ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆ ಮಹಾಂತೇಶ್ ಹೊಸ ಕವಿತೆ- ಹೇಗೆ ಬರೆಯಲಿ ನಾ ಕವಿತೆ…?

ಕೆ. ಮಹಾಂತೇಶ್

—-

 ಓ ನನ್ನ ಪ್ರೀತಿಯ

ಪ್ಯಾಲಿಸ್ಟೈನ್ ಮಗುವೆ

ಅರಾಫತ್ ಎನ್ನುವ

ಕನಸುಗಾರನ ಕುಡಿಯೇ

ನೀ ನಿಂತಿರುವೆ

ಮನೆಯ ಮಹಡಿಗಳ

ಮೇಲೆ ಎತ್ತಿದಂಲೋ

ಹಾರಿಬರಹುದು ರಾಕೆಟ್ ಗಳ ದಾಳಿ

ಆದರೆ….

ನಾ ಕುಂತಿರುವ ಮನೆಯಲ್ಲಿ

ಭಾರತದ ಬೌಲರ್‌ಗಳು ಕೂಡ

ಸಿಡಿಸುತ್ತಿದ್ದಾರೆ ರನ್ ಗಳ ಮಹಾದಾಳಿ

ವ್ಯತ್ಯಾಸವಿಷ್ಟೇ ನೀ ಯುದ್ದವೆಂಬ ರಣಾಂಗದಲ್ಲಿ ಏಕಾಂಗಿಯಾಗಿ ಅಳುತ್ತಿರುವೆ

ನಾ ಲಕ್ಷಾಂತರ ಜನರ ಜಯದ ಕೇಕೆಯಲ್ಲಿ ಮೈ ಮರೆತಿರುವ ದೇಶಲ್ಲಿರುವೆ

ಈ ಸಂತಸದ ಗಳಿಗೆಯಲ್ಲಿ 

ನಾ ಹೇಗೆ ತಾನೇ

ಬರೆಯಲಿ ನಿನ್ನ ಸಂಕಟದ 

ಬಗೆಗಿನ ಕವಿತೆ ?

ಓ ನನ್ನ ಪ್ರೀತಿಯ

ಪ್ಯಾಲಿಸ್ಟೈನ್ ಮಗುವೆ

ಅರಾಫತ್ ಎನ್ನುವ

ಕನಸುಗಾರನ ಕುಡಿಯೇ

ನೀ ನಿಂತ ಅ ಮನೆಯ ಸುತ್ತಲು

ಕವಿದಿದೆ ಕತ್ತಲೆಯ ಕಾರ್ಮೋಡ

ಯಾವ ಕ್ಷಣದಲ್ಲಾದರೂ ಚಿಮ್ಮಬಹುದು

ಕೆಂಡದಂತ ಕ್ಷಿಪಣಿಗಳ ಕ್ರೋಧ

ಆದರೆ….

ನಾನೀರುವ ಊರಿನಲ್ಲೀಗ

ನವರಾತ್ರಿ-ವಿಜಯದಸಮಿಯ ಸಂಭ್ರಮ 

ಕೋಟೆ ಕೊತ್ತಲಗಳಿಗೂ, ಗೋಡೆ ಗುಮ್ಮಟಗಳಿಗೂ ಅರಮನೆ ಗುರುಮನೆಗೂ ಬಣ್ಣ ಬಣ್ಣದ ಅಲಂಕಾರ

ಹೇಳು ಮಗುವೆ  

ನಾ ಹೇಗೆ ತಾನೇ 

ನೀನಿರುವ ಕತ್ತಲ ಕೋಣೆಯ

ಬಗ್ಗೆ ಬರೆಯಲಿ ಕವಿತೆ ?

ಓ ನನ್ನ ಪ್ರೀತಿಯ

ಪ್ಯಾಲಿಸ್ಟೈನ್ ಮಗುವೆ

ಅರಾಫತ್ ಎನ್ನುವ

ಕನಸುಗಾರನ ಕುಡಿಯೇ

ನನಗೆ ಗೊತ್ತು ಈ ಯುದ್ದದಲಿ 

ನಿನ್ನದಲ್ಲದ ತಪ್ಪಿನಿಂದ  ಹೆತ್ತವರನ್ನು ಕಳಕೊಂಡು ರೋಧಿಸುತ್ತಿರುವ

ಅನಾಥ ನೀನೆಂದು

ಆದರೆ….

ನಾವೀಗ ನಮ್ಮಯ ಹಿರಿಕರ ಪಿತೃಪಕ್ಷ ನೆಪದಲಿ  ಥರ ಥರದ ಭಕ್ಷ್ಯಗಳನ್ನು ಮಾಡಿ

ಹತ್ತಾರು ಜನರ ಹೊಟ್ಟೆ ತುಂಬಿಸಿದ

ಭಾವ ಬಂಧಿಯಲ್ಲಿ ಮೈಮರೆತಿರುವೆವು 

ಹೇಳು ಮಗುವೆ 

ದೂರದಲಿ ಒಡಹುಟ್ಟಿದವ 

ಕಳೆದುಕೊಂಡು ಅನಾಥನಾಗಿರುವ 

ನಿನ್ನ ನೋವಿನ ಬಗ್ಗೆ ನಾ

ಹೇಗೆ ಬರೆಯಲಿ ಕವಿತೆ..?

ಓ ನನ್ನ ಪ್ರೀತಿಯ

ಪ್ಯಾಲಿಸ್ಟೈನ್ ಮಗುವೆ

ಅರಾಫತ್ ಎನ್ನುವ

ಕನಸುಗಾರನ ಕುಡಿಯೇ

ಅಲ್ಲಿ ನಿನಗೆ 

ನಾಳೆಗಳೆಂಬುದೇ ಮರಿಚೀಕೆಯಾಗಿದೆ

ಬಂಧುಗಳೆಂಬರು ಇಲ್ಲವಾಗುತಿಹರು

ಮನೆಗಳೆಂಬುದೇ ನಾಶವಾಗುತ್ತಿವೆ

ರಾತ್ರಿ ಬೆಳಗಾಗುವ ಖಾತ್ರಿಯೇ ಇಲ್ಲ ನಿನಗೆ

ಆದರೆ….

ನಮಗೋ ಇಲ್ಲಿ

ಮನೆಗಳ ಕಟ್ಟುವ ಭವಿಷ್ಯದ ಕನಸುಗಳಿವೆ

ನಾಳಿನ ದೀಪಾವಳಿಗೆ ದೀಪ ಹಚ್ಚುವ

ಬಣ್ಣ ಬಣ್ಣದ ಪಟಾಕಿಗಳ ಸಿಡಿಸುವ ಆಶೆಗಳಿವೆ ಸಾಲದೆಂಬಂತೆ….

ಊರೂರು ತಿರುಗುತ್ತಾ ಬಿರುದು

ಬಾವಲಿಗಳನು ಪಡೆಯುವ ನಾ ಬರೆದ ಕಾವ್ಯಕ್ಕೆ ಪ್ರಶಸ್ತಿಗಳ ಕಿರೀಟ ಧರಿಸುವ ಕನವರಿಕೆ ಮತ್ತು ಬಯಕೆಗಳಿವೆ

ಇಂತಹ ಸುಮಧುರ ಈ ಗಳಿಗೆಯಲ್ಲಿ

ನಾ ಹೇಗೆ ತಾನೇ

ನಿನ್ನ ನೋವಿನ ಬಗ್ಗೆ

ನಿನ್ನ ಸಂಕಟಗಳ ಬಗ್ಗೆ

ನಿನ್ನ ಹೆತ್ತವರು ಕಳಕೊಂಡು ನೀ ಒಬ್ಬಂಟಿಯಾಗಿರುವ ಬಗ್ಗೆ

ನಿನ್ನ ಹಸಿವು ಹಾಗೂ ಕೆನ್ನೆ ಮೇಲೆ

ಇಳಿದು ಒಣಗಿನಿಂತ ನಿನ್ನ ಕಣ್ಣೀರ ಬಗ್ಗೆ

ಹೇಗೆ ಬರೆಯಲಿ ನಾ ಕವಿತೆ..?

ಹೇಳು ಮಗುವೆ 

ನಾ ಹೇಗೆ ಬರೆಯಲಿ

ಕವಿತೆ…?

‍ಲೇಖಕರು avadhi

19 October, 2023

1 Comment

  1. ಮನು ಬಳಿಗಾರ್.

    ಹೖದಯಸ್ಪರ್ಶಿ ಕವನ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading