ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೊನೆಯಿಲ್ಲದ ಹಗೆ

ಆಕಾಶ್.ಆರ್.ಎಸ್.

ಪ್ರಥಮ ಎಂ.ಎ. ಪತ್ರಿಕೋದ್ಯಮ,

ಕುವೆಂಪು ವಿಶ್ವವಿದ್ಯಾಲಯ

ಬಹು ಸಂಸ್ಕೃತಿಯ ಭಾರತ ದೇಶದಲ್ಲಿ ಇನ್ನೂ ಜಾತಿಯ ಕ್ರೂರತೆ ನಿಂತಿಲ್ಲ. ಹಸಿದ ವ್ಯಾಘ್ರನಂತೆ ದಿನೇ ದಿನೇ ದಲಿತ ದಮನಿತರ ಮೇಲೆ ಶೋಷಣೆ, ಹಲ್ಲೆ ಹೆಚ್ಚುತ್ತಲೇ ಇದೆ. ಇಂತಹ ಸುದ್ಧಿ ದೇಶದಲ್ಲಿ ನಿತ್ಯ ಹರಡುತ್ತಲೇ ಇದ್ದು ದಲಿತರ ಸಾಮಾಜಿಕ ಸ್ಥಿತಿ ಇನ್ನೂ ಸುಧಾರಣೆ ಆಗಿಲ್ಲ ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿದೆ. ಸ್ವತಂತ್ರ್ಯಪೂರ್ವದಿಂದಲೂ ದಲಿತರ ಶೋಷಣೆ ಹತ್ಯಾಕಾಂಡಗಳು ನಡೆದಿದ್ದು ಇಂದಿನ ದಿನಮಾನಗಳಲ್ಲೂ ಹಿಂಸಾಚಾರ, ಅಸ್ಪ್ರುಶ್ಯತೆಯ ಆಚರಣೆ ಹೆಚ್ಚಾಗುತ್ತಾ ಇರುವುದು ಅತ್ಯಂತ ಕಳವಳಕಾರಿ ಸಂಗತಿ.

ಈ ರೀತಿಯ ಶೋಷಣೆ ದಲಿತರ ಮೇಲೇಕೆ?

ಜಾತಿ ವ್ಯವಸ್ಥೆಯಲ್ಲಿ ಮೀಸಲಾತಿ ಇದೆ ಎಂಬ ಕಾರಣಕ್ಕಾಗಿಯೇ? ಅಥವಾ ಆರ್ಥಿಕವಾಗಿ, ಸಾಮಾಜಿಕವಾಗಿ ಉನ್ನತಮಟ್ಟಕ್ಕೇರಿದರೆ ಅವರ ಕೈಯಾಳಾಗಬೇಕಾದೀತು ಎಂಬ ಭಯದಿಂದಲೇ? ಇಲ್ಲ ಅವರು ಅವಮಾನೀತರಾಗಿಯೇ ಹುಟ್ಟಿ ಅಲ್ಲೇ ಸಾಯಬೇಕೆಂಬ ಉದ್ದೇಶವೇ?

ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ದಲಿತರ ಮೇಲೆ ನಡೆದ ರಕ್ತಚರಿತ್ರೆ ಕಾಣುತ್ತದೆ. 1968ರಲ್ಲಿ ತಮಿಳುನಾಡಿನಲ್ಲಿ 44 ಜನ ದಲಿತರ ಸಜೀವ ದಹನ, 1977 ರಲ್ಲಿ ಬಿಹಾರದಲ್ಲಿ 17 ಜನ, 1978 ರಲ್ಲಿ ಪಶ್ಚಿಮಬಂಗಾಲದ ಸುಂದರವನದಲ್ಲಿ ಸರ್ಕಾರದಿಂದಲೇ ದಲಿತರ ನಿರಾಶ್ರಿತರ ಹತ್ಯೆ 03 ಜನ ದಲಿತ ಮಹಿಳೆಯರ ಮೇಲೆ ಅತ್ಯಾಚಾರ, 1984 ರಲ್ಲಿ 06 ದಲಿತರ ಹತ್ಯೆ, 1991 ರಲ್ಲಿ 09 ಜನ ದಲಿತರನ್ನು ಕೊಂದು ಕಾಲುವೆಗೆ ಎಸೆಯಲಾಯಿತು.

1997 ರಲ್ಲಿ ತಮಿಳುನಾಡಿನಲ್ಲಿ ದಲಿತ ಪಂಚಾಯಿತಿ ಪ್ರತಿನಿಧಿ ಹಾಗು 06 ಬೆಂಬಲಿಗರ ಕೊಲೆ, 2000 ದಲ್ಲಿ ಕರ್ನಾಟಕದಲ್ಲಿ 06 ಜನ ದಲಿತರ ಸಜೀವ ದಹನ, 2003 ರಲ್ಲಿ 05 ದಲಿತರನ್ನು ಪೊಲೀಸ್ ಠಾಣೆಯ ಹತ್ತಿರ ಕೊಚ್ಚಿ ಕೊಂದದ್ದು, 2018 ಯು.ಪಿ.ಯಲ್ಲಿ 04 ದಲಿತರನ್ನು ವಾಹನಕ್ಕೆ ಕಟ್ಟಿ ಅಮಾನುಷವಾಗಿ ಧಳಿಸಿದ್ದು,

ಜಯಪುರದಲ್ಲಿ ದಲಿತ ಪೊಲೀಸ್ ಪೇದೆ ಕುದುರೆ ಸವಾರಿ ಮಾಡಿದ್ದಕ್ಕೆ ಶೋಷಣೆ ಮಾಡಿದ್ದು, ರಾಜ್ ಕೋಟ್ ನಲ್ಲಿ ದಲಿತನೋರ್ವ ಮಲಗುಂಡಿ ಶುಚಿಗೊಳಿಸದ ಕಾರಣ ಕೊಂದದ್ದು, ಗೋ ಸಾಕಣೆ  ನೆಪದಲ್ಲಿ ದಲಿತರ ಹತ್ಯೆ, ತಮಿಳುನಾಡಿನಲ್ಲಿ ದಲಿತನೋರ್ವನ ಶವಸಂಸ್ಕಾರಕ್ಕೆ ದಾರಿಬಿಡದೆ ಸೇತುವೆ ಕೆಳಗೆ ಇಳಿಸಿ ಸಾಗಿಸಿದ್ದು, ಗುಜರಾತಿನ ಅಹಮದಾಬಾದ್ ನಗರದಲ್ಲಿ ದಲಿತ ಯುವಕರ ಬಟ್ಟೆ ಬಿಚ್ಚಿ ಮಾರಣಾಂತಿಕವಾಗಿ ಸಾಮೂಹಿಕ ಹಲ್ಲೆ ನಡೆಸಿದ ಸಂಗತಿ ಇತ್ತೀಚಿನ ದಿನಗಳಲ್ಲಿ ಗದಗ ಜಿಲ್ಲೆಯ ರೋಣಾ ತಾಲ್ಲೂಕಿನ ಲಕ್ಕಲಕಟ್ಟಿ ಊರಿನಲ್ಲಿ ನಡೆದ ದಲಿತರ ಹತ್ಯೆ ಹೀಗೆ ಇತಿಹಾಸದ ಪುಟಗಳ ತುಂಬಾ ದಲಿತರ ನೆತ್ತರು ಹರಿಸಿದ್ದನ್ನು ಬಿಟ್ಟರೆ ಮಾನವಪ್ರೀತಿಯಿಂದ ನಡೆಸಿಕೊಂಡದ್ದು ಕಡಿಮೆಯೆ.

ಈ ಘಟನೆಗಳು ದಲಿತ ಜನಾಂಗವನ್ನು ಅಷ್ಟೇ ಅಲ್ಲ ಒಟ್ಟು ಮಾನವ ಕುಲಕ್ಕೆ ಮಾಡಿದ ಉಗ್ರ ಅವಮಾನದಂತೆ ಇದೆ. ಯಾರ ಎದೆಯಲ್ಲೂ ಒಂದಿಷ್ಟೂ ನೋವಿನ ಸಂಚಲನ ಮೂಡುತ್ತಿಲ್ಲ. ವೃತ್ತಿಯ ಆಧಾರದ ಮೇಲೆ ಸ್ಥಾಪಿತವಾದ ಜಾತಿ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಶೋಷಣೆಯ ಅಸ್ತ್ರವನ್ನು ದಿನೆ ದಿನೇ ಮಸೆಯುತ್ತಲೇ ಇರಿಯಲಾಗುತ್ತಿದೆ. ಅವರ ಮನೆಯ ಮಲಗುಂಡಿ ಕಟ್ಟಿಕೊಂಡರೆ ಶುಚಿ ಮಾಡುವವರು ಮೇಲ್ವರ್ಗದವರೇ? ರಸ್ತೆ, ಚರಂಡಿ, ಶುಚಿ ಮಾಡುವವರು ಮೇಲ್ವರ್ಗದವರೇ? ಸಮಾಜದ ಒಂದು ಅಂಗವಾಗಿ ಬದುಕುತ್ತಿರುವ ದಲಿತರ ಮೇಲೇಕೆ ದರ್ಪ ಅವರನ್ನು ನಮ್ಮವರಲ್ಲಿ ಒಬ್ಬರೆಂದು ಭಾವಿಸೋಣ.

ಜಾತಿ ಧರ್ಮಕ್ಕಿಂತ ಮಾನವೀಯತೆಯೇ ಅತ್ಯಂತ ಶೇಷ್ಠವಾದದ್ದು ಎಂಬುದನ್ನು ಅರಿತಾಗ ಮಾತ್ರ ಶುದ್ಧ ಸಮಾಜವೊಂದರ ಹುಟ್ಟು ಸಾಧ್ಯವಾಗುತ್ತದೆ.

‍ಲೇಖಕರು avadhi

8 January, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading