ಇಪ್ಪತ್ತೆರಡು ಭಾಷೆಗಳಿಂದ ಆಯ್ದ ಬಾಯ್ಮಾತಿನ ಕತೆಗಳು
ಸಂಗ್ರಹ ಮತ್ತು ಸಂಪಾದನೆ
ಎ ಕೆ ರಾಮಾನುಜನ್
ಅನುವಾದ
ಮಹಾಬಲೇಶ್ವರ ರಾವ್
ಶತಶತಮಾನಗಳಿಂದ ಭಾರತದ ಜನವರ್ಗದ ಕಲ್ಪನಾ ಶಕ್ತಿಯನ್ನು ಪ್ರಚೋದಿಸಿದ ಬಾಯ್ಮಾತಿನ ಕತೆಗಳ ಸಂಕಲನವೇ ಭಾರತೀಯ ಜನಪದ ಕತೆಗಳು. ಈ ಉಪಖಂಡದ ಇಪ್ಪತ್ತೆರಡು ಭಾಷೆಗಳಿಂದ ಆಯ್ದ ಕತೆಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ಇಲ್ಲಿ ಕೊಡಲಾಗಿದೆ. ಈ ಕತೆಗಳು ನಮ್ಮ ಮನಸ್ಸನ್ನು ಚುಚ್ಚಿ ನೋಯಿಸುವಂತೆಯೇ ನಗಿಸುತ್ತದೆ. ಸೂಚ್ಯವಾಗಿ ಮಾತನಾಡುತ್ತವೆ. ನೇರವಾಗಿ ಹಳಿಯುತ್ತವೆ. ನಿಗೂಢವಾಗಿರುವಂತೆಯೇ ರಮ್ಯವಾಗಿಯೂ ಇವೆ. ಒಂದರ ವಿರುದ್ಧ ಇನ್ನೊಂದು ಸಂಚು ಹೂಡುವ ಪ್ರಾಣಿಗಳು, ಚತುರ ವಿದೂಷಕರು, ಮೋದಿ ಮಾಡುವ ಕತೆಗಾರರು, ವಿವೇಕಿಗಳಾದ ಮತ್ರಿಗಳು, ಮೂರ್ಖ ರಾಜರು, ಠಕ್ಕರು , ಮುಟ್ಠಾಳರು, ಆಕಾರಣ ಬಹಿಷ್ಕಾರಕ್ಕೆ ಒಳಗಾಗಿ ಕೊನೆಗೆ ಪುನರ್ಮಿಲನ ಹೊಂದುವ ರಾಜಕುಮಾರ – ರಾಜಕುಮಾರಿಯರು, ಭಿಕ್ಷುಕರು ಅಥವಾ ಪ್ರಾಣಿಗಳ ರೂಪಧಾರಣ ಮಾಡುವ ದೇವರುಗಳು ಇವರೆಲ್ಲ ಅದ್ಭುತವಾದ ಹಾಗೂ ಆಶ್ಚರ್ಯ ಜನಕವಾದ ಈ ಕಥಾಲೋದದಲ್ಲಿದ್ದಾರೆ. ಇಲ್ಲಿನ ಎಲ್ಲ ಕತೆಗಳು ಜನಜೀವನದಿಂದ ಜೀವಧಾತುವನ್ನು ಪಡೆದಿವೆ. ಜನರ ನಿತ್ಯ ಜೀವನದಲ್ಲಿ ಭದ್ರವಾಗಿ ಬೇರುಬಿಟ್ಟಿವೆ. ಡಾ ಎ. ಕೆ. ರಾಮಾನುಜನ್ ಅವರು ಕೊಟ್ಟಿರುವ ಖಚಿತವಾದ ಪ್ರಸ್ತಾವನೆ ಹಾಗೂ ಸುಸಂಬದ್ಧ ಟಿಪ್ಪಣಿಗಳಿಂದಾಗಿ ಈ ಗ್ರಂಥದ ಗುಣಮೌಲ್ಯ ವರ್ಧಿಸಿದೆ. ಭಾರತದ ಜಾನಪದ ಪರಂಪರೆಯ ಸಮೃದ್ಧಿ ಹಾಗೂ ಸಾಮರ್ಥ್ಯದ ಪರಿಚಯ ಮಾಡಿಕೊಳ್ಳ ಬಯಸುವವರಿಗೆ, ಜಿಜ್ಞಾಸೆಗಳಿಗೆ, ಆಸಕ್ತರಿಗೆ ಇದೊಂದು ಅನಿವಾರ್ಯ, ಅಮೂಲ್ಯ ಮಾರ್ಗದರ್ಶಿ.

ಕವಿ, ಕತೆಗಾರ, ಕಾದಂಬರಿಕಾರ, ಭಾಷಾಂತರಕಾರ, ಭಾಷಾತಜ್ಞ, ಜಾನಪದ ವಿದ್ವಾಂಸ ಶ್ರೀ ಅತ್ತಿಪ್ಪಟ್ ಕೃಷ್ಣಸ್ವಾಮಿ ಅಯ್ಯಂಗಾರ್ ರಾಮಾನುಜನ್ (೧೯೨೯-೧೯೯೩) ಜನಿಸಿದ್ದು ಮೈಸೂರಿನಲ್ಲಿ. ಅವರಿಗೆ ಮೆಕ್ ಆರ್ಥರ್ ಫೆಲೋಶಿಪ್ (ಜೀನಿಯಸ್), ಫುಲ್ ಬ್ರೈಟ್ ಶಿಷ್ಯ ವೇತನ, ಪದ್ಮಶ್ರೀ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದ ಹಲವಾರು ಫೆಲೋಶಿಪ್ ಗಳು, ಅನುದಾನಗಳು ಹಾಗೂ ಪ್ರಶಸ್ತಿಗಳು ದೊರೆತಿವೆ. ಅವರ ಕವನಗಳು, ಅನುವಾದಗಳು ಮತ್ತು ಪ್ರೌಢಪ್ರಬಂಧಗಳು ಜಗತ್ತಿನ ವಿವಿಧ ನಿಯತಕಾಲಿಕಗಳಲ್ಲಿ ಬೆಳಕು ಕಂಡಿವೆ. ಹೊಕ್ಕುಳಲ್ಲಿ ಹೂವಿಲ್ಲ, ಕುಂಟೋಬಿಲ್ಲೆ, ಅಣ್ಣಯ್ಯನ ಮಾನವಶಾಸ್ತ್ರ ಮತ್ತೊಬ್ಬನ ಆತ್ಮಚರಿತ್ರೆ, ಸಂಸ್ಕಾರ (ಅನುವಾದ), ಸ್ಪೀಕಿಂಗ್ ಆಫ್ ಶಿವ (ವಚನಗಳ ಅನುವಾದ) ಅವರ ಕೆಲವು ಮಹತ್ತ್ವದ ಪ್ರಕಟಣೆಗಳು. ಅವರು ಸೌತ್ ಏಶ್ಯನ್ ಲ್ಯಾಂಗ್ವೇಜಸ್ ಅಂಡ್ ಸಿವಿಲಿಜೇಶನ್ಸ್ ನ ವಿಲಿಯಂ ಇ ಕಾಲ್ವಿನ್ ಪ್ರೊಫೆಸರ್ ಆಗಿ, ಭಾಷಾ ವಿಜ್ಞಾನದ ಪ್ರಾಧ್ಯಾಪಕರಾಗಿ, ಚಿಕಾಗೋ ವಿಶ್ವ ವಿದ್ಯಾನಿಲಯದ ಸಮಾಜ ಚಿಂತನ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
(ಬೆನ್ನುಡಿ)
ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ
ಬೆಲೆ : ರೂ ೯೦/-



0 Comments