ನರೇಂದ್ರ ಮೋದಿ ಮತ್ತು ಪಾದರಸ
ನಾಗೇಶ್ ಹೆಗಡೆ
ಮೋದಿಯವರ ವಾಗ್ಝರಿ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ‘He is probably better than me’ ಎಂದು ಮೊನ್ನೆ ರಾಹುಲ್ ಗಾಂಧಿ ಹೇಳಿದಾಗ ‘ಪ್ರಾಬಬ್ಲೀ’ ಎಂಬ ಪದವನ್ನು ಏಕೆ ಸೇರಿಸಿದರೊ! ‘He is certainly ನಿಸ್ಸಂಶಯವಾಗಿಯೂ better than me’ ಎನ್ನಬೇಕಿತ್ತು. ಅಷ್ಟೂ ಪ್ರಾಮಾಣಿಕತೆ ಬೇಡವೆ?
ಇಂದು ಸರ್ದಾರ್ ಸರೋವರ ಉದ್ಘಾಟನೆ ಸಂದರ್ಭದ ಮೋದಿಯವರ ಮಾತಿನ ಭೋರ್ಗರೆತ ಅಣೆಕಟ್ಟೆಯಿಂದ ಧುಮುಕುವ ನೀರಿಗಿಂತ ರಭಸದ್ದಾಗಿತ್ತು.
”ಇಲ್ಲಿ ಸಂಚಯವಾಗಿರುವುದು ನೀರಲ್ಲ! … ಪಾದರಸ! ಪಾದರಸದ ಸ್ಪರ್ಶದಿಂದ ಕಬ್ಬಿಣವೂ ಚಿನ್ನವಾಗುವ ಹಾಗೆ, ಈ ನೀರು ಹೋದಲ್ಲೆಲ್ಲ ಚಿನ್ನ… ಚಿನ್ನವೇ ಉದ್ಭವಿಸುತ್ತದೆ…!!”
ಎಂದು ಅವರು ಘಂಟಾಘೋಷ ಹೇಳುತ್ತಿದ್ದಾಗ ಅವರಲ್ಲಿ ಮಡುಗಟ್ಟಿದ್ದ ಮೂಢನಂಬಿಕೆಯ ಕಟ್ಟೆಯೊಡೆದು ಧುಮ್ಮಿಕ್ಕಿತು.
ಪಾದರಸದ ಸ್ಪರ್ಶದಿಂದ ಲೋಹವನ್ನು ಚಿನ್ನವನ್ನಾಗಿ ಮಾಡಬಹುದು ಎಂಬುದು ಅಪ್ಪಟ 24 ಕ್ಯಾರಟ್ ಸುಳ್ಳು.
ಆ ಭ್ರಮೆಗೆ ಸಿಕ್ಕು ಹಿಂದೆ ಎಷ್ಟೊಂದು ಮಂದಿ ಚಿನ್ನ ಮಾಡಲು ಹೋಗಿ ತಮ್ಮ ಜೀವಮಾನವನ್ನೇ ಹಾಳುಮಾಡಿಕೊಂಡಿದ್ದಾರೆ. ಪಾದರಸವನ್ನು ಸ್ಪರ್ಶಮಣಿ, ಪಾರಸ್ಮಣಿ ಎಂದೆಲ್ಲ ವರ್ಣಿಸಿ (ಗುಜರಾತ್ ರಾಜಸ್ತಾನದಲ್ಲಿ ಅನೇಕರು ತಮ್ಮ ಮಕ್ಕಳಿಗೆ ಪಾದರಸದ ಹೆಸರನ್ನೇ ಇಡುತ್ತಿದ್ದರು. ಉದಾ: ಪಾರಸ್ಮಲ್) ಅದಕ್ಕೆ ದೈವೀಸ್ವರೂಪ ನೀಡಲಾಗಿದೆ.
ವಾಸ್ತವದಲ್ಲಿ ಪಾದರಸ ತೀರ ವಿಷಕಾರಿ ವಸ್ತು.
ಅದರ ತುಸು ಪ್ರಮಾಣ ನರಮಂಡಲಕ್ಕೆ ಹೋದರೆ ಹುಚ್ಚು ಹಿಡಿಯುತ್ತದೆ. ಈಗಂತೂ ಥರ್ಮಾಮೀಟರಿನಲ್ಲೂ ಅದನ್ನು ಬಳಸದಂತೆ ನಿಷೇಧ ಹಾಕಲಾಗಿದೆ. ಆಯುರ್ವೇದದಲ್ಲಿ ಪಾದರಸ ಭಸ್ಮವನ್ನು ಬಳಸುತ್ತಾರೆಂಬ ಕಾರಣಕ್ಕೆ ಪಶ್ಚಿಮದ ದೇಶಗಳಲ್ಲಿ ಅಂಥ ಔಷಧಗಳಿಗೂ ನಿಷೇಧ ಹಾಕಲಾಗಿದೆ.
ಪ್ರಧಾನಿಯವರು ಮತ್ತೆ ಅದೇ ಮೂಢನಂಬಿಕೆಯನ್ನು ಬಿತ್ತುವುದೆ?
ಗಣೇಶನ ಸೃಷ್ಟಿಯ ಹಿಂದೆ ಪ್ಲಾಸ್ಟಿಕ್ ಸರ್ಜರಿಯ ಪರಿಕಲ್ಪನೆ ಇತ್ತು, ಗಾಂಧಾರಿಯ ಕಾಲದಲ್ಲಿ ಪ್ರಣಾಳ ಶಿಶುಗಳ ಬಗ್ಗೆ ಗೊತ್ತಿತ್ತು ಎಂದೆಲ್ಲ ಹೇಳಿ ವಿವಾದಕ್ಕೆ ಸಿಲುಕಿದ ಮೋದಿಯವರು ಈಗ ಅಣೆಕಟ್ಟಿನ ನೀರನ್ನು ಪಾದರಸ (ವಿಷ)ಕ್ಕೆ ಹೋಲಿಸಿ ಭರ್ಜರಿ ಚಪ್ಪಾಳೆ ಗಿಟ್ಟಿಸಿದರು.
Tamma ondondu baravanigeyu eshtondu
Tiluvalikeyannu taraballadu! Habba sir
Nimma barahagala odu