ಸಾಹಿತ್ಯವೆನ್ನುವುದು ಹಲವು ಅರ್ಥಗಳಲ್ಲಿ ಸ್ವಾಂತಸುಖಾಯ ಆಗುತ್ತಿರುವ ಹೊತ್ತೊಂದರಲ್ಲಿ ಮೊಗಸಾಲೆಯವರು ಹಲವು ಅರ್ಥಗಳಿಂದ ಎತ್ತರದ ವ್ಯಕ್ತಿಯೆನಿಸಿಕೊಳ್ಳುತ್ತಾರೆ. ಅವರು ಕಾಂತಾವರದಲ್ಲಿ ಮಾತ್ರವಲ್ಲ. ಕನ್ನಡನಾಡಲ್ಲೇ ಒಂದು ನಿಶ್ಯಬ್ದ ಕ್ರಾಂತಿಯನ್ನು ಆಗುಮಾಡಿದ್ದಾರೆ ಮಾಡುತ್ತಿದ್ದಾರೆ. ಅದೊಂದು ಕ್ರಾಂತಿಯೆಂದು ನಮಗಾರಿಗೂ ಅನಿಸದ ಸಮಶೀತೋಷ್ಣದಲ್ಲಿ.
ಐವತ್ತು ವರ್ಷಗಳ ಹಿಂದೆ ಕಾಂತಾವರವೆಂದರೆ ಕರ್ನಾಟಕದ ಮ್ಯಾಪ್ ನಲ್ಲಿ ಕಾಣಿಸದ, ಕಾರ್ಕಳ ಮಂಗಳೂರು ಮೂಡಬಿದಿರೆಗಳ ಮಂದಿ ಕೂಡಾ. ಏನು ಎತ್ತ ಎಲ್ಲಿ ಎಂದು ಕೇಳುತ್ತಿದ್ದ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದ ಹಳ್ಳಿ. ಇವತ್ತು ಕನ್ನಡ ಸಂಘ ಮತ್ತು ಅಲ್ಲಮಪ್ರಭು ಪೀಠಗಳಿಂದಾಗಿ ಕಾಂತಾವರದ ಹೆಸರು ನಾಡಿನಾದ್ಯಂತ ಅನುರಣಿಸುತ್ತಿದೆ. ಮೊಗಸಾಲೆಗೆ ಎಪ್ಪತ್ತು ತುಂಬಿದ ಈ ಹೊತ್ತು ಆ ಅನುರಣನ ಯಾವ ಋತ್ವಿಜರ ಮಂತ್ರಘೋಷಕ್ಕೆ ಕಮ್ಮಿಯಿಲ್ಲದಂತಹದು.
Poets are the unacknowledgede legislators of the world ಎಂಬ ಷೆಲ್ಲಿಯ ಮಾತಿಗೆ ಕಾಂತಾವರ ಬರೆದ ಪುನರ್ಭಾಷ್ಯ ಈ ಮೊಗಸಾಲೆ.


0 Comments