ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಬಸು ಬೇವಿನಗಿಡದಗೆ ಸತ್ಕಾರ…

ಮಕ್ಕಳ ಸಾಹಿತ್ಯದಲ್ಲಿ ಅಖಂಡ ವಿಜಯಪುರ ಜಿಲ್ಲೆಯು ಸಮೃದ್ಧ ಬೆಳೆ ಕೊಟ್ಟಿದ್ದು, ಈ ಜಿಲ್ಲೆಯ ಹಿರಿಯ ಸಾಹಿತಿಗಳು ಕಟ್ಟಿಕೊಟ್ಟ ಸಾಹಿತ್ಯದಿಂದ ಆದರ್ಶಮಯ ಬದುಕು ರೂಪಿಸಿಕೊಳ್ಳಲು ಸಾಧ್ಯವಾಯಿತು ಎಂದು ಹಿರಿಯ ಸಾಹಿತಿ ಸಿದ್ದರಾಮ ಮನಹಳ್ಳಿ ಹೇಳಿದರು. ಅವರು ರವಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಬಸು ಬೇವಿನಗಿಡದ ಅವರ ಸತ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.


ಕಸಾಪ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಡಾ,ಬೇವಿನಗಿಡದ ಅವರ ‘ಓಡಿ ಹೋದ ಹುಡುಗ’ ಮಕ್ಕಳ ಕಾದಂಬರಿಯು ಗ್ರಾಮೀಣ ಪ್ರದೇಶದ ಮಕ್ಕಳ ಪರಿಸರ ಕಾಳಜಿಗೆ ಸಾಕ್ಷಿಯಾಗಿದೆ ಎಂದರು. ಕೃತಿ ಕುರಿತು ಮಾತನಾಡಿದ ಹಿರಿಯ ಸಾಹಿತಿ ಡಾ.ಪ್ರಕಾಶ ಖಾಡೆಯವರು ಡಾ.ಬಸು ಬೇವಿನ ಗಿಡದ ಅವರ ಕಾದಂಬರಿಯಲ್ಲಿ ಮಾನವೀಯ ತುಡಿತ, ಸಾಮಾಜಿಕ ಕಾಳಜಿ ಹಾಗೂ ಗ್ರಾಮೀಣ ಬದುಕಿನ ತವಕ ತಲ್ಲಣಗಳನ್ನು ಒಳಗೊಂಡಿದೆ.

ಹಳ್ಳಿ ಮಕ್ಕಳ ಸಾಹಸಗಾಥೆ ಮತ್ತು ಪರೋಪಕಾರಿಗುಣವನ್ನು ಈ ಕೃತಿ ದಟ್ಟವಾಗಿ ಚಿತ್ರಿಸಿದೆ ಎಂದರು. ಸತ್ಕಾರಕ್ಕೆ ಅಭಿವಂದಿಸಿ ಮಾತನಾಡಿದ ಡಾ.ಬಸು ಬೇವಿನಗಿಡದ ಅವರು ‘ಬಾಗಲಕೋಟೆಯು ಮಧುರಚೆನ್ನರಂಥ ಕವಿಗಳಿಗೆ ಸಾಕ್ಷಾತ್ಕಾರ ಕೊಟ್ಟ ಪವಿತ್ರ ನೆಲ.

ಇಲ್ಲಿನ ಸಾಹಿತ್ಯ ಇಡೀ ನಾಡಿನಲ್ಲಿಯೇ ಹೆಸರಾಗಿದೆ, ಇಲ್ಲಿನ ಕಥೆಗಾರರು ಗ್ರಾಮೀಣ ಬದುಕನ್ನು ಯಥಾವತ್ತಾಗಿ ನಿರೂಪಿಸುತ್ತಿದ್ದಾರೆ’ ಎಂದರು. ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲೀಕೇರಿ ಮಾತನಾಡಿ ‘ಕಸಾಪ ಜನಸಾಮಾನ್ಯರನ್ನೂ ಒಳಗೊಂಡು ನಾಡಿನ ಸಾಹಿತ್ಯ ದಿಗ್ಗಜರೊಂದಿಗೆ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತದೆ’ ಎಂದರು.

ಕಾರ್ಯಕ್ರಮದಲ್ಲಿ ಸಾಹಿತಿ ಮಲ್ಲಿಕಾರ್ಜುನ ಶೆಲ್ಲಿಕೇರಿ ಅತಿಥಿಗಳಾಗಿ ಪಾಲ್ಗೊಂಡಿದ್ದರು ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ.ಚಂದ್ರಶೇಖರ ಕಾಳನ್ನವರ ನಿರೂಪಿಸಿದರು. ಸಿದ್ದರಾಮ ಶಿರೋಳ ಸ್ವಾಗತಿಸಿದರು. ತಾಲೂಕು ಕಸಾಪ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ ವಂದಿಸಿದರು.

ಕಾರ್ಯಕ್ರಮದಲ್ಲಿ ರಾಜಶೇಖರ ಕುಕ್ಕುಂದಾ, ನರಸನಗೌಡರ, ಸಂಗಮೇಶ ನೀಲಗುಂದ, ಗೀತಾ ದಾನಶೆಟ್ಟಿ. ಗಂಗಾಧರ ಅವಟೇರ, ಪ್ರಕಾಶ ಡಂಗಿ. ಸಂಗಮೇಶ ಬಡಿಗೇರ, ಎಸ್.ಎಸ್.ಹಳ್ಳೂರ, ಜುಟ್ಟಲ, ಪ್ರಾ.ಬಿಜಾಪುರ ರೇಖಾ ಗೋಗಿ ಮೊದಲಾದವರು ಭಾಗವಹಿಸಿದ್ದರು.

‍ಲೇಖಕರು Admin

4 February, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading