
ಎಸ್ ಜಿ ಸಿದ್ದರಾಮಯ್ಯ
ನೀರವದ ನಡುರಾತ್ರಿ ವಾಟ್ಸ್ ಆ್ಯಪ್ ಸದ್ದು
ನೋಡಿದರೆ ನಿದ್ದೆಗಣ್ಣಿನಿಂದ ಎದ್ದು
ಇನ್ನಿಲ್ಲ ಸಮಸಮಾಜದ ಕನಸಿಗ ಡಿ ಎಸ್ ಎನ್
ಕನಸುಗಳು ಕಮರಿಹೋದ ದಿಗಿಲು.
ಯಾರಿಗೆ ಯಾರೂ ಕಾಯುವುದಿಲ್ಲ
ಕಾಣುವ ಕನಸುಗಳಿಗೂ ಕೊನೆಯಿಲ್ಲ
ಹಿಂಚು ಮುಂಚು ಸಂತೆದಾರಿ
ಕವಿದ ಕತ್ತಲು ನಡುವೆ
ಅಂಗೈ ತುಂಬಿದ ಬೆಳಕು
ಸೆಕೆಂಡುಗಳಲ್ಲಿ ಆರಿ ಹೋಯಿತು ಸೆಳಕು

ಕುಂತ ಧೇನಿಕೆಯಲ್ಲಿ
ಮೂಡಿವೆ ನೆನಪಿನ ನವಿಲುಗರಿ
ದೂರದೂರುಗಳಿಗೆ ದಾರಿ ಸವೆಸಿದ ಪರಿ
ದುರ್ಗದ ಕೋಟೆಬಾಗಿಲಲ್ಲಿ
ಕುಂತು ಗಳಪಿದ್ದು
ಆಕಾಶವಾಣಿಯಲ್ಲಿ ಸಲ್ಲಾಪಿಸಿದ್ದು
ಗಾಂಧಿಯನ್ನು ಕನವರಿಸಿ ಬರೆದದ್ದು
ಹೊಸಮನುಷ್ಯನ ಹಂಬಲಿಸಿ
ಕುಂತಕಡೆ ಜಗವ ಸುತ್ತಿದ ಜಂಗಮ
ಇನ್ನು ನೀನಿಲ್ಲವೆಂಬುದು ಬದುಕಿನ ಹಂಗಾಮ
ಎಲ್ಲರೆದೆಯೊಳಗ ಉಳಿದಾವ ಹಾಡುಗಳು
ನೀ ಬರೆದ ಮುಗಿಯದಾ ಪಾಡುಗಳು.






0 Comments