ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಿತ್ರಾ ಸಂತೋಷ್ ಬರೆಯುತ್ತಾರೆ: ಇಲ್ಲಿ ಹೆಣ್ಣು ಹುಟ್ಟಿದರೆ ಗಿಡ ನೆಡ್ತಾರೆ!

ಚಿತ್ರಾ ಸಂತೋಷ್

ಈ ಊರಲ್ಲಿ ಹೆಣ್ಣುಮಗು ಹುಟ್ಟಿದ್ರೆ ಹೆಣ್ಣೆಂದು ಹೀಗಳೆಯಲ್ಲ. ಹೆಣ್ನಾಯಿತಲ್ಲಾ…ಗಂಡು ಇದ್ದಿದ್ರೆ ಚೆನ್ನಾಗಿರೋದು ಅಂದುಕೊಳ್ಳಲ್ಲ. ವರದಕ್ಷಿಣೆ, ಮದ್ವೆಯ ಚಿಂತೆಯೂಕಾಡಲ್ಲ. ಹೆಣ್ಣು ಮಗು ಹುಟ್ಟಿದ್ರೆ ಈ ಊರ ಮಂದಿಗೆ ಹಬ್ಬದ. ಮನೆಗೆ ಲಕ್ಷ್ಮಿನೇ ಬಂದುಬಿಟ್ಳು ಎಂದು ಸಡಗರಿಸುತ್ತಾರೆ. ಅವಳ ಹೆಸರಿನಲ್ಲೇ ಗಿಡಗಳನ್ನು ನೆಟ್ಟು, ಮಗಳಂತೆ ಅಕ್ಕರೆಯಿಂದ ಆರೈಕೆ ಮಾಡುತ್ತಾರೆ…

ನಿಜ, ಇದು ಬಿಹಾರ ರಾಜ್ಯದಲ್ಲಿರುವ ಧರ್ ಹರಾ ಗ್ರಾಮ. ರಾಜಧಾನಿ ಪಾಟ್ನಾದಿಂದ ಪೂರ್ವಕ್ಕೆ 230 ಕಿ.ಮೀ.ದೂರದಲ್ಲಿರುವ ಬಾಗಲ್ ಪುರ ಎಂಬ ಜಿಲ್ಲೆಯಲ್ಲಿದೆ. ಧರ್ ಹರಾ ಜನಸಂಖ್ಯೆ ಎಂಟು ಸಾವಿರ ಮೀರಿಲ್ಲ. ಈಗಷ್ಟೇ ಅಕ್ಷರಭ್ಯಾಸ ಕಲಿಯುತ್ತಿರುವ ಊರು. ಆದರೆ, ಹೆಣ್ಣುಮಕ್ಕಳ ಬಗೆಗಿನ ಕಾಳಜಿ ಅಮೆರಿಕದಂಥ ಹಲವು ರಾಷ್ಟ್ರಗಳನ್ನು ನಿಬ್ಬೆರಗಾಗಿಸಿದೆ. ಆದರೆ, ಇದೇ ದೇಶದಲ್ಲಿರುವ ಬಹಳಷ್ಟು ಜನರಿಗೆ ಈ ಊರು ಇನ್ನೂ ಅಪರಿಚಿತ!.

ಅಂದಹಾಗೆ ಇಲ್ಲಿ ಹೆಣ್ಣುಮಗು ಹುಟ್ಟಿದಾಗ 10ರಿಂದ 15 ಮಾವು ಮತ್ತು ಲಿಚಿ ಗಿಡಗಳನ್ನು ನೆಡುತ್ತಾರೆ. “ಬಿಟಿಯಾಕೀ ಜನ್ಮ್ ಹೋನಾ, ಹಮಾರೆ ಲಿಯೇ ತೋ ಬಹುತ್ ಖುಷಿಕೀ ಬಾತ್ ಹೈ…” ಎಂದು ಹೇಳುತ್ತಾರೆ. ಮಗು ದೊಡ್ಡವಳಾಗುವ ತನಕ ಅದರ ಆರೈಕೆ ಅಪ್ಪ-ಅಮ್ಮನದು. ಮಗಳಂತೆ ಗಿಡಗಳಿಗೂ ಅಕ್ಕರೆಯ ಆರೈಕೆ. ಮಗಳು ಬೆಳೆದು ದೊಡ್ಡವಳಾದ ಮೇಲೆ ಗಿಡಗಳ ಆರೈಕೆ ಪ್ರೀತಿಯ ಮಗಳ ಬಗಲಿಗೆ. ಅದು ಗಿಡಗಳು ಮರವಾಗಿ ಹಣ್ಣು ಬಿಡುವ ಸಮಯ. ಆಗಲೇ ಅವಳ ಹೆಸರಿನಲ್ಲಿ ಬ್ಯಾಂಕ್ ಖಾತೆಯೊಂದು ಆರಂಭ. ಹಣ್ಣುಗಳ ಮಾರಾಟದಿಂದ ಬರುವ ದುಡ್ಡು ಅವಳೆಸರಿನ ಖಾತೆಗೆ!. ಅದು ಅವಳ ವಿದ್ಯಾಭ್ಯಾಸಕ್ಕೆ, ಮದುವೆ ಖರ್ಚಿಗೆ, ಮಗಳ ಭವಿಷ್ಯ ಕಟ್ಟುವ ಕೆಲಸಗಳಿಗೆ…! ಅದೇ ದುಡ್ಡಿನಲ್ಲಿ ಅವಳ ವಿದ್ಯಾಭ್ಯಾಸದ ಖರ್ಚು, ಮದುವೆ ಎಲ್ಲವೂ ನಡೆಯುತ್ತದೆ.

ಇಂಥ ಸುಸಂಸ್ಕೃತಿಯ ಇತಿಹಾಸ ಕೇಳಿದರೆ “ಅಜ್ಜ ನೆಟ್ಟ ಆಲದ ಮರ’ ಕತೆ. ಒಂದು ಕಾಲದಲ್ಲಿ ಆ ಊರಲ್ಲಿ ವರದಕ್ಷಿಣೆ ಬದುಕಿಗೆ ಕಾಡಿರಬೇಕು, ಅದೇ ಕಾರಣಕ್ಕೆ ಈ ಸಂಪ್ರದಾಯ ಬೆಳೆದುಬಂದಿರಬೇಕು ಎನ್ನುವುದು ಕೆಲವರ ವಾದ. ಏನೇ ಆಗಿದ್ರೂ ಈ ಗ್ರಾಮ ಭಾರತ ಮಾತ್ರವಲ್ಲ, ಜಗತ್ತಿನ ಪ್ರತಿ ದೇಶಗಳಿಗೂ ಮಾದರಿ. ಇದೇ ಮಾತನ್ನು ಅಮೆರಿಕದ ರಾಯಭಾರಿ ಮೆಲನ್ನೆ ವರ್ರ್ ಕೂಡ ಹೇಳಿದ್ರು. ಧರ್ ಹರಾ ಎಂಬ ಗ್ರಾಮದಲ್ಲಿ ಹೆಣ್ಣು ಮಗು ಹುಟ್ಟಿದ ತಕ್ಷಣ ಮಾವು ಮತ್ತು ಲಿಚಿ ಗಿಡಗಳನ್ನು ನೆಡುತ್ತಾರೆ. ಹಾಗಾಗಿ ಇಲ್ಲಿ ಸ್ತ್ರೀ ಭ್ರೂಣ ಹತ್ಯೆ, ವರದಕ್ಷಿಣೆ ಸಾವು ಪ್ರಕರಣ ಕಾಣಸಿಗುವುದೇ ಇಲ್ಲ. ಭಾರತದ ಹಳ್ಳಿಯ ಈ ಸಂಪ್ರದಾಯ ಅನುಕರಣೀಯ ಎಂದಿದ್ದರು!.

********

ಬಿಹಾರದ ಈ ಪುಟ್ಟ ಗ್ರಾಮದಲ್ಲಿ ನಡೆಯುತ್ತಿರುವ ಜಾಗೃತಿ ನಮ್ಮ ದೇಶದ ಉದ್ದಗಲಕ್ಕೂ ಹರಡಬೇಕು. ನಾಳಿನ ಹೆಣ್ಣುಮಕ್ಕಳ ಭವಿಷ್ಯ ಗಟ್ಟಿಯಾಗಲು.. ನಡೆಯಲೇಬೇಕು ಇಂಥ “ಸ್ವಃಜಾಗೃತಿ”. ನಾಳೆ ನನ್ನ ಮಗು ಹೆಣ್ಣಾದರೂ ಅದರ ಹೆಸರಿನಲ್ಲಿ ಗಿಡಗಳನ್ನು ನೆಡುತ್ತೇನೆ…ಎಂಬ ನಿರ್ಧಾರಕ್ಕೆ ನಾವು-ನಮ್ಮ ಮನಸ್ಸು ಬದ್ಧವಾಗಿದ್ದಲ್ಲಿ ನಾಳೆ ನಮ್ಮೂರು ಕೂಡ ಧರ್ ಹರಾ ಆಗಬಹುದು. ಗಿಡಗಳ ಮೂಲಕವೇ ನಮ್ಮನೆ ಹೆಣ್ಣುಮಗಳು ಕೂಡ ಭವಿಷ್ಯ ಕಟ್ಟಬಹುದು.

 

‍ಲೇಖಕರು avadhi

19 March, 2013

1 Comment

  1. Raghunandan K

    ದೊಡ್ಡ ಮನಸ್ಸುಗಳು ದೊಡ್ಡದಾಗಿ ಯೋಚಿಸುತ್ತವೆ ಧರ್ ಹರಾ ದಲ್ಲಿರುವಂತೆ… ಪ್ರಕೃತಿ (ಹೆಣ್ಣು ಕೂಡ ಪ್ರಕೃತಿಯೇ ಅಲ್ಲವೇ..) ಹೊಸ ಹೊಸ ಹಸಿರಿನಿಂದ ಲೋಕವ ಬೆಳಗಲಿ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading