ನಟರಾಜ್ ಹುಳಿಯಾರ್ ಮತ್ತು ಅವನ ಸಾಂಸ್ಕೃತಿಕ ಬರಹಗಳ ಸಂಕಲನ “ಗಾಳಿ ಬೆಳಕು” ಬಗ್ಗೆ ಬರೆದದ್ದು ಓದಿದೆ. ನಾನು ಈ ಹಿಂದೆ “ಹೊಸತು”ವಿನಲ್ಲಿ ಬರೆದಿದ್ದ ಬರಹ ನೆನಪಾಯಿತು. “ಗಾಳಿ ಬೆಳಕು” ಕುರಿತು ನನ್ನ ನೋಟದ ಆಯ್ದ ಭಾಗಗಳನ್ನು ನಿಮಗೆ ಕಳಿಸುತ್ತಿದ್ದೇನೆ.
*
ನಟರಾಜ್ ಬರಹ ನನ್ನನ್ನು ಕಾಡಿಸಲು ಹಲವು ಕಾರಣಗಳಿವೆ. ನಾವಿಬ್ಬರೂ ಒಟ್ಟಿಗೇ ಕವಿತೆ ಕಟ್ಟಿದವರು. ಸಾಹಿತ್ಯವನ್ನು ಮಥಿಸುತ್ತ ಒಂದಿಷ್ಟು ಕಾಲ ಓಡಾಡಿದವರು. ಹಾಗಾಗಿ, ಇವನ ಬರವಣಿಗೆಯ ಬಗ್ಗೆ ಸದಾ ಕುತೂಹಲದ ಕಣ್ಣು. ಇನ್ನುಳಿದಂತೆ ನಾವಿಬ್ಬರೂ ಒಂದೇ ಕಾಲಮಾನದಲ್ಲಿ ಪಯಣಿಸುತ್ತಿದ್ದೇವೆ. ಮಾರ್ಕ್ಸ್ ವಾದ-ಲೋಹಿಯಾ ವಾದ, ಕೆಂಪು ರೈತ ಸಂಘ-ಹಸಿರು ರೈತ ಸಂಘ, ತುರ್ತು ಪರಿಸ್ಥಿತಿ ಉಂಟುಮಾಡಿದ ಭಯದ ನಂತರದ ಕಾಲದಲ್ಲಿ, ಗುಂಡೂರಾವ್ ಸರ್ಕಾರದ ದಬ್ಬಾಳಿಕೆ ಮಧ್ಯೆ, ಪೇಪರ್ ನಂತರದ ಟಿವಿ ಕಂಪ್ಯೂಟರ್ ಮಾಧ್ಯಮಗಳು ಬಂದಿಳಿದ, ಹೆಗಡೆ ಸರ್ಕಾರ ತಣ್ಣಗೆ ಚಳವಳಿಯ ಚೈತನ್ಯ ಕಸಿದುಕೊಂಡ, ನರಗುಂದ-ನವಲಗುಂದ ರೈತರ ಹೋರಾಟ, ಕನ್ನಡದ ಗೋಕಾಕ್ ಚಳವಳಿ, ಪತ್ರಿಕೋದ್ಯಮದಲ್ಲಿ ಕ್ಯಾಸೆಟ್ ಲೋಕ ಕಂಡ ಭಿನ್ನದನಿ, ಕನ್ನಡ ಕಾವ್ಯದ ಬದಲಾದ ಮುಖಗಳು… ಇವೆಲ್ಲವನ್ನೂ ಕಂಡ ತಲೆಮಾರಿನವರು ನಾವು.
ನಾನು ಸಂವಹನದ ವಿದ್ಯಾರ್ಥಿ. ನಟರಾಜ್ ಇಂಗ್ಲಿಷ್ ಸ್ನಾತಕೋತ್ತರ ಅಧ್ಯಯನ ಮಾಡಿದ ಸಾಹಿತ್ಯದ ವಿದ್ಯಾರ್ಥಿ. ಹಾಗಾಗಿ ನಾವಿಬ್ಬರೂ ನಮ್ಮದೇ ದಾರಿಗಳಲ್ಲಿ ಈ ಮೇಲಿನ ಎಲ್ಲಾ ಘಟ್ಟಗಳನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ನಟರಾಜ್ ಈ ಪ್ರಶ್ನೆಗಳಿಗೆ ಕಂಡುಕೊಳ್ಳುವ ಉತ್ತರಗಳು ಹೇಗಿದೆ ಎಂಬ ಕುತೂಹಲದ ಜೊತೆಗೇ, ನಾನು ಕಂಡುಕೊಂಡ ಉತ್ತರದ ಜೊತೆಗೆ ತಾಳೆ ನೋಡುವುದೂ ಅಭ್ಯಾಸವಾಗಿದೆ. ನಟರಾಜ್ ಬರೆದ ಬರಹಗಳು ನನ್ನ ತಿಳುವಳಿಕೆಯನ್ನು ವಿಸ್ತರಿಸಿವೆ. “ಗಾಳಿ ಬೆಳಕು” ಈ ರೀತಿಯಲ್ಲೇ ಪ್ರತಿಯೊಬ್ಬರ ತಿಳುವಳಿಕೆಯನ್ನೂ ವಿಸ್ತರಿಸುವ ಒಂದು ಮಹತ್ವದ ಪ್ರಯತ್ನ.
ನಟರಾಜ್ ನಮ್ಮ ಇಂದಿನ ಹಲವು ವಿಮರ್ಶಕರಿಗಿಂತ ಭಿನ್ನ. ಸಾಮಾಜಿಕ ಚಳವಳಿಯ ಅಂಗಳದಿಂದ ಈತ ಸಾಹಿತ್ಯ ಕ್ಷೇತ್ರಕ್ಕೆ ಜಿಗಿದ ಕಾರಣ ಈತನ ಬರಹ ಎಲ್ಲಾ ಸಂದರ್ಭಗಳಲ್ಲೂ ಸಮಾಜವನ್ನು ತನ್ನ ಕೇಂದ್ರವಾಗಿಟ್ಟುಕೊಂಡಿದೆ. ಒಂದು ಕೃತಿ, ಒಂದು ಮಾತು, ಒಂದು ಹಾಡು, ಒಬ್ಬ ಸಾಹಿತಿ-ಎಲ್ಲರೂ ನಟರಾಜನ ಸಮಾಜ ನಿಕಷಕ್ಕೊಡ್ಡಿಕೊಳ್ಳುತ್ತಾರೆ. ಈ ಕಾರಣಕ್ಕಾಗಿಯೇ ನಟರಾಜನ ಬರಹ ಇಂದಿನ ದಿನಗಳ ವಿಮರ್ಶೆ ಮಾಡುತ್ತ, ಮುಂದಿನ ದಿನಗಳಿಗೆ ದಾರಿ ತೋರಿಸುತ್ತದೆ. ನಮ್ಮ ನಡುವಿನದನ್ನೇ ಮಾತನಾಡುತ್ತ ಸಾಹಿತ್ಯದ ಒಳದಾರಿಗಳತ್ತ ಕೈ ಹಿಡಿದು ನಡೆಸುತ್ತದೆ.
ಚಿತ್ರ: ಜಿ ಕೃಷ್ಣಪ್ರಸಾದ್





0 Comments