ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಜಸ್ವಿ ವಿಷಾದ : ನಾವು ಬಿಟ್ಟರೂ ನಮ್ಮನ್ನು ಬಿಡದ ಜಾತಿ

tejasvi20

ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ವಿಷಯವನ್ನು ಪ್ರಸ್ತಾಪಿಸುವುದಕ್ಕೆ ಮೊದಲು ಚಾರಿತ್ರಿಕವಾಗಿ ಮೀಸಲಾತಿ ಎದುರಿಸುತ್ತಿರುವ ಸಂದಿಗ್ಧ ಪರಿಸ್ಥಿತಿಯನ್ನು ಅದು ಹುಟ್ಟು ಹಾಕಿರುವ ವಿರೋಧಾಭಾಸಗಳನ್ನು ಮಂಡಿಸಬಯಸುತ್ತೇನೆ.

ಮೊಟ್ಟ ಮೊದಲನೆಯನದಾಗಿ ಮೀಸಲಾತಿಯ ಮೂಲ ಉದ್ದೇಶದ ಬಗ್ಗೆಯೇ ಗೊಂದಲಗಳು ಆರಂಭವಾಗಿರುವುದನ್ನು ಗಮನಿಸಬೇಕು. ಮೀಸಲಾತಿ ಜಾತಿಗಳನ್ನು ಸಮರ್ಥಿಸುವ ಜಾತೀಯತೆಯನ್ನು ಪ್ರೋತ್ಸಾಹಿಸುವ ಆಂದೋಳನವೇ? ಭಾರತದ ಸೆಕ್ಯುಲರ್ ಆಂದೋಲದ ಭಾಗವೇ? ಎಂಬುದನ್ನು ಈಗ ಸ್ಪಷ್ಟ ಪಡಿಸಬೇಕಾಗಿದೆ.

casteಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಶ್ರೀ ಎಲ್.ಜಿ. ಹಾವನೂರ್ ಅವರು ಸಾರ್ವಜನಿಕ ಭಾಷಣವೊಂದರಲ್ಲಿ ಜಾತಿಗಳು ಶಾಶ್ವತ, ಇವು ಸೂರ್ಯ ಚಂದ್ರರಿರುವವರೆಗೂ ಇರುತ್ತವೆ ಎಂದಿದ್ದರು. ಜಾತಿಗಳು ಭವಿಷ್ಯದಲ್ಲೂ ಶಾಶ್ವತವಾಗಿ ಉಳಿಯುತ್ತವೆಯೋ ಇಲ್ಲವೋ ಭವಿಷ್ಯವನ್ನು ಬಲ್ಲವರಾರು? ಅದನ್ನು ಹಾವನೂರರೂ ಹೇಳಲಾರರು. ಆದರೆ ಈ ಹೇಳಿಕೆಯ ಮೂಲಕ ಹಾವನೂರರು ಪ್ರತಿನಿಧಿಸಿದ ಧೋರಣೆ ಮಾತ್ರ ಕಳವಳಕಾರಿಯಾದುದು. ಮೀಸಲಾತಿಯ ಮೂಲ ಆಶಯಗಳಲ್ಲೇ ಗೊಂದಲ ಪ್ರಾರಂಭವಾಗಿರುವುದರ ಮುನ್ಸೂಚನೆ ಇದೆಂದು ನನಗನ್ನಿಸುತ್ತದೆ.

ಕರ್ನಾಟಕದಲ್ಲಿ ಮೀಸಲಾತಿ ಜಾರಿಗೆ ಬಂದ ನಂತರ ಸಂಭವಿಸಿದ ಕೆಲವು ಚಾರಿತ್ರಿಕ ಬೆಳವಣಿಗೆಗಳೂ ಈ ಗೊಂದಲಕ್ಕೆ ಕಾರಣವೆಂದು ಹೇಳಬಹುದು. ಮೀಸಲಾತಿಯ ಪರಿಣಾಮವಾಗಿ ಜಾತೀಯ ಸಂಘಟನೆಗಳು ಶುರುವಾದುವು. ಅಸಂಘಟಿತರಾಗಿ ಕರ್ನಾಟಕಾದ್ಯಂತ ಚದುರಿದ್ದ ಪ್ರತಿಯೊಂದು ಜಾತಿಯೂ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳಲು ತಮತಮಗೆ ಒಂದು ಮಠವನ್ನೂ ಅದಕ್ಕೊಬ್ಬ ಜಗದ್ಗುರುವನ್ನೂ ನಿರ್ಮಿಸತೊಡಗಿದವು. ಇಷ್ಟಲ್ಲದೆ ಅನೇಕ ಜಾತಿಗಳೊಳಗೇ ಉಪ ಪಂಗಡಗಳೇರ್ಪಟ್ಟು ಅವು ತಮ್ಮ ಅಸ್ತಿತ್ವವನ್ನು ಪ್ರತಿಪಾದಿಸತೊಡಗಿದವು. ಮುಸ್ಲಿಂ ಮತ್ತು ಲಿಂಗಾಯತ ಕೋಮಿನ ಉದಾಹರಣೆಗಳನ್ನು ಇಲ್ಲಿ ಪರಿಶೀಲಿಸಬಹುದು.

ಇದರೊಡನೆ ಭಾರತದಲ್ಲಿ ಜಾತಿ ಪದ್ಧತಿ ಕೆಳ ವರ್ಗಗಳಲ್ಲಿ ವೃತ್ತಿ ಮೂಲವಾಗಿ ರೂಪುಗೊಂಡಿದ್ದರಿಂದ ನೂರಾರು ಹೊಸಹೊಸ ವೃತ್ತಿಯ ಸಮುದಾಯಗಳು ಹುಟ್ಟಿಕೊಂಡು ತಾವೇ ಒಂದೊಂದು ಹೊಸ ಜಾತಿಗಳೆಂದು ಗುರುತಿಸಿಕೊಳ್ಳತೊಡಗಿದವು. ಈ ಎಲ್ಲಾ ಜಾತಿಗಳವರೂ ತಾವು ಅತ್ಯಂತ ಹಿಂದುಳಿದವರೆಂದು ಹೇಳಿಕೊಂಡು ಮೀಸಲಾತಿಯಲ್ಲಿ ಸ್ಥಾನ ಕೇಳುತ್ತಾ ಹಿಂದುಳಿಯಲು ಪೈಪೋಟಿ ಆರಂಭಿಸಿದವು. ಮೀಸಲಾತಿಯಿಂದ ಉದ್ಭವವಾದ ಈ ಬೆಳವಣಿಗೆಯನ್ನು ನಾನು ಅನಪೇಕ್ಷಣೀಯ ಬೆಳವಣಿಗೆಯೆಂದು ಆಕ್ಷೇಪಿಸುತ್ತಿಲ್ಲ ಅಥವಾ ಪ್ರೋತ್ಸಾಹಿಸಬೇಕೆಂಬುದೂ ನನ್ನ ಉದ್ದೇಶವಲ್ಲ. ಆದರೆ ಈ ಬೆಳವಣಿಗೆಯ ಅರ್ಥವೇನು? ಇದು ಮೀಸಲಾತಿಯ ಉದ್ದೇಶವೇ? ಎಂದು ವಿಶ್ಲೇಷಿಸ ಬಯಸುತ್ತೇನೆ. ಈ ಘಟ್ಟದಲ್ಲಿ ಯೋಚಿಸಿದಾಗ ಹಾವನೂರರ ಹೇಳಿಕೆ ಮತ್ತು ಆಶಯದಂತೆ ಮೀಸಲಾತಿ ಜಾತಿಗಳನ್ನೂ ಜಾತೀಯತೆಯನ್ನೂ ಪೋಷಿಸುವ ಮತ್ತು ಪ್ರತಿಪಾದಿಸುವ ಆಂದೋಳನದಂತೆಯೇ ಕಾಣುತ್ತದೆ.

ಆದರೆ ನಮ್ಮ ಸಂವಿಧಾನ ಕರ್ತೃ ಅಂಬೇಡ್ಕರ್ ಮೀಸಲಾತಿಯ ಹಿಂದೆ ಇಟ್ಟುಕೊಂಡಿದ್ದ ಉದ್ದೇಶ ಇದಲ್ಲವೆಂದು ನನ್ನ ದೃಢ ನಂಬಿಕೆ. ಜಾತ್ಯತೀತ ಭಾರತದ ನಿರ್ಮಾಣಕ್ಕಾಗಿಯೇ ಅವರು ಮೀಸಲಾತಿಯನ್ನು ಸಂವಿಧಾನದಲ್ಲಿ ಸೇರಿಸಿದುದು. ಜಾತೀಯ ಕಾರಣದಿಂದಲೇ ಹಿಂದುಳಿದ ವರ್ಗಗಳನ್ನು ಜಾತಿಗಳ ಮೂಲಕವೇ ಗುರುತಿಸಿ ಮೇಲೆತ್ತಬೇಕಾಗುತ್ತದೆಂದು ಅವರು ಮೀಸಲಾತಿಯನ್ನು ಸಂವಿಧಾನದಲ್ಲಿ ಅಳವಡಿಸಿದರು. ಮೀಸಲಾತಿಯ ಹಿಂದಿನ ಅವರ ಉದ್ದೇಶ ಭಾರತವನ್ನು ಜಾತ್ಯತೀತ ರಾಷ್ಟ್ರವನ್ನಾಗಿ ರೂಪಿಸಬೇಕೆಂಬುದೇ ಹೊರತು ವರ್ಣಾಶ್ರಮ ಧರ್ಮದ ಜಾತೀಯ ರಾಷ್ಟ್ರವಾಗಿ ರೂಪಿಸಬೇಕೆಂಬುದಂತೂ ಅಲ್ಲ. ದೇಶ ವಿಭಜನೆಯಂಥ ಘಟನೆಗಳ ಘೋರ ಪರಿಣಾಮಗಳು ಕಣ್ಣೆದುರಿಗೇ ಇರುವಾಗ ಅವರ ಆದರ್ಶಗಳು ಜಾತ್ಯತೀತ ರಾಷ್ಟ್ರವಾಗಿತ್ತೆಂದು ನಿಸ್ಸಂಶಯವಾಗಿ ಹೇಳಬಹುದು.

ಮೀಸಲಾತಿಯ ಪೂರ್ವೋದ್ದೇಶ ಇದೆಂದು ಒಪ್ಪುವುದಾದರೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಳೆದ ಐದು ದಶಕಗಳಿಂದ ಇರುವ ಮೀಸಲಾತಿ ನಮ್ಮ ಸಂವಿಧಾನದ ಆಶೋತ್ತರಗಳ ದಿಕ್ಕಿನಲ್ಲಿ ಸಾಗುತ್ತಿಲ್ಲವೆಂದು ಹೇಳಬಹುದು. ಜಾತಿಗಳನ್ನು ಸಂಘಟಿಸುವುದು ಮತ್ತು ಜಾತಿಗಳಲ್ಲಿ ಮೂಲಭೂತವಾದವನ್ನು ಪ್ರಚೋದಿಸುವುದರ ಮುಖಾಂತರ ಹೆಚ್ಚು ಹೆಚ್ಚು ಉಪಜಾತಿಗಳನ್ನೂ ಹೊಸ ಹೊಸ ಜಾತಿಗಳನ್ನೂ ನಿರ್ಮಿಸುವುದರ ಮೂಲಕ ನಾವು ಜಾತ್ಯತೀತ ಸಮಾಜದತ್ತ ಸಾಗಲು ಸಾಧ್ಯವೇ ಇಲ್ಲ.

ambedkar posterನಾನು ಮೀಸಲಾತಿಯನ್ನು ತಿರಸ್ಕರಿಸುತ್ತಿಲ್ಲ. ನಿಷ್ಪ್ರಯೋಜಕವೆಂದು ಅಲ್ಲಗಳೆಯುತ್ತಲೂ ಇಲ್ಲ. ಹಿಂದುಳಿದ ಮೀಸಲಾತಿ ಇಲ್ಲದಿದ್ದರೆ ಹಿಂದುಳಿದ ಜಾತಿಗಳಿಗೆ ಸಾಮಾಜಿಕವಾಗಿ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತಿರಲಿಲ್ಲ ಎಂಬುದನ್ನು ನಾನು ಸರ್ವಥಾ ಒಪ್ಪುತ್ತೇನೆ. ಅಂದರೆ ಮೀಸಲಾತಿ ಜಾತಿಗಳ ನಡುವೆ ಒಂದು ಮಟ್ಟದ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯನ್ನು ತರುವುದರಲ್ಲಿ ಸಫಲವಾಗಿದೆ. ಆದರೆ ಇದು ಜಾತ್ಯತೀತ ರಾಷ್ಟ್ರ ನಿರ್ಮಿಸುವತ್ತ ಸಾಗುತ್ತಿದೆಯೇ ಇಲ್ಲವೇ ಎಂಬುದೇ ಈಗಿರುವ ಪ್ರಶ್ನೆ.

ಹಾಗಿದ್ದರೆ ಮೀಸಲಾತಿ ನಮ್ಮ ಸಂವಿಧಾನ ಕರ್ತೃಗಳ ಮೂಲೋದ್ದೇಶಕ್ಕೆ ತದ್ವಿರುದ್ಧ ಪರಿಣಾಮಗಳನ್ನು ಏಕೆ ಮಾಡಿತು? ಕಳೆದ ಐದು ದಶಕಗಳ ಮೀಸಲಾತಿಯ ಪರಿಣಾಮವಾಗಿ ಜಾತೀಯತೆ ಸಡಿಲಗೊಳ್ಳುವುದರ ಬದಲು ಇನ್ನಷ್ಟು ಬಿಗಿಯಾಗುತ್ತಾ ಉಲ್ಭಣಗೊಳ್ಳುತ್ತಾ ಬಂದುದೇಕೆ?

ನಮ್ಮ ಸಂವಿಧಾನ ಕರ್ತೃಗಳಾದ ಅಂಬೇಡ್ಕರ್, ಲೋಹಿಯಾ, ಜಯಪ್ರಕಾಶ್ ನಾರಾಯಣ್ ಮೊದಲಾದವರ ಕೆಲವು ಲೆಕ್ಕಾಚಾರಗಳು ತಪ್ಪಾದವೆಂದು ಕಳೆದ ಐದು ದಶಕಗಳ ಚರಿತ್ರೆಯನ್ನು ಅವಲೋಕಿಸಿದರೆ ತಿಳಿಯುತ್ತದೆ. ಇವರೆಲ್ಲಾ ಸಮಾಜದ ಕೆಳ ವರ್ಗಗಳಲ್ಲಿದ್ದ ಜಾತಿಗಳನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲೆತ್ತಿದರೆ ಅಂದರೆ ಜಾತಿಗಳ ನಡುವೆ ಒಂದು ಮಟ್ಟದ ಸಮಾನತೆಯನ್ನಾದರೂ ಸಾಧಿಸಿದರೆ ಜಾತಿ ಪದ್ಧತಿ ಮತ್ತು ಜಾತೀಯ ಸಂಕೋಲೆಗಳು ತನ್ನಿಂದ ತಾನೇ ಸಡಿಲಾಗುತ್ತಾ ವರ್ಣಾಶ್ರಮ ಮೂಲ ಸಮಾಜ ನಿಧಾನವಾಗಿ ವರ್ಗಮೂಲ ಸಮಾಜವಾಗಿ ರೂಪಾಂತರಗೊಳ್ಳುತ್ತದೆ ಎಂದು ಊಹಿಸಿದರು. ಇವರೆಲ್ಲರ ತಾತ್ವಿಕ ನಿಲುವಿಗೆ ಆ ಕಾಲದ ಚಿಂತನೆಗಳ ಮೇಲೇ ಪ್ರಭಾವ ಬೀರಿದ್ದ ಡೈಲಕ್ಟಿಕಲ್ ಮೆಟೀರಿಯಲಿಸಂ ಕೂಡಾ ಕಾರಣವಿರಬಹುದು. ಅವರು ಜಾತಿಗಳ ಆರ್ಥಿಕ ಸಮಾನತೆ ಸಾಧ್ಯವಾಗುತ್ತಲೂ ಅವು ತಮ್ಮ ವರ್ಣ ಸ್ವರೂಪವನ್ನು ಕಳೆದುಕೊಂಡು ಹೆಚ್ಚು ಚಲನಶೀಲವಾದ ವರ್ಗಗಳಾಗಿ ರೂಪುಗೊಳ್ಳುತ್ತವೆ. ಸ್ಥಗಿತಗೊಂಡಿರುವ ಜಾತಿಗಳು ಸಡಿಲಾಗುತ್ತಾ ಜಾತಿಗಳ ನಡುವಣ ಪ್ರತ್ಯೇಕತೆ ಕಡಿಮೆಯಾಗಿ ಒಂದರೊಳಗೊಂದು ವಿಲೀನವಾಗಲು ಶುರುವಾಗುತ್ತವೆ ಎಂದು ಭಾವಿಸಿದರು. ಇದು ತಂತಾನೇ ಸಂಭವಿಸುವ ಸಾಮಾಜಿಕ ಸ್ಥಿತ್ಯಂತರವಾದುದರಿಂದ ಅದಕ್ಕೊಂದು ಸಾಂವಿಧಾನಿಕ ಮಾರ್ಗ ಸೂಚಿಸಲಿಲ್ಲ ಅಥವಾ ಕಲ್ಪಿಸಲಿಲ್ಲ.

ಅವರ ಈ ನಿಲುವು ತಾತ್ವಿಕವಾಗಿ ತಪ್ಪೆಂದು ನಾನು ಭಾವಿಸುವುದಿಲ್ಲ. ಏಕೆಂದರೆ ವಾಸ್ತವವಾಗಿ ಜಾತಿಯ ವಜ್ರಮುಷ್ಠಿ ಸ್ವಾತಂತ್ರ್ಯಾನಂತರ ಸಡಿಲಾಗುತ್ತಾ ಬಂದಿದ್ದು ನಿಜ. ಜಾತಿಗಳು ಬೇರೆ ಬೇರೆಯಾದರೂ ಆರ್ಥಿಕವಾಗಿ ಒಂದೇ ವರ್ಗದಲ್ಲಿದ್ದ ಸಹಸ್ರಾರು ಯುವಕ ಯುವತಿಯರು ಅಂತರ್ಜಾತೀಯ ವಿವಾಹವಾಗತೊಡಗಿದ್ದನ್ನು ಈ ಸಂದರ್ಭದಲ್ಲಿ ನಾವು ಸ್ಮರಿಸಬಹುದು. ಆದರೆ ಈ ರೀತಿ ಜಾತಿಯ ಸಂಕೋಲೆಗಳನ್ನು ತ್ಯಜಿಸಿ ಮದುವೆಯಾಗಿದ್ದ, ಮದುವೆಯಾಗುತ್ತಿರುವ ಯುವಜನರಿಗೆ ಎದುರಾಗುವ ಮುಖ್ಯ ಪ್ರಶ್ನೆಯೆಂದರೆ ಮುಂದೇನು? ಎನ್ನುವುದು. ನಮ್ಮ ಸಂವಿಧಾನ ಕರ್ತೃಗಳ ಲೆಕ್ಕಾಚಾರ ತಪ್ಪಿದ್ದು ಇಲ್ಲೇ. ನಮ್ಮ ಸಂವಿಧಾನ ಜಾತ್ಯತೀತತೆಯ ಘೋಷಣೆ ಮಾಡಿತೇ ಹೊರತು ಜಾತಿ, ಧರ್ಮ, ಬುಡಕಟ್ಟುಗಳಿಂದ ತುಂಬಿದ್ದ ದೇಶದಲ್ಲಿ ಜಾತ್ಯತೀತರಾದವರು ಗುರುತಿಸಿಕೊಳ್ಳಲು, ಅನುಸರಿಸಲು ಯಾವ ನಾಗರಿಕ ಸಂಹಿತೆಯನ್ನೂ ಬದಲಿಯಾಗಿ ಕೊಟ್ಟಿಲ್ಲ. ಅಂತರ್ಜಾತೀಯ ವಿವಾಹವಾದವರಿಗೂ ಅವರ ಮಕ್ಕಳಿಗೂ ಉಳಿದಿರುವುದು ಒಂದೇ ದಾರಿ. ತಮ್ಮ ಗಂಡನ/ತಂದೆಯ ಜಾತಿಯೊಂದಿಗೆ ಗುರುತಿಸಿಕೊಳ್ಳುವುದು. ನಮ್ಮ ಸಂವಿಧಾನದಲ್ಲಿ ಅಂತರ್ಗತವಾಗಿರುವ ವೈರುದ್ಧ್ಯದ ದೆಸೆಯಿಂದ ಭಾರತದ ಜಾತ್ಯತೀತ ಆಂದೋಲನ ಕ್ಷುಲ್ಲಕ ಮತಾಂತರ ಆಂದೋಲನವಾಗಿ ಪರಿವರ್ತಿಸಲ್ಪಟ್ಟಿತು. ಗುರು ಹಿರಿಯರನ್ನೂ ಸಮಾಜವನ್ನೂ ಎದುರು ಹಾಕಿಕೊಂಡು ಅಂತರ್ಜಾತೀಯ ವಿವಾಹವಾದ ತರುಣ ತರುಣಿಯರು ಕೊನೆಗೆ ಎಲ್ಲೂ ಸಲ್ಲದ ತ್ರಿಶಂಕುಗಳಾಗಿ ಅನಾಥರಾಗಬೇಕಾದ ಪರಿಸ್ಥಿತಿ ಉಂಟಾಯಿತು.

paint brushಈ ಪರಿಸ್ಥಿತಿಯ ಅರಿವು ಅಂಬೇಡ್ಕರ್ ಅವರಿಗೆ ಇರಲಿಲ್ಲವೆಂದು ನಾನು ನಂಬುವುದಿಲ್ಲ. ಏಕೆಂದರೆ ಹಿಂದೂ ಧರ್ಮವನ್ನೂ, ಅದು ಪ್ರತಿಪಾದಿಸುವ ವರ್ಣಾಶ್ರಮ ಧರ್ಮವನ್ನೂ ಸಂಪೂರ್ಣವಾಗಿ ತಿರಸ್ಕರಿಸಿದ ಮೇಲೂ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳಲು ಯಾವುದಾರೂ ಒಂದು ಗುಂಪಿನ ಜೊತೆ ಗುರುತಿಸಿಕೊಳ್ಳಬೇಕಾದ ಅನಿವಾರ್ಯತೆ ಇದ್ದುದರಿಂದಲೇ ಅಂಬೇಡ್ಕರ್ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು. ಇದರಿಂದ ತಮಗಿದ್ದ ಸಮಸ್ಯೆಯನ್ನು ವೈಯಕ್ತಿಕವಾಗಿ ಪರಿಹರಿಸಿಕೊಂಡರೇ ಹೊರತು ಜಾತ್ಯತೀತ ಆಂದೋಲನಕ್ಕೆ ಒಂದು ಸಂವಿಧಾನಾತ್ಮಕ ಅಸ್ತಿತ್ವವನ್ನು ಕೊಡಲಿಲ್ಲ. ಇಂದು ಬೌದ್ಧ ಧರ್ಮ ಜಗತ್ತಿನ ಅತ್ಯಂತ ಸೆಕ್ಯುಲರ್ ಧರ್ಮವಾಗಿದ್ದರೂ ಅದು ಜಾತ್ಯತೀತ ರಾಷ್ಟ್ರಕ್ಕೆ ಬದಲಿಯಾಗಲು ಸಾಧ್ಯವಿಲ್ಲ. ಸರಿಯಾದ ಬದಲಿಯೆಂದರೆ ‘ರಾಷ್ಟ್ರೀಯ ನಾಗರಿಕ ಸಂಹಿತೆ ’ ಮಾತ್ರ.

ಇವತ್ತು ಅಂತರ್ಜಾತೀಯ ವಿವಾಹವಾದ ಜಾತ್ಯತೀತರನ್ನು ಬಿಟ್ಟರೆ ‘ರಾಷ್ಟ್ರೀಯ ನಾಗರಿಕ ಸಂಹಿತೆ’ ಯಾರಿಗೂ ಬೇಡವಾಗಿದೆ. ಜಾತಿಯಿಂದ ದೊರಕುವ ಸವಲತ್ತುಗಳ ರುಚಿ ಹಿಡಿದಿರುವ ಪ್ರತಿಯೊಂದು ಜಾತಿ ಮತ್ತು ಧರ್ಮಗಳೂ ಇದನ್ನು ಉಗ್ರವಾಗಿ ವಿರೋಧಿಸುತ್ತವೆ. ಈಗಿರುವ ಒಂದೇ ದಾರಿಯೆಂದರೆ ಕೊನೆಯ ಪಕ್ಷ ಐಚ್ಛಿಕವಾಗಿ, ಇಷ್ಟವಿದ್ದವರು ಇದನ್ನು ಆಯ್ಕೆ ಮಾಡಿಕೊಳ್ಳಬಹುದಾದ ಸವಲತ್ತನ್ನು ಸಂವಿಧಾನದಲ್ಲಿ ಕೊಡುವುದು. ಜಾತೀಯತೆಯ ಸಂಕೋಲೆಗಳಿಂದ ದೂರಾಗಲು ಹಂಬಲಿಸುವ ಆದರ್ಶವಾದಿಗಳಿಗಾದರೂ ಆಯ್ಕೆಯ ಸ್ವಾತಂತ್ರ್ಯ ನೀಡುವುದು.

ಸಂವಿಧಾನ ತಿದ್ದುಪಡಿಯಂಥ ಗುರುತರ ಹೊಣೆ ರಾಜ್ಯ ಸರಕಾರವೊಂದರ ಅಡಿಯಲ್ಲಿ ಬರುವ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ವ್ಯಾಪ್ತಿಯನ್ನು ಮೀರಿದ್ದೆಂದು ನನಗೆ ಗೊತ್ತು. ಆದರೆ ಈ ಆಯೋಗ ತನ್ನ ಪರಿಮಿತಿಯೊಳಗೇ ಅಂತರ್ಜಾತೀಯ ವಿವಾಹವಾದವರನ್ನು ಜಾತ್ಯತೀತ ಗುಂಪೆಂದು ಗುರುತಿಸಿ ಅವರಿಗೆ ಕೊಂಚವಾದರೂ ಪ್ರೋತ್ಸಾಹ ಕೊಟ್ಟರೆ ನಿಧಾನವಾಗಿಯಾದರೂ ಇದು ‘ಐಚ್ಛಿಕ ನಾಗರಿಕ ಸಂಹಿತೆ’ಯೊಂದನ್ನು ಸಂವಿಧಾನ ದತ್ತವಾಗಿ ಕೊಡಲು ಒತ್ತಡವಾಗಿ ಪರಿಣಮಿಸಬಹುದೆಂದು ತಿಳಿದಿದ್ದೇನೆ. ಈ ದಿಸೆಯಲ್ಲಿ ಆಯೋಗ ಇಡುವ ಸಣ್ಣ ಹೆಜ್ಜೆ ಮೀಸಲಾತಿಯ ಅರ್ಥವನ್ನೇ ಬದಲಿಸಿ ಪುನರ್ ವ್ಯಾಖ್ಯಾನ ಮಾಡುತ್ತದೆ. ಕರ್ನಾಟಕಾದ್ಯಂತ ಅಸಂಘಟಿತರಾಗಿ ಚದುರಿರುವ ಈ ಜಾತ್ಯತೀತರಿಗೆ ಪ್ರೋತ್ಸಾಹವನ್ನೂ ಹೊಸ ಹುರುಪನ್ನೂ ನೀಡುತ್ತದೆ. ಕರ್ನಾಟಕದಲ್ಲಿ ಅವ್ಯಕ್ತವಾಗಿ ನಡೆಯುತ್ತಿರುವ ಜಾತ್ಯತೀತ ಸೆಕ್ಯುಲರ್ ಆಂದೋಲನಕ್ಕೆ ಅಧಿಕೃತ ಸಮ್ಮತಿ ದೊರಕಿಸಿದಂತಾಗುತ್ತದೆ.

‍ಲೇಖಕರು Admin

23 May, 2016

2 Comments

  1. ಗುಡ್ಡ

    ಗೆಳೆಯರೆ,
    ತೇಜಸ್ವಿ ಈ ಬರಹ ಬರೆದಾಗಿನ ಸಂದರ್ಭವನ್ನು ಕೆಲ ಸಾಲುಗಳಲ್ಲಿ ವಿವರಿಸಿದ್ದರೆ ಚನ್ನಾಗಿತ್ತು.

    ಮೀಸಲಾತಿಯ ಬಗ್ಗೆ ಇತ್ತೀಚಿನ ವಿವಾದದ ಬಗ್ಗೆ ಒಂದು ಒಳ್ಳೆಯ ಬರಹ:
    http://ipious.blogspot.de/2016/05/tina-dabi-and-reservation-controversy.html

  2. Not interested in disclosing

    Though Tejaswi has been uncharacteristically diplomatic here, imagine what would have been the response of the so called thinkers had it been been written by somebody else.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading