‘ಮಾಡಿದ ಪಾಠಗಳು ಎಲ್ಲವೂ ವ್ಯರ್ಥವಲ್ಲ’ ಎನ್ನುವ ಸಮಾಧಾನವನ್ನು ತಂದುಕೊಟ್ಟ ವಿದ್ಯಾರ್ಥಿಗಳಲ್ಲಿ ರಾಜಶೇಖರ ಹಳೆಮನೆಯೂ ಒಬ್ಬ. ವಿದ್ಯಾರ್ಥಿಯ ಭವಿಷ್ಯವನ್ನು ಪ್ರತಿಭೆಗಿಂತಲೂ ಆತನ ಸತತಾಭ್ಯಾಸ, ಪರಿಶ್ರಮ, ಶ್ರದ್ಧೆ ಅವಕಾಶಗಳು ರೂಪಿಸುತ್ತವೆ ಎನ್ನುವುದು ನನ್ನ ನಂಬಿಕೆ ಈ ನಂಬಿಕೆಯನ್ನು ಕೆಲವು ಜನ ವಿಧ್ಯಾರ್ಥಿಗಳು ಉಳಿಸಿದ್ದಾರೆ.ಅಂತಹ ವಿದ್ಯಾರ್ಥಿಗಳಲ್ಲಿ ಡಾ.ರಾಜಶೇಖರನು ಒಬ್ಬ. ಗ್ರಾಮೀಣ ಪರಿಸರದಿಂದ ಬರುವವರಿಗೆ/ಬಂದವರಿಗೆ ಇರುವ ಎಲ್ಲ ಹಿಂಜರಿಕೆಯು ರಾಜಶೇಖರನಲ್ಲಿವೆ. ತನ್ನ ಪರಿಸರದ, ನೆಲಮೂಲ ಸಂಸ್ಕೃತಿಯ ಸೂಕ್ಷ್ಮತೆಗಳನ್ನೆಲ್ಲ ತನ್ನ ಸೃಜನಶೀಲ ಶಕ್ತಿಯನ್ನಾಗಿಸಿಕೊಂಡು ಕಥೆಗಳನ್ನು ಬರೆಯುವುದರ ಮೂಲಕ ಈ ತಲೆಮಾರಿನ ಕಥೆಗಾರರಲ್ಲಿಯೇ ಎದ್ದುಕಾಣಿಸುತ್ತಿರುವ. ಕೈಗೆ ಸಿಕ್ಕ ಅಕ್ಷರ, ದಕ್ಕಿದ ಓದನ್ನು ಬದುಕಿಗೆ ಭದ್ರ ಬುನಾದಿಯಾಗಿಸಿಕೊಳ್ಳುವವರ ಸಂಖ್ಯೆ ಇಂದು ಕಡಿಮೆಯಾಗುತ್ತಿದೆ. ಆದರೆ ಅದಕ್ಕೆ ಅಪವಾದವಾಗಿರುವ ರಾಜಶೇಖರ ಕಥನ ಸಾಹಿತ್ಯದಿಂದ ಪದವಿ ನಿಮಿತ್ತ ಸಂಶೋಧನೆಯ ದುರ್ಗಮ ಹಾದಿಯನ್ನು ಆಯ್ಕೆ ಮಾಡಿಕೊಂಡು ತನ್ನ ಆಸಕ್ತಿಯನ್ನು ವಷಯದ ಆಯ್ಕೆಯಲ್ಲಿಯು ಉಳಿಸಿಕೊಂಡು ಸೂಕ್ಷ್ಮ ಒಳನೋಟಗಳ ಮೂಲಕ ವಿಷಯಕ್ಕೆ ನ್ಯಾಯ ಸಲ್ಲಿಸುವುದರ ಮೂಲಕ ಉದ್ದೇಶಿತ ಗುರಿಯನ್ನು ತಲುಪಿರುವನು.
ಈ ಪ್ರಯಾಣದ ಅನುಭವ ಆತನ ಸೃಜನಶೀಲ ಶಕ್ತಿಯನ್ನು ಹೆಚ್ಚಿಸುವಲ್ಲಿ ನೆರವಾಗುವುದು ಎಂದು ಭಾವಿಸಿರುವೆ. ವಿಸ್ತಾರ ಓದಿನ, ಗಂಭೀರ ವಿದ್ಯಾರ್ಥಿಯಾದ ರಾಜಶೇಖರನ ಬದುಕಿನ ಕಾಳಜಿ, ಪ್ರೀತಿ, ಪ್ರಾಮಾಣಿಕತೆ, ಭ್ರಷ್ಟ ವ್ಯವಸ್ಥಗೆ ಬಲಿಯಾಗದೆ ಆ ಮೂಲಕ ಸಾಹಿತ್ಯವನ್ನು ವಿಭಿನ್ನ ಸ್ವರೂಪದಲ್ಲಿ ಗ್ರಹಿಸುವ, ನಿರೂಪಿಸುವ ನೈತಿಕ ಶಕ್ತಿಯನ್ನು ಉಳಿಸಿಕೊಂಡಿದ್ದಾರೆ. ‘ಪಠ್ಯ’ಗಳೊಳಗಿನ ‘ಸಾಂಸ್ಕೃತಿಕ’ ಸಂಗತಿಗಳನ್ನು ‘ಮುಖಾಮುಖಿ’, ‘ಸಂಘರ್ಷ’ ಎನ್ನುವ ಪರಿಭಾಷೆಯೊಂದಿಗೆ ರಾಜಶೇಖರ ಇಲ್ಲಿ ಅಧ್ಯಯನಕ್ಕೆ ಒಳಪಡಿಸಿರುವುದು ಈ ಕಾಲದ ಅಗತ್ಯವೆಂದೆ ಭಾವಿಸಿಕೊಂಡಿದ್ದೇನೆ. ಸಾಹಿತ್ಯ ಮತ್ತು ತಲೆಮಾರುಗಳ ಅನನ್ಯತೆಯನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ರಾಜಶೇಖರನ ಈ ಕೃತಿ ನೆರವಾಗುತ್ತದೆ ಎಂಬುದರ ಕುರಿತು ನಂಬಿಕೆಯಿದೆ.
ಡಾ.ಮಲ್ಲಿಕಾ ಘಂಟಿ


0 Comments