ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಎನ್ ಮೋಹನ್ ಕಾಲಂ : ಬಂದೂಕಿನ ನಳಿಗೆಯ ಬಾಯಲ್ಲಿ..

ಜಿ ಎನ್ ಮೋಹನ್

ಗುಲ್ಬರ್ಗಾದ ಮಹಾಗಾಂವ ಗ್ರಾಮದ ಕಾನ್ಸ್ಟೇಬಲ್ ನೈಟ್ ರೌಂಡ್ಸ್ ಹೊರಟ. ಅಮಾವಾಸ್ಯೆಯ ರಾತ್ರಿ. ದಟ್ಟ ಕತ್ತಲು. ಕತ್ತಲಿದ್ದ ಮೇಲೆ ಕಳ್ಳರಿರಲೇಬೇಕಲ್ಲ. ಹುಡುಕುತ್ತಾ ಹುಡುಕುತ್ತಾ ಹೊರಟ. ಇಡೀ ರಾತ್ರಿ ಅಲೆದರೂ ಉಹೂಂ ಕೈಗೆ ಒಬ್ಬ ಕಳ್ಳನೂ ಸಿಗಲಿಲ್ಲ, ಕಳ್ಳತನವೂ ಆಗಿರಲಿಲ್ಲ. ಕೈ ಚೆಲ್ಲಿ ಕೂತು ಆಕಾಶ ನೋಡಿದ. ಎದೆ ಧಸಕ್ಕೆಂತು. ಹೌದಲ್ಲಾ! ತನ್ನ ಕಣ್ಣ ಮುಂದೆಯೇ ಒಂದು ಕಳ್ಳತನ ನಡೆದು ಹೋಗಿದೆ. ಅದೂ ಅಂತಿಂತಹ ಕಳ್ಳತನವಲ್ಲ, ಮಹಾನ್ ಕಳ್ಳತನ. ಆಕಾಶದಲ್ಲಿದ್ದ ಚಂದ್ರನನ್ನೇ ಯಾರೋ ಕಳುವು ಮಾಡಿದ್ದಾರೆ. ಆ ಕಾನ್ಸ್ಟೇಬಲ್ ಮನೆಗೆ ಬಂದವನೇ ಕವಿತೆ ಬರೆಯಲು ಕುಳಿತ. ಆಕಾಶದಲ್ಲಿ ಅಮಾವಾಸ್ಯೆಯ ರಾತ್ರಿಯಂದು ಆಗಿ ಹೋದ ಕಳ್ಳತನದ ಕುರಿತು.
ಅಂತಹದ್ದೇ ಒಂದು ಅಮಾವಾಸ್ಯೆಯ ರಾತ್ರಿ ನಾನೂ ಮತ್ತು ಪೋಲೀಸ್ ಅಧಿಕಾರಿ ರಾಜಪ್ಪ ಮಾತಿಗೆ ಕುಳಿತಿದ್ದೆವು. ರಾಜಪ್ಪ ನನ್ನ ಮುಂದೆ ತಮ್ಮ ವೃತ್ತಿ ಬದುಕಿನ ತುಣುಕುಗಳನ್ನು ಹರಡುತ್ತಾ ಕುಳಿತಿದ್ದರು. ಅದೇ ಮಹಾಗಾಂವದ ಪೋಲೀಸ್ ತನ್ನ ಬಳಿ ಬಂದು ನನ್ನಿಂದ ಬೆಳದಿಂಗಳನ್ನು ಕದ್ದಿದ್ದಾರೆ ಎಂದು ದೂರಿದ್ದನ್ನು ನೆನಪಿಸಿಕೊಂಡರು. ಅದೇಗೆ? ಎಂದು ನಾನು ಕೇಳಿದೆ. ಆತನಿಗೆ ನೈಟ್ ರೌಂಡ್ಸ್ ಇರುತ್ತಿದ್ದುದೇ ಅಮಾವಾಸ್ಯೆಯ ರಾತ್ರಿಯಲ್ಲಿ. ಬೆಳದಿಂಗಳಲ್ಲಿ ಕಳ್ಳತನ ಆಗಲು ಸಾಧ್ಯವೇ? ಹಾಗಾಗಿ ಆತ ಬರೀ ಅಮಾವಾಸ್ಯೆಯಲ್ಲಿ ಬೀದಿ ಸುತ್ತಿ ಚಂದ್ರನನ್ನೇ ಕಳೆದುಕೊಂಡ ದುಃಖದಲ್ಲಿದ್ದ ಎಂದರು ನಾನು ಪಕ್ಕಾ ಟಿವಿ೯ ನ ನಾರಾಯಣಸ್ವಾಮಿಯ ರೀತಿಯಲ್ಲಿ ‘ಹೀಗೂ ಉಂಟೇ?’ ಎಂದು ಬಾಯಿಬಿಟ್ಟುಕೊಂಡು ಕುಳಿತಿದ್ದೆ. ಆ ವೇಳೆಗಾಗಲೇ ಮಂಗಳೂರು, ಗುಲ್ಬರ್ಗ, ಶಿವಮೊಗ್ಗ, ಬಿಜಾಪುರ ಹೀಗೆ.. ನಾನಾ ಕಡೆ ಪೋಲೀಸ್ ಹುದ್ದೆ ನಿರ್ವಹಿಸಿ ಬಂದಿದ್ದ ಅವರು ಇನ್ನೂ ಹಲವು ಕಥೆಗಳನ್ನು ಹರಡುತ್ತಾ ಹೋದರು.

ಇದ್ದಕ್ಕಿಂದಂತೆ ವೆನಿಲ್ಲಾಗೆ ಬಂಗಾರದ ಬೆಲೆ ಬಂತು. ಊರೂರುಗಳ ತೋಟದಲ್ಲಿ ಈ ಚಿನ್ನದ ಬೆಳೆ. ತೋಟವೊಂದರಲ್ಲಿ ಒಂದು ರಾತ್ರಿ ವೆನಿಲ್ಲಾ ಕಾಣೆಯಾಯಿತು. ಆ ತೋಟದ ಕೆಲಸದವನೇ ಅದನ್ನು ಕದ್ದಿದ್ದಾನೆಂದು ಆತನನ್ನು ಹಿಡಿದು ಮಾಲೀಕ ಹೊಡೆದು ಬಡಿದು ಸಾಲದೆಂಬಂತೆ ಪೋಲೀಸ್ ಠಾಣೆಯ ಮೆಟ್ಟಿಲನ್ನೂ ಏರಿಸಿದ. ಆ ಕೆಲಸಗಾರ ಪೋಲೀಸ್ ಠಾಣೆಯಿಂದ ಮನೆಗೆ ಬಂದವನೇ ತನ್ನ ಹೆಂಡತಿ,ಅಪ್ಪ ಅಮ್ಮ ತಂಗಿಗೆ ವಿಷ ಕುಡಿಸಿ ತಾನೂ ಸತ್ತು ಹೋದ.
ತಾಳಗುಪ್ಪ- ಸಾಗರದ ನಡುವೆ ದೊಡ್ಡ ಕೋಮುಗಲಭೆ ಸ್ಫೋಟಗೊಂಡಿತು. ಗದ್ದೆಯ ಮಧ್ಯೆ ಇದ್ದ ಮನೆಯೊಂದಕ್ಕೆ ಬೆಂಕಿಯಿಟ್ಟರು. ಹಸುಗೂಸನ್ನು ಎತ್ತಿಕೊಂಡು ಮನೆಯವರು ಗದ್ದೆ ಬದುವಿನ ಮೇಲೆ ಜೀವ ಉಳಿಸಿಕೊಳ್ಳಲು ಓಡತೊಡಗಿದರು. ಗದ್ದೆ ಬದುವಿನ ಮೇಲೆ ಓಡಿಹೋಗುವಾಗ ತಾಯ ಕಂಕುಳಲ್ಲಿದ್ದ ಮಗು ಕೆಸರಿಗೆ ಬಿದ್ದಿತು. ಹಿಂದೆ ಓಡಿ ಬರುತ್ತಿದ್ದ ತಂದೆ ಗಮನಿಸದೆ ಆ ಮಗುವನ್ನೇ ತುಳಿದು ಮುಂದೆ ಓಡಿದ. ಸ್ಟೇಶನ್ ನ ಸದ್ದುಗದ್ದಲದ ನಡುವೆ ಎಳೆಕೂಸೊಂದು ಅಳುವ ಸದ್ದು ಕೇಳಿತು. ಇದೇನೆಂದು ತಲೆ ಎತ್ತಿ ನೋಡಿದ ಪೋಲೀಸ್ ಅಧಿಕಾರಿಗೆ ಕಂಡಿದ್ದು ಆಗ ತಾನೇ ಹುಟ್ಟಿದ ಕೂಸು. ೧೨ ವರ್ಷದ ಎಳೆಯ ಹುಡುಗಿಯೊಬ್ಬಳು ತನ್ನ ಕಂಕುಳಲ್ಲಿದ್ದ ಆ ಮಗುವಿಗೆ ಮೊಲೆಯೂಡಿಸಲು ಯತ್ನಿಸುತ್ತಿದ್ದಾಳೆ. ೧೨ ವರ್ಷದ ಆ ಹುಡುಗಿಯ ಮೇಲೆ ಅತ್ಯಾಚಾರ ನಡೆದು ಆಕೆ ಮಗುವಿಗೆ ಜನ್ಮ ನೀಡಿದ್ದಾಳೆ. ಎಳೆ ಹುಡುಗಿಗೆ ಆಗಲೇ ಎಳೆಗೂಸು..
ಡಿ ಸಿ ರಾಜಪ್ಪ ಹೇಳಿದ ಕಥೆಗಳು ಒಮ್ಮೆ ನನ್ನೊಳಗೆ ಇಳಿದು ಕರುಳಿಗೆ ಕೈ ಹಾಕಿದ್ದವು. ರಾಜಪ್ಪ ಹೇಳಿದರು- ಇದು ನನ್ನ ವೃತ್ತಿ ಬದುಕಿನುದ್ದಕ್ಕೂ ಕಾಡುತ್ತಲೇ ಬಂದಿದೆ. ಹಾಗಾಗಿ ಅವು ಕವಿತೆಗಳಾಗಿವೆ. ನನಗೆ ಮತ್ತೂ ಆಶ್ಚರ್ಯ ಆದದ್ದೇ ಆಗ. ಪ್ರತಿ ದಿನಾ ಕೊಲೆ ಸುಲಿಗೆ ನೇಣು ಅತ್ಯಾಚಾರ ಹೊಡೆದಾಟ ಚೀರಾಟ ಕಾಣುವ ಪೊಲೀಸರು ತಮ್ಮೊಳಗೆ ಕವಿತೆಯ ಕೈ ಹಿಡಿದು ನಡೆಸುತ್ತಿದ್ದಾರೆಯೇ? ಅದು ಹೇಗೆ ಸಾಧ್ಯ?. ರಾಜಪ್ಪ ವಿವರಿಸುತ್ತಾ ಹೋದರು ಅದಾದ ಎರಡು ದಿನಕ್ಕೆ ಕಲಬುರ್ಗಿಯ ನಮ್ಮ ಮನೆಯ ಅಂಗಳದಲ್ಲಿ ಹಿರಿಯರೆಲ್ಲರೂ ಸೇರಿದ್ದರು. ಪೋಲೀಸ್ ಸಮವಸ್ತ್ರವನ್ನು ಮನೆಯಲ್ಲಿಯೇ ಇರಿಸಿ ಬಂದಿದ್ದ ರಾಜಪ್ಪ ಸಂಕೋಚದಿಂದ ಕವಿತೆಗಳನ್ನು ವಾಚಿಸತೊಡಗಿದರು. ಹಾಗೆ ವಾಚಿಸಿದ್ದರ ಸಂಭ್ರಮ ಏನು ಎಂದು ಅವರಿಗೆ ಗೊತ್ತಾಗಿ ಹೋಯಿತೇನೋ ಅವರು ಆ ನಂತರ ಸುಮ್ಮನೆ ಕೂರಲಿಲ್ಲ. ತಾವು ಸುತ್ತಿದ ಪ್ರತೀ ಠಾಣೆಯಲ್ಲಿ, ಪೋಲೀಸ್ ರೌಂಡ್ಸ್ ಗಳಲ್ಲಿ, ಸಭೆಗಳಲ್ಲಿ ಪೋಲೀಸ್ ಕವಿಗಳನ್ನು ಹುಡುಕತೊಡಗಿದರು.
ಇಲಾಖೆ ಮುಸಿ ಮುಸಿ ನಕ್ಕಿತು. ಆದರೆ ಅವರೆಲ್ಲರೂ ಇದ್ದರು. ಮಹಾಗಾಂವಾದ ಅಮಾವಾಸ್ಯೆಯ ರಾತ್ರಿಗಳಲ್ಲಿ ಚಂದ್ರನನ್ನು ಹುಡುಕಿದವರು. ಅಲ್ಲಿಂದ ಶುರುವಾಗಿ ಹೋಯಿತು ಪೋಲೀಸ್ ಸಾಹಿತಿಗಳ ಮೆರವಣಿಗೆ. ತರೀಕೆರೆ ಪೋಲೀಸ್ ಠಾಣೆಯ ವೇದಾವತಿ, ಮಂಡಿ ಪೋಲೀಸ್ ಠಾಣೆಯ ಪಿ ರಾಜು, ಶೃಂಗೇರಿಯ ಹನುಮಾ ನಾಯ್ಕ, ಜೋಯಿಡಾದ ಮಾರುತಿ ನಾಯ್ಕ, ಹೊಸನಗರದ ಸುರೇಖಾ ಸುಧಾಕರ್, ಗಾಂಧಿನಗರದ ಚಂದ್ರಶೇಖರ್, ಚಿಕ್ಕಪೇಟೆ ಸಂಚಾರಿ ಪೋಲೀಸ್ ಠಾಣೆಯ ಮಂಜೇಗೌಡ, ಬಾಗಲಕೋಟೆಯ ಎಸ್ ಎನ್ ಭೋಸಲೆ, ಸಂಡೂರಿನ ಶರಣಪ್ಪ, ಬೆರಳು ಮುದ್ರೆ ಘಟಕದ ಈಶ್ವರ ಎಣ್ಣೆರ, ಚಿತ್ರದುರ್ಗದ ಮಹಾಂತ ರೆಡ್ಡಿ, ದಾವಣಗೆರೆಯ ಆಂಜನೇಯ, ಮಾಚೇನಹಳ್ಳಿಯ ವೆಂಕೋಬ ಬೋಯಲ್, ಬೆಳಗಾವಿಯ ತಳವಾರ ಹೀಗೆ ಐನೂರಕ್ಕೂ ಹೆಚ್ಚು ಕವಿಗಳು ಎದ್ದು ನಿಂತರು. ಪೋಲೀಸ್ ಕಾನ್ಸ್ಟೇಬಲ್ ಗಳಿಂದ ಹಿಡಿದು ಪೋಲೀಸ್ ವರಿಷ್ಠರವರೆಗೆ, ಟ್ರಾಫಿಕ್, ರೈಲ್ವೆ, ವೈರ್ ಲೆಸ್, ಫಿಂಗರ್ ಪ್ರಿಂಟ್,ಕೆ ಎಸ್ ಆರ್ ಪಿ ಹೀಗೆ ಹತ್ತು ಹಲವು ವಿಭಾಗಗಳಲ್ಲಿ ಪೋಲೀಸ್ ಕವಿಗಳು ತಲೆ ಎತ್ತಿ ನಿಂತರು.

ಈ ಪೋಲೀಸ್ ಸಾಹಿತಿಗಳಿಗೆ ಸ್ಫೂರ್ತಿ ಕೊಡಲೋ ಎಂಬಂತೆ ಹಿರಿಯ ಅಧಿಕಾರಿಗಳು ಜೊತೆಯಾದರು. ಅಮೃತ್ ಪಾಲ್, ಬಿ ಆರ್ ರವಿಕಾಂತೇ ಗೌಡ, ಕೆ ಎಂ ಗಂಗಾಧರಪ್ಪ, ಜಿ ನಾಗಪ್ಪ, ಕೆ ಈಶ್ವರ ಪ್ರಸಾದ್, ಗಿರೀಶ್ ಆರ್ ಕಾಂಬಳೆ ಹೀಗೆ ಹಲವರು ಕವಿತೆಯೊಂದಿಗೆ ಸಾಥ್ ನೀಡಿದರು. ಪರಿಣಾಮ ೨೦೦೨ರಲ್ಲಿ ದಾವಣಗೆರೆಯಲ್ಲಿ ಪೋಲೀಸ್ ಕವಿಘೋಷ್ಟಿ ನಡೆದೇ ಹೋಯಿತು ೬ ಜಿಲ್ಲೆಗಳ ೨೫ ಆಯ್ದ ಪೊಲೀಸರು ಕವಿತೆಗಳನ್ನು ಓದಿದರು. ಇದಕ್ಕೂ ಮುನ್ನವೇ ಪೋಲೀಸ್ ಇಲಾಖೆ ಸಾಕಷ್ಟು ಬರಹಗಾರರನ್ನು ಕಂಡಿತ್ತು. ಪಿ ಎಸ್ ರಾಮಾನುಜಂ, ಎಸ್ ಕೃಷ್ಣಮೂರ್ತಿ, ಅಜಯ ಕುಮಾರ್ ಸಿಂಗ್, ವಿಜಯ ಸಾಸನೂರು ಹೀಗೆ ಖಡ್ಗ ಹಾಗೂ ಕಾವ್ಯವನ್ನು ನಿಜ ಅರ್ಥದಲ್ಲಿ ಒಂದು ಮಾಡಿದ್ದರು.
‘ಮೋಹನ್, ನಿಮಗೆ ಒಂದು ವಿಷಯ ಗೊತ್ತಾ?’ ಎಂದು ರಾಜಪ್ಪ ಕೇಳಿದರು ಏನು ಎಂದೆ. ಕನ್ನಡದ ಮೊಟ್ಟ ಮೊದಲ ಸಾಮಾಜಿಕ ಕಾದಂಬರಿ ‘ಇಂದಿರಾಬಾಯಿ’ ಬರೆದದ್ದು ಯಾರು ಹೇಳಿ? ಎಂದರು. ಇದೇನಪ್ಪಾ ಈ ಥರಾ ಕ್ವಿಜ್ ಎಂದುಕೊಂಡು ಯಾರಿಗೆ ಗೊತ್ತಿಲ್ಲ ಹೇಳಿ ಗುಲ್ವಾಡಿ ವೆಂಕಟರಾಯರಲ್ವೇ ಎಂದೆ . ಅವರು ನಕ್ಕು ಗುಲ್ವಾಡಿ ವೆಂಕಟರಾಯರು ಪೋಲೀಸ್ ಆಗಿದ್ದವರು ಎಂದರು. ಕನ್ನಡಕ್ಕೆ ಮೊದಲ ಸಾಮಾಜಿಕ ಕಾದಂಬರಿ ಕೊಟ್ಟಿದ್ದೇ ಪೋಲೀಸ್ ಇಲಾಖೆ ಹಾಗಾಗಿ ಪೋಲೀಸ್ ಸಾಹಿತ್ಯದ ಬಗ್ಗೆಯೇ ಒಂದು ಪ್ರತ್ಯೇಕ ಸಮ್ಮೇಳನವೇ ಜರುಗಬೇಕು ಎಂದರು.
ಈ ಹಂಬಲದಿಂದಾಗಿಯೇ ಇರಬೇಕು. ೨೦೦೪ ರಲ್ಲಿ ಶಿವಮೊಗ್ಗದಲ್ಲಿ ರಾಜ್ಯ ಪೋಲೀಸ್ ಕವಿ ಸಮ್ಮೇಳನ ನಡೆದೇಬಿಟ್ಟಿತು. ೫೨ ಮಂದಿ ಪೊಲೀಸರು ಕೇಳುಗರ ಎದುರು ನಿಂತರು. ಎಂ ಪಿ ಪ್ರಕಾಶ್ ಗೃಹ ಸಚಿವರಾಗಿದ್ದಾಗ ಈ ಪೋಲೀಸ್ ಕವಿ ಅಭಿಯಾನಕ್ಕೆ ಇನ್ನಿಲ್ಲದಷ್ಟು ಬೆಂಬಲ ಸಿಕ್ಕಿತು. ಪೋಲೀಸ್ ಇಲಾಖೆಯಲ್ಲಿ ಇಷ್ಟೊಂದು ಮಂದಿ ಕವಿಗಳಿದ್ದಾರೆ ಎನ್ನುವುದೇ ನನಗೆ ಗೊತ್ತಿರಲಿಲ್ಲ ಎಂದು ಪ್ರಕಾಶ್ ಆಶ್ಚರ್ಯಪಟ್ಟುಕೊಂಡರು ೨೦೦೭ರಲ್ಲಿ ಬಳ್ಳಾರಿಯಲ್ಲಿ ಪೋಲೀಸ್ ಕವಿ ಸಮ್ಮೇಳನ ನಡೆಯಿತು ೨೦೧೧ರಲ್ಲಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಪೂರಕವಾಗಿ ಬಿಜಾಪುರದಲ್ಲಿ ಪೋಲೀಸ್ ಕವಿ ಸಮ್ಮೇಳನ ಜರುಗಿತು ‘ಸಮವಸ್ತ್ರದೊಳಗೊಂದು ಸುತ್ತು’ ಹಾಕುವ ಕೆಲಸ ಆರಂಭವಾಯಿತು ಪೊಲೀಸರು ಬರೆದ ಕವಿತೆಗಳನ್ನು ಒಂದೆಡೆ ಸೇರಿಸಿ ಈಗ ಮೂರು ಸಂಪುಟಗಳಲ್ಲಿ ‘ಸಮವಸ್ತ್ರದೊಳಗೊಂದು ಸುತ್ತು’ ಸಂಕಲನ ಹೊರತರಲಾಗಿದೆ. ಇದನ್ನು ಓದಿದ ಕುಂ ವೀ ‘ಇವರು ಸಾಹಿತ್ಯದ ಪರುಷ ಸ್ಪರ್ಶಕ್ಕೆ ಸಿಕ್ಕವರು’ ಎಂದು ಬಣ್ಣಿಸಿದ್ದಾರೆ.
ಇದು ಹೌದು ಎನ್ನುವಂತೆ ಇಲ್ಲಿನ ಪೊಲೀಸರು ತಾವು ತಮ್ಮ ಕೆಲಸದ ನಡುವೆ ಕಂಡ ಅನುಭಗಳನ್ನೇ ಕವಿತೆಯಾಗಿಸಿ ನಡೆದಿದ್ದಾರೆ ಹಾಗಾಗಿಯೇ ಇಲ್ಲಿ ಫಿಂಗರ್ ಪ್ರಿಂಟ್ ಕಥಾನಕವಿದೆ. ಆಯುಧಗಳು ಕಥೆ ಹೇಳುತ್ತವೆ. ನಾವು ಪೋಲೀಸರೆಂಬ ಹೆಮ್ಮೆ ಇದೆ, ಪೊಲೀಸರೂ ದಾರಿ ತಪ್ಪುತ್ತಿರುವ ಬಗ್ಗೆ ವಿಷಾದವಿದೆ. ರಜೆಯಿರದೆ ಸುತ್ತಬೇಕಾಗಿ ಬಂದದ್ದರ ಬಗ್ಗೆ ಬೇಸರವಿದೆ, ರಾಜಕಾರಣಿಗಳ ಬಗ್ಗೆ ತಾತ್ಸಾರವಿದೆ. ಕೋಮು ಗಲಭೆಗಳ ಬಗ್ಗೆ ಆತಂಕವಿದೆ. ಮುಖ್ಯವಾಗಿ ಒಬ್ಬೊಬ್ಬರಲ್ಲೂ ಒಂದೊಂದು ಪ್ರಶ್ನೆ ಇದೆ.
‘ಬಂದೂಕಿನ ನಳಿಗೆಯ ಬಾಯಲ್ಲಿ ಗುಬ್ಬಿ ಗೂಡು ಕಟ್ಟುತ್ತದೆ’ ಎಂದಿದ್ದರು ಕವಿ ರಂಜಾನ್ ದರ್ಗಾ. ಹೌದಲ್ಲಾ! ಬಂದೂಕಿನ ನಳಿಗೆಯ ಬಾಯಲ್ಲಿ ಆಗಲೇ ಕವಿತೆಎಂಬ ಗುಬ್ಬಿ ಕುಳಿತಿದೆ.
 

‍ಲೇಖಕರು avadhi

9 October, 2013

6 Comments

  1. mmshaik

    spandisuva guNaviddalli maanaviyate iruttade…nijavaagiyu oLLeya lekhana..sir.

  2. sg shivashankar

    these incidents in few lines, touched my heart. Made me silent for few minutes.
    shivashankar

  3. Anil Talikoti

    ಮಾನವೀಯ ಮೌಲ್ಯಗಳು ವೃತ್ತಿಪರ ಲೇಖಕರಿಗಿಂತ ಇಂತವರಲ್ಲಿ ಜಾಸ್ತಿ ಎಂದೆ ನನ್ನ ಭಾವನೆ. ಸಾಮಾನ್ಯವಾಗಿ ಬರೀ ಕಳಂಕಿತ ಅಥವಾ ಶೂರ ಪೋಲೀಸರ ಬಗ್ಗೆ ಕೇಳಿರುವ ನಮಗೆ ಕವಿ ಮನಸ್ಸಿನ ಪೋಲೀಸರ ಬಗ್ಗೆ ತಿಳಿಸಿ ಒಳ್ಳೆಯ ಕೆಲಸ ಮಾಡಿದ್ದಿರಿ. ಧನ್ಯವಾದಗಳು.

  4. Shadakshari

    ಒಳ್ಳೆಯ ಲೇಖನ. ಖುಷಿ ಆಯ್ತು.

  5. sajid ali

    ಒಳ್ಳೆಯ ಲೇಖನ ಓದುತ್ತಿಂದತೆ ಖುಷಿ ಹೆಚ್ಚಚ್ಚಾಗಿ ಹೋಗಿತ್ತು ಈ ಲೇಖನದ ಬಗ್ಗೆ ಎಷ್ಟು ಹೊಗಳಿದರು ಸಾಲದು. ಮನಸಿಗೆ ಆನಂದ and ಓದುವ ಕುತುಹಲ ನೀಡುವ ಲೇಖನ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading