
ಜಿ ಎನ್ ನಾಗರಾಜ್
ದೇವನೂರು ಮಹಾದೇವರವರೊಡನೆ ಮೊನ್ನೆ ಮೈಸೂರಿನ ರಂಗಾಯಣದ ಕ್ಯಾಂಟೀನಿನಲ್ಲಿ ಮಾತನಾಡುತ್ತಿರುವಾಗ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಎರಗಿರುವ ಅಪಾಯವನ್ನು ತೊಡೆಯಲು ಬಿಜೆಪಿಯ ಸರ್ವಾಧಿಕಾರದ ಮೂಲವಾದ ದ್ವೇಷ, ಭ್ರಮೆ, ಸುಳ್ಳುಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು. ಈ ಬಗ್ಗೆ ಈಗಲೇ ಏನೂ ಹೇಳುವುದು ಬೇಡ ಯೋಚನೆ ಮಾಡಿ ಎಂದರು. ಅದನ್ನು ಕೇಳಿಸಿಕೊಂಡ ನಮ್ಮ ಮೇಜಿನ ಸುತ್ತ ಇದ್ದ ನಾಲ್ಕಾರು ಜನರ ಮನಸ್ಸಿನಲ್ಲಿಯೂ ಈ ವಿಚಾರ ಮೊಳಕೆಯೊಡೆಯುತ್ತಿರಬೇಕು.
ನನ್ನ ಮನಸ್ಸಿನಲ್ಲಿ ಈ ಮೂರು ಪದಗಳು ಬಿಂಬಿಸುವ ಮನೋ “ವ್ಯಾಪಾರ “ ಕ್ಕೆ ಸಂಬಂಧಿಸಿದ ವಿಷಯಗಳನ್ನು ಆಳುವ ಜನರು ಹೇಗೆಲ್ಲಾ ತಮ್ಮ ಅಧಿಕಾರಾಕಾಂಕ್ಷೆಗೆ , ದುರ್ಲಾಭಕ್ಕೆ ಬಳಸಿಕೊಂಡಿದ್ದಾರೆ ಎಂಬುದು ತೆರೆದುಕೊಳ್ಳುತ್ತಾ ಹೋಯಿತು.
ಈ ಸುಳ್ಳುಗಳ ಸುರಿಮಳೆ, ಅದರ ಮೇಲೆ ಭ್ರಮೆಯ ಬೆಳೆ ಸಂವಿಧಾವನ್ನು ಅಂಗೀಕರಿಸಿದ ಮೊದಲ ವರ್ಷಗಳಿಂದಲೇ ಆರಂಭವಾಯಿತು. ಸಂವಿಧಾನದಲ್ಲಿ ಅಂಬೇಡ್ಕರ್ ರವರು ಮತ್ತು ಕೆಲ ಪ್ರಜಾಸತ್ತಾತ್ಮಕ ಮನಸ್ಸಿನವರು ಸೇರಿಸಿದ ಹೊಸ ಮೌಲ್ಯಗಳಿಗೆ ತಿಲಾಂಜಲಿ ಕೊಡಲಾಯಿತು. ಅದಕ್ಕೆ ಬಹು ಮುಖ್ಯ ಸಾಕ್ಷಿ – ಅಸ್ಪೃಶ್ಯತೆಯ ನಿಷೇಧ , 1950 ರಲ್ಲಿಯೇ ನಿಷೇಧಗೊಂಡಿದ್ದರೂ ಇಂದೂ ಕೂಡ ದೇಶದ ಯಾವ ಮೂಲೆಯಲ್ಲಿಯೂ ನಿಷೇಧವಾಗದ ಅಸ್ಪೃಶ್ಯತೆ . ಸಂವಿಧಾನದ ರಕ್ಷಕರಾದ ರಾಷ್ಟ್ರ ಪತಿ, ಮೂರು ಮುಖ್ಯ ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಲ್ಲಿ ನಿಷೇಧವಾಗದ ಅಸ್ಪೃಶ್ಯತೆ. ಸಂಸದರು, ಶಾಸಕರು, ಪ್ರಧಾನ ಮಂತ್ರಿ, ಮಂತ್ರಿಮಂಡಲ ಕಾರ್ಯಾಂಗ, ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರು, ಇಡೀ ನ್ಯಾಯಾಂಗದಲ್ಲಿ ನಿಷೇಧವಾಗದ ಅಸ್ಪೃಶ್ಯತೆ ಮತ್ತು ಮೂಡದ ಸಮಾನತೆ, ಭ್ರಾತೃ ಭಾವ. ಇದಕ್ಕಿಂತ ದೊಡ್ಡ ಸುಳ್ಳು ಬೇಕೇ. ಇದು ಮೂಡಿಸಿದ ಮಹಾಭ್ರಮೆ. ಇಂದು ನಮ್ಮ ದೇಶವನ್ನು ಕಾಡುತ್ತಿರುವ ದ್ವೇಷದ ರಾಜಕೀಯಕ್ಕೆ ಮೀಸಲಾತಿ ದ್ವೇಷದ ಮೂಲಕ ಈ ಸುಳ್ಳು ಎಷ್ಟು ದೊಡ್ಡ ಕಾಣಿಕೆ ನೀಡಿದೆ ಎಂಬ ಯೋಚನೆ ನನ್ನ ಮನಸ್ಸನೆಲ್ಲಾ ಅವರಿಸಿದೆ.
ಇನ್ನು ಈ ಎಪ್ಪತ್ತು ವರ್ಷಗಳಲ್ಲಿ ಅಧಿಕಾರ ನಡೆಸಿದವರು ಬಿತ್ತಿದ ಸುಳ್ಳುಗಳ ಸರಮಾಲೆ ಎಷ್ಟೋ ! ಮೂಡಿಸಿದ ಭ್ರಮೆಗಳೆಷ್ಟೋ !
1952 ರ ಮೊದಲ ಚುನಾವಣೆಯಲ್ಲಿಯೇ ‘ನಯಾಜೀವನ್ ‘ ಎಂಬುದು ಚುನಾವಣೆಯ ಪ್ರಧಾನ ಘೋಷಣೆ ಮತ್ತು ಸುಳ್ಳು. 1957 ರ ಚುನಾವಣೆಯಲ್ಲಿ ಸಮಾಜವಾದ ಎಂಬುದರ ಬಗ್ಗೆ ಏನೂ ಗೊತ್ತಿಲ್ಲದ ಜನರ ಮುಂದೆ ಸಮಾಜವಾದದ ಗಂಧವೇ ಇಲ್ಲದ ‘ ಸಮಾಜವಾದೀ ರೀತಿಯ ಸಮಾಜ’ ನಮ್ಮ ಗುರಿ ಎಂದು ಮಹಾ ಸುಳ್ಳು ಹೇಳಿದರು.. ಜನರನ್ನು ಮಹಾಭ್ರಮೆಯಲ್ಲಿ ಮುಳುಗಿಸಿ ಗೆದ್ದರು. 1970 ರ ‘ಗರೀಬಿ ಹಠಾವೋ’ ಎಂದು ಹೇಳುತ್ತಲೇ ಗರೀಬಿಯನ್ನು ಬೆಳೆಸಿದ ಎಂಬ ಪ್ರಸಿದ್ಧ ಸುಳ್ಳಿನ ಬಗ್ಗೆ ಈಗಿನ ತಲೆಮಾರಿಗೆ ನೆನಪಿದೆ. ಇದೇ ನೆಪವನ್ನು ಬಳಸಿ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಅಲುಗಾಡಿಸಿದ ತುರ್ತು ಪರಿಸ್ಥಿತಿಯ ಪಾಠಗಳನ್ನು ದೇಶ ಮರೆಯಲು ಸಾಧ್ಯವೇ ಇಲ್ಲ.
1977 ರ ಚುನಾವಣೆಯಲ್ಲಿ ಪ್ರಜಾಪ್ರಭುತ್ವವನ್ನು ಮತ್ತೆ ಅರಳಿಸುವ ಮತ್ತು ಭ್ರಷ್ಟಾಚಾರ ತೊಲಗಿಸುವ ಭರವಸೆ ಇತ್ತು ಅಧಿಕಾರಕ್ಕೆ ಬಂದವರು ಹಿಂದಿನ ಸರ್ವಾಧಿಕಾರದ ಕೆಲ ಸರಪಳಿಗಳನ್ನು ಕಡಿದು ಹಾಕುತ್ತಲೇ ಇಂದಿನ ಪ್ರಜಾಪ್ರಭುತ್ವ ನಾಶದ ಬೀಜಗಳನ್ನು ಬಿತ್ತನೆ ಮಾಡಿದರು
1991 ರ ನಂತರವಂತೂ ಸುಳ್ಳುಗಳು ಮಹಾ ಸುಳ್ಳುಗಳಾದವು. ಈ ಜಾಗತೀಕರಣ ಕಾಲದ ಅಭಿವೃದ್ಧಿಯ ಮಹಾಸುಳ್ಳುಗಳ ಸುಳ್ಳುತನವನ್ನು ಮುಚ್ಚಿಬಿಡಲು ಸುಳ್ಳುಗಳ ಆಧಾರದ ಮೇಲೆ ಬೆಳೆಸಿದ ದ್ವೇಷವನ್ನುಜೊತೆಗೆ ಸೇರಿಸಿಕೊಳ್ಳಲಾಯಿತು. . ಅಂಧಿನ ಎರಡು ಬೃಹತ್ ಸುಳ್ಳುಗಳು-ಬಾಬ್ರಿ ಮಸೀದಿ ನಾಶ ಮಾಡುವುದಿಲ್ಲವೆಂದು ಸುಪ್ರೀಂ ಕೋರ್ಟಿಗೆ ಬರೆದುಕೊಟ್ಟದ್ದು, ಬಾಬ್ರಿ ಮಸೀದಿ ರಕ್ಷಣೆ ಮಾಡುತ್ತೇವೆಂದು ಸರ್ಕಾರ ನಡೆಸುತ್ತಿದ್ದವರು ದೇಶಕ್ಕೆ ಅಭಯ ನೀಡಿದ್ದು . ಅನೇಕ ಸಣ್ಣ, ದೊಡ್ಡ ಸುಳ್ಳುಗಳು ಮತ್ತು ಈ ಬೃಹತ್ ಸುಳ್ಳುಗಳ ಗೊಬ್ಬರದ ಮೇಲೆ ಬೆಳೆದ ದ್ವೇಷದ ವಿಫುಲ ಬೆಳೆ. ಅದರ ವಿಷಫಲವನ್ನು ಇಂದು ನಾವೆಲ್ಲಾ ಅನುಭವಿಸುತ್ತಿದ್ದೇವೆ.
ಹೀಗೆ ಮಹಾ ಸುಳ್ಳುಗಳು ಬೃಹತ್ ಸುಳ್ಳುಗಳಾದವು. ಇಂದು ಸುಳ್ಳನ್ನೇ ಬಿತ್ತಿ ಭ್ರಮೆಯ ಬೆಳೆ ಬೆಳೆದು ದ್ವೇಷದ ಫಲವನ್ನು ಪಡೆಯುತ್ತಿದ್ದೇವೆ. ಈ ತ್ರಿವಳಿ ನಮ್ಮ ಬದುಕನ್ನು , ನಮ್ಮ ಸ್ವಾತಂತ್ರ್ಯವನ್ನು, ಅದರ ಫಲವಾದ ಪ್ರಜಾಪ್ರಭುತ್ವವನ್ನು , ಅದಕ್ಕೆ ಆಧಾರವಾದ ಸಂವಿಧಾನವನ್ನು ನಾಶಗೊಳಿಸತೊಡಗಿದೆ. ಈ ಸಂದರ್ಭದಲ್ಲಿ ತಕ್ಷಣದಲ್ಲಿ ಬೃಹತ್ ಸುಳ್ಳು , ಬೃಹತ್ ಭ್ರಮೆ , ಬೃಹತ್ ದ್ವೇಷಗಳ ಮೇಲೆ ನಮ್ಮ ಗಮನವೆಲ್ಲಾ ಕೇಂದ್ರೀಕರಣಗೊಂಡಿದೆ. ಇವುಗಳನ್ನು ತೊಡೆಯುವುದೇ ನಮ್ಮ ತಕ್ಷಣದ ಗುರಿ . ಆದರೆ ಈ ಬೃಹತ್ ಗಳು ತಂತಾನೆ ಉದ್ಭವಿಸಿದುವಲ್ಲ . ಸ್ವಾತಂತ್ರ್ಯಾನಂತರದ 70 ವರ್ಷಗಳ ಸುಳ್ಳು, ಭ್ರಮೆಗಳ ಬೆಳೆಯ ಫಲ ಎಂಬುದನ್ನು ಮರೆಯದಿರೋಣ.






0 Comments