ಲಂಕೇಶ್ ಪತ್ರಿಕೆ ಆಗಿನ್ನೂ ಕಪ್ಪು ಸುಂದರಿ. ಕೆಲವೇ ಪುಟ, ಕಪ್ಪು ಬಣ್ಣ. ಆದರೆ, ಚೂಟಿ ಓಡಾಟ, ಚಾಟಿ ಏಟು ಇದರ ಟ್ರಂಪ್ ಕಾರ್ಡ್. ಲಂಕೇಶ್ ಪತ್ರಿಕೆಗೆ ಲಂಕೇಶ್ ಹೂರಣ ತುಂಬುತ್ತಿದ್ದರೆ ಪಕ್ಕದ ರೂಮಲ್ಲಿ ಕುಳಿತು ಅದಕ್ಕೆ ರೇಖೆ ತುಂಬುತ್ತಿದ್ದವರೇ ಗುಜ್ಜಾರ್. ಬಾಣಗೆರೆ ಗುಜ್ಜಾರಪ್ಪ ಅರ್ಥಾತ್ ಗುಜ್ಜಾರಪ್ಪ ಆರ್ಥಾತ್ ಗುಜ್ಜಾರ್. ದೊಡ್ಡ ಆಕಾರ, ಮೆಲುದನಿಯ ಗುಜ್ಜಾರ್ ಸುಂದರಾಂಗ. ಸದಾ ಮುಖಕ್ಕೆ ತೀಡಿಕೊಂಡ ಮುಗುಳ್ನುಗು. ಜೊತೆಗೆ ಸಹ ಕಲಾವಿದ ಸೂರಿ, ಲೈಬ್ರರಿಯ ಶಿವರಾಂ ಜೋಡಿಯಾದರಂತೂ ಒಂದಿಷ್ಟು ಚೇಷ್ಟೆ.
ಸೀರಿಯಸ್ ಕಲಾವಿದರ ಮಧ್ಯೆ ಅಪರೂಪದ ಹುಡುಕಾಟದ ಹುಡುಗ. ಗುಜ್ಜಾರ್ ಬಸವನಗುಡಿ ಮೆಟ್ಟಿಲಿಳಿದು ಎಂಜಿ ರೋಡ್ ನ ಮೆಟ್ಟಿಲೇರಿದರು. ಸುಧಾದ ಮಕ್ಕಳ ಪುಟಗಳಿಗೆ ತಮ್ಮದೇ ವಿಚಿತ್ರ ಜೀವಂತಿಕೆ ನೀಡಿದರು. ಅವರ ಮರ, ಅದರ ಎಲೆ, ಆ
ಜಿಗಿಯುವ ಮಕ್ಕಳು… ಗುಜ್ಜಾರ್ ನಮ್ಮವರೇ ಎನ್ನುವಂತೆ ಮಾಡ್ತಿದ್ದವು.
ಕಂಡಕ್ಟರ್ ಕರಿಯಪ್ಪ ಸೀರಿಯಲ್ ಟಿವಿಗೇರಿದಾಗ ಅದರಲ್ಲಿ ಗುಜ್ಜಾರ್ ಕೈ ಚಳಕವಿತ್ತು. ಗುಜ್ಜಾರ್ ಗೆ ನಗುವೇ ಬಾಣ. ಟಿ.ಪಿ.ಕೈಲಾಸಂ ಹೇಳುವಂತೆ, ಗುಜ್ಜಾರ್ ಚಿತ್ರಗಳು-
ಕಿರು ಆಳದ ನಗೆ ನೀರಿನ ಮೇಲೆ
ತಿರುಗುತ ಬಹುವೇಳೆ
ಕಣ್ಣೀರಿನ ಕಡಲಿನ ಪಾಲು ಹಾಸ್ಯದ ಹರಿಗೋಲು.
ಚರಿತ್ರೆಯ ಪಾಠ ಹೇಳೋ ಮೂಲಕ ವೃತ್ತಿ ಜೀವನ ಶುರು ಮಾಡಿದ ಗುಜ್ಜಾರ್, ಕ್ಯಾರಿಕೇಚರ್ ಮತ್ತು ರಾಜಕೀಯ ಕಾರ್ಟೂನ್ ಬರೆಯೋ ಮೂಲಕವೇ ಹೆಚ್ಚು ಗೊತ್ತಾದವರು. ಗುಜ್ಜಾರ್ ಎಂಜಿ ರೋಡಿನ ಸುಧಾ ಕಚೇರಿಯಿಂದ ಹೊರಟ ನಂತರ ಎಲ್ಲಿ ಮರೆಯಾದರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಮಲ್ಟಿ ಮೀಡಿಯಾ ಲೋಕ ಹೊಕ್ಕ ಗುಜ್ಜಾರ್ ಸದಾ
ಚಟುವಟಿಕೆಯ ದುಂಬಿಯಂತೆ ಜೇನು ಹೆಕ್ಕಿದ್ದಾರೆ. ನಮ್ಮ ಮುಂದಿಲ್ಲದ ದಿನಗಳಲ್ಲಿ ಏನೆಲ್ಲಾ ಮಾಡಿದರು ಎನ್ನುವುದರ ಒಂದು ಸ್ಟ್ರೋಕ್ ಇಲ್ಲಿದೆ-
ಗುಜ್ಜಾರ್ ಲೋಕ ಗೊತ್ತಾಗಬೇಕಾದರೆ www.thepotmaker.com ಗೆ ಧುಮುಕಿ. (ಅವರ ಮೊಬೈಲ್ ಸಂಖ್ಯೆ: ೦೯೩೪೧೨೪೩೦೭೨). ಗುಜ್ಜಾರ್ ಎಂಬ “ಕುಂಬಾರಣ್ಣ” ಸಿಗುತ್ತಾರೆ.





good . colour full presentation ..fills both eyes and mind……
ನನಗಿನ್ನೂ ನೆನಪಿದೆ. ಲಂಕೇಶ್ ಪತ್ರಿಕೆಯ ಮೊದಲ ಸಂಚಿಕೆ ಬಿಡುಗಡೆಯಾದಾಗ ಬಹುಶಃ ನಾನಿನ್ನೂ ಮೊದಲ ವರ್ಷದ ಎಂಜಿನೀರಿಂಗ್ ವಿದ್ಯಾರ್ಥಿ. ಮೊದಲನೆಯ ಸಂಚಿಕೆಯ ಮುಖಪುಟದ ಲೇಖನ ‘ಬೆಂಡೆಕಾಯಿ ಗೊಜ್ಜು Vs. ಚಿಕನ್ ಪಲಾವ್’ ಅನ್ಸತ್ತೆ. ಅದಕ್ಕೆ ದಪ್ಪ ಬ್ರಶ್ನ ರೇಖೆಗಳನ್ನೊಳಗೊಂಡ ಕಾರ್ಟೂನ್ ಪ್ರಕಟವಾಗಿತ್ತು. ಅದು ಖಂಡಿತವಾಗಿಯೂ (ಅಂದು ಎಲ್ಲರಿಗೂ ಪರಿಚಿತರಾದ) ಬಿ.ಜಿ.ಗುಜ್ಜಾರಪ್ಪನವರ ಕೈಚಳಕವೇ ಇರಬೇಕು. ಕಾರ್ಟೂನ್ಗಳು ದಪ್ಪ ರೇಖೆಗಳಲ್ಲಿರಬೇಕು, ಅದೇಕೋ ನನಗೆ ಮೊದಲಿನಿಂದಲೂ ಆ ಬಗೆಯ ಕಾರ್ಟೂನ್ಗಳೇ ಇಷ್ಟ. ಆರ್.ಕೆ.ಲಕ್ಷ್ಮಣ್ ಇಷ್ಟವಾದದ್ದು ಹಾಗೆಯೇ. ನಂತರ ರಾಮಮೂರ್ತಿ (ಡೆಕ್ಕನ್ ಹೆರಾಲ್ಡ್) ದಪ್ಪ ರೇಖೆಗಳಲ್ಲಿಯೇ ಬರೆಯುತ್ತಿದ್ದ ಮಿ.ಸಿಟಿಝನ್ ಇಷ್ಟವಾಗುತ್ತಿದ್ದರು. ಅವರು ಪೆನ್ ಬಳಸಿ ಸಣ್ಣ ರೇಖೆಗಳ ಕಾರ್ಟೂನ್ ಬರೆಯುತ್ತಿದ್ದಂತೆ, ನನ್ನ ಇಷ್ಟ ದೂರವಾಯಿತು. ನಂತರದ ದಿನಗಳಲ್ಲಿ ಕಾರ್ಟೂನ್ಗಳನ್ನು ಮತ್ತೆ ಮೆಚ್ಚಿಕೊಳ್ಳುವಂತೆ ಮಾಡಿದವರೇ ಪ್ರೀತಿಯ ಗುಜ್ಜಾರ್. ಪ್ರಜಾವಾಣಿ ಬಳಗದ ಪತ್ರಿಕೆಗಳಿಗೆ ವರ್ಗಾವಣೆಯಾದ ನಂತರ, ಅವರ ಬ್ರಶ್ ಮತ್ತಷ್ಟು ಚುರುಕಾಯಿತು. ಕೊನೆಗೆ ರೈಲ್ವೆ ಟೈಮ್ ಟೇಬಲ್ ಅನ್ನೂ ಮತ್ತೆ ಮತ್ತೆ ತಿರುವಿಹಾಕುವಂಥ ಪುಸ್ತಕವನ್ನಾಗಿ ಮಾಡಿದ ಕೀರ್ತಿ ಗುಜ್ಜಾರ್ ಅವರದು.
ಅವರೊಬ್ಬ ಆತ್ಮೀಯ ಸ್ನೇಹಿತರೆಂದು ಹೇಳಿಕೊಳ್ಳುವುದೇ ನನಗೆ ಹೆಮ್ಮೆ.
– ಹಾಲ್ದೊಡ್ಡೇರಿ ಸುಧೀಂದ್ರ
http://netnota.blogspot.com
http://suddijeevi.blogspot.com
ಮಕ್ಕಳಿಗೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸುವುದರಲ್ಲಿ ಗುಜ್ಜಾರ್ರಷ್ಟು ಪ್ರವೀಣರನ್ನು ನಾನು ನೋಡಿಲ್ಲ. ಮಕ್ಕಳ ಮುಗ್ಧತೆ, ತುಂಟತನವನ್ನು ಯಥಾವತ್ತಾಗಿ ಅವರು ಬ್ರಶ್ನಲ್ಲಿ ಇಳಿಸುವುದೇ ಒಂದು ಸೋಜಿಗ.
ನನಗೊಂದು ಕುತೂಹಲವಿದೆ- ತೇಜಸ್ವಿಯವರನ್ನು ಸೊಗಸಾಗಿ ಚಿತ್ರಿಸುವ ಗುಜ್ಜಾರ್, ತಮ್ಮದೇ ಕ್ಯಾರಿಕೇಚರನ್ನು ಹೇಗೆ ಬರೆಯುತ್ತಾರೆ ಎಂಬುದು!
-ಸುರೇಶ್ ಕೆ.