ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಸ್ತಗೀರ್ ದಿನ್ನಿ ಓದಿದ ʼಒಲವ ಹಾಯಿ ದೋಣಿʼ

ದಸ್ತಗೀರ್ ದಿನ್ನಿ

ʼಒಲವ ಹಾಯಿ ದೋಣಿ’ ಪ್ರಭಾವತಿ ದೇಸಾಯಿಯವರ ಐದನೆಯ ಗಜಲ್ ಸಂಕಲನ. ಇಲ್ಲಿನ ಎಪ್ಪತ್ನಾಲ್ಕು ಗಜಲುಗಳು ಪ್ರಧಾನವಾಗಿ ವಿರಹ, ಯಾತನೆ, ವಿಪ್ರಲಂಭ, ತುಟಿಯ ಬಿಸುಪು, ಪ್ರೀತಿ, ಖುಷಿ, ಲಜ್ಜೆ, ಕನಸು, ಶೃಂಗಾರದ ವಿವಿಧ ವಿನ್ಯಾಸಗಳನ್ನೊಳಗೊಂಡಿವೆ. ಹಳೆಯ ನೆನಪುಗಳ ಮಾಧುರ್ಯ, ಮೆರವಣಿಗೆ, ಭಗ್ನ ಹೃದಯದ ಚಡಪಡಿಕೆಗಳಿವೆ. ಇವುಗಳೊಂದಿಗೆ ನಿತ್ಯದ ಬಾಳಿನ ದರ್ಶನ, ಅಂತರಂಗದ ಹೊಯ್ದಾಟ, ಸಾಮಾಜಿಕ ವೈರುಧ್ಯಗಳಿವೆ. ಸ್ತ್ರೀ ಅಸ್ಮಿತೆಯ ಹುಡುಕಾಟವಿದೆ. ಸುತ್ತಲಿನ ಆಗು ಹೋಗುಗಳಿಗೂ ತಣ್ಣಗೆ ಮಿಡಿವ ದೇಸಾಯಿಯವರು ಗಜಲುಗಳ ಮೂಲಕ ಮನುಷ್ಯ ಪ್ರೇಮವನ್ನು ಎತ್ತಿ ಹಿಡಿದಿದ್ದಾರೆ.

ಹೃದಯ ಕಮಲವು ಬಾಡಿದೆ ಇಬ್ಬನಿ ಕಳಿಸು.
ಮನ ಕಳವಳಗೊಂಡಿದೆ ಮಧುರ ದನಿ ಕಳಿಸು

ಅವನ ಸಂಗವಿಲ್ಲದೆ ಬೆಳದಿಂಗಳು ಬಿಸಿಯಾಗುತಿದೆ.
ಎಲ್ಲಿಯೋ ಮಳೆಯಾಗಿ ಇಳೆಯ ಉಸಿರ ಕಂಪು ಬರುತಿದೆ

ಬದುಕು ಕಣ್ಣೀರಲಿ ಕರಗುತಿದೆ ಒಲವನ್ನಾದರೂ ನೀಡು.
ತನುವು ಬಳಲಿ ಕಸುವು ಕುಸಿಯುತಿದೆ ಬಲವನ್ನಾದರೂ ನೀಡು “

ಎನ್ನುವಂತಹ ಧ್ವನಿಪೂರ್ಣವಾದ ಕೆಲವು ಶೇರ್‌ಗಳು ಮನತಾಕುವಂತಿವೆ. ಅಕ್ಕಮಹಾದೇವಿ, ಗಾಂಧೀಜಿ ಹಾಗು ಸಾಮಾಜಿಕನಿಷ್ಟ ಈ ಬಗೆಯ ಗಜಲುಗಳಲ್ಲಿ ವಾಚ್ಯತೆ ಇಣುಕಿದೆ. ದೇಸಾಯಿಯವರು ಸ್ವಗತದ ದನಿಯೊಂದಿಗೆ ಲೋಕದ ಜತೆ ಸಂವಾದ ನಡೆಸಲು ಯತ್ನಿಸಿದ ಗಜಲುಗಳು ಹೊಸ ಆಯಾಮವನ್ನು ಪಡೆದುಕೊಂಡಿವೆ. ಏಕತಾನತೆ, ಸಂಕೀರ್ಣತೆಯಿಂದ ಮೈ ಮುರಿದು ತಪ್ಪಿಸಿಕೊಂಡ ಇಲ್ಲಿನ ರಚನೆಗಳ ಕಲ್ಪನೆ, ಕವಿಯ ಮನೋಧರ್ಮ, ಆಳದ ವಿಷಾದ, ನಿಟ್ಟುಸಿರು, ಮಾನವೀಯ ಆರ್ದ್ರತೆಯ ಗಜಲುಗಳ ಈ ಓದು ನನಗೆ ನಿಜಕ್ಕೂ ಸಂತಸಕ್ಕೆ ಈಡು ಮಾಡಿದೆ.

ಗಜಲುಗಳ ಉದ್ದಕ್ಕೂ ಬಳಕೆಯಾದ ಸಹಜ ಸರಳ ಛಂದೋಲಯ, ಪ್ರತಿಮೆ, ರೂಪಕ, ನೆಲದ ಭಾಷೆಯ ಬನಿ, ಕಲೆಗಾರಿಕೆಯ ವಿಷಯಗಳಲ್ಲಿ ಕವಿ ನಿರಾಶೆಯನ್ನು ಮೂಡಿಸುವುದಿಲ್ಲ. ಪ್ರಭಾವತಿ ದೇಸಾಯಿಯವರು ಈ ಇಳಿ ವಯಸ್ಸಿನಲ್ಲೂ ಕ್ರಿಯಾಶೀಲವಾಗಿ ಬರೆವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಗಿರುವುದು ಅಭಿಮಾನದ ಸಂಗತಿ.ಅವರ ಉತ್ಸಾಹದ ಲೇಖನಿಯಿಂದ ಇನ್ನಷ್ಟು ಸುಮಧುರ, ಹೊಳಪಿನ, ಹೊಸ ರುಚಿಯ, ಮನಸ್ಸನ್ನು ತುಂಬುವ, ಉತ್ಕಟವಾಗಿ ಕಾಡುವ, ಜೀವಂತವಾಗಿ ಮಿಡಿಯುವ ಗಜಲ್ ಸಂಕಲನಗಳು ಪ್ರಕಟವಾಗಲಿ ಎಂದು ಪ್ರೀತಿಯಿಂದ ಆಶಿಸುವೆ.

‍ಲೇಖಕರು Admin

25 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading