ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಮಿಳು ಭಾವನೆಗಳ ಮೇಲೆ ಓಡುವ ಚೆನ್ನೈ ಎಕ್ಸ್‌ಪ್ರೆಸ್ – ಬಿ ಎಂ ಬಶೀರ್ ಬರೆಯುತ್ತಾರೆ

ಬಿ ಎಂ ಬಶೀರ್

ಗುಜರಿ ಅಂಗಡಿ

‘ಚೆನ್ನೈ ಎಕ್ಸ್‌ಪ್ರೆಸ್’ ಗಾಡಿಗಾಗಿ ಕನ್ನಡಿಗರು ಕಾಯುವುದಕ್ಕೆ ಎರಡು ಮುಖ್ಯ ಕಾರಣಗಳಿದ್ದವು. ಒಂದು, ಚಿತ್ರವನ್ನು ನಿರ್ದೇಶಿಸಿದಾತ ಕನ್ನಡಿಗ. ಇನ್ನೊಂದು, ಗಾಡಿಯನ್ನೇರಿ ಬರುವ ನಾಯಕನೂ ಕನ್ನಡಿಗ! ಮುಖ್ಯವಾಗಿ ಇಬ್ಬರೂ ಮಂಗಳೂರಿಗರು. ರೋಹಿತ್ ಶೆಟ್ಟಿ ತನ್ನ ಗೋಲ್‌ಮಾಲ್ ಚಿತ್ರಗಳಿಗಾಗಿಯೇ ಬಾಲಿವುಡ್‌ನಲ್ಲಿ ಸುದ್ದಿಯಾದವರು. ಹಾಸ್ಯ ಮತ್ತು ಸ್ಟಂಟ್ ಎರಡನ್ನೂ ಸೇರಿಸಿ ಸಿನಿಮಾ ಮಾಡುವುದರಲ್ಲಿ ಎತ್ತಿದ ಕೈ. ಇವರ ಜೊತೆಗೆ ‘ಮಂಗಳೂರು ಮೂಲದ ಶಾರುಕ್’ ಸೇರಿದರೆ ಇನ್ನೇನಾಗಬಹುದು? ತನ್ನ ಚಿತ್ರ ‘ಚೆನ್ನೈ ಎಕ್ಸ್‌ಪ್ರೆಸ್’ ಬಿಡುಗಡೆಗೆ ಒಂದು ವಾರ ಮೊದಲು, ತಾನು ಮಂಗಳೂರಿನಲ್ಲಿ ಹುಟ್ಟಿರುವುದನ್ನು ಶಾರುಕ್ ಮಾಧ್ಯಮಗಳಲ್ಲಿ ಜಾಹೀರು ಮಾಡಿದ್ದರು. ತನ್ನ ಹುಟ್ಟಿನ ಮೂಲವನ್ನು ಚೆನ್ನೈ ಎಕ್ಸ್‌ಪ್ರೆಸ್‌ನ ಪ್ರಚಾರಕ್ಕೆ ಪರೋಕ್ಷವಾಗಿ ಬಳಸಿಕೊಂಡರು. ಹಿಂದೆ, ಬಜ್ಪೆ ವಿಮಾನ ನಿಲ್ದಾಣ ದುರಂತದ ಸಂದರ್ಭದಲ್ಲಿ ಟ್ವಿಟ್ಟರ್‌ನಲ್ಲಿ ಶಾರುಕ್ ಇದನ್ನು ಸಣ್ಣದಾಗಿ ಪ್ರಸ್ತಾಪಿಸಿದ್ದರೂ, ಅಧಿಕೃತವಾಗಿ ‘ತಾನು ಹುಟ್ಟಿದ್ದು ಮಂಗಳೂರಿನಲ್ಲಿ. ಆದುದರಿಂದ ತಾನು ದಕ್ಷಿಣ ಭಾರತೀಯನೂ ಹೌದು’ ಎನ್ನುವುದನ್ನು ಆಂಗ್ಲಪತ್ರಿಕೆಯೊಂದರಲ್ಲಿ ಹೇಳಿಕೊಂಡರು. ಈ ಹೇಳಿಕೆಯೇ ಚೆನ್ನೈ ಎಕ್ಕೃ್‌ಸಪ್ರೆಸ್ ಚಿತ್ರಕ್ಕೆ ನಿರೀಕ್ಷಣಾ ಜಾಮೀನಿನಂತಿದೆ. ಚಿತ್ರದುದ್ದಕ್ಕೂ ತಮಿಳು ಭಾಷೆ ಮತ್ತು ಸಂಸ್ಕೃತಿಯನ್ನು ‘ಹಾಸ್ಯ’ಕ್ಕೆ ಬಳಸಿಕೊಂಡಿರುವ ಶಾರುಕ್, ಎಲ್ಲಿ ಇದು ತಮಿಳರ ಸಿಟ್ಟಿಗೆ ಕಾರಣವಾಗಬಹುದೋ ಎನ್ನುವ ಅಂಚಿಕೆ ಅವರ ಆಳದಲ್ಲಿ ಇದ್ದಂತಿದೆ.

ಚೆನ್ನೈ ಎಕ್ಸ್‌ಪ್ರೆಸ್ ಅಪ್ಪಟ ರೋಹಿತ್ ಶೆಟ್ಟಿ ಚಿತ್ರ. ರುಚಿಗೆ ತಕ್ಕ ಹಾಗೆ ಶಾರುಕ್ ತನ್ನ ‘ದಿಲ್‌ವಾಲ್ಹೇ ದುಲ್ಹನೀಯ ಲೇ ಜಾಯೆಂಗೆ’ ಚಿತ್ರದ ಕ್ರೀಮನ್ನು ಅದಕ್ಕೆ ಲೇಪಿಸಿದ್ದಾರೆ. ಒಂದು ತೆಳು ಕತೆಯ ಎಳೆಯನ್ನು ತಮಾಷೆಯ ದಾರಗಳಿಂದ ಉದ್ದಕ್ಕೆ ಎಳೆದಿರುವ ರೋಹಿತ್ ಶೆಟ್ಟಿ, ತನ್ನ ಚಿತ್ರದಲ್ಲಿ ಉತ್ತರ ಮತ್ತು ದಕ್ಷಿಣವನ್ನು ಜೋಡಿಸುವ ಪ್ರಯತ್ನವನ್ನು ಮಾಡಿದ್ದಾರೆ. ಮಿಠಾಯಿ ವಾಲಾ ರಾಹುಲ್(ಶಾರುಕ್ ಖಾನ್) ತನ್ನ ಅಜ್ಜನ ಅನಿರೀಕ್ಷಿತ ಸಾವಿನಿಂದಾಗಿ ಒಮ್ಮೆಲೆ ಸರ್ವಸ್ವತಂತ್ರನಾಗಿ ಬಿಡುತ್ತಾನೆ. ಗೆಳೆಯರು ಅವನ ಜೊತೆ ಸೇರಿ, ಗೋವಾದಲ್ಲಿ ಮಜಾ ಮಾಡುವ ಯೋಜನೆಯನ್ನೂ ರೂಪಿಸುತ್ತಾರೆ. ಆದರೆ, ದುರದೃಷ್ಟಕ್ಕೆ ಅಜ್ಜನ ಬೂದಿಯನ್ನು ರಾಮೇಶ್ವರದ ಕಡಲಿಗೆ ವಿಸರ್ಜಿಸುವ ಹೊಣೆ ಅವನ ಹೆಗಲಿಗೆ ಬೀಳುತ್ತದೆ. ಅಜ್ಜಿಯ ಒತ್ತಡದಿಂದಾಗಿ ಗೋವಾದ ಕಾರ್ಯಕ್ರಮ ರದ್ದು ಪಡಿಸಬೇಕಾದ ಸನ್ನಿವೇಶ ಎದುರಾಗುತ್ತದೆ. ಆದರೆ, ರಾಮೇಶ್ವರಕ್ಕೆ ಹೋದಂತೆ ಮಾಡಿ, ಗೋವಾದ ಕಡಲಲ್ಲಿ ಅಜ್ಜನ ಬೂದಿಯನ್ನು ವಿಸರ್ಜಿಸುವುದು. ಹೇಗೂ ಕಡಲ ನೀರಿನ ಮೂಲಕ ಆ ಬೂದಿ ರಾಮೇಶ್ವರ ಸೇರಬಹುದು ಎನ್ನುವುದು ಗೆಳೆಯರ ಸೂಚನೆ. ಅಂತೆಯೇ ಅಜ್ಜಿಯನ್ನು ನಂಬಿಸುವುದಕ್ಕಾಗಿ ಚೆನ್ನೈ ಎಕ್ಸ್‌ಪ್ರೆಸ್ ಏರುತ್ತಾನೆ. ಆದರೆ ಆ ಟ್ರೈನ್‌ನಲ್ಲಿ ಅವನು ಸಂದಿಸುವ ಮೀನಾಲೋಚಣಿ ಯಾನೆ ಮೀನಮ್ಮ(ದೀಪಿಕಾ ಪಡುಕೋಣೆ) ಅವನ ಎಲ್ಲ ಯೋಜನೆ ಹಳಿ ತಪ್ಪುವುದಕ್ಕೆ ಕಾರಣವಾಗುತ್ತಾಳೆ. ಗೋವಾ ಸೇರಬೇಕಾದವನು, ಆಕೆಯ ತಂದೆಯ ಆಳ್ವಿಕೆಯ ತಮಿಳು ನಾಡಿನ ಕೊಂಬನ್ ಸೇರಬೇಕಾಗುತ್ತದೆ. ಇಲ್ಲಿಂದ ನಾಯಕನ ಕಷ್ಟಗಳು, ತಮಾಷೆಗಳು ಆರಂಭವಾಗುತ್ತವೆ.
ಒಂದಿಷ್ಟು ಹಾಸ್ಯ, ತಮಾಷೆ ಮತ್ತು ಫೈಟಿಂಗ್. ರೋಹಿತ್ ಶೆಟ್ಟಿಯಿಂದ ಇದರಾಚನೆಗೆ ನಿರೀಕ್ಷಿಸುವುದು ದುಬಾರಿಯಾಗುತ್ತದೆ. ಈ ನಿರೀಕ್ಷೆಯನ್ನು ರೋಹಿತ್ ಶೆಟ್ಟಿ ಹುಸಿಗೊಳಿಸುವುದಿಲ್ಲ ಕೂಡ. ಇಡೀ ಚಿತ್ರದ ಶಕ್ತಿ ಶಾರುಕ್. ದಿಲ್‌ವಾಲ್ಹೇ ದುಲ್ಹನಿಯ ಲೇ ಜಾಯೆಂಗೆಯ ಲವಲವಿಕೆ ಇಲ್ಲಿ ತುಸು ಮಂಗಚೇಷ್ಠೆಯ ರೂಪವನ್ನು ಪಡೆದಿರುವುದನ್ನು ಪ್ರೇಕ್ಷಕ ಕ್ಷಮಿಸಬೇಕಾಗುತ್ತದೆ. ತನ್ನ ಪ್ರತಿಭೆ, ಮೈಕಟ್ಟು ಮತ್ತು ವರ್ಚಸ್ಸನ್ನು ಸಂಪೂರ್ಣ ಧಾರೆಯೆರೆದು ಶಾರುಕ್ ಈ ಚಿತ್ರದಲ್ಲಿ ತೊಡಗಿದ್ದಾರೆ. ಗ್ರಾಮೀಣ ತಮಿಳು ಹುಡುಗಿಯಾಗಿ ದೀಪಿಕಾ ಅಭಿನಯ ಅವರ ಸಾಮರ್ಥ್ಯಕ್ಕೆ ತಕ್ಕ ಹಾಗೆಯೇ ಇದೆ. ಅವರ ತಮಿಳು ಪ್ರಭಾವಿತ ಹಿಂದಿ ಚಿತ್ರದುದ್ದಕ್ಕೂ ಪ್ರೇಕ್ಷಕರನ್ನು ಖುಷಿ ಪಡಿಸುತ್ತದೆ. ತಮಿಳಿನ ಮಾಜಿ ಸ್ಟಾರ್ ಸತ್ಯರಾಜ್ ಮೀನಮ್ಮಳ ತಂದೆ ಹಾಗೂ ಸ್ಥಳೀಯ ತಲೈವರ್ ಆಗಿ ಪಾತ್ರದ ಗಾಂಭೀರ್ಯಕ್ಕೆ ಪೂರಕವಾಗಿ ನಟಿಸಿದ್ದಾರೆ. ಸಂಗೀತ ಮತ್ತು ಛಾಯಾಗ್ರಹಣ ಚಿತ್ರದ ಹೆಗ್ಗಳಿಕೆ. ಮುಂಬಯಿ-ಚೆನ್ನೈ-ರಾಮೇಶ್ವರದ ರಮ್ಯ ಪ್ರಕೃತಿ ಪ್ರತಿ ಫ್ರೇಮ್‌ನಲ್ಲೂ ಅದ್ಭುತವಾಗಿ ಮೂಡಿ ಬಂದಿದೆ.
ಚಿತ್ರ ಮುಗಿದಾಗ, ನಾವು ಯಾತಕ್ಕೆ ಚಿತ್ರಮಂದಿರದೊಳಗೆ ನಕ್ಕೆವು ಎನ್ನುವುದನ್ನು ಒಂದಿಷ್ಟು ಗಂಭೀರವಾಗಿ ಯೋಚಿಸ ತೊಡಗಿದರೆ, ನಮ್ಮೆಳಗೆ ವಿಷಾದವೊಂದು ಸುಳಿಯಬೇಕು. ಇಡೀ ಚಿತ್ರದ ಹಿಂದೆ ಬಾಲಿವುಡ್‌ನ ‘ಸುಪೀರಿಯಾರಿಟಿ’ ಕೆಲಸ ಮಾಡಿರುವುದು ಹೊಳೆಯುತ್ತಾ ಹೋಗುತ್ತದೆ. ತಮಿಳು ನಟರನ್ನು ಶಾರುಕ್‌ಗೇಲಿ ಮಾಡುವುದು ಇದೇ ಹೊಸತೇನಲ್ಲ. ಇಂದು ಬಾಲಿವುಡ್ ತಮಿಳು-ತೆಲುಗನ್ನೇ ಭಾಗಶಃ ಅವಲಂಬಿಸಿದ್ದರೂ ಆ ಭಾಷೆ ಮತ್ತು ಸಂಸ್ಕೃತಿಯ ಕುರಿತಂತೆ ಅವರಿಗಿರುವ ಉಡಾಫೆ ಕಮ್ಮಿಯಾಗಿಲ್ಲ. ಚೆನ್ನೈ ಎಕ್ಸ್‌ಪ್ರೆಸ್‌ನಲ್ಲಿ ಅದು ಮತ್ತೊಮ್ಮೆ ವ್ಯಕ್ತವಾಗಿದೆ. ಹಾಸ್ಯ, ತಮಾಷೆಗಳಿಗಾಗಿ ತಮಿಳು ಭಾಷೆ ಮತ್ತು ಅವರ ಜನಜೀವನವನ್ನು ಬಳಸಿಕೊಂಡಿರುವುದು ಪ್ರಜ್ಞಾಪೂರ್ವಕವಲ್ಲದೇ ಇರಬಹುದು. ಆದರೆ, ಬಾಲಿವುಡಠ್‌ನ ಜನರಿಗಿರುವ ಮೇಲರಿಮೆ ಮತ್ತು ದಕ್ಷಿಣ ಭಾರತೀಯರ ಕುರಿತಂತೆ ಅವರಿಗಿರುವ ಕೀಳರಿಮೆ ಕಥೆಯ ಹೆಣಿಗೆಯಲ್ಲಿ ಬೇಡ ಬೇಡವೆಂದರೂ ಇಣುಕ್ತದೆ. ಮತ್ತು ತಮ್ಮ ಈ ಚೇಷ್ಟೆಗೆ ದಕ್ಷಿಣ ಭಾರತೀಯ ಅದರಲ್ಲೂ ಕನ್ನಡಿಗ ನಿರ್ದೇಶಕನನ್ನೇ ಬಳಸಿಕೊಂಡಿರುವುದು ಇನ್ನೊಂದು ವಿಪರ್ಯಾಸವಾಗಿದೆ.
ತಾನೂ ದಕ್ಷಿಣ ಭಾರತೀಯ ಎಂಬ ಶಾರುಕ್ ಖಾನ್ ಕೊಡುಗೆ ಪರೋಕ್ಷವಾಗಿ ದಕ್ಷಿಣ ಭಾರತೀಯರ ಕುರಿತಂತೆ ಮತ್ತೊಂದು ಅಣಕವೋ ಎಂಬ ಅನುಮಾನ ಕಾಡುವುದು ಇದೇ ಕಾರಣಕ್ಕೆ. ‘‘ದಕ್ಷಿಣ ಭಾರತೀಯರೆಂದು ನೀವು ಸಂಕೋಚ ಪಡಬೇಕಾಗಿಲ್ಲ…ನಾನು ಕೂಡ ಇಲ್ಲೇ ಹುಟ್ಟಿರುವುದು’ ಎಂಬ ಧ್ವನಿಯೊಂದು ಆ ಉದಾರತನದ ತಳದಲ್ಲಿ ಕೆಸರುಗಟ್ಟಿದೆಯೇ ಎನ್ನುವುದನ್ನು ನಮಗೆ ನಾವೇ ಕೇಳಿಕೊಳ್ಳುವಂತೆ ಮಾಡುತ್ತದೆ ‘ಚೆನ್ನೈ ಎಕ್ಸ್‌ಪ್ರೆಸ್’
 

‍ಲೇಖಕರು avadhi

20 August, 2013

1 Comment

  1. shanthi k.a.

    olleya vimarshe …..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading