ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜನ ಕಾರಣ ಹುಡುಕುತ್ತಲೇ ಇದ್ದಾರೆ…

ಭಾಮಿನಿ ಷಟ್ಪದಿ
ಚೇತನಾ ತೀರ್ಥಹಳ್ಳಿ
ಅವಳು ಸತ್ತು ಹೋಗಿದ್ದಾಳೆ. ಯಾಕಂದರೆ, ಯಾಕೋ… ಅಂತೂ ಅವಳು ಹೊರಟು ಹೋಗಿದ್ದಾಳೆ.
ಹೊಸಿಲು ದಾಟಿದ ದಿನದಿಂದ ಗಾಳಿ ಮಾತು ಕೇಳಿ ಕೇಳಿ ಸಾಕಾಗಿಯೇ ಹಾಗೆ ಮಾಡಿದಳೇನೋ?
ಆದರೂ, ಅವಳು ಹಾಗೆ ಸತ್ತುಬಿಡಬಾರದಿತ್ತು.
ಅಥವಾ,
ಬದುಕಿದ್ದರೂ ಅವಳನ್ನ ಬದುಕಲಿಕ್ಕೆ ಬಿಡುತ್ತಿದ್ದರೇನು?
ನಿಜವೇ ಸರಿ. ಹೆಣ್ಣುಗಳು ಬದುಕಲಿಕ್ಕೆ ಗಂಡುಗಳು ‘ಬಿಡ’ಬೇಕು!
ಇಷ್ಟೂ ವರ್ಷ ಯಾರು ಯಾರೋ ಸತ್ತುಹೋದರು. ‘ಬದುಕಲು ಬಾರದ ಹೇಡಿ’ ಅಂದುಕೊಂಡೇ ವಾರೆ
ನಕ್ಕಿದ್ದೆ ನಾನು. ಈಗ ಮಾತ್ರ….
ಅವಳು ತನ್ನ ತಾನೇ ಕೊಂದುಕೊಂಡಳು ಅಂತ ಹೇಳಲಾಗ್ತಲೇ ಇಲ್ಲ ನನಗೆ! ದೇಹ ಕತ್ತರಿಸಿ
ಕತ್ತರಿಸಿ ಮೆಡಿಕಲ್ ರಿಪೋರ್ಟು ಬರೆದರೂ, ಅದನ್ನ ಆತ್ಮ ಹತ್ಯೆ ಅನ್ನಲಿಕ್ಕೆ ಬಾಯಿ
ಬರ್ತಲೇ ಇಲ್ಲ….
ಹೌದಲ್ಲ?
ಅವಳ ಆಸೆಗಳನ್ನ, ಮನಸನ್ನ, ವ್ಯಕ್ತಿತ್ವವನ್ನ, ಜೀವನವನ್ನ, ನಂಬಿಕೆಯನ್ನೂ ಯಾರೋ
ಯಾವಾಗಲೋ ಕೊಂದು ಬಿಸಾಡಿದ್ದರು. ಈಗ ನೇಣಿಗೆ ಶರಣಾಗಿದ್ದು ದೇಹ ಮಾತ್ರ.
ಆದರೂ ಜನ ಕಾರಣ ಹುಡುಕುತ್ತಲೇ ಇದ್ದಾರೆ… ಅವಳು ಸತ್ತಿದ್ದು ಯಾಕೆ? ಕೇಳುತ್ತಲೇ ಇದ್ದಾರೆ…

ಇಷ್ಟಕ್ಕೂ,
ಕಾರಣ ಏನು ಅಂತ ಹೇಳುವುದು?
ಅಸಲು ಸಂಗತಿಗೆ ಹಣದ ಹೆಣ ಅಡ್ಡಿ. ಅಧಿಕಾರ ಅಡ್ಡಿ.
ಹಾಗೆ ನೋಡಿದರೆ ಅವಳಿಗೆ ಬೇಕಾದುದೆಲ್ಲವೂ ಇತ್ತು.
ಮನೆ ಇತ್ತು. ದೊಡ್ಡದೇ ಇತ್ತು.
ಹಣವಿತ್ತು. ಸಾಕಷ್ಟಿತ್ತು. ಕೊಂಚ ಕೂದಲು ಉದುರಿದ್ದರೂ ಗಂಡ ಗಟ್ಟಿಯೇ ಇದ್ದ. ಮುದ್ದಾದ
ಮಕ್ಕಳಿಬ್ಬರೂ ಗಂಡೇ…
ಮನೆ ತುಂಬ ಆಳು ಕಾಳು, ಮಾಡಲು ತನಗೂ ಒಂದಷ್ಟು ಅಧಿಕಾರದ ಕೆಲಸ, ಹೆಸರು-
ಹೆಚ್ಚುಗಾರಿಕೆ… ಎಲ್ಲ… ಎಲ್ಲವೂ ಇದ್ದವು.
ಆದರೂ….
ಸತ್ತಿದ್ದು ಯಾಕೆ?
ಕೆಲವರು ಹಾಗೇ… ನಾನೂ ಕೂಡ. ಜೀವನ ಅಂದರೆ ಬರಿ ಮೆದ್ದು, ಹೊದ್ದು ಮಲಗೋದಲ್ಲ
ಅಂದುಕೊಂಡವರೆಲ್ಲ ಹಾಗೇ…
ಅವಳಿಗೂ ಬಹುಶಃ ಹಾಗೇ…
ಅಥವಾ ಆ ಅಧಿಕಾರದವನ ಚಿಲಿಪಿಲಿ ಅವಳ ಕಿವಿ ಹೊಕ್ಕಿತ್ತೇನೋ? ಅವನ ಡೈರಿಯ ಪುಟಗಳ
ಜತೆಜತೆಗೇ ತನ್ನ ಬದುಕೂ ಮುಗಿದು ಹೋಗೋದನ್ನ ಅವಳು ಸಹಿಸದೆ ಹೋಗಿದ್ದಿರಬೇಕು.
ಹೆಣ್ಣು ಜೀವದ ಬೇಕು ಬೇಡಗಳನ್ನ ಕೇಳುತ್ತ ಕೂರುವವರಾದರೂ ಯಾರಿದ್ದಾರೆ?
ಹಾಗೆಂದೇ ಅವಳು ತನ್ನ ಬೇಕುಗಳನ್ನ ಪಟ್ಟಿ ಮಾಡಿಕೊಂಡಳು. ಹುಡುಕುತ್ತ ಹೊರಟಳು.
ಅವಳು ಹೊರಟುಹೋದಳು… ಅವನ ಮನೆಯ ನಾಯಿ ಊಳಿಟ್ಟಿತು. ಹೊಸ ಖುರ್ಚಿಗೆ ಹೊಡೆದ ಪೇಂಟಿನ
ವಾಸನೆಯೇ ಆರಿಲ್ಲ ಇನ್ನೂ! ಮತ್ತೀಗ ಇವಳದ್ದೇನು ಕಾರುಬಾರು? ಗುಂಡಿಗೆ
ಧಡಲ್ಲೆಂದಿರಬೇಕು ಬಹುಶಃ! ಉಸಿರಾಡಬೇಕೆಂದವಳಿಗೆ ಹಳೆಗೆಳೆಯ ಕಿಟಕಿ
ತೆರೆದುಕೊಟ್ಟಿದ್ದು ಹೊಟ್ಟೆ ಉರಿಸಿರಬೇಕು. ಹಗಲು ಇರುಳಾಗುವುದರೊಳಗೆ ಅವಳ ಚಿತ್ರಕ್ಕೆ
ಮಸಿ ಚೆಲ್ಲಿತ್ತು. ಛೇ!! ಹಾಗೆಲ್ಲ ಬದುಕಬೇಕೆಂದು ಆಸೆ ಪಡಬಹುದೇ ಹೆಣ್ಣು?
ಅವಳದೇನಿದ್ದರೂ ಗೌರವದ ಸ್ಥಾನ. ಗೌರವ, ಗಾಳಿಗೆ ತೆರೆದುಕೊಳ್ಳೋದಿಲ್ಲ.
ದಿನಗಟ್ಟಲೆ ಅವಳು ಇಲ್ಲವಾದ ಸುದ್ದಿಯದೇ ಗುಲ್ಲು. ಒಣ ಒಣ ಸಂಗತಿಗಳಿಗೆ ನೀರು
ಹನಿಹನಿಸಿ ಬೋರು ಹೊಡೆದಿದ್ದ ಮಂದಿಗೀಗ ಸುಗ್ಗಿ! ಹೆಸರಿನ ಮನೆ ಹೆಂಗಸು ಹಾಗೆ
ಇಲ್ಲವಾಗಿದ್ದು ವಿಶ್ವದ ಅತಿ ಘೋರ ದುರಂತವಲ್ಲವೇ? ಅಲ್ಲದಿದ್ದರೆ ಬಿಡಿ. ಸುದ್ದಿ
ಮಂದಿಗೆ ಅದು ಶತಮಾನದ ಸಂಭ್ರಮವೇ ಸರಿ…
ನಿಜ… ಹೆಸರಿನ ಮಂದಿಯ ಹೆಂಡತಿಯರಾಗೋದು ಎಷ್ಟು ಕಷ್ಟ!!

‍ಲೇಖಕರು avadhi

18 June, 2008

9 Comments

  1. Tina

    ಚೇತನಾ,
    ನೀನು ಇನ್ನೂ ಯಾಕೆ ಬರೆದಿಲ್ಲ ಅಂದುಕೊಂಡಿದ್ದೆ.
    ಬೇಸರ ಕಣೆ. ಸಖತ್ ಕಾಡ್ತಾ ಇದೆ…

  2. DJ

    A real homage to Padmapriya’s death.

  3. shari

    ಅವಳಂಥ ಅನೇಕರು ಉಸಿರಾಡಿಸೋಕೆ ಪ್ರಯತ್ನಿಸ್ತಲೇ ಇರ್ತಾರೆ. ನೀನು ಹೇಳಿದ ಹಾಗೆ ಅಷ್ಟು ಸುಲಭ
    ವಾಗಿ ಉಸಿರಾಡೋಕೆ ಬಿಡಬೇಕು ತಾನೆ. ಅವಳು ನಾಂದಿ ಹಾಡಿದ್ದಾಳೆ. ಪ್ರಾಣತ್ಯಾಗ ಮಾಡಿ ಅವಳಂಥ
    ಅನೇಕರನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾಳೆ.ಅವಳ ಸಾವು ನನ್ನನ್ನು ತುಂಬಾ ಕಾಡಿದೆ. ಅದೇ ವೇಳೆ ನಿಮ್ಮ
    ಅರ್ಥಪೂರ್ಣ ಬರಹ ನೋಡಿ ಮತ್ತಷ್ಟು ತಳಮಳವಾಯ್ತು.

  4. Shwetha, Hosabale

    ಕೆಂಡಸಂಪಿಗೆಯಲ್ಲಿ ಪದ್ಮಪ್ರಿಯಾ ಸಾವಿನ ಬಗ್ಗೆ 2-3 ಲೇಖನಗಳನ್ನು ಓದುತ್ತಿದ್ದ ನನಗೆ
    ನೀವೂ ಅವಳ ಬಗ್ಗೆಯೇ ಬರೆದಿರುತ್ತೀರಾ, ಏನು ಬರೆದಿರಬಹುದು ಎಂಬ ಕುತೂಹಲದಿಂದ
    ವೆಬ್ ಸೈಟ್ ಪ್ರವೇಶಿಸಿದೆ, ಚೆನ್ನಾಗಿದೆ;ಕೆಲವು ಸಾಲುಗಳು ತುಂಬ ಇಷ್ಟವಾದವು ;
    ಎಲ್ಲಾ ಇದ್ದೂ ಸತ್ತಿದ್ದು ಯಾಕೆ ಎಂದ ಪ್ರಶ್ನಿಸುತ್ತಾ ಅವಳ ಮನಸ್ಸಿನ ಪದರಗಳನ್ನು
    ಹೀಗಿದ್ದಿರಬಹುದು ಎಂದು ಬಿಚ್ಚಿಟ್ಟ ಪರಿ ಇಷ್ಟ ಆಯ್ತು.

  5. ನಾ.ಸೋಮೇಶ್ವರ

    ಇದ್ದುದೆಲ್ಲವ ಬಿಟ್ಟು ಇರದುದರೆಡೆಗೆ ನಡೆವುದೇ ಜೀವನವೆ?

  6. vimala sharma

    the death tells many stories.but who is there to listen.

  7. vimala sharma

    i kathe enella bichhiduttide.idannella nodi summane uliyuvudu sariye?

  8. vimala sharma

    this death tells many stories.does the society has any responsibility? i think yes.just donot leave it to a few who is always making noise against all evils.join hands also along with pen sorry key board.

  9. ಶಮ, ನಂದಿಬೆಟ್ಟ

    ಹೆಸರಿನ ಮಂದಿಯ ಹೆಂಡತಿಯರಾಗೋದು ಎಷ್ಟು ಕಷ್ಟ!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading