– ಕೆ ಅಕ್ಷತಾ
ಶಹನಾಯಿಯ ಆರ್ಭಟ

ನನಗೂ ಶಹನಾಯಿ ಬಗ್ಗೆ ಆಸಕ್ತಿ ಹುಟ್ಟಿ ಶ್ರೀನಿವಾಸರನ್ನ ಕಾಡಿ ಬೇಡಿ ದೆಹಲಿಯಿಂದ ಒಂದು ಶಹನಾಯಿ ತರಿಸ್ಕಂಡಿದ್ದೆ. ಆದರೆ ಶ್ರೀನಿವಾಸ ಶಹನಾಯಿ ತಂದೋರು ಅದರ ಪೀಪಿ ತರೋದು ಮರ್ತು ಬಿಟ್ಟಿದ್ದರು. ನನಗೆ ಅವರು ತಂದ ಕೂಡ್ಲೇ ಬಾರಿಸಬೇಕು ಅಂತ ಆಸೆ ಆದರೆ ಪೀಪಿ ಇಲ್ಲದೇ ಇರೋದ್ರಿಂದ ಅದನ್ನ ಹ್ಯಾಗೆ ಊದಿದ್ರೂ ಬರೀ ಪುಸ್ ಪುಸ್ ಅಂತ ಬರೋದು. ಆವಾಗ್ಲೇ ಒಂದು ಪ್ಲಾನ್ ಹೊಳಿತು ಪುಟ್ಟಪ್ಪನವ್ರಿಗೆ ಕ್ಷೌರ ಮಾಡಾಕೆ ಅವರ್ಮನೆಗೆ ಒಬ್ಬರು ಕ್ಷೌರಿಕರು ಬರ್ತಿದ್ದರು ಚೌರಿ ಅಂತ.
ಅವರು ಮದುವೆ ಮನೆಯಲ್ಲಿ ನಾದಸ್ವರವನ್ನು ನುಡಿಸ್ತಿದ್ದರು. ನಾದಸ್ವರ ಹಾಗೂ ಶಹನಾಯಿ ಒಂದೆ ತರದ ವಾದ್ಯಗಳಾದ್ದರಿಂದ ನಾದಸ್ವರದ ಪೀಪಿ ಇದಕ್ಕಾಗಬಹುದು ಅಂದ್ಕೊಂಡು ಅವರನ್ನ ಹುಡ್ಕಂಡು ತೇಜಸ್ವಿ ಮನೆಗ್ಹೋದೆ. ತೇಜಸ್ವಿ ಇದ್ದೋರು, `ಚೌರಿಯ ಮನೆ ಪಕ್ಕದ ಬೀದಿಯ ಕೊನೆಗಿದೆ. ಊಟ ಮಾಡ್ಕಂಡು ಹೋಗೋಣ’ ಅಂದ್ರು. `ನನ್ನದು ಊಟ ಆಗಿದೆ’ ಅಂದೆ. `ಸ್ಸರಿ. ಹಂಗಿದ್ರೆ ಕೂತ್ಕಂಡಿರಿ. ಐದೇ ನಿಮಿಷದಲ್ಲಿ ಊಟ ಮುಗಿಸ್ಕಂಡು ಬರ್ತೀನಿ’ ಅಂತ ಒಳಗ್ಹೋದರು. ಸದ್ಯಕ್ಕಿರಲಿ ನೋಡೋಣ ಎಂದು ಯಾವುದೋ ಪೀಪಿಯೊಂದನ್ನು ಶಹನಾಯಿಗೆ ಹಾಕ್ಕಂಡಿದ್ದೆ.
ತೇಜಸ್ವಿ ರೂಮಲ್ಲಿ ಕೂತು ಅವರಿಗಾಗಿ ಕಾಯ್ತಾ ಇದ್ನಲ್ಲ; ಕೈಯಲ್ಲಿ ಶಹನಾಯಿಯಿತ್ತು. ಅದು ಏನೂ ನಾದ ಹೊರಡಿಸಲ್ಲ ಅಂತ ತಿಳಿದಿದ್ರೂ ಅದನ್ನ ಪದೇ ಪದೇ ಊದಿ ಏನಾದ್ರೂ ಶಬ್ದ ಮಾಡತ್ತಾ ಅಂತ ನೋಡೋದು ಅಬ್ಯಾಸ ಆಗ್ಬಿಟ್ಟಿತ್ತು. ಅದನ್ನ ಮತ್ತೊಂದು ಸಾರಿ ಊದಿ ಬಿಟ್ಟೆ. ಇಷ್ಟೊತ್ತು ಎಷ್ಟು ಶತಪ್ರಯತ್ನ ಮಾಡಿದ್ರೂ ಕುಂಯಿ ಕುಂಯಿ ಸಹ ಗುಟ್ಟದ ಶಹನಾಯಿ ಈಗ ಒಂದೆ ಸರ್ತಿಗೆ ಪೇಂ ಅಂತ ವಿಕಾರವಾಗಿ ನಾದ ಹೊರಡಿಸಿಬಿಟ್ಟಿತು. ಅದರ ಆರ್ಭಟಕ್ಕೆ ನಾನೇ ಅರೆಕ್ಷಣ ಬೆಚ್ಚಿಬಿದ್ದೆ.
ಅಬ್ಬ ಇದನ್ನ ಕೇಳಿ ಯಾರೂ ಭಯ ಬಿದ್ದು ಓಡಿಬರ್ಲಿಲ್ಲ ಸದ್ಯ ಅಂತ ತಲೆ ಎತ್ತಿದರೆ ಎದುರಿಗೆ ಪುಟ್ಟಪ್ಪನೋರು ನಿಂತಿದ್ದರು. ಪಕ್ಕದ ಕೋಣೆಯಲ್ಲಿ ಧ್ಯಾನಶೀಲರಾಗಿ ಬರವಣಿಗೆಯಲ್ಲಿ ತೊಡಗಿದ್ದ ಅವರು ಈ ವಿಕಾರ ನಾದದಿಂದ ಕಿರಿಕಿರಿಗೊಂಡು `ತೇಜಸ್ವಿ, ಶಾಮಣ್ಣ ಮತ್ತೊಂದು ಯಾವುದೋ ಅವಾಂತರ ಶುರು ಹಚ್ಕಂಡಿದ್ದಾರೆ’ ಅಂತ ಅಂದಾಜು ಮಾಡ್ಕಂಡು ನಾನಿದ್ದ ರೂಮಿನ ಕಡೆ ಬಂದಿದ್ದಾರೆ. ಅವರಿಗೆ ನನ್ನ ಕೈಯಲ್ಲಿದ್ದ ಶಹನಾಯಿಯನ್ನ ನೋಡಿ ಎಲ್ಲ ಅಂದಾಜಾಗಿದೆ. ಅವರಿದ್ದೋರು `ಶಾಮಣ್ಣ, ವಾದ್ಯಗಳಲ್ಲಿ ಬೇರೆ ಬೇರೆ ತರ ಇರ್ತಾವೆ ಕೆಲವನ್ನ ಮಾತ್ರ ಮನೆಯೊಳಗೆ ಬಾರಿಸಬಹುದು. ಮತ್ತೆ ಕೆಲವನ್ನ ರಣವಾದ್ಯ ಅಂತ ಕರೀತಾರೆ. ಅವನ್ನ ಯಾವುದೇ ಕಾರಣಕ್ಕೂ ಮನೆಯೊಳಗೆ ಬಾರಿಸಬಾರದು. ಚಾಮುಂಡಿ ಬೆಟ್ಟಕ್ಕೆ ಹೋಗಿ ಅಲ್ಲಿ ಬಾರಿಸಬೇಕು. ಈಗ ನಿನ್ನ ಕೈಲಿ ಇದ್ಯಲ್ಲ ಅದು ರಣವಾದ್ಯ ಅದನ್ನ ಇಲ್ಲೆಲ್ಲ ಬಾರಿಸಬಾರದು’ ಅಂತ ಹೇಳಿದ್ರು. ಆದರೆ ನಾನು ಅವರು ಏನು ಹೇಳ್ತಿದಾರೊ ಅದನ್ನ ಸರಿಯಾಗಿ ಕೇಳಿಸ್ಕಳ್ಳೋ ಗೋಜಿಗೂ ಹೋಗದೆ ಅವರನ್ನ ಆಶ್ಚರ್ಯದಿಂದ, ಹೊಸ ಮನುಷ್ಯರನ್ನ ನೋಡೋ ತರ ನೋಡ್ತಿದ್ದೆ.
ಯಾಕೆಂದ್ರೆ ಯಾವತ್ತ್ತೂ ಪೈಜಾಮ ತೊಡ್ತಿದ್ದ ಪುಟ್ಟಪ್ಪನವ್ರು ಆವತ್ತು ವಿಶೇಷವಾಗಿ ಲುಂಗಿ ಉಟ್ಕಂಡಿದ್ರು. ಅದಕ್ಕಿಂತ ಹೆಚ್ಚಾಗಿ ಅವರು ಹಲ್ಲಿನ ಸೆಟ್ ಹಾಕಿಸ್ಕಂಡಿದಾರೆ ಅನ್ನೋ ವಿಷಯವೇ ಗೊತ್ತಿರಲಿಲ್ಲ; ಆವತ್ತು ಹಲ್ಲಿನ ಸೆಟ್ ಕಳಚಿಟ್ಟಿದ್ರು! ಹಾಗಾಗಿ ನನಗೆ ಅವರು ಹೊಸ ಮನುಷ್ಯರ ತರ ಕಾಣ್ತಾ ಇದ್ದರು. ಒಂದು ವಯಸ್ಸಲ್ಲಿ ನಮಗೆಲ್ಲ ಎಂತೆಂತ ವಿಷಯಗಳೆಲ್ಲ ಮುಖ್ಯವಾಗಿ ಬಿಡುತ್ತಲ್ಲ. ಪುಟ್ಟಪ್ಪನವ್ರು ಹಲ್ಲುಸೆಟ್ ಕಟ್ಟಿಸ್ಕಂಡಿರೋ ವಿಷಯ ನನಗೇ ತಿಳಿದೇ ಇರ್ಲಿಲ್ವಲ್ಲ ಅನ್ನೋದೆ ನನಗೇ ಬಹಳ ದಿನದವರೆಗೆ ಅಚ್ಚರಿ ಉಂಟುಮಾಡ್ತಿತ್ತು.]]>
Like this:
Like Loading...
Related
ಗೋಜು,ಪುರುಸೊತ್ತು ಇಲ್ಲದ ಸಮಯದಲ್ಲಿ….
ಈ ಬರಹ ಓದಿ…ಬಿದ್ದು ಬಿದ್ದು ನಕ್ಕು ಅರಾಮಾದೆ….ನಿಮ್ಮ ವಾದ್ಯಕ್ಕೊಂದು ಸಲಾಂ
ಒಂಥರಾ stress relief