ಕವಿ, ಪ್ರಬಂಧಕಾರ ಕೃಷ್ಣಮೂರ್ತಿ ಬಿಳಿಗೆರೆ ತಮ್ಮ ಮತ್ತೊಂದು ಹೊಸ ಪುಸ್ತಕದ ಮೂಲಕ ಓದುಗರ ಮುಂದೆ ನಿಂತಿದ್ದಾರೆ. ತುಮಕೂರು ಜಿಲ್ಲೆ ತಿಪಟೂರಿನವರಾದ ಕೃಷ್ಣಮೂರ್ತಿ ಬಿಳಿಗೆರೆ, ದೇಸಿ ಸಾಧ್ಯತೆಯ ಕನಸುಗಾರ. ಮಳೆ ನೀರ ಕೊಯ್ಲಿನ ಆಂದೋಲನ ಮತ್ತು ಸಹಜ ಕೃಷಿ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಹೊಸ ಪೀಳಿಗೆಯ ಹುಡುಗರನ್ನು ಚರಿತ್ರೆ ಮತ್ತು ಸಂಸ್ಕೃತಿಯ ಓದಿಗೆ ಹಚ್ಚುವ ಕೆಲಸದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಇದನ್ನು ಒಂದು ಚಳವಳಿಯೇ ಆಗಿ ರೂಪಿಸಬೇಕೆಂದೂ ಚಿಂತಿಸುತ್ತಿದ್ದಾರೆ. ಮಕ್ಕಳಿಗಾಗಿ ಹಾಡು, ನಾಟಕ ಬರೆದಿದ್ದಾರೆ. ರಂಗಚಟುವಟಿಕೆಯಲ್ಲಿದ್ದಾರೆ. “ಕಣ್ಣಾಮುಚ್ಚಾಲೆ ಮಕ್ಕಳ ಗುಂಪು” ಮಕ್ಕಳಿಗಾಗಿಯೇ ಇವರು ಕಟ್ಟಿರುವ ಸಂಘಟನೆ. ತತ್ವಪದ ಮತ್ತು ನೀರಪದಗಳನ್ನು ಹಾಡುತ್ತಾ ಊರು ಸುತ್ತುವ ಕಾಯಕವನ್ನೂ ಕಟ್ಟಿಕೊಂಡವರು ಕೃಷ್ಣಮೂರ್ತಿ.
ಕೃಷ್ಣಮೂರ್ತಿಯವರ ಹೊಸ ಕೃತಿ “ಬಿಸ್ಲು ಬಾಳೇಹಣ್ಣು ಮತ್ತು ಇತರ ಪ್ರಬಂಧಗಳು“. ನಮ್ಮ ಹಿರಿಯರು ಕಟ್ಟಿಕೊಂಡು ಬಂದಿದ್ದ ಊರುಗಳು ಇಂದಿನ ಜಾಗತೀಕರಣದ ರೋಗಕ್ಕೆ ಹೇಗೆ ಬಲಿಯಾಗುತ್ತಿವೆ, ನೆರಳು ಕೊಡುತ್ತ, ಹಣ್ಣು ಕೊಡುತ್ತ ಕಣ್ತುಂಬಿರುತ್ತಿದ್ದ ಮರಗಳ ಬಳಗ ನಮ್ಮದೇ ದುರಾಕ್ರಮಣದಿಂದಾಗಿ ಏನಾಗತೊಡಗಿದೆ, ಹೈಬ್ರೀಡ್ ತಳಿ ಸಂಸ್ಕೃತಿ ಸಹಜತೆಯೆಂಬುದನ್ನು ಹೇಗೆ ಕೊಚ್ಚಿಹಾಕಿದೆ ಇತ್ಯಾದಿ ತಲ್ಲಣಗಳ ಕಥೆಗಳನ್ನು ಕೃಷ್ಣಮೂರ್ತಿ ಈ ಪ್ರಬಂಧಗಳಲ್ಲಿ ಹೇಳುತ್ತಾರೆ.
ಪುಸ್ತಕದ ಬೆನ್ನುಡಿಯಲ್ಲಿ ಬಿ ಜಿ ಮಂಜುಳಾದೇವಿ ಹೇಳಿರುವ ಹಾಗೆ, ಬಲಿಷ್ಠ ಜಗತ್ತು ಏಕಪಕ್ಷೀಯವಾಗಿ ತೋಡುತ್ತಿರುವ ಖೆಡ್ಡರೂಪಿ ಅಗ್ನಿಕುಂಡಗಳಲ್ಲಿ ಸ್ಥಳೀಯ ಚರಿತ್ರೆ ಮತ್ತು ಹಳ್ಳಿಯ ತತ್ವಜ್ಞಾನಗಳು ಕರಗಿ ಹೋಗದಂತೆ ತಡೆಯುವ ಆಶಯವುಳ್ಳ ಪ್ರಬಂಧಗಳು ಈ ಪುಸ್ತಕದಲ್ಲಿ ಜಾತ್ರೆಯಂತೆ ನೆರೆದಿವೆ.
ಪುಸ್ತಕದಲ್ಲಿನ ಒಂದು ಪುಟ್ಟ ಪ್ರಬಂಧ ಅವಧಿಯ ಓದುಗರಿಗಾಗಿ. ಒಂದು ಸಡಗರ ಮತ್ತು ಜೀವನ ಸಾಧ್ಯತೆಯೇ ಎಂಬಂತಿದ್ದ ನೇರಳೆ ಹಣ್ಣು ಹೆಕ್ಕುವ ಚಿತ್ರವನ್ನು ಪ್ರಬಂಧಕಾರ ಇಲ್ಲಿ ತಮ್ಮ ನೆನಪಿನ ಬುತ್ತಿಯಿಂದ ತೆಗೆದಿರಿಸಿದ್ದಾರೆ. ತೀವ್ರವಾಗಿ ಕಾಡುವ ನೋವೊಂದು ಇಲ್ಲಿ ಹೌದೊ ಅಲ್ಲವೊ ಅನ್ನುವ ಹಾಗೆ ಇಣುಕಿದೆ. ಈ ದೇಸಿ ಕನಸುಗಾರನ ಕಣ್ಣಲ್ಲಿ ಉಳಿದುಕೊಂಡಿರುವ ಇಂಥದೇ ಇನ್ನೆಷ್ಟೋ ಚಿತ್ರಗಳ ಪ್ರಾತಿನಿಧ್ಯ ವಹಿಸುತ್ತಿರುವ ಹಾಗೆ ಕಾಣಿಸುತ್ತದೆ ಈ ನೇರಳೆ ಸಾಲು.






0 Comments