ರಾಮಚಂದ್ರ ದೇವ
ಸಮಗ್ರ ಕಾವ್ಯ, 1964-2003
ರಾಮಚಂದ್ರ ದೇವ ಅವರ ಕವನಗಳನ್ನು ಓದುವಾಗ ಮೊದಲಿಗೆ ಅನಿಸುವ ವಿಷಯವೆಂದರೆ ಅವರ ಸಂವೇದನಾಕ್ರಮದ ಸ್ವೋಪಜ್ಞತೆ. ದೇವ ಅವರ ಸಂವೇದನೆಯಲ್ಲಿ ಒಂದು ರೀತಿಯ ಸಂಥ ಸಮಗ್ರ ದೃಷ್ಟಿಕೋನವಿದೆ, ಜೀವನದ ಹಿಂದು-ಮುಂದುಗಳನ್ನೂ ಇಂದಿನ ಅಸ್ತಿತ್ವದ ಸ್ವರೂಪವನ್ನೂ ತಿಳಿಗಣ್ಣಿನಿಂದ, ಯಾವ ಉದ್ವಿಗ್ನತೆಯಿಲ್ಲದೆ ನೋಡುವ ಧೈರ್ಯವಿದೆ. ಅವರ ಅಸ್ತಿತ್ವವಾದೀ ದೃಷ್ಟಿಕೋನದಲ್ಲಿ ಹೊರಗೆ ಕಾಣುವ ಕಾತರ, ಕಳವಳಗಳಿಲ್ಲ. ಅಸ್ತಿತ್ವವಾದದ ಮೂಲ ಆತಂಕಗಳನ್ನು ನೀಲಕಂಠನಂತೆ ನುಂಗಿ, ಪ್ರಪಂಚದ ವೈರುಧ್ಯಗಳನ್ನು, ಒಳಗಿನ ಅರ್ಥಹೀನತೆಯನ್ನು, ಅಸಂಗತಿಯನ್ನು ಸ್ವೀಕಾರ ಭಾವದಿಂದ ಅಭಿವ್ಯಕ್ತಗೊಳಿಸುವ ಯತ್ನ ಅವರ ಸಂವೇದನಾಕ್ರಮದ ವೈಶಿಷ್ಟ್ಯ. ದೇವ ಅವರ ಕಾವ್ಯದಲ್ಲಿ ಪ್ರಪಂಚವೆಂದರೆ ಬರೇ ಮಾನವರಲ್ಲ, ಎಲ್ಲ ಜೀವಿಗಳು, ಎಲ್ಲ ಪ್ರಾಣೀಗಳು. ಮನುಷ್ಯನೇ ಕೇಂದ್ರವೆಂದು ಹೇಳುವ ಕ್ರಿಶ್ಚಯನ್ ತತ್ವಕ್ಕೆ ವಿರುದ್ಧವಾದ ದೇವ ಅವರ ಕಾವ್ಯ ಪ್ರಪಂಚದಲ್ಲಿ ಕ್ರಿಶ್ಚಿಯನ್ ತತ್ವದ ಮೂಲದರ್ಶನವೇ ಅಡಕಗೊಂಡಂತಿದೆ. ಯಾಕೆಂದರೆ ಇಲ್ಲಿ ದುಃಖದ, ಹಿಂಸೆಯ, ವಿಧ್ವಂಸದ ಚಿತ್ರಗಳೇ ಹೆಚ್ಚು. ಇಲ್ಲಿ ಸೂಚಿತವಾಗುವ ಸಂಗತಿಯೆಂದರೆ-ಮನುಷ್ಯನ ನಾಗರಿಕತೆಯೆಂದರೇ ಒಂದು ವಿನಾಶದ ಸತತ ಪ್ರಕ್ರಿಯೆ.
– ಶಾಂತಿನಾಥ ದೇಸಾಯಿ

ರಾಮಚಂದ್ರ ದೇವ ಅವರ ಇಂದ್ರಪ್ರಸ್ಥ ಕವನ ಸಂಕಲನ ಗಮನಾರ್ಹ. ಇಲ್ಲಿ ಓದುಗನ ಮನಸ್ಸನ್ನು ಕದಡುವ, ಕಾಡುವ ಶಕ್ತಿ ಪಡೆದ ಪದ್ಯಗಳು ಹಲವಾರಿವೆ. ಇಲ್ಲಿರುವ ಕಾಲ್ಪನಿಕ ಕಾವ್ಯ ಪ್ರಪಂಚ (ವಾಸ್ತವದ ನಿಚ್ಚಳ ಐಂದ್ರಿಕ ಅನುಭವದಿಂದ ಹುಟ್ಟಿ ಬಂದದ್ದು) ನಮ್ಮ ಮನಸ್ಸನ್ನು ತಲ್ಲಣಗೊಳಿಸುತ್ತದೆ. ವಸ್ತುಲೋಕದಿಂದ, ಪ್ರಾಣಿಜೀವನದಿಂದ, ಮನುಷ್ಯ ಬದುಕಿನಿಂದ ನಿರ್ಮಿತವಾಗುವ ದೇವ ಅವರ ಸ್ಪಷ್ಟ ಚಿತ್ರಗಳು, ಇಡೀ ಬ್ರಹ್ಮಾಂಡದ ಬಗ್ಗೆಯೇ ಇವರಿಗಿರುವ ಒಟ್ಟು ದೃಷ್ಟಿಯನ್ನು ಅಭಿವ್ಯಕ್ತಗೊಳಿಸುತ್ತವೆ. ಆಧುನಿಕ ಭೌತಶಾಸ್ತ್ರದಿಂ, ಅದರಿಂದ ಪ್ರೇರಿತವಾದ ಅಸ್ತಿತ್ವವಾದದಿಂದ ಬರುವ ವಿಧಿ ಇರದ ತಟಸ್ಥ ಮನೋಭಾವ, ಅಲ್ಲದೆ ಮನುಷ್ಯನ ಅವಸ್ಥೆ ಒಂದು ಪರಕೀಯ ಸ್ಥಿತಿ ಎನ್ನುವ ಅರಿವು ಈ ಕವಿಯ ಚಿಂತನ/ ದರ್ಶನದ ಹಿನ್ನೆಲೆಯಲ್ಲಿ ಪ್ರಮುಖವಾಗಿ ಕಾಣುತ್ತವೆ.
-ಪಿ. ಶ್ರೀನಿವಾಸ ರಾವ್
(ಬೆನ್ನುಡಿಯಿಂದ )



0 Comments