
`ಅಮ್ಮ ಕಸ ಗುಡಿಸುವವಳು ಎಂದು ಗೊತ್ತಾಗುತ್ತದೆಂದು
ಮಕ್ಕಳೇ ನನ್ನ ನೋಡಿದರೂ ಮಾತನಾಡಿಸುತ್ತಿರಲಿಲ್ಲ’
ಹೌದು..! ಈ ವೃತ್ತಿಯೇ ಅಂತದ್ದು. ಯಾರು ಯಾರಿಗೂ ನಾನು ಇಂತಹವರು ಎಂದು ಹೇಳಿಕೊಳ್ಳಲು ನಾಚಿಕೆ, ಸಂಕೋಚ. ಯಾವ ಮಕ್ಕಳೂ ನನ್ನ ಅಮ್ಮ ಕಸ ಗುಡಿಸುವವಳು, ನನ್ನಪ್ಪ ಬೀದಿ ಗುಡಿಸುವ ಪೌರ ಕಾರ್ಮಿಕ ಎಂದು ಹೇಳಿಕೊಳ್ಳುವಂತಿಲ್ಲ.
ಶಾಲೆಯಲ್ಲಿ ನಿಮ್ಮ ಅಮ್ಮ ಅಪ್ಪ ಅಮ್ಮ ಏನು ಮಾಡುತ್ತಿದ್ದಾರೆ…? ಎಂದು ಕೇಳಿದರೆ ಉತ್ತರ ತಲೆ ತಗ್ಗಿಸುವುದು ಅಷ್ಟೆ..? ಮುಂದೆ ಮಾತಿಲ್ಲ. ಹಾಸನದ ನಿರ್ಮಲ ನಗರದ ಜಯಮ್ಮನ ಮತ್ತು ಮಕ್ಕಳ ಪರೀಸ್ಥಿತಿಯೂ ಇದೆ. ಆಕೆಯ ಮಕ್ಕಳಿಗೆ ಸಮಾಜದಿಂದ ಬಹಿಷ್ಕೃತರಂತಿರುವ ನಾವುಗಳು ಬೀದಿ ಗುಡಿಸುವವರ ಮಕ್ಕಳು ಎಂದು ಹೇಳಿಕೊಳ್ಳಲು ನಾಚಿಕೆ.
ಇಂತಹ ಹಲವು ಪ್ರಸಂಗಗಳನ್ನು ನಿತ್ಯವೂ ಎದುರಿಸುತ್ತೇವೆ ಎನ್ನುವ ಜಯಮ್ಮ `ನನ್ನ ಮಕ್ಕಳು ಓದುವ ಸ್ಕೂಲಿನ ಎದುರೇ ನಾವು ಕಸ ಗುಡಿಸುತ್ತಿದ್ದೆವು. ನಮ್ಮ ಮಕ್ಕಳು ನಮ್ಮ ಕಣ್ಣ ಮುಂದೆ ಇದ್ದರೂ ಮಾತನಾಡಿಸುತ್ತಿರಲಿಲ್ಲ. ನಮಗೂ ಹೆದರಿಕೆ ಎಲ್ಲಿ ಅವರ ಗೆಳೆಯರ ಎದುರು ಮಾತನಾಡಿಸಿ ನಮ್ಮ ಇವಳು ನನ್ನಮ್ಮ ಎಂದು ಹೇಳುತ್ತಾರೋ…? ಎಲ್ಲಿ ಮಕ್ಕಳ ಮಯರ್ಾದೆ ಹೋಗುತ್ತದೋ ಎಂಬ ಆತಂಕ. ಇಂತಹ ನೂರಾರು ಪ್ರಸಂಗಗಳನ್ನು ಎದುರಿಸಿದ್ದೇವೆ ಎನ್ನುತ್ತಾರೆ ಗಟ್ಟಿಗಿತ್ತಿ ಜಯಮ್ಮ,

ಈಕೆಯಯದೂ ಒಂದು ದೊಡ್ಡ ಸ್ಟೋರಿ.. ಆಕೆಯಿಂದಲೇ ಕೇಳಿ..,
`ನಮ್ಮ ತಂದೆ-ತಾಯಿ ಮಲ ಹೊತ್ತಿದ್ದರು. ಆಗ ನಾವೆಲ್ಲಾ ಚಿಕ್ಕವರು. ಇದೇನೆಂದು ಗೊತ್ತಿಲ್ಲ. ನಾವು ಸುಮ್ಮನೆ ಹೋಗಿ ನಿಂತುಕೊಳ್ಳುತ್ತಿದ್ದೆವು. ಅವರಿಗೆ ಆಗಾಗ ಸಹಾಯ ಕೂಡ ಮಾಡುತ್ತಿದ್ದೆವು. ಆದರೆ ಬರಬರುತ್ತಾ ನಾವು ದೊಡ್ಡವರಾದಂತೆ, ಸಮಾಜ ಗೊತ್ತಾಗುತ್ತಿದ್ದಂತೆ ನಾವೆಲ್ಲಾ ಇಂತಹ ಕೆಲಗಳನ್ನು ಮಾಡಿದೆವಾ..? ಎಂದು ಯೋಚಿಸದರೆ ಮೈ ಜುಂ ಎನ್ನುತ್ತದೆ ಆದರೆ ನಮ್ಮ ಅಪ್ಪ-ಅಮ್ಮ ಯಾವತ್ತೂ ನಮಗೆ ಮಲ ಹೊರಿಸಲಿಲ್ಲ ಆದರೆ ನಾನು ನನ್ನ ಮಕ್ಕಳಿಗೆ ಯಾವತ್ತೂ ಮಲ ಹೊರಿಸುವುದಿರಲಿ ಈ ಕೆಲಸದ ಬಗ್ಗೆ ಯೋಚಿಸುವಂತೆ ಮಾಡಲಿಲ್ಲ’ ನಿಟ್ಟುಸಿರು ಬಿಟ್ಟರು ಜಯಮ್ಮ.
ಹೌದು ಜಯಮ್ಮ ಪೌರ ಕಾರ್ಮಿಕಳಾಗಿ ಕೆಲಸ ಮಾಡುತ್ತಲೇ ಕಳೆದ 23 ವರ್ಷ ಕಳೆದಿದ್ದಾರೆ. ಇಂದಿಗೂ ಮಾಡುತ್ತಿದ್ದಾಳೆ. ಜೀವನದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಅದಕ್ಕೆ ಆಕೆ ಮನೆಯೇ ಸಾಕ್ಷಿ. ಪೌರ ಕಾರ್ಮಿಕಳಾಗಿ ಇಡೀ ಜೀವನ ಸವೆದಿರುವ ಜಯಮ್ಮಳಿಗೆ ನಗರವನ್ನು ಸ್ವಚ್ಛ ಮಾಡುವ ಕೆಲಸದಿಂದ ಆತ್ಮಗೌರೆವಕ್ಕೆ ಎಂದೂ ಧಕ್ಕೆಯಾಗಿಲ್ಲ. ಬದಲಾಗಿ ಇಡೀ ನಗರವನ್ನು ಸ್ವಚ್ಛ ಮಾಡಿ ಖುಷಿ ಇದೆ. ಗಂಡ ತೀರಿ 15 ವರ್ಷ ಆಗಿದೆ. ಹೀಗಿದ್ದರೂ ತಮ್ಮ 5 ಹೆಣ್ಣು ಮಕ್ಕಳು 3 ಗಂಡು ಮಕ್ಕಳನ್ನು ಎಲ್ಲರಂತೆ ಬೆಳೆಸಿದ್ದಾಳೆ. ವಿದ್ಯೆ ಬುದ್ದಿ ಕೊಡಿಸಿದ್ದಾರೆ. ಮೂವರು ಸರ್ಕಾರಿ ಕೆಲಸಕ್ಕೆ ಸೇರಿದ್ದಾರೆ. ಹೆಣ್ಣು ಮಕ್ಕಳನ್ನು ಒಂದು ಹಂತಕ್ಕೆ ಓದಿಸಿ ಒಳ್ಳೆಯ ಕುಟುಂಬಕ್ಕೆ ಮದುವೆ ಮಾಡಿಕೊಟ್ಟಿರುವ ಜಯಮ್ಮ ಈಗ ಮೊಮ್ಮೊಕ್ಕಳೊಂದಿಗೆ ಆಡಿಕೊಂಡು ತೃಪ್ತಿ ಜೀವನ ನಡೆಸುತ್ತಿದ್ದಾಳಾದರೂ ಪೌರ ಕಾರ್ಮಿಕಳಾಗಿ ಅಗಾಧ ಅನುಭವದ ಖಜಾನೆಯನ್ನೇ ಹೊತ್ತುಕೊಂಡಿದ್ದಾಳೆ
ಆಕೆ ಹೇಳುವಂತೆ `ಹಾಸನದ ನಾಗರಕರಿಗೆ ಇನ್ನೂ ಪರಿಜ್ಞಾನ ಬಂದಿಲ್ಲ. 25 ವರ್ಷದ ಹಿಂದೆ ಜನ ಯಾರ ರೀತಿ ಇದ್ದರೋ ಇಂದಿಗೂ ಹಾಗೆ ಇದ್ದಾರೆ. ಇದು ನಮ್ಮ ನಗರ , ನಮ್ಮ ಪ್ರದೇಶ, ನಮ್ಮ ರಸ್ತೆ ಎಂದು ಯಾವತ್ತೂ ಯೋಚಿಸುವುದಿಲ್ಲ. ಈಕೆ ಕೆಲಸ ಮಾಡಲು ಪ್ರಾರಂಬಿಸಿದ್ದಾಗ ಈಗೆಗೆ ಇದ್ದದು 30 ರೂ ಸಂಬಳ. ನೀವು ನಂಬದಿರಬಹುದು..! ಕೇವಲ 30 ರೂ ಪಾಯಿಗೆ 8 ವರ್ಷ ಕೆಲಸ ಮಾಡಿದ್ದಾರೆ. ಬಂಗಾರಪ್ಪ ಸರ್ಕಾರ ಇದ್ದಾಗ ನಮ್ಮನ್ನೆಲ್ಲ ಪರ್ಮನೆಂಟ್ ಮಾಡಿದರು ಎನ್ನುವ ಜಯಮ್ಮ ಬಂಗಾರಪ್ಪನ ಕಾರ್ಯವನ್ನು ಇನ್ನೂ ನೆನಪಿಸಿಕೊಳ್ಳುತ್ತಾರೆ. ಈಗ ಈಕೆಯ ಸಂಬಳ 18 ಸಾವಿರ ಇದ್ದರೂ , 30 ರೂ ಸಂಬಳ ಇದ್ದ ಕಾಲದಲ್ಲಿ ಈಕೆಯ ಕಷ್ಟ ಎಂಥ ಘನಘೋರವಾಗಿದ್ದಿತು ಎಂದು ಯೋಚಿಸುವದೂ ಕಷ್ಟವಾಗಿತ್ತು ಎಂದು ಮರುಕ ಪಡುತ್ತಾಳೆ.
`ಅಂದು ಹಾಸನ ಬೆಳೆದಿರಲಿಲ್ಲ. ಆಗ ಅಷ್ಟು ಜನಕ್ಕೆ ನಾವು ಮಹಿಳೆಯರು 40 ರಇಂದ 50 ಜನ ಕಸ ಗುಡಿಸುವ ಕೆಲಸ ಮಾಡುತ್ತಿದ್ದೆವು. ಈಗ ನೋಡಿ ಹಾಸನದ ಜನಸಂಖ್ಯೆ ಒಂದೂವರೆ ಲಕ್ಷ ದಾಟಿದೆ. ಆದರೆ ನಗರವನ್ನು ಸ್ವಚ್ಛ ಮಾಡಲು ನಾವೆಷ್ಟು ಜನರಿದ್ದೇವೆ. ನೂರ ತೊಂಬತ್ತು ಜನ ಈ ಜನ ಹಾಸನದ ಯಾವ ಮೂಲೆಗೂ ಆಗುವುದಿಲ್ಲ ಸ್ವಾಮಿ’
ಆದರೂ ಮಾಡಲೇಬೇಕಿದೆ ಎನ್ನುತ್ತಾರೆ. ನಮ್ಮ ಜನರು ಸ್ವಚ್ಛತೆ ಬಗ್ಗೆ ಇನ್ನೂ ಬುದ್ದಿ ಕಲಿತಿಲ್ಲ. ವಿಪರ್ಯಾಸ ಎಂದರೆ ಕಸವನ್ನು ವಿಭಾಗಿಸಿ ಹಾಕಿ ಎನ್ನುತ್ತೇವೆ. ಈ ಜನರು ಎಷ್ಟು ಸೋಮಾರಿಗಳು ಎಂದರೆ ಎಲ್ಲವನ್ನೂ ಒಂದಕ್ಕೆ ತುಂಬಿ ಹಾಕುತ್ತಾರೆ. ಅಸಹ್ಯವಾಗುತ್ತದೆ. ಬಾಟಲಿ, ಮಾಂಸ, ನಾವು ನೋಡದ ಅಸಹ್ಯಗಳಿಲ್ಲ. ಅದು ನಮಗೆ ಗೊತ್ತು ಸ್ವಾಮಿ. ಕೆಲವೊಂದು ಸಾರಿ ಸಿಟ್ಟು ಬಂದು ` ಅಲ್ಲಮ್ಮಾ ನೀವು ಹೆಂಗಸರು, ನಾವು ಹೆಂಗಸರೇ ಯಾಕಮ್ಮಾ ಹೀಗೆಲ್ಲಾ ಮಾಡುತ್ತೀರಿ..? ಸ್ವಲ್ಪನಾದ್ರೂ ತಿಳಿವಳಿಕೆ ಬೇಡವಾ ..? ಎಂದು ಕೇಳಿದರೆ ಅಧಿಕಾರಿಗಳ ಮೇಲೆ ನಮಗೆ ಚಾಡಿ ಹೇಳುತ್ತಾರೆ. ನಾವೂ ಈಗಂತೂ ಏನೂ ಹೇಳುವುದಿಲ್ಲ ಸಹಿಸಿಕೊಂಡು ಹೋಗುತ್ತೇವೆ. ನಮ್ಮ ಸ್ಥಳದಲ್ಲಿ ಅವರನ್ನು ಒಮ್ಮೆ ಕಲ್ಪಿಸಿಕೊಳ್ಳಲಿ ಆಗ ಗೊತ್ತಾಗುತ್ತದೆ. ಇದೆಲ್ಲ ಸ್ವಂತ ಬುದ್ದಿಯಿಂದ ತಿಳಿದುಕೊಳ್ಳಬೇಕು. ಎಲ್ಲೆಂದೆಲಲಿ ಕಸ ಎಸೆಯುತ್ತಾರೆ ಕನಿಷ್ಟ ಜ್ಞಾನ ಈ ಜನಕ್ಕೆ ಇಲ್ಲ.
ಪ್ಯಾಡ್ ಟಾಯ್ಲೆಟ್ಟಿಗೆ ಹಾಕುತ್ತಾರೆ
ಇನ್ನೂ ಕೆಲ ಹೆಂಗಸರು ಇದ್ದಾರೆ ಸ್ವಾಮಿ. ಬಹುತೇಕ ಟಾಯ್ಲೆಟ್ಗಳು ಕಟ್ಟಿಕೊಳ್ಳುವುದು ಹೆಂಗಸರು ಬಳಸುವ ಪ್ಯಾಡ್ ಗಳಿಂದ ಈ ಸಂಧರ್ಭದಲೆಲ್ಲಾ ಸಾಕಷ್ಟು ಸಮಸ್ಯೆಗಳಾಗಿವೆ. ಪ್ಯಾಡ್ಗಳನ್ನು ಟಾಯ್ಲೆಟ್ ಗೆ ಹಾಕುವ ಸಂಸ್ಕತಿ ಹೆಚ್ಚಾಗಿದೆ. ಇವರಿಗೆ ಏನು ಹೇಳಬೇಕು? ಇದರಿಂದ ಸಾಕಷ್ಟು ಸಮಸ್ಯೆಗಳಾಗಿವೆ. ದಯವಿಟ್ಟು ಹಣ್ಣುಮಕ್ಕಳು ಪ್ಯಾಡ್ ಗಳನ್ನು ಟಾಯ್ಲೆಟ್ಟಿಗೆ ಹಾಕಬೇಡಿ ಇದೊಂದು ನನ್ನ ಮನವಿ ಎನ್ನುತ್ತಾರೆ ಜಯಮ್ಮ.
ಒಮ್ಮೆಮ್ಮೊ ಕಸ ಗುಡಿಸುತ್ತ ಹೋಗುವಾಗ ಕೆಲವರು ಟಾಯ್ಲೆಟ್ ಕ್ಲೀನ್ ಮಾಡಿಕೊಡಿ ಹಣ ಕೊಡುತ್ತೇವೆ ಎನ್ನುತ್ತಾರೆ. ಆದರೆ ನಾವು ಹೋಗುವುದಿಲ್ಲ ಸ್ವಾಮಿ. ನಮ್ಮ ಜನರಿಗೆ ನಾನು ಹೇಳುವುದಿಷ್ಟು “ನಮ್ಮ ನೋಡಿ ನೀವು ಕಲಿತುಕೊಳ್ಳಿ , ನಿಮ್ಮನ್ನು ನೋಡಿ ನಾವು ಕಲಿತುಕೊಳ್ಳುತ್ತೇವೆ. ಒಬ್ಬರನ್ನು ಒಬ್ಬರು ನೋಡಿ ಕಲಿತುಕೊಂಡು ನಗರವನ್ನು ಸ್ವಚ್ಛವಾಗಿಡೋಣ” ಇಷ್ಟೆ ನನ್ನ ಮನವಿ.
ನಿಮಗೆ ಇನ್ನೋಂದು ವಿಷಯ ಗೊತ್ತಿಲ್ಲ ಸ್ವಾಮಿ ಮೊದಲೆಲ್ಲಾ ಕಸ ಗುಡಿಸುವವರನ್ನು ಬಹಳ ಕೀಳಾಗಿ ನೋಡುತ್ತಿದ್ದರು. ಆದರೆ ಈಗ ಬೇಡಿಕೆ ಹೆಚ್ಚಾಗಿದೆ. ಈಗ ಇದೇ ಕೆಲಸ ಬೇಕು ಎಂದು ಬರುವರ ಸಂಖ್ಯೆ ಹೆಚ್ಚುತ್ತಿದೆ. ಹೊಟ್ಟೆಪಾಡು ಸ್ವಾಮಿ ಇಲ್ಲೂ ಈಗ ಪೈಪೋಟಿ. ಹಿಂದೆ ನಮ್ಮ ಕಡೆಯ ಗಂಡಸರು ಹೆಚ್ಚು ಹೆಂಡ ಕುಡಿದು ಕೆಲಸ ಮಾಡುತ್ತಿದ್ದರು. ಆದರೆ ಈಗ ಅದಿಲ್ಲ. ಕುಡಿಯುವರ ಸಂಖ್ಯೆ ಕಡಿಮೆ ಯಾಗುತ್ತಿದೆ. ನಮ್ಮ ಜನರು ಕೆಲಸದ ವೇಳೆ ಕುಡಿಯಬಾರದು ಎಂದು ವ್ರತ್ತಿ ಗೌರವ ಕಾಪಾಡಿಕೊಲ್ಳುವಷ್ಟು ಬುದ್ದಿ ವಂತರಾಗಿದ್ದಾರೆ. ಕೊನೆಯದಾಗಿ ನಾನು ಹೇಳುವುದಿಷ್ಟೆ. ಯಾರ ಮಕ್ಕಳೂ ಪೌರ ಕಾಮರ್ಿಕರಾಗುವುದು ಬೇಡ.
ಮತ್ತಿಬ್ಬರು ಹೀಗೆ ಹೇಳುತ್ತಾರೆ.
“ನನ್ನ ಹೆಸರು ಮಾಣಿಕ್ಯ. ಹೆಸರಿಗೆ ಮಾತ್ರ ಮಾಣಿಕ್ಯ. ಬೇಲೂರಿನ ಪೌರ ಕಾಮರ್ಿಕರ . ನಾಣು 18 ವರ್ಷದವನಾಗಿದ್ದಾಗ ಈ ಕೆಲಸಕ್ಕೆ ಬಂದಿದ್ದು. ನನ್ನಿಡೀ ಕುಟುಂಬ ಪೌರ ಕಾಮರ್ಿಕರು. ಈ ಕೆಲಸವನ್ನು ಯಾರೂ ಮಾಡಬಾರದು ಸ್ವಾಮಿ. ಬೆಳಗ್ಗೆ 5 ಗಂಟೆಗೆ ಹೋಗಿ 6:30 ರ ಒಳಗೆ ನಮ್ಮ ಕೆಲಸ ಮುಗಿಸಲೇ ಬೇಕು. ಕಾರಣ ಜನ ಎದ್ದು ನಮ್ಮ ಮುಖ ನೋಡಲು ಹೆದರುತ್ತಾರೆ. ಬೋಳಿ ಮಕ್ಳ ಬೆಳಗ್ಗೆ ಬೆಳಗ್ಗೆ ನಿಮ್ಮ ಮುಖ ನೋಡಬೇಕಾ..? ಬೇಗ ಗುಡಿಸಿ ಸಾಯೋಕೆ ಏನು ಎನ್ನುತ್ತಾರೆ.. ನೋಡಿ ನಮ್ಮ ಸ್ಥಿತಿ ಇದೆ. ಈ ಕಾರಣಕ್ಕಾಗಿ ನಾನು ಸಮಾಜದಲ್ಲಿ ಎಲ್ಲರಂತೆ ಬದುಕಬೇಕೆಂದು ನಮ್ಮನ್ನು ನೋಡುವ ಜನರ ಬದುಕು ಬದಲಾಗಭೇಕೆಂದು ದುಡಿದ ಹಣವನೆಲ್ಲಾ ಬಳಸಿ ದೊಡ್ಡವರು ವಾಸಿಸುವ ಜಾಗದಲ್ಲೆ ಮನೆ ಕಟ್ಟಿಕೊಂಡು ಬದುಕುತಿದ್ದೇನೆ. ನನ್ನ ಮಕ್ಕಳೀಗೂ ಒಳ್ಳೆ ಶಿಕ್ಷಣ ಕೊಟ್ಟಿದ್ದೇನೆ. ಮಕ್ಕಳು ಎಂಜಿನಿಯರ್ ಮಾಡುತ್ತಿದ್ದಾರೆ”
“ನಾನು ಭಾಗ್ಯ, ಗಂಡ ತೀರಿ ಹೋಗಿದ್ದಾರೆ. ಬೇಲೂರಿನಲ್ಲಿ ನನ್ನ ಕೆಲಸ ಆ ಕೆಲಸ ನನಗೆ ಸಿಕ್ಕಿ ಮಾಡುತಿದ್ದೇನೆ. ನಮಗೆ ಭಾನುವಾಋವೂ ರಜಾ ಕೊಡುವುದಿಲ್ಲ ಸಾರ್, ಈ ಕೆಲಸವೇ ಹೇಸಿಗೆ ತರುವಂತದ್ದು ಆದರೂ ನೆಮ್ಮದಿ ಇಲ್ಲ. ಗುತ್ತಿಗೆದಾರರು ನಮಗ್ಯಾವ ರಕ್ಷಣಾ ಸಲಕರಣೆಗಳನ್ನು ಕೊಡುತ್ತಿಲ್ಲ. ಹೇಗೋ ಕೆಲಸ ಂಆಡಿಕೊಂಡು ಹೋಗುತ್ತಿದ್ದೇವೆ. ಜನ ಬೆಳಗ್ಗೆ ಎದ್ದ ತಕ್ಷಣ ನಿಮ್ಮನ್ನು ನೋಡಬೇಕಲ್ಲಾ ಎಂದು ಬೈಯ್ಯುತ್ತಾರೆ. ಇಷ್ಟೆಲ್ಲ ಕಷ್ಟ ನಡುವೆಯೂ ನಾನು ನನ್ನನ ಮಕ್ಕಳಿಗೆ ಈ ವೃತ್ತಿಗೆ ಬರಬಾರದೆಂದು ಒಳ್ಳೆ ಶಿಕ್ಷಣ ಕೊಡಿಸಿದ್ದೇನೆ. ಯಾರೂ ಪೌರ ಕಾರ್ಮಿಕ ವೃತ್ತಿಗೆ ಬರಬೇಡಿ”
ಜಾಡಮಾಲಿಗಳ ಜಗತ್ತು : `ಅಮ್ಮ ಕಸ ಗುಡಿಸುವವಳು ಎಂದು ಗೊತ್ತಾಗುತ್ತದೆಂದು…’
ನಿಮಗೆ ಇವೂ ಇಷ್ಟವಾಗಬಹುದು…




“ನಮ್ಮ ನೋಡಿ ನೀವು ಕಲಿತುಕೊಳ್ಳಿ , ನಿಮ್ಮನ್ನು ನೋಡಿ ನಾವು ಕಲಿತುಕೊಳ್ಳುತ್ತೇವೆ. ಒಬ್ಬರನ್ನು ಒಬ್ಬರು ನೋಡಿ ಕಲಿತುಕೊಂಡು ನಗರವನ್ನು ಸ್ವಚ್ಛವಾಗಿಡೋಣ” ……“ಇಷ್ಟೆವಾಯಿತು.
ಆಗಾಗ್ಗೆ ಮೈಸೂರು ಬೆಂಗಳೂರಿಗೆ ಓಡಾಡ್ತಾನೇ ಇರೋ ನಾನು. ಪ್ಯಾಡ್ಗಳನ್ನ ಟಾಯ್ಲೆಟ್ಗೆ ಹಾಕೋದರ ಬಗ್ಗೆ ಬೇಸರಗೊಂಡಿದ್ದೇನೆ. ನಾವು ನಮ್ಮ ಮನೆ ಟಾಯ್ಲೆಟ್ಟಿಗೆ ಯಾಔತ್ತೂ ಪ್ಯಾಡ್ ಹಾಕೋದಿಲ್ಲ. ಪಬ್ಲಿಕ್ ಟಾಯ್ಲೆಟ್ ನಲ್ಲಿ ಹಾಕ್ತೇವೆ. ಯಾಕಂದರೆ..ಪಬ್ಲಿಕ್ ಆದದ್ದು ಕೇವಲ ನಮ್ಮದಲ್ಲ ಅನ್ನೋ ಸಂಕುಚಿತ ಭಾವನೆಯಿಂದ.