ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾರಾ ಅಬೂಬಕ್ಕರ್ ಕಾದಂಬರಿ ʼಸಹನಾʼ

ದೀಪಾ ಗೋನಾಳ

Varadendra Kurdi ಸರ್ ನೀವು ಕೇಳಿದಿರಿ ಪುಸ್ತಕ ಓದಿ ಆದಮೇಲೆ ಅದರ ಕುರಿತು ವಿಮರ್ಶೆ ಬರೆಯಿರಿ ಅಂತ, ನಿಜಕ್ಕೂ ಆ ಪುಸ್ತಕದ ವಿಮರ್ಶೆ ಬರೆಯಲು ನನಗೆ ಇಗೀರುವ ನೋವುಗಳು, ಅನುಭವ‌ ಮತ್ತು ವಯಸ್ಸು ಯಾತಕ್ಕೂ ಸಾಲದು. ಅದೊಂದು ಸುದೀರ್ಘ ನೋವಿನ‌ ಕಾದಂಬರಿ ನೋವನ್ನೆ ತುಂಬಿ ನೋವನ್ನೆ ಬಸಿಯುವ ಅಕ್ಷರಗಳು.‌ ನೋವು ಯಾವುದೋ ಗಾಯದ್ದೊ, ಖಾಯಿಲಿಯದೋ, ಯುದ್ಧದ್ದೊ, ಸತ್ತದ್ದೊ, ಸೋತಿದ್ದೊ, ಆಗಿದ್ದಿದ್ದರೆ ಪುಸ್ತಕದ ಕೊನೆ‌ ಪುಟ ಮುಚ್ಚುತ್ತಿದ್ದಂತೆ ಒಂದು ಕಿರು ಟಿಪ್ಪಣಿ ಬರೆದು ನಾನು ಡೈರಿ ಹಾಳೆಗೆ ವಿರಾಮ ಕೊಟ್ಟು ಬಿಡುತ್ತಿದ್ದೆ. ಇದು ಸಂಪೂರ್ಣ ಹೆಣ್ಣಿನ ನೋವು ಹೆಣ್ಣಾದರೂ ಎಂತವಳು ಹದಿಮೂರ ವರ್ಷದ ಹಸುಳೆ ಹದಿನಾರಕ್ಕೆಲ್ಲ ಮೂರು ಮಕ್ಕಳ ತಾಯಿಯಾಗಿ ದೈಹಿಕ ಅಸ್ವಸ್ಥಳಾಗಿ ಹಾಸಿಗೆ ಹಿಡಿದಾಗ ಎರಡನೇ ಮದುವೆಯಾಗಿ ಬರುವ ಗಂಡಸು!? ಅಲ್ಲ ಗಂಡ!!! ಅವನು ಹೊಸ ಹೆಂಡತಿಯೊಡನೆ ಕೋಣೆ‌ ಸೇರಿದಾಗ ಇವಳು ನಾನು ಸಾಯುವವರೆಗಾಗದರೂ ಕಾಯಬಾರದಿತ್ತೆ ಎಂದು ನರಳುವ ನೋವನ್ನ ಹ್ಯಾಗಾದರೂ ವಿಮರ್ಶಿಸಲಿ.

ಅವಳ ಬದುಕಿಗಿದ್ದದ್ದು ಮೂರೆ ಮೂರು ಕನಸುಗಳಿಗಾಗಿ, ಜರಿ ಲಂಗ, ಅಮ್ಮಿಯನ್ನ ಕೇಳಿದಾಗ ಹೇಳಿದ್ದಿಷ್ಟು ನಮ್ಮಲ್ಲಿ ಮದುವೆಗೆ ಗಂಡ ಜರಿ‌ ಸೀರೆ ಕೊಡಿಸ್ತಾನೆ ಆಗ ಉಡುವಂತೆ, ಎರಡನೇ ಆಸೆ ಒಂದು ಆಡಿನ ಮರಿ ಸಾಕಬೇಕು, ಗಂಡನ ಮನೆಯಲ್ಲಿ ದೊಡ್ಡ ಹಿತ್ತಲಿರುತ್ತೆ ಅಲ್ಲಿ ಸಾಕುವಂತೆ ಅಮ್ಮಿಯ ಊವಾಚ, ಇನ್ನೊಂದು ಉಳಿತಲ್ಲಾ, ರೈಲು ಗಾಡಿಯಲಿ ಉಳ್ಳಾಲದ ದರ್ಗಾಕ್ಕೆ ಹೋಗಬೇಕು. ಅದನ್ನು ಮದುವೆಯಾದ ಮೇಲೆ‌ ಗಂಡನ‌ ಜತೆಗೆ ಹೋಗುವಿಯಂತೆ.

ಅಬ್ಬಾ ಎಂತಾ ದೊಡ್ಡ ಕನಸಿವೆಲ್ಲಾ. ಗಂಡನ ಮನೆಯಲ್ಲಿ ಬೀಡಿ ಕಟ್ಟಿ, ಮೂರು ಮಕ್ಕಳನ್ನ ಹೆತ್ತು, ಡಿವೋರ್ಸ ಆದ ನಾದಿನಿ ಮತ್ತವಳ ಮಕ್ಕಳ ಚಾಕರಿ ಮಾಡಿ ಅತ್ತೆಯ ಕೆಂಗಣ್ಣಿಗೆ ಅಂಜುತ್ತಲೇ ಬದುಕಿದ ಪುಟ್ಟ ನಾಯಕಿ ಇವಳು. ಮದುವೆಯಾದ ಮೇಲೆ ಏನೇನಾಗುತ್ತೆ ಯಾಕಾಗುತ್ತೆ ಮಕ್ಕಳು ಹೆಂಗಾಗ್ತವೆ ಅಂತಾನೇ ಗೊತ್ತಿಲ್ಲದ ಹುಡುಗಿ.

ಹದಿನಾರು ವರ್ಷಕ್ಕೆ ಮತ್ತೆ ಅಮ್ಮನ ಮಡಿಲಿಗೆ ಅದು ರೋಗಗ್ರಸ್ತಳಾಗಿ‌ ಸಾವಿನ ದವಡೆಯಲ್ಲಿ‌. ಹೀಗೆ ಬಂದು ಬಿದ್ದು ಮತ್ತೆ ಎದ್ದು ಒಂದು ಹೆಣ್ಣು ಕೂಸನ್ನು ಬೆನ್ನಿಗೆ ಕಟ್ಟಿಕೊಂಡು ತಾನು ಕಂಡ ಕನಸೆಲ್ಲ ನನಸು ಮಾಡಿಕೊಂಡು ಬದುಕು ಕಟ್ಟಿಕೊಳ್ಳುತ್ತಿರುವಾಗಲೇ ಮತ್ತೆ ಹಠಾತ್ತನೇ ಎದುರಾಗುತ್ತಾನೆ‌‌ ಗಂಡನೆಂಬ ಖಳನಾಯಕ. ಕಟ್ಟು ಮಸ್ತಾದ ಮೈ ಕೈ ತುಂಬಿಕೊಂಡ ಕೆಂಪು ಹೆಣ್ಣಾಗಿದ್ದಾಳೆ ಈಗಾಕೆ. ಸ್ವಾತಂತ್ರ್ಯ ಮತ್ತು ಮಾನಸಿಕ ಆರೋಗ್ಯದ ಬೀಡಾಗಿದ್ದಾಳೆ. ಇಂತ ಹೆಣ್ಣು, ಅಲ್ಲ ಹೆಂಡತಿ ಕಣ್ಣಕುಕ್ಕಿದಾಗ ಮತ್ತೆ ತನ್ನ ತೋಳಿಗೆ ಸೆಳೆಯೋದಕ್ಕೆ ಬರ್ತಾನೆ‌. ಅವಳೇನು ಆಡಿನ ಮರಿಯೇ ಇವನು ಕುಣಿಸಿದಂತೆಲ್ಲ ಕುಣಿಯೋದಕ್ಕೆ.

ಕಟುಕನಾಡುವ ಮಾತುಗಳು ಇನ್ನು ಕಣ್ಮುಂದಿವೆ. ಅವಳಿಗೆ ತಲಾಖ್ ಕೊಡುವುದಿಲ್ಲವಂತೆ. ತಾನು ಇನ್ನೂ ಎರಡು ಮದುವೆಯಾಗಲು ಧರ್ಮದ ಅನುಮತಿ ಇದೆಯಂತೆ..

ಅಬ್ಬಬ್ಬಾ ಇದೆಂತ ಕರಾಳ ಬದುಕು ಅನಿಸಿದ್ದಂತು ಹೌದು. ಕತೆಯ ಸಾರಾಂಶವನ್ನಷ್ಟೆ ನಾನಿಲ್ಲಿ ಹೇಳಲು ಪ್ರಯತ್ನಿಸಿದಿನಿ. ನೀವು ಕಥೆಗೆ ಕಿವಿಯಾಗಬೇಕಾದರೆ ಸ್ವತಃ ಓದಬೇಕು.

ಮೊದಮೊದಲು ನೋವೆನಿಸಿದರೂ ಚಾಲೆಂಜ್ ಆಗಿ ಬದುಕನ್ನ ತೆಗೆದುಕೊಂಡ ನಾಯಕಿ ನನ್ನೊಳಗೆ ಮಾದರಿಯಾಗಿ ಉಳಿದಿದ್ದಾಳೆ. ಸಾರಾ ಅಬೂಬಕ್ಕರ ರ ಕಥೆಗಳ ಹೆಣೆತವೇ ಅಂತದ್ದು.

ಇದಿಷ್ಟನ್ನ ಬೆರೆದಿಟ್ಟು ಎರಡು ತಿಂಗಳಾಗ್ತ ಬಂತೇನೊ ಇವತ್ತು ಸುದ್ದಿ ತಿಳಿದು ಮನಸು ಮ್ಲಾನವಾಯಿತು. ಈಗಲ್ಲದೆ ಮತ್ತಿನ್ಯಾವಾಗ ಹಾಕಲಿ ಈ ನೋವಿನ‌‌ ಕತೆಯ..

‍ಲೇಖಕರು Admin

10 January, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading