ತಿಲಕ್ ಲಕ್ಷ್ಮೀಪುರ ಹೊಸ ಕವಿತೆ- ಸರಹದ್ದುಗಳಾಚೆ

ತಿಲಕ್ ಲಕ್ಷ್ಮೀಪುರ

ಅವ್ವ ತಣ್ಣಗೆ ಇದ್ದಾಳೆಂದು
ನಾನು ನಂಬುವದಿಲ್ಲ,,
ಬೆಂಕಿಯನ್ನೆ ಒಡಲಲ್ಲಿರಿಸಿಕೊಂಡ ಬುವಿ
ಪ್ರಶಾಂತವಾಗಿಯೆ ಇರುವುದನ್ನು ಕಂಡಿದ್ದೇನೆ…

ಕತ್ತಿಗಳು ಕೆನ್ನೆತ್ತರ ಕ್ರೌರ್ಯಗಳನ್ನಷ್ಟೇ
ಮೆರೆಯುತ್ತೇವೆ ಎಂದು ಭಾವಿಸುವುದಿಲ್ಲ
ಕತ್ತಿಯನ್ನೆ ಜಳಪಿಸಿದ ಅಶೋಕ ಮಹಾಶಯ
ಅಹಿಂಸೆಯ ಹೊಸ ಭಾಷ್ಯ ಬರೆದದನ್ನು ಅರಿತಿದ್ದೇನೆ…

ಅರಮನೆಗಳು ಅಹಂಕಾರದ
ಅಮಲಿನ ಕೇಂದ್ರವೆoದಷ್ಟೆ ಎಂದು ಸಾರುವುದಿಲ್ಲ
ಅರಮನೆಯ ಸುಪ್ಪತ್ತಿಗೆಯಲ್ಲೆ
ಬುದ್ದನಂತ ಕಾರುಣ್ಯ ಜನಿಸಿದ್ದನ್ನು ತಿಳಿದಿದ್ದೇನೆ

ಕೊಲ್ಲುವ ಮನಸ್ಸು ಬರಿ ಸಾವನ್ನೇ
ಬಯಸುತ್ತದೆ ಎಂದು ಹೇಳಹೊರಡುವುದಿಲ್ಲ
ಅಂಗುಲಿಮಾಲನಂತವರು ಬುದ್ಧನ ಮುಂದೆ
ಮಂಡಿಯೂರಿದನ್ನು ಓದಿದ್ದೇನೆ…

ಬರೆದದ್ದೆಲ್ಲ ಸತ್ಯ ಎಂದು ನಂಬುವುದಿಲ್ಲ,
ಇತಿಹಾಸದ ಪುಟಗಳು ಅದೆಷ್ಟೋ
ಅಸತ್ಯಗಳನ್ನೆ ಬಿಂಬಿಸಿ ಸತ್ಯಗಳನ್ನು
ಮರೆಮಾಚಿದ್ದನ್ನು ಗಮನಿಸಿದ್ದೇನೆ..

ಇದು ಹೀಗೇ.. ಇಷ್ಟೇ.. ಎಂದು
ಗೆರೆ ಎಳೆದು ನಿಲ್ಲುವುದಿಲ್ಲ
ಗಡಿಗಳಾಚೆಗೂ ಪ್ರೀತಿಯ ಗಾಳಿ ಬೀಸುವುದೆಂದು
ನಂಬಿದ್ದೇನೆ.. ನಡೆದಿದ್ದೇನೆ… ನಡೆಯುತ್ತಿರುತೆನೆ..

‍ಲೇಖಕರು avadhi

August 20, 2023

ನಿಮಗೆ ಇವೂ ಇಷ್ಟವಾಗಬಹುದು…

ಆಪ್ತ ನಗುವೊಂದು ಅಪರಿಚಿತವಾದಾಗ

ಆಪ್ತ ನಗುವೊಂದು ಅಪರಿಚಿತವಾದಾಗ

ಅನಿತಾ ಪಿ. ತಾಕೊಡೆ ** ಅದುರುವ ರೆಪ್ಪೆಯೊಳಗಿನ ಕಣ್ಣ ಬಿಂಬದಲಿಕಂಡೂ ಕಾಣದಂತಿರುವ ನಿನ್ನೆಗಳು ಕೂಡಿಕೊಂಡುಇರುಳ ಮರೆಯಲಿರುವ ಛಾಯೆಗೆ ಬಣ್ಣ...

0 Comments

Submit a Comment

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This