ಡಾ ಮಂಗಳಾ ಪ್ರಿಯದರ್ಶಿನಿ
ಸಾಮಾನ್ಯವಾಗಿ ವಿದೇಶ ಪ್ರವಾಸಗಳನ್ನು ಮಾಡುವಲ್ಲಿ ಸಂಭ್ರಮ , ಸಂತೋಷ , ಕುತೂಹಲಗಳಿದ್ದರೂ , ಈ ಬಾರಿಯ ಅಮೇರಿಕಾ ಯಾತ್ರೆ ಇದೆಲ್ಲವನ್ನೂ ಒಳಗೊಂಡಂತೆ ಭಯದಿಂದ ಕೂಡಿದ ಅನಿವಾರ್ಯದ ಯಾತ್ರೆಯೂ ಆಗಿತ್ತು . ಅಕ್ಟೋಬರ್ ತಿಂಗಳಿನಲ್ಲಿ ನಲ್ಲಿ ಪ್ರವಾಸಿಗರನ್ನು ಅಮೇರಿಕಾ ದೇಶಕ್ಕೆ ತಲುಪಿಸಲು ಯಾವ ಏರ್ ಲೈನ್ ಕಂಪನಿಗಳೂ ಸಿದ್ಧವಿರಲಿಲ್ಲ. ಕೋವಿಡ್ ಎಲ್ಲರನ್ನೂ ಅವರವರ ದೇಶದಲ್ಲಿಯೇ ಬಂಧಿಸಿತ್ತು.
ಕೊನೆಗೆ ಅಮೇರಿಕಾದ ಯುನೈಟಡ್ ಏರ್ ಲೈನ್ಸ್ ತನ್ನ ಟಿಕೇಟುಗಳನ್ನು ಕಾದಿರಿಸುವ ಕಿಟಕಿಗಳನ್ನು ವಿದೇಶಿಯರಿಗೆ ತರೆದಾಗ , ನನಗೆ ಹೋಗಲೊಂದು ರಹದಾರಿ ಸಿಕ್ಕಿತ್ತು . ಈ ಬಾರಿ ಕೋವಿಡ್ ಕಾರಣದಿಂದ ಆದಷ್ಟೂ ಸುರಕ್ಷಿತ ಮಾರ್ಗವಾಗಿ ಅಮೇರಿಕಾ ಪ್ರಯಾಣ ಮಾಡುವಾಗ ದುಬಾರಿಯಾದ ಬಿಸಿನೆಸ್ ಕ್ಲಾಸೇ ಇದ್ದುದರಲ್ಲಿ ಸುರಕ್ಷಿತ ಎಂಬುದು ಮಗಳು ಹಾಗೂ ಪತಿಯ ಅಭಿಪ್ರಾಯವಾಗಿದ್ದಿತು . ಸರಿ , ಒಂದಕ್ಕೆ ನಾಲ್ಕರಷ್ಟು ದುಡ್ಡು ತೆತ್ತು ದುಬಾರಿ ಬೆಲೆಯ ಎರಡು ಟಿಕೇಟ್ಟುಗಳನ್ನು ಖರೀದಿಸಲಾಗಿತ್ತು .
ಟಿಕೇಟು ಕೈಗೆ ಬಂದ ಕೂಡಲೇ ಪ್ರವಾಸದ ಚಟುವಟಿಕೆಗಳಿಗೆ ಜೋಷ್ ಬಂದಿತ್ತು .ಒಬ್ಬೊಬ್ಬರಿಗೆ ಎಪ್ಪತ್ತೆಂಟು ಕೇಜಿಗಳನ್ನು ತೆಗೆದುಕೊಂಡು ಹೋಗುವ ಅವಕಾಶವಿದ್ದುದರಿಂದ ಮನೆಯಲ್ಲಿ ವಾರದ ಹಿಂದಿನಿಂದಲೇ ಸಾರಿನ ಪುಡಿ , ಹುಳಿ ಪುಡಿ , ವಾಂಗೀಭಾತ್ ಪುಡಿ , ಗೊಜ್ಜಿನ ಪುಡಿ , ಚಟ್ಟ್ನೀ ಪುಡಿ , ಮೆಂತ್ಯದ ಹಿಟ್ಟು – ಹೀಗೆ ಪುಡಿಗಳ ಕಾರ್ಖಾನೆಗಳು ಪ್ರಾರಂಭವಾಗಿದ್ದವು .

ಇದೆಲ್ಲದರ ಜೊತೆ ಕಷಾಯಪುಡಿ ಕೂಡ ಈ ಬಾರಿಯ ಹೊಸ ಸೇರ್ಪಡೆಯಾಗಿತ್ತು . ಒಟ್ಟು ಹತ್ತು ಕೇಜಿಗಳಷ್ಟು ಪುಡಿಗಳು , ಅದರೊಂದಿಗೆ ಕರಿದ ತಿಂಡಿಗಳು , ಬಟ್ಟೆಬರೆಗಳು , ಬಹುಪಾಲು ಖಾದ್ಯ ವಸ್ತುಗಳು ತಯಾರಾದವು . ಮಗಳದು ಎಳೆ ಮಗುವಾಗಿದ್ದಾಗಿನಿಂದ ರುಚಿಯಲ್ಲೇ ಅದ್ದಿ ತೆಗೆದ ನಾಲಿಗೆ . ಗಾಂಧೀ ಬಜಾರಿನ ಸುಬ್ಬಮ್ಮನ ಅಂಗಡಿಯಿಂದಲೇ ಚಕ್ಕುಲಿ ,ಕೋಡುಬಳೆ ,ತೇಂಗೊಳಲು , ಮುಚ್ಚೊರೆಗಳಾದರೆ ,ಡಿ ವಿಜಿ ರಸ್ತೆಯ ಬ್ರಾಮ್ಹಣರ ಬೇಕರಿಯಿಂದಲೇ ಇಂಗಿನಲ್ಲಿ ಮುಳುಗಿಸಿದ , ತುಸು ಖಾರವೇ ಎನ್ನುವಂತಹ ಕಾಂಗ್ರೆಸ್ ಕಡಲೇ ಬೀಜವೇ ಆಗಬೇಕು .
ವೆಂಕಟೇಶ್ವರದಿಂದ ಮೈಸೂರು ಪಾಕು … ಹೀಗೆ ರುಚಿ ,ಅಭಿರುಚಿಗಳ ಪ್ರಜ್ಞೆ ಇರುವ ಅವಳಿಗೆ ಯಾವುದರಲ್ಲಿಯೂ ಹೆಚ್ಚು ಕಡಿಮೆಯಾಗುವಂತೆಯೇ ಇಲ್ಲ . ಇವುಗಳ ಜೊತೆಗೆ ಬಟ್ಟೆ , ಬರೆಗಳು , ಬಹುಪಾಲು ಖಾದ್ಯ ವಸ್ತುಗಳು – ಇವನ್ನೆಲ್ಲ ಹೊತ್ತು ತಲುಪಿಸುವ ಸಂಭ್ರಮಕ್ಕೇನು ಕೊರತೆ ಇರಲಿಲ್ಲ . ವರ್ಷಕ್ಕೊಮ್ಮೆ ಆರು ತಿಂಗಳ ಅಮೇರಿಕಾ ವಾಸವಾಗದಿದ್ದರೆ ವರ್ಷವಾಯಿತು ಎಂದೆನಿಸುವುದೇ ಇಲ್ಲ . ಈ ವರ್ಷಬೇಡ ಎಂದು ಕೊಂಡಿದ್ದರೂ ಹೋಗಲೇ ಬೇಕಾದ ಅನಿವಾರ್ಯತೆ .
ಅಕ್ಟೋಬರ್ ಎಂಟಕ್ಕೆ ಬೆಂಗಳೂರಿನಿಂದ ‘ವಿಸ್ತಾರ ‘ ವಿಮಾನದಿಂದ ನವದೆಹಲಿ , ಅಲ್ಲಿಂದ ಯುನೈಟೆಡ್ ಏರ್ಲೈನ್ಸ್ ನಲ್ಲಿ ನ್ಯೂಯಾರ್ಕ್ , ನ್ಯೂಯಾರ್ಕ್ ನಿಂದ ಡೆಟ್ರಾಯ್ಟ್ . ಇದು ಸ್ವಲ್ಪ ಸುತ್ತುಯಾತ್ರೆ . ಯಾವಾಗಲೂ ಲುಫ್ತಾನ್ಸಾ , ಏರ್ ಫ್ರಾನ್ಸ್ ನಲ್ಲೇ ಹೊರಡುವ ನನಗೆ ಇದು ಹೊಸ ಮಾರ್ಗದ ಯಾತ್ರೆಯೂ ಹೌದು .
ಪ್ರಯಾಣದ ಸುರಕ್ಷತತೆಯ ಬಗ್ಗೆ ಯುನೈಟೆಡ್ ಸಾಕಷ್ಟು ವಿವರಣೆ , ಕ್ರಮ , ನಿಯಮಗಳನ್ನು ಕಳಿಸಿತ್ತು . ಬಿಸಿನೆಸ್ ಕ್ಲಾಸಿನಲ್ಲಿ ಸಾಲಿಗೆ ನಾಲ್ಕೇ ಸೀಟುಗಳು . ಒಬ್ಬೊಬ್ಬರ ಮುಖವೇ ಕಾಣದಂತಹ ಆವರಣಗಳು . ಮೊದಲಾದರೋ ಪಕ್ಕದಲ್ಲಿ ಕುಳಿತ ಪತಿ ಪರಮೇಶ್ವರನೊಂದಿಗೆ ಅಹೋರಾತ್ರಿ ಗೌರಿಯ ಸುಖ ದುಃಖಗಳ ಮಾತುಕತೆ .
ಈಗಲಾದರೋ ನಮ್ಮ ಸೀಟಿಂಗ್ ವ್ಯವಸ್ಥೆ ಹೇಗಿತ್ತೆಂದರೆ ಪತಿ – ಪತ್ನಿಯರಿಬ್ಬರ ಮುಖಗಳೂ ಕಾಣದಂತೆ ಕೋವಿಡ್ ಮಾರಿ ಇಬ್ಬರ ನಡುವೆ ಮರದ ಗೋಡೆಗಳನ್ನು ಸೃಷ್ಟಿಸಿತ್ತು . ಗೋಡೆಯಾಚೆ ಕುಳಿತ ಪರಮೇಶ್ವರನ ಕಿವಿಗಳು ಜಡವಾಗಿ ಗೌರಿಯ ಬಿಕ್ಕುಗಳು ಅವಳ ಎದೆಯಾಳದಲ್ಲೇ ಉಳಿದು ಹೋಗಿತ್ತು .ಇಬ್ಬರದೂ ಒಬ್ಬರಿಗೊಬ್ಬರು ಹಂಚಿಕೊಳ್ಳಲಾರದ ಖಾಸಗೀ ಪಯಣಗಳು , ಆವರಣ ಕಟ್ಟಿಕೊಂಡು ದ್ವೀಪವಾದ ಪಯಣಗಳು.

ಗುಂಡಿಯೊತ್ತಿದರೆ ಸಾಕು , ನಮ್ಮ ಸೀಟೇ ಮಂಚವಾಗಿ , ಕಾಲನ್ನು ನಿಡಿದಾಗಿ ಚಾಚಿ ಸುಖ ನಿದ್ರೆಗೆ ಜಾರಿಸಿತ್ತು . ಎದುರಿಗಿರುವ ದೊಡ್ಡ ಟೀವಿಯ ಪರದೆಯ ಮೇಲೆ ಎಂತೆಂಥದೋ ಇಂಗ್ಲಿಷ್ ಚಿತ್ರಗಳು ಸಾಗುತ್ತಿದ್ದರೂ ವಾರದಿಂದ ಕರಿದ, ಹುರಿದ , ಕಟ್ಟಿಉಂಡೆ ಮಾಡಿದ ದೈಹಿಕ ಶ್ರಮಗಳ ಅನುಭವಗಳು ಅವಾವುದನ್ನೂ ನೋಡಲಾರದಂತೆ ಮಾಯಾನಿದ್ರೆಗೆ ಜಾರಿಸಿತ್ತು .
ಈ ಬಾರಿಯ ಪಯಣ ಭಿನ್ನ ಸ್ವರೂಪದಲ್ಲಿ ಸಾಗಿತ್ತು . ಸದಾ ತುಸು ಹೆಚ್ಚೇ ತುಟಿಗೆ ರಂಗು ಬಳಿದು , ದಪ್ಪ ಬೇಸ್ , ಪೌಡರ್ರ್ , ಕಾಂಪ್ಯಾಕ್ಟಗಳನ್ನು ಮೆತ್ತಿ , ಕಣ್ಣಿಗೆ ಕಾಡಿಗೆ ಬರೆದು , ತುಟಿಯಂಚಿನಲ್ಲೇ ಮಾದಕ ನಗೆ ನಕ್ಕು , ಪುನುಗಿನ ಬೆಕ್ಕುಗಳಂತೆ ಘಮಘಮಿಸುತ್ತ ಅತ್ತಿಂದಿತ್ತ ನಲಿಯುತ್ತಿದ್ದ ಗಗನ ಸುಂದರಿಯರು ಕೋವಿಡ್ ಮಾರಿಗೆ ತಮ್ಮ ಬಣ್ಣ , ಬೆರಗುಗಳನ್ನು ತೆತ್ತು , ತೆಪ್ಪಗೆ ಕೂತಲ್ಲೇ ಕೂತಿದ್ದರು .ಊಟ , ತಿಂಡಿಗಳನ್ನು ಸರಬರಾಜು ಮಾಡುವಾಗಲೂ ಅಡಿಗಳಷ್ಟು ಅಂತರದ ಪಾಲನೆ .
ಕೈಯ್ಯಲ್ಲಿ ಮುಟ್ಟದೆ ಪ್ಯಾಕೆಟ್ಟುಗಳನ್ನು ತಟ್ಟೆಯಿಂದಲೇ ಟೇಬಲ್ಲಿಗೆ ಜಾರಿಸುತ್ತಿದ್ದರು. ಕರೆದಾಗ ಬರುವಂತೆ ಒತ್ತಾಯಿಸುವ ಕರೆ ಗುಂಡಿಗಳೇ ಮಾಯವಾಗಿದ್ದವು . ಯಾರ ಮುಖವೂ ಯಾರಿಗೂ ಕಾಣದಂತಹ ಕ್ಯಾಬಿನ್ನುಗಳ ಸೃಷ್ಟಿ . ಎಲ್ಲ ಘೋಷಣೆಗಳೂ ನಮ್ಮ ಟೀವೀ ಪರದೆಗಳ ಮೇಲೆ ಮಿಂಚಿ ಮಾಯವಾಗುತ್ತಿದ್ದವು .
ಗಗನಗಾಮಿಯರ ನವಿರು ಮಾತುಗಳಿಲ್ಲ , ಸಕ್ಕರೆಯ ನಗೆ ಇಲ್ಲ , ಬಣ್ಣದ ತುಟಿ , ರಂಗಿನ ಮುಖ – ಯಾವುವೂ ಇಲ್ಲದ ಸೂತಕದ ವಾತಾವರಣವನ್ನು ಪಾಪಿ ಕೋವಿಡ್ ಸೃಷ್ಟಿ ಮಾಡಿತ್ತು . ಮೊದಲ ಬಾರಿಗೆ ಏರಿದ ನಮ್ಮ ಭಾರತದ ಹೊಸ ಡೊಮೆಸ್ಟಿಕ್ ಏರ್ ಬಸ್ , ಟಾಟಾದವರ ‘ ವಿಸ್ತಾರ ‘ ಯಾವುದೇ ಅಂತಾರಾಷ್ಟ್ರೀಯ ವಿಮಾನಗಳಿಗೂ ಕಮ್ಮಿ ಇಲ್ಲ ಎನ್ನುವಂತೆ ನಮ್ಮನ್ನು ಬೆಂಗಳೂರಿನಿಂದ ನವದೆಹಲಿಗೆ ತಂದು ಬಿಟ್ಟಿತ್ತು .

ಇನ್ನು ಮುಂದಿನ ಹತ್ತೊಂಭತ್ತು ಗಂಟೆಗಳ ಅವ್ಯಾಹತ ಹಾರಾಟ ಮಾಡಿದ ಅಮೆರಿಕೆಯ ಯುನೈಟೆಡ್ ಏರ್ ಲೈನ್ಸ್ , ಕುಡಿದ ನೀರು ಅಲ್ಲಾಡದಂತೆ ನವಿರಾಗಿ ಬೆಳಗಿನ ನಾಲ್ಕೂವರೆ ಗಂಟೆಗೆಲ್ಲ ನ್ಯೂಯಾರ್ಕಿನ ಹಡ್ಸನ್ ನದಿ ದಂಡೆ ತಲುಪಿಸಿತ್ತು.
ನಮ್ಮ ಅಮೇರಿಕಾದ ಇಮಿಗ್ರೇಷನ್ ನ್ಯೂಯಾರ್ಕಿನಲ್ಲಿಯೇ ನಡೆಯ ಬೇಕಿತ್ತು. ಇದು ನನ್ನ ಒಂಭತ್ತನೆಯ ಅಮೇರಿಕಾ ಯಾತ್ರೆಯಾದರೂ , ಬದಲಾದ ಸಂದರ್ಭ, ಇಕ್ಕಟ್ಟು ,ಬಿಕ್ಕಟ್ಟುಗಳ ಕಾರಣದಿಂದ ಬಂಧು ಮಿತ್ರರು ಕೋವಿಡ್ ಕಾಲದ ಇಮಿಗ್ರೇಷನ್ ಬಗೆಗೆ ಸಾಕಷ್ಟು ಎಚ್ಚರಿಕೆ ನೀಡಿದ್ದರು . ಎರಡು ಸೂಟ್ ಕೇಸುಗಳಲ್ಲಿ ಅಡಗಿದ್ದ ತಿಂಡಿ , ಪುಡಿಗಳ ಬ್ರಹ್ಮಾಂಡ ಕಂಡು ಹಾಗೆ ಹಾಗೆ ತಿಪ್ಪೆಗೆ ಸುರಿದಾರು , ಜೋಕೆ . ಕೋವಿಡ್ ವೈರಾಣುಗಳ ಕಾರಣದಿಂದ ಹೊರ ಜಗತ್ತಿನ ತಿಂಡಿ , ಪದಾರ್ಥಗಳಿಗೆ ಕುತ್ತೇ ಇದೆ ಎಂದು .
ಇರಲಿ , ನೋಡೇ ಬಿಡುವ ಎಂದು ಬೆಲ್ಟಿನ ಮೇಲೆ ಗೆದ್ದು ಬೀಗಿದೆವೆಂದು ವೈಯ್ಯಾರವಾಗಿ ನಲಿದು ಬಂದ ನಾಲ್ಕು ದೊಡ್ಡ ಬ್ಯಾಗಗುಗಳನ್ನು ಹೊತ್ತು ಇಮಿಗ್ರೇಷನ್ ಕೌಂಟರಿಗೆ ಬಂದಾಗ , ಪರಮಾಶ್ಚರ್ಯವೆಂದರೆ ಎಲ್ಲಿಯೂ ದೊಡ್ಡ ದೊಡ್ಡ ಸಾಲುಗಳಿರಲಿಲ್ಲ .
ಜಾನ್ ಎಫ್ ಕೆನಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಗತ್ತಿನ ಅನೇಕ ದೊಡ್ಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದ್ದು , ಸದಾ ಜನ ಜಂಗುಳಿಯಿಂದ ಗಿಜುಗುಟ್ಟುತ್ತಿದ್ದು , ಇಮಿಗ್ರೇಷನ್ ಸಾಲಿನಲ್ಲಿ ನಿಂತರೆ ಕನಿಷ್ಟ ಮೂರು ಗಂಟೆಗಳಾದರೂ ಬೇಕು. ಮುಂದಿನ ಕನೆಕ್ಟಿಂಗ್ ವಿಮಾನದ ಸಮಯ ಚಿಕ್ಕದಿದ್ದರೆ , ನಿಮ್ಮ ಮುಂದಿನ ವಿಮಾನ ಹಾರಿ ಹೋಗಿ ತೊಂದರೆಗೆ ಒಳಗಾಗುವ ಅಪಾಯವೇ ಹೆಚ್ಚು .
ಅಮೇರಿಕಾದ ಅಧ್ಯಕ್ಷೀಯ ಚುನಾವಣೆಗಳು ನಮ್ಮೂರಿನಂತೆ ಯಾವ ಸಂಭ್ರಮವನ್ನೇನೂ ಪಡೆದಿರಲಿಲ್ಲ . ಕೋವಿಡ್ ಮಾರಿಯ ತಲ್ಲಣಗಳಿಗೆ ಅತಿ ಹೆಚ್ಚು ಘಾಸಿಗೊಂಡಿದ್ದು ನ್ಯೂಯಾರ್ಕ್ ಎಂಬ ಮಹಾ ಮಾಯಾನಗರಿಯೇ . ಆದರೂ ಎಲ್ಲಿಯೂ ನಮ್ಮ ದೇಹದ ಉಷ್ಣಾಂಶವನ್ನು ಮಾಪನ ಮಾಡಲೇ ಇಲ್ಲ . ಯಥಾ ಪ್ರಕಾರ ಅಲ್ಲಲ್ಲಿ ಗುಂಪುಗೂಡಿಕೊಂಡು ಹರಟೆ ಹೊಡೆಯುವವರಿದ್ದರು .
ನಮ್ಮೂರಿನ ಮೆಡಿಕಲ್ ಸ್ಟೋರ್ ಗಳಲ್ಲಿ ಲಭ್ಯವಾಗುವ ತೆಳು ನೀಲಿ ಬಣ್ಣದ ಸರ್ಜಿಕಲ್ ಮಾಸ್ಕುಗಳನ್ನು ಎಲ್ಲರೂ ತೊಟ್ಟಿದ್ದರೆಂಬುದು ಪುಣ್ಯ . ಆತ್ಮೀಯರನ್ನು ತಬ್ಬುವುದು , ಆಲಂಗಿಸುವುದು , ಕೈ ಕುಲುಕುವುದು ನಡದೇ ಇತ್ತು . ಬೇರೆ ಕಡೆಗಳಿಂದ ಬಂದ ಪ್ರಯಾಣಿಕರು ಮುಖ ಗವುಸುಗಳು , ಮುಖದ ಗಾರ್ಡ್ ಗಳನ್ನು ಹಾಕಿ ಅವಸರವಸರವಾಗಿ ತಿರುಗಾಡುತ್ತಿದ್ದರು . ಜನನಿಬಿಡ ವಿಮಾನ ನಿಲ್ದಾಣ ಖಾಲಿ ಖಾಲಿಯಾಗಿ ಭಣಗುಟ್ಟುತ್ತಿತ್ತು .

ಈ ಬಾರಿಯ ಇಮಿಗ್ರೇಷನ್ ಕ್ಯೂ ಖಾಲಿಖಾಲಿ. ನಮ್ಮ ಮುಂದೆ ಇಸ್ರೇಲಿ ಪ್ರಯಾಣಿಕರ ದಂಡೊಂದಿತ್ತು . ನಮ್ಮೂರಿನ ಜಾದುಗಾರರು ಧರಿಸುವಂತಹ ಕರಿಯ ಪ್ಯಾಂಟ್ , ಕರಿಯ ಕೋಟು , ಚಿತ್ರ ವಿಚಿತ್ರ ಕೇಶ ವಿನ್ಯಾಸ , ಅದನ್ನು ಮುಚ್ಚುವಂತೆ ಧರಿಸಿದ್ದ ಕರಿಯ ವಿಚಿತ್ರ ಮಾದರಿಗಳ ಟೋಪಿಗಳು ,ಅವರ ಕೈ ತುಂಬಿದ್ದ , ಅಮೇರಿಕೆಯ ಅಗ್ಗದ ಮಾರುಕಟ್ಟೆಗಳಲ್ಲಿ ಕೊಂಡ ಗಿಫ್ಟುಗಳು , ಆಟದ ಸಾಮಾನುಗಳು .
ಅವರೆಲ್ಲರೂ ಅಮೇರಿಕಾ ನೋಡಲು ಬಂದ ಪ್ರವಾಸಿಗರಿರಬಹುದು . ಅಷ್ಟು ಬಿಟ್ಟರೆ ಉಳಿದವರು ಹೆಚ್ಚೂ ಕಡಿಮೆ ನಮ್ಮ ವಿಮಾನದಿಂದಿಳಿದ ಭಾರತೀಯರು , ಇಷ್ಟೆ. ಉಳಿದಂತೆ ಹೆಚ್ಚು ಪ್ರಯಾಣಿಕರಿರಲಿಲ್ಲ . ಝಗಮಗಿಸಿ ಗಿಜುಗುಟ್ಟುವ ನ್ಯೂಯಾರ್ಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ‘ ಕೇಳುವವರಿಲ್ಲದ ಮಗು ‘ವಿನಂತಾಗಿತ್ತು .
ಈ ಕಾಲಕ್ಕೆ ಏಕೆ ಅಮೇರಿಕಾ ಯಾತ್ರೆ ಎಂದು ಇಮಿಗ್ರೇಷನ್ಅಧಿಕಾರಿ ಕೇಳ ಬಹುದಾದ ಈ ಪ್ರಶ್ನೆಯನ್ನೂ ಒಳಗೊಂಡಂತೆ ಮತ್ತೆ ಅನೇಕ ಪ್ರಶ್ನೆಗಳನ್ನು ಎದುರಿಸಲು ಮಾನಸಿಕವಾಗಿ ಸಾಕಷ್ಟು ತಯಾರಿ ಮಾಡಿ ಕೊಂಡು ಅಧಿಕಾರಿಯ ಮುಂದೆ ನಿಂತಿದ್ದೆ .ಪಾಸ್ ಪೋರ್ಟ್ , ಟಿಕೇಟ್ಟುಗಳನ್ನು ಪರಿಶೀಲಿಸಿ ಆತ ಚುಟುಕಾಗಿ , ‘ ಏಕೆ ಬಂದಿರಿ? ಎಂದು ಹೊರಡುವಿರಿ ? ‘ ಎಂಬ ಎರಡು ಪ್ರಶ್ನೆಗಳನ್ನು ಕೇಳಿದ್ದ .
ಇಷ್ಟು ಪ್ರಶ್ನೆ ಬಿಟ್ಟರೆ ಆತನಿಗೇನೋ ನನ್ನ ಬಳಿ ಮಾತನಾಡಲು ಆಸಕ್ತಿಯೇ ಇದ್ದಂತಿರಲಿಲ್ಲ. ಅವನೂ ಕೋವಿಡ್ ಕಾಟಕ್ಕೆ ಸೋತು ಹೈರಾಣಾಗಿದ್ದ. ನನ್ನ ಕಣ್ಣು , ಕೈ ಬೆರಳುಗಳ ಸ್ಕ್ಯಾನಿಂಗ್,ಫೋಟೋ …. ಉಹುಂ ,ಏನೊಂದನೂ ಮಾಡಲಿಲ್ಲ . ಕೊನೆಗೆ ಪಾಸ್ ಪೋರ್ಟಿನಲ್ಲಿ ಸ್ಟಾಂಪ್ ಆದರೂ ಮಾಡಿದ್ದಾನಾ ? ಎಂದರೆ ಅದನ್ನೂ ಮಾಡಿರಲಿಲ್ಲ . ಸಾಮಾನುಗಳನ್ನು ನೋಡಿ , ‘ ನೋ ಸ್ಕ್ಯಾನಿಂಗ್ , ಗೋ ಡೈರೆಕ್ಟ್ ‘ ಎಂಬ ಉದಾರೀ ವಾದದ ನಿಲುವುಗಳನ್ನು ಪ್ರಕಟ ಪಡಿಸಿ , ಅಮೇರಿಕಾ ದೇಶಕ್ಕೆ ಹತ್ತೇ ನಿಮಿಷಗಳಲ್ಲಿ ಪ್ರವೇಶ ಕಲ್ಪಿಸಿ ಕೊಟ್ಟಿದ್ದ.
ನನ್ನ ಸಾಮಾನುಗಳನ್ನು ಮತ್ತೆ ಟ್ರಾನ್ಸಿಟ್ ಕೌಂಟರಿಗೆ ನೀಡಿ , ಕೈ ಚೀಲದೊಂದಿಗೆ ಡೆಟ್ರಾಯ್ಟ್ ವಿಮಾನವೇರಿ ಮುಂದಿನ ಮೂರು ಗಂಟೆಗಳ ಕಾಲ ಸುಖ ನಿದ್ರೆ ಮಾಡಿ , ಮಟ ಮಟ ಮಧ್ಯಾನ್ಹ ಸರೋವರಗಳ ನಾಡಾದ ಮಿಷಿಗನ್ ವಿಮಾನ ನಿಲ್ದಾಣದಲ್ಲಿ ಇಳಿದಿದ್ದೆ .ಸಾಮಾನು ಸಾಗಿಸಿಕೊಂಡು ಅಳಿಯನೊಡನೆ ಕಾರೇರಿ ಮನೆದಾರಿ ಹಿಡಿದಿದ್ದೆವು .
ಮೋಟಾರು ನಗರಿಯ ರಸ್ತೆಯ ಎರಡೂ ಪಕ್ಕದಲ್ಲಿರುವ ಹಸಿರಿಗೆಲ್ಲ ಶರತ್ತಿನ ಸಂಭ್ರಮ . ಎಲೆಗಳು ಉದುರಿ ಬೀಳಲು ತಯಾರಿ ನಡೆಸಿದ್ದವು. ಚಳಿ ನಾಡಿನ ‘ಫಾಲ್’ ಸಡಗರ ನೋಡಲು ಕಂಗಳೆರಡು ಸಾಲವು .ಹಸಿರು , ಗಿಣಿ ಹಸಿರು , ದಟ್ಟ ಕಪ್ಪು ಹಸಿರೆಲೆಗಳು ಕೇಸರಿ, ಕೆಂಪಾಗಿ ಹಿಮವಂತನ ಆಗಮನಕ್ಕೆ ನಾಚಿ ನೆಲಕ್ಕೆ ಉದುರುತ್ತಿದ್ದವು . ಇನ್ನು ಹದಿನೈದು , ಇಪ್ಪತ್ತು ದಿನಗಳಲ್ಲಿ ಆಗಮಿಸುವ ಹಿಮವಂತನಿಗೆ ಈ ಹಸಿರು ಮಾಡುವ ತ್ಯಾಗ. ಇಡೀ ಬದುಕನ್ನೇ ಆವರಿಸುವ ಹಿಮರಾಜನಿಗೆ ಜನ ಈಗಿನಿಂದಲೇ ಬೆಚ್ಚನೆಯ ತಯಾರಿ ನಡೆಸುತ್ತಿದ್ದಾರೆ.
ಫಾಲ್ ಸಂಭ್ರಮವನ್ನು ಅನುಭವಿಸುತ್ತಲೇ ಕನ್ನಡದ ಮೊದಲ ಚಿತ್ರ ಸಾಹಿತಿ , ನಾಟಕಕಾರರಾದ ಬೆಳ್ಳಾವೆ ನರಹರಿ ಶಾಸ್ತ್ರಿಗಳ ಮೊಮ್ಮಗ ಶ್ರೀ ಲಕ್ಷ್ಮೀನಾರಾಣ ಶಾಸ್ತ್ರಿಗಳ ಮನೆಯಲ್ಲಿ ಹದಿನಾಲ್ಕು ದಿನಗಳ ಕ್ವಾರೆಂಟೈನ್ ವಾಸಕ್ಕೆ ತೆರಳಿದೆ. ಅವರು ತಮ್ಮ ತುಂಬಿದ ಮನೆ ಬಿಟ್ಟು ಕೊಟ್ಟು ಮಗಳ ಮನೆಯಲ್ಲಿ ವಾಸ್ತವ್ಯ ಮಾಡಿದ್ದಾರೆ . ದೇಶ ವಿದೇಶವೆನ್ನದೆ ವಿಶ್ವದ ಎಲ್ಲರ ಬದುಕುಗಳನ್ನೂ ಮುಟ್ಟಿ , ತಟ್ಟಿರುವ ಕೋವಿಡ್ ರಾಕ್ಷಸನ ಕಾರಣದಿಂದ ಅಮೇರಿಕೆಯ ಬದುಕೂ ಸ್ತಬ್ಧವಾಗಿದೆ . ಸ್ಮಶಾನ ಮೌನ ಆವರಿಸಿದೆ . ಹಾಗೆ ನೋಡಿದರೆ , ನಮ್ಮೂರೇ ಎಷ್ಟೊ ವಾಸಿ .






ಫೇಸ್ ಬುಕ್ ನಲ್ಲಿ ಓದಿ ಸಂತೋಷಿಸಿದ್ದರೂ, ಅವಧಿಯ ಮರು ಓದು ಖುಶಿ ಕೊಟ್ಟಿತು. ಇನ್ನೂ ಹಲವರನ್ನು ತಲುಪುವಂತಾಯ್ತು. ಅಲ್ಲಿಂದಲೂ ಬರೆಯುತ್ತಿರಿ, ಪ್ರಿಯ ಮಂಗಳಾ.