ಪ್ರತಿಯೊಂದು ಚಿಲಿಪಿಲಿ
ಬೇರೆ ಬೇರೆ ಲಯಬದ್ಧ ಸ್ವರಗಳ ಜೊತೆ
ಲಯಬದ್ಧ ಕವಿತೆಗಳನ್ನು ಕಟ್ಟಿಕೊಡುತ್ತವೆ.
ಬೆಳಿಗ್ಗೆ ಎದ್ದು ಅಡುಗೆ ಮಾಡುವ ಹೆಣ್ಣಿಗೆ
ಆಫೀಸಿಗೆ ಹೋಗಲು ತಯಾರಾಗುತ್ತಿರುವ ಗಂಡಿಗೆ
ಶಾಲೆಗೆ ರೆಡಿಯಾಗುತ್ತಿರುವ ಮಗುವಿಗೆ
ಕೆಲಸಕ್ಕೆ ಹೊರಟಿದ್ದ ಕೂಲಿಕಾರ್ಮಿಕನಿಗೆ
ಈ ನಿನಾದಗಳ ಸ್ವಾದ ಕೇಳಿಸುವುದಿಲ್ಲ
ಅವರಿಗೆ ಆ ರಾಗ ತಾಳ ಲಯದ ಅಗತ್ಯವೂ ಇಲ್ಲ
ಕೆಲಸವಿಲ್ಲದೆ ನಾವು ಕವಿತೆಗಳನ್ನು ರಚಿಸುತ್ತೇವೆಯೆ?
ವಿಮರ್ಶಕನು ಕವಿತೆಗಳನ್ನು ಅಗೆದು ಬಗೆಯುವನೆ?
ಹಾಡುಗಾರ ಹಾಡುವನೆ? ನಟ/ ನಟಿ ನಟಿಸುವರೆ?
ಇದೆಲ್ಲ ಮರೆತ ನಾವು ಹೊಸ ರಾಗ ತಾಳ ಲಯವನ್ನು
ಹುಡುಕಿಟ್ಟಿದ್ದೇವೆ? ಧರ್ಮ ಮತ್ತು ಆಚರಣೆಗಳು
ಮತ್ತು ನಮ್ಮ ನಮ್ಮ ಜಾತಿ ಮತಗಳನ್ನು
ನಮ್ಮ ಅವರ ಇವರ ದೇವರುಗಳನ್ನು.
ಮತ್ತು ಹೊಡೆದಾಟಕ್ಕೆ ಸಬೂಬುಗಳನ್ನು
ಹರಿಸಲು ರಕ್ತವನ್ನು ಖಡ್ಗ, ಬಾಂಬುಗಳನ್ನು
ನಮಗೆ ಅರ್ಥವಾಗದ್ದೇನೆಂದರೆ ಹಕ್ಕಿಗಳು
ಹುಳುಗಳನ್ನು ತಿನ್ನುತ್ತವೆ, ಕಾಳಿಂಗ ಕೇರೆ ಹಾವನ್ನು
ಹುಲಿ ಚಿರತೆಗಳು ಜಿಂಕೆಯನ್ನು
ಮನುಷ್ಯರು ಕಾಡಿನಲ್ಲಿ ಸ್ವತಂತ್ರವಾಗಿ ತಿರುಗಾಡುವ
ಕಾಡು ಕೋಣಗಳನ್ನು
ಯುದ್ಧ ಹಿಂಸೆ ನಮಗೆ ಬೇಕೆ ಬೇಕು
ಜಗದಿ ಶಾಂತಿ ನೆಲಸಲು ಬೇಕೆ ಬೇಕು
ಒಂದಿಷ್ಟು ಜನ ಬಲಿಯಾಗಲೇಬೇಕು ಎಂದು
ಹಿಂಸೆಯಲ್ಲೆ ಖುಶಿ ಪಡುವ ಇವರು
ಕವಿತೆ ಕಟ್ಟುವುದು ಯಾವಾಗ?
ಹಾಡನ್ನು ಹಾಡುವುದು ಯಾವಾಗ?
ಅಲ್ಲವೆ? ಯೋಚಿಸಿ ಯುದ್ಧ ಅನಿವಾರ್ಯ
ಆಗಿಸಿದವರು ಯಾರು? ಯಾಕೆ?






0 Comments