ಹಿಂಸೆ, ಪಟಾಕಿ, ವಿವಾದದ ಹೊಗೆಯ ನಡುವೆ ಒಂದು ವಿವೇಕದ ಬೆಳಕು:
ನಾಗೇಶ್ ಹೆಗಡೆ ಅವರ ಮೂಲಕ
(ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಮತ್ತು ರಾಜದೀಪ್ ಸರ್ದೇಸಾಯಿ
ನಡುವಣ ಸಂವಾದ ಈ ರಾತ್ರಿ ‘ಇಂಡಿಯಾ ಟುಡೇ’ ವಾಹಿನಿಯಲ್ಲಿ):
ಗುಹಾ: ಟಿಪ್ಪೂ ಕಾಲ ಬೇರೆ ಇತ್ತು. ಆತ ರಾಜಪ್ರಭುತ್ವದ ಕಾಲದವನು. ಆಗ ಭಾರತದ ಪರಿಕಲ್ಪನೆಯೇ ಇರಲಿಲ್ಲ. ಆಗಿನ ಕಾಲದ ಯಾವ ಮೌಲ್ಯಗಳಿಗೂ ಈಗ ಮಾನ್ಯತೆ ಕೊಡಬಾರದು. ಪ್ರಜೆಗಳಿಂದ ಆಯ್ಕೆಯಾಗಿ, ಸಂವಿಧಾನಕ್ಕೆ ಬದ್ಧವಾದ ಸರಕಾರ ಟಿಪ್ಪೂ ಒಳ್ಳೆಯವನೊ ಕೆಟ್ಟವನೊ ಎಂಬ ಮೌಲ್ಯಮಾಪನಕ್ಕೆ ಹೋಗಬಾರದು.
ಇಂದಿನ ಪ್ರಜಾಪ್ರಭುತ್ವದ ಆಳ್ವಿಕೆಯಲ್ಲಿ ಅವನ ಜಯಂತಿಯನ್ನು ಸರಕಾರವೇ ಆಚರಿಸುವುದು ತಪ್ಪು. ಜನರು, ಖಾಸಗಿ ಸಂಘ ಸಂಸ್ಥೆಗಳು, ಬೇಕಿದ್ದರೆ ರಾಜಕೀಯ ಪಕ್ಷಗಳು ಕೂಡ ತಂತಮ್ಮ ಕಚೇರಿಗಳಲ್ಲಿ ಜಯಂತಿ ಆಚರಿಸಿಕೊಳ್ಳಲಿ. ಆದರೆ ಜನರಿಂದ ಆಯ್ಕೆಯಾದ ಸರಕಾರ ಅಂಥವುಗಳಿಂದ ದೂರ ಇರಬೇಕು.
ಸರ್ದೇಸಾಯಿ: ಇದು ‘ವಿಶ್ವ ಹಿಂದೂ ಪರಿಷತ್ತಿನ’ ವಾದವನ್ನೇ ಬೆಂಬಲಿಸಿದಂತಲ್ಲವೆ?
ಗುಹಾ: ಅಲ್ಲ; ಶಿವಾಜಿ ಜಯಂತಿಯನ್ನೂ ಮಹಾರಾಷ್ಟ್ರ ಸರಕಾರ ಆಚರಿಸುವುದು ತಪ್ಪು. ರಾಣಾ ಪ್ರತಾಪನನ್ನು ರಾಜಸ್ತಾನ ಸರಕಾರ ಹೊಗಳುವುದೂ ತಪ್ಪು. ಜನರು ಆಚರಿಸಲಿ, ಬಿಡಲಿ ಅದು ಅವರವರ ವೈಯಕ್ತಿಕ ಆಯ್ಕೆ.
ಸರ್ದೇಸಾಯಿ: ಗಿರೀಶ್ ಕಾರ್ನಾಡ್ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಬೇಡ, ಟಿಪ್ಪೂ ಹೆಸರು ಇಡಬೇಕು ಎಂದಿದ್ದಾರೆ…
ಗುಹಾ: ಕೆಂಪೇಗೌಡರ ಹೆಸರೂ ಸರಿಯಲ್ಲ, ಟಿಪ್ಪೂ ಹೆಸರೂ ಕೂಡದು. ಶಿವರಾಮ ಕಾರಂತರ ಹೆಸರು ಇಡಬಹುದಿತ್ತು. ಅವರು ಸಮಾಜ ಸುಧಾರಣೆಗೆ ಶ್ರಮಿಸಿದವರು. ಎಷ್ಟೊಂದು ರಂಗಗಳಲ್ಲಿ ಕೆಲಸ ಮಾಡಿದವರು, ಸರ್ವಮಾನ್ಯರಾಗಿದ್ದರು. ಅಡಿಗರ ಹೆಸರನ್ನು ಇಟ್ಟಿದ್ದರೂ ಸರಿಯೆ…





0 Comments