ಕುವೆಂಪು ಇಲ್ಲವಾಗಿ ಇಂದಿಗೆ 15 ವರ್ಷಗಳಾಗಿ ಹೋದವು. ನಮ್ಮ ಮಡಿಲಿಗೆ ಕಾನೂರು ಸುಬ್ಬಮ್ಮನನ್ನೂ, ಮಲೆಯ ಮದುಮಗಳನ್ನೂ ಇತ್ತು, ಮನಸ್ಸಿಗೆ ಅನಿಕೇತನವಾಗುವುದನ್ನು ಕಲಿಸಿ ಅವರು ಎದ್ದು ಹೊರಟು ಹೋದರು. ಆಗ ರಾತ್ರಿ ಒಂದು ಗಂಟೆ. ಕುಪ್ಪಳ್ಳಿಯ ಮನೆಗೆ ಕಾಲಿಟ್ಟರೆ ಅಲ್ಲಿ ಕಾಲ ಸ್ತಬ್ಧವಾಗಿದೆ. ಆ ಗಡಿಯಾರದ ಮುಳ್ಳುಗಳು ನಿಂತಲ್ಲೇ ನಿಂತಿದೆ. ಕುವೆಂಪು ಇಲ್ಲದೆ ಕಾಲನೆಂಬ ಪ್ರಾಣಿ ಇಲ್ಲಿ ಮುಂದಕ್ಕೆ ಚಲಿಸಲು ಒಪ್ಪುತ್ತಲೇ ಇಲ್ಲ.
ದೂರದ ಜರ್ಮನಿಯಿಂದ ಬಿ ಎ ವಿವೇಕ ರೈ ಅವರು ಮೇಲ್ ಮಾಡಿ ‘ಅವಧಿ’ ಕುವೆಂಪು ಸಂಚಿಕೆ ಏಕೆ ರೂಪಿಸಬಾರದು ಎಂದರು. ಅವರು ನಮ್ಮ ವಿವೇಕವನ್ನು ಜಾಗೃತವಾಗಿಟ್ಟವರು. ಹಾಗಾಗಿಯೇ ನಿಮ್ಮ ಮುಂದೆ ಈ ಸಂಚಿಕೆ ಇದೆ. ಇವೆಲ್ಲವೂ ಆಗಾಗ ಅವಧಿಯಲ್ಲಿ ಪ್ರಕಟಗೊಂಡ ಬರಹಗಳು. ಮತ್ತೆ ಈ ದಿನ ಮರು ಓದನ್ನು ಬಯಸಿ ನಿಮ್ಮ ಮುಂದೆ ಬಂದು ನಿಂತಿದೆ.
ಕುವೆಂಪು ನಿಧನರಾದಾಗ 1994 ನವಂಬರ 11 ರಂದು ಮಂಗಳೂರಿನ ‘ಮುಂಗಾರು’ಪತ್ರಿಕೆಯಲ್ಲಿ ವಿವೇಕ ರೈ ಅವರು ತಮ್ಮ ‘ಗಿಳಿಸೂವೆ’ ಅಂಕಣದಲ್ಲಿ ‘ಕಡಲ್ಗಿದಿರ್ ಪನಿಗೆಂ ಪ್ರದರ್ಶನಂ’ ಎಂಬ ಲೇಖನ ಬರೆದಿದ್ದರು. ಆ ಲೇಖನದಲ್ಲಿ ಅವರು ಬರೆದ ಕೆಲವು ಮಾತುಗಳು ಇಂದಿಗೂ ಪ್ರಸ್ತುತ-
“ಕರ್ನಾಟಕದಲ್ಲಿ ಈಗ ಚುನಾವಣಾ ಪರ್ವ. ಮತದಾನ ಎನ್ನುವುದು ತನ್ನ ನಿಜ ಅರ್ಥವನ್ನು ಕಳೆದುಕೊಂಡಿದೆ. ಜಾತಿ ಮತಗಳು ಮತದಾನದಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕ್ರಿಯಾಶೀಲವಾಗಿವೆ. ಅಭ್ಯರ್ಥಿಗಳ ಆಯ್ಕೆಯಿಂದ ತೊಡಗಿ ಮತಗಳ ಕ್ರೋಡೀಕರಣದ ಲೆಕ್ಕಾಚಾರದವರೆಗೆ ಜಾತಿಮತಗಳ ಗಣನೆ ಪ್ರಧಾನ ಅಂಶವಾಗಿದೆ….ಇದರ ನಡುವೆ ಕುವೆಂಪು ನಿಧನಕ್ಕಾಗಿ ಎಲ್ಲ ರಾಜಕೀಯ ಪಕ್ಷಗಳು ಶೋಕ ಸಂತಾಪ ಪ್ರಕಟಿಸಿವೆ.ಆದರೆ ಕುವೆಂಪು ಎಲ್ಲ ಕಾಲಕ್ಕೂ ಉಳಿಯುವುದು ಅವರ ‘ವಿಶ್ವ ಮಾನವ ಸಂದೇಶ’ದ ಮೂಲಕ ಎನ್ನುವುದನ್ನು ರಾಜಕೀಯ ಪಕ್ಷಗಳು ಮತ್ತು ಜನರು ಮರೆಯುತ್ತಿರುವುದು ಕುವೆಂಪು ಅವರ ಲೌಕಿಕ ಸಾವಿಗಿಂತ ಹೆಚ್ಚಿನ ದುರಂತ ಕರ್ಣಾಟಕದ ಪಾಲಿಗೆ.”
ಅವರ ಆ ಲೇಖನ ಹೀಗೆ ಕೊನೆಯಾಗುತ್ತದೆ. “ಕುವೆಂಪು ಹೆಸರಿಸಿದ ‘ಕೀರ್ತಿಶನಿ ‘ಯನ್ನು ನಿವಾರಿಸಿಕೊಳ್ಳಬೇಕಾಗಿದೆ. ‘ಶ್ರೀರಾಮಾಯಣ ದರ್ಶನಂ ‘ಕಾವ್ಯದಲ್ಲಿ ಊರ್ಮಿಳೆ ಹೇಳುವ ಮಾತು ‘ಕಡಲ್ಗಿದಿರ್ ಪನಿಗೆಂ ಪ್ರದರ್ಶನಮ್ ‘ಎನ್ನುವುದು ನಮ್ಮ ಜೀವನ ಧೋರಣೆಯಾಗಬೇಕು.”
ಕುವೆಂಪು ಇಲ್ಲವಾಗಿ ಇಂದಿಗೆ 15 ವರ್ಷ
ನಿಮಗೆ ಇವೂ ಇಷ್ಟವಾಗಬಹುದು…





ಕುವೆಂಪು ನೆನಪು!
ಥ್ಯಾಂಕ್ಯು !