ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟೈಮ್ ಪಾಸ್ ಕಡ್ಲೆಕಾಯಿ: ಕಾಮ

ಮುಲ್ಲಾ ನಸ್ರುದ್ದೀನ್ ಕತೆಗಳು

– ಡಾ ಜೆ ಬಾಲಕೃಷ್ಣ

ಅ೦ತರ ಗ೦ಗೆ

ತಜ್ಞ

ಮುಲ್ಲಾ ನಸ್ರುದ್ದೀನ್ ಒಬ್ಬ ಪ್ರಖ್ಯಾತ ವಿದ್ವಾಂಸನಾಗಿದ್ದ. ಆತ ಆ ಊರಿನ ಸಾರ್ವಜನಿಕರು ಭಾಗವಹಿಸುವ ವಿಚಾರ ಸಂಕಿರಣವೊಂದರಲ್ಲಿ ಭಾಗವಹಿಸಿದ್ದ. ಆ ಊರಿನ ಗಣ್ಯರು ತಮ್ಮ ಪತಿ ಪತ್ನಿಯರೊಂದಿಗೆ ಅದರಲ್ಲಿ ಭಾಗವಹಿಸಿದ್ದರು. ಬಹಳ ಸಮಯವಾದರೂ ಕಾರ್ಯಕ್ರಮ ಪ್ರಾರಂಭವಾಗಲಿಲ್ಲ. ವಿಚಾರಸಂಕಿರಣದ ಆಯೋಜಕರು ನಸ್ರುದ್ದೀನ್ ಬಂದಿದ್ದುದನ್ನು ಕಂಡು ಆತನ ಬಳಿ ಬಂದರು. ಆ ದಿನದ ಪ್ರಮುಖ ಭಾಷಣಕಾರರು ಅನಿವಾರ್ಯ ಕಾರಣಗಳಿಂದಾಗಿ ಬರಲು ಸಾಧ್ಯವಾಗುತ್ತಿಲ್ಲವೆಂದೂ, ಅವರ ಬದಲಿಗೆ ನಸ್ರುದ್ದೀನ್‌ರವರನ್ನೇ ಭಾಷಣ ಮಾಡಬೇಕೆಂದು ಅವರು ಕೇಳಿಕೊಂಡರು. ಕೊಂಚ ಗಲಿಬಿಲಿಗೊಂಡ ನಸ್ರುದ್ದೀನ್, ‘ನಾನು ಭಾಷಣಕ್ಕೆ ಸಿದ್ಧವಾಗಿ ಬಂದಿಲ್ಲ. ಯಾವ ವಿಷಯದ ಬಗ್ಗೆ ಮಾತನಾಡಬೇಕು?’ ಎಂದು ಕೇಳಿದ. ‘ಇಂದಿನ ವಿಷಯ ಕಾಮ. ನೀವೇ ಅದರ ಬಗ್ಗೆ ಮಾತನಾಡಬೇಕು, ಏಕೆಂದರೆ ಇಲ್ಲಿಗೆ ಬಂದಿರುವ ಇತರರೆಲ್ಲರೂ ಗಂಡು ಹೆಂಡಿರು ಜೊತೆಯಲ್ಲಿ ಬಂದಿದ್ದಾರೆ. ಒಂಟಿಯಾಗಿ ಬಂದಿರುವವರು ನೀವೊಬ್ಬರೆ’ ಎಂದರು ಆಯೋಜಕರು. ಅವರು ಆ ರೀತಿ ಹೇಳಿದ್ದಷ್ಟೇ ಅಲ್ಲ ನಸ್ರುದ್ದೀನ್ ಸಮ್ಮತಿ ನೀಡುವ ಮೊದಲೇ ವೇದಿಕೆಯ ಮೇಲೆ ಹೋಗಿ ಬದುಕಿನಲ್ಲಿ ಬಹಳ ಮುಖ್ಯವಾದ ಕಾಮದ ಬಗ್ಗೆ ವಿದ್ವಾಂಸ ನಸ್ರುದ್ದೀನ್ ಮಾತನಾಡುತ್ತಾರೆ ಎಂದು ಘೋಷಿಸಿಯೂಬಿಟ್ಟರು. ಬೇರೆ ದಾರಿಯಿಲ್ಲದೆ ನಸ್ರುದ್ದೀನ್ ವೇದಿಕೆಗೆ ಹೋಗಿ ತಮ್ಮ ಭಾಷಣ ಆರಂಭಿಸಿದರು. ಆತನಿಗೂ ಅದು ಆಸಕ್ತಿಯ ವಿಷಯವಾಗಿದ್ದುದರಿಂದ ಆತ ಬಹಳ ಚೆನ್ನಾಗಿ ಕಾಮದ ಬಗ್ಗೆ ಒಂದು ಗಂಟೆ ಮಾತನಾಡಿದ. ಅಲ್ಲಿ ನೆರೆದಿದ್ದ ಜನರೆಲ್ಲಾ ಮೆಚ್ಚುಗೆಯಿಂದ ಚಪ್ಪಾಳೆ ತಟ್ಟಿದರು. ಆ ದಿನ ರಾತ್ರಿ ಮನೆಗೆ ಹೋದಾಗ ನಸ್ರುದ್ದೀನ್ ಹೆಂಡತಿ ಕಾರ್ಯಕ್ರಮ ಹೇಗಾಯಿತೆಂದು ಕೇಳಿದಳು. ಅದಕ್ಕೆ ಆತ ಪ್ರಮುಖ ಭಾಷಣಕಾರ ಬಂದಿಲ್ಲದಿದ್ದ ಕಾರಣ ತಾನೇ ಭಾಷಣ ಮಾಡಬೇಕಾಯಿತೆಂದು ತಿಳಿಸಿದ. ಆತನ ಪತ್ನಿಯೂ ಕುತೂಹಲದಿಂದ, ‘ಹೌದೆ? ಯಾವ ವಿಷಯದ ಬಗ್ಗೆ ಮಾತನಾಡಿದಿರಿ?’ ಎಂದು ಕೇಳಿದಳು. ಕಾಮದ ಬಗ್ಗೆ ಎಂದು ಹೇಳಲು ನಸ್ರುದ್ದೀನನಿಗೆ ಸಂಕೋಚವಾಯಿತು. ತಕ್ಷಣ ಯೋಚಿಸಿ ‘ಕುದುರೆ ಸವಾರಿಯ ಬಗ್ಗೆ’ ಎಂದ. ‘ಕುದುರೆ ಸವಾರಿಯ ಬಗ್ಗೆ!’ ಎಂದು ಆಶ್ಚರ್ಯ ವ್ಯಕ್ತಪಡಿಸಿದ ಆಕೆ, ‘ಅದರ ಬಗ್ಗೆ ನಿಮಗೆ ಏನೂ ತಿಳಿದಿಲ್ಲ ಹಾಗೂ ಅನುಭವವೂ ಇಲ್ಲವಲ್ಲ’ ಎಂದು ಕೇಳಿದಳು. ‘ಆದರೇನು. ನನಗೆ ತಿಳಿದಿಲ್ಲ ಎಂಬುದು ನನಗೂ ನಿನಗೂ ಗೊತ್ತು. ಆದರೆ ಅವರಿಗೆ ತಿಳಿದಿರಲಿಲ್ಲವಲ್ಲಾ’ ಎಂದು ಹೇಳಿ ಮಾತು ಮರೆಸಿದ. ಮರುದಿನ ನಸ್ರುದ್ದೀನ್‌ನ ಪತ್ನಿ ತರಕಾರಿ ತರಲು ಮಾರುಕಟ್ಟೆಗೆ ಹೋದಾಗ ಅಲ್ಲಿ ಹಿಂದಿನ ದಿನ ನಸ್ರುದ್ದೀನನ ಭಾಷಣ ಕೇಳಿದ್ದ ಹಲವಾರು ಹೆಂಗಸರು ಸಿಕ್ಕಿ, ‘ಹೋ, ನಿನ್ನೆ ನಿನ್ನ ಗಂಡ ನೀಡಿದ ಭಾಷಣ ಅತ್ಯದ್ಭುತವಾಗಿತ್ತು. ಆತ ಆ ವಿಷಯದಲ್ಲಿ ಬಹಳ ನುರಿತವನೂ ಇರಬಹುದಲ್ಲವೆ?’ ಎಂದು ಕೇಳಿ ಆ ಹೆಂಗಸರು ಪರಸ್ಪರ ಮುಸಿಮುಸಿ ನಕ್ಕರು. ಅದಕ್ಕೆ ನಸ್ರುದ್ದೀನನ ಪತ್ನಿ, ‘ಅದರಲ್ಲಿ ಆತ ಅಂಥ ನುರಿತವನೇನಲ್ಲ. ಇದುವರೆಗೆ ಒಂದೆರಡು ಸಾರಿ ಹತ್ತಿರಬಹುದಷ್ಟೆ. ಮೊದಲನೆಯ ಸಲ ಆತನಿಗೆ ಹತ್ತಲಾಗಲೇ ಇಲ್ಲ. ಎರಡನೆಯ ಸಲ ಹತ್ತಿದ್ದವನು ಜಾರಿ ಕೆಳಕ್ಕೆ ಬಿದ್ದುಬಿಟ್ಟಿದ್ದ’ ಎಂದಳು.]]>

‍ಲೇಖಕರು G

27 March, 2012

2 Comments

  1. R.vijayaraghavan

    I think Balu can reallly introduce many better and unknown persons and their works to Kannada. Mulla is in Kannada Thanks to Priyathama. Balu really makes earnest efforts

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading