ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಿವಾಕರ್ ಕವನಗಳು ಹೊಸ ಬಗೆಯವು

ಬಿ ಜನಾರ್ಧನ ಭಟ್ 

ಹಿರಿಯ ಮಿತ್ರ, ಮಾರ್ಗದರ್ಶಕ ಎಸ್. ದಿವಾಕರ್ ಕನ್ನಡದ ಬಹುಮುಖ್ಯ ಲೇಖಕ. ಜಗತ್ತಿನ ಶ್ರೇಷ್ಠ ಆಧುನಿಕ ಸಾಹಿತ್ಯವನ್ನು ಕನ್ನಡಕ್ಕೆ ಪರಿಚಯಿಸಿದವರಲ್ಲಿ ದಿವಾಕರ್ ಬಹುಮುಖ್ಯರು. ಆ ರೀತಿಯ ವಿಸ್ತಾರವಾದ ಓದು ಇರುವ, ಮತ್ತು ಕನ್ನಡಿಗರಿಗೆ ವಿಶ್ವಸಾಹಿತ್ಯವನ್ನು ಪರಿಚಯಿಸಿದ ಅಂತಹ ಇನ್ನೊಬ್ಬ ಲೇಖಕರು ಇಲ್ಲ.‌

ಅವರ ಸಣ್ಣ ಕತೆಗಳು ಕನ್ನಡದ ಕತೆಗಾರಿಕೆಗೆ ಹೊಸದಿಕ್ಕನ್ನು ತೋರಿಸಿವೆ.

ಈಗ ಬಂದಿರುವ ಅವರ ಹೊಸ ಕವಿತಾ ಸಂಕಲನ ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’ ಕನ್ನಡ ಕಾವ್ಯ ಕ್ಷೇತ್ರಕ್ಕೆ ಹೊಸ ಸಾಧ್ಯತೆಗಳನ್ನು ತೋರಿಸಿಕೊಡುವಂತಿದೆ. (ಇದಕ್ಕಾಗಿ ಓದಲೇ ಬೇಕಾದ ಈ ರೀತಿಯ ಮತ್ತೊಂದು ಪುಸ್ತಕ ಕೆ. ವಿ. ತಿರುಮಲೇಶ್ ಅವರ ‘ಅವ್ಯಯ ಕಾವ್ಯ’.)

ಎಸ್. ದಿವಾಕರ್ ಅವರು ತಮ್ಮ ಸ್ವಂತ ಕವಿತೆಗಳ ಜತೆಗೆ, ಕನ್ನಡಕ್ಕೆ ಹೆಚ್ಚುಕಡಿಮೆ ಅಪರಿಚಿತರಾಗಿಯೇ ಉಳಿದಿರುವ ಜಗತ್ತಿನ ಶ್ರೇಷ್ಠ ಕವಿಗಳ ಕವನಗಳಿಂದ ಪ್ರೇರಣೆ ಪಡೆದು ಕನ್ನಡದಲ್ಲಿ ಅವುಗಳನ್ನು ಮರುಸೃಷ್ಟಿಸಿದ್ದಾರೆ. ಕೋರ್ತಜಾರ್, ಶಿಂಬೋರ್ಸ್ಕ, ಮಾರ್ಜೊರಿ ಎವಾಸ್ಕೊ, ಅಪೊಲಿನೇರ್, ಶಿ ಚು ಆನ್, ಸ್ಯಾಂಡೋರ್ ವೋರೆ ಇತ್ಯಾದಿ ಕನ್ನಡಿಗರಿಗೆ ಹೆಚ್ಚುಕಡಿಮೆ ಅಪರಿಚಿತರಾದ ಕವಿಗಳ ಕೆಲವು ಕವಿತೆಗಳು ಇಲ್ಲಿ ಮರುಹುಟ್ಟು ಪಡೆದಿವೆ. ಸ್ಯಾಂಡೋರ್ ವೋರೆಯಿಂದ ಪ್ರೇರಿತವಾದ ‘ಮಂಗ ದೇಶ’ ಕವಿತೆಯನ್ನು ಇಲ್ಲಿ ಕೊಟ್ಟಿದ್ದೇನೆ. ಅಪೂರ್ವವಾದ ಇನ್ನೊಂದು ಕವಿತೆ, ಅಪೋಲಿನೇರ್ ನ ‘Zone’ ಕವಿತೆಯಿಂದ ಪ್ರೇರಿತವಾದ ‘ಮಂಡಲ’ ಎಂಬ ದೀರ್ಘ ಕವಿತೆ.

ಹೀಗೆ ಕನ್ನಡಕ್ಕೆ ಈ ವಿಶ್ವಕವಿಗಳ ಕವಿತೆಗಳನ್ನು ಸೃಜನಶೀಲವಾಗಿ ಪರಿಚಯಿಸುವ ಈ ಪರಿಯೂ ಹೊಸದು.

ದಿವಾಕರ್ ಅವರಿಗೆ ಕಾಂತಾವರ ಕನ್ನಡ ಸಂಘದ ‘ಮುದ್ದಣ ಕಾವ್ಯ ಪ್ರಶಸ್ತಿ’ ಬಹು ಹಿಂದೆಯೇ ಬಂದಿದೆ.

ಅವರ ಸ್ವಂತ ಕವನಗಳೂ ಹೊಸಬಗೆಯವು. ಉದಾಹರಣೆಗೆ, ಜನರ ರುಂಡಗಳನ್ನು ಒಯ್ದು ಬರೇ ಮುಂಡಗಳನ್ನು ಉಳಿಸಿಹೋಗುವ ಭಯಾನಕ ವಿದ್ಯಮಾನದ ಕುರಿತಾದ ಕವಿತೆಯನ್ನು ಗಮನಿಸಬಹುದು. ಅವರು ತಮ್ಮ ಕೆಲವು ಕತೆಗಳಲ್ಲಿರುವಂತೆ ಫ್ಯಾಂಟಸಿಯನ್ನು ಬಳಸಲು ಹಿಂಜರಿಯುವುದಿಲ್ಲ.

ದಿವಾಕರ್ ಸರ್ ಹಸ್ತಾಕ್ಷರದೊಂದಿಗೆ ಕಳುಹಿಸಿಕೊಟ್ಟ ಪುಸ್ತಕವನ್ನು ಮೇಲಿಂದ ಮೇಲೆ ಓದಿದಾಗಿನ ಅಭಿಪ್ರಾಯಗಳಿವು. ‘ಮಂಗದೇಶ’ವನ್ನು ಅವರು ಹಿಂದೊಮ್ಮೆ ಓದಲು ಕೊಟ್ಟಿದ್ದರು. ಅದನ್ನು ನಾನು ಕೆಲವು ಕಡೆ ಉಲ್ಲೇಖಿಸಿಯೂ ಇದ್ದೇನೆ. ಹಾಗಾಗಿ ಅದನ್ನು ಇಲ್ಲಿ ನಿಮ್ಮ ಓದಿಗಾಗಿ ಕೊಟ್ಟಿದ್ದೇನೆ.

ಅವರ ಸಂಕಲನವನ್ನು ಓದಿ.

ಈ ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ 

‍ಲೇಖಕರು avadhi

12 February, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading