ಯಾವುದೆ ನುಡಿನಿರೂಪಣೆ ಧರಿಸಬಹುದಾದ ತಾತ್ವಿಕತೆಗಳು ಯಾವುವು ಮತ್ತು ಅವುಗಳ ಅರ್ಥಸಾಧ್ಯತೆಗಳೇನು ಎಂದು ವಿಮರ್ಶೆಯು ವಿವರಿಸಿದರೆ ಸಾಕೆ? ಆಯಾಯಾ ನುಡಿನಿರೂಪಣೆಗಳು ತಾವು ಇರುವಂತೆಯೆ ಯಾಕೆ ಸಂಭವಿಸುತ್ತವೆ? ಅವುಗಳ ಉದ್ದೇಶ, ಕಾರಣ, ಪರಿಣಾಮಗಳು ಯಾವುವು? ಅವುಗಳ ಓದುಗಳಿಂದ ಯಾವ ಒತ್ತಡಗಳು ಮತ್ತು ನಡೆಗಳು ನಿರ್ಮಾಣವಾಗುತ್ತವೆ; ಇಂತಹ ತಿಳುವಳಿಕೆಯಿಂದ ಸಾಮಾಜಿಕ ಬದಲಾವಣೆಯಲ್ಲಿ ಮಧ್ಯಪ್ರವೇಶಿಸುವುದು ಹೇಗೆ ಎಂದೆಲ್ಲ ವಿಮರ್ಶೆ ಚರ್ಚೆಸಬೇಕಾಗುತ್ತದೆ. ಈ ಹೊಣೆಗಳ ಕಡೆಗೆ ಸುರೇಶ ನಾಗಲಮಡಿಕೆ ಅವರ ವಿಮರ್ಶೆ ಚಲಿಸುವ ಇರಾದೆ ಹೊಂದಿದೆ. ಇವರ ವಿಮರ್ಶೆಯಲ್ಲಿ ಅಲ್ಲಲ್ಲಿ ಇರುವ ಅತೃಪ್ತಿ ಇದಕ್ಕೆ ಸಾಕ್ಷಿ.
ಸಂಬಂಧಿಕತೆಯ ರಾಜಕಾರಣದಿಂದ, ಸಾಂದರ್ಭಿಕತೆಯ ರಾಜಕಾರಣದಿಂದ ಮತ್ತು ಯಜಮಾನರ, ಯಾಜಮಾನ್ಯಗಳ ಉಪಸ್ಥಿತಿಯ ರಾಜಕಾರಣಗಳಿಂದ ಮುಕಗತವಾದ ವಿಮರ್ಶೆ ಹುಟ್ಟುವುದು ನಮ್ಮಲ್ಲಿ ಅಪುರೂಪವೇ ಆಗಿದೆ. ಇಂತಹ ಯತ್ನಗಳನ್ನು ಸುರೇಶ್ ಮಾಡುತ್ತಿದ್ದಾರೆ. ಕೃತಿಕೇಂದ್ರಿತ ಮತ್ತು ಲೇಖಕ ಕೇಂದ್ರಿತ ವಿಮರ್ಶೆಯಲ್ಲಿ ತೊಡಗುತ್ತಲೆ ಅದರಿಂದ ವಿಮರ್ಶೆಯನ್ನು ಪಾರುಮಾಡುವ ಯತ್ನವನ್ನೂ ಇಲ್ಲಿನ ಲೇಖನಗಳಲ್ಲಿ ಕಾಣಬಹುದು. ಸರಳತೆ, ಶ್ರದ್ಧೆ, ಪ್ರೀತಿ, ತರತಮವಲ್ಲದ ತುಲನೆ ಮತ್ತು ಹಾನೆಸ್ಟಿಯಂತಹ ಗುಣಗಳನ್ನು ವಿಮರ್ಶೆಯ ಚಹರೆಗಳನ್ನಾಗಿ ರೂಪಿಸುವ ಯತ್ನಗಳು ಇಲ್ಲಿವೆ. ಹಾಗೆ ಯತ್ನಿಸುತ್ತಲೆ ಅದ್ಭುತ, ಅಮೋಘ, ಸುಂದರ, ಗಮನಾರ್ಹ ಇತ್ಯಾದಿ ಅತಿಯಾದ ಗುಣವಾಚಕಗಳಿಂದಲು ವಿಮರ್ಶೆಯನ್ನು ಪಾರುಮಾಡುವ ಯತ್ನಗಳು ಇಲ್ಲಿವೆ. ನಾಳಿನ ಭರವಸೆಯ ವಿಮರ್ಶಕ ಆಗಿರುವ ನಾಗಲಮಡಿಕೆಗೆ ಯಾವ ಮುನ್ನುಡಿ ಬೆನ್ನುಡಿಯ ಸುಳ್ಳು ಪ್ರಮಾಣಪತ್ರವೂ ಬೇಕಿಲ್ಲ. ಗೈಡೆಡ್ ಐಡಿಯಾಲಜಿ ನಮಗ್ಯಾಕೆ? ಕೃತಿ ನಿಮ್ಮ ಕೈಯಲ್ಲಿರುವಾಗ ಓದಿ.
ರಾಮಲಿಂಗಪ್ಪ ಟಿ. ಬೇಗೂರು



kannada sahitya vimarshe hechhagi prakatavagabekide, TAKKA MANNINA TEVAKKAGI Ondu olleya prayatna. E.G.Reddy charkunte.